Monday, January 16, 2017

ಹಣೆಯಲಿ ಕುಂಕುಮ ಅರಳಿದೆ

ಹಣೆಯಲಿ ಕುಂಕುಮ ಅರಳಿದೆ

’ಕಪ್ಪು ಕುಂಕುಮ ಕೆಂಪು ಕುಂಕುಮ’ ಎಂಬ ನಾಲಿಗೆ ತಿರುಚುವ (ಟಂಗ್ ಟ್ವಿಸ್ಟರ್) ಭಾಷೆಯ ಬಗ್ಗೆ ನಾನು ಹೇಳಹೊರಟಿಲ್ಲ ! 

ಇತ್ತೀಚೆಗಿನ ದಿನಗಳಲ್ಲಿ ಹೆಂಗಳು ಕುಂಕುಮ ಹಚ್ಚುವುದನ್ನೇ ಬಿಟ್ಟಿದ್ದಾರೆ ಎಂಬ ವಿವಾದ ಸೃಷ್ಟಿಸುತ್ತಿಲ್ಲ!! 

ಬಿಂದಿ ಹಚ್ಚೋದ್ರಿಂದ ಋಣಾತ್ಮಕ ವಿಚಾರಗಳು ಉದ್ಭವವಾಗುತ್ತದೆ, ಕುಂಕುಮ ಹಚ್ಚುವುದರಿಂದ ಆದ್ನ್ಯ ಚಕ್ರದ ಮೂಲಕ ಶರೀರದಲ್ಲಿ ತರಂಗಗಳು ಏಳುತ್ತವೆ ಎಂದೂ ನುಡಿಯುತ್ತಿಲ್ಲ!!!

ಹಾಗಾದ್ರೆ ನಾ ಹೇಳುತ್ತಿರೋದ್ರಾದ್ರೂ ಏನು? ನೋಡೋಣ, ತಡ್ಕೊಳ್ಳಿ ...

ಮಲ್ಲೇಶ್ವರದ ಎಂಟನೇ ಕ್ರಾಸಿನಲ್ಲಿರುವ ಕುಂಕುಮದ ಅಂಗಡಿಗಳು ನನಗೆ ಎಂದೆಂದೂ ಪ್ರಿಯ. ಈ ಬಾರಿ ಅಲ್ಲಿಗೆ ಬಂದಿದ್ದಾಗ, ಅಂಗಡಿ ಮುಂದೆ ನಿಂತು ಸೆಲ್ಫೀ ತೆಗೆದುಕೊಳ್ಳೋಣ ಎನ್ನಿಸಿತು. ಹಾಗೆ ಮಾಡೋದ್ರಿಂದ ಟೋಪಿ ಹಾಕುವವರ ಕೈಯಲ್ಲಿ ತಲೆ ಕೊಟ್ಟ ಹಾಗೆ ಆಗುತ್ತೆ ಅಂತ ತೆಪ್ಪಗಿದ್ದೆ. ಗೋಪುರಾಕಾರದ ವಿವಿಧ ಬಣ್ಣದ ಕುಂಕುಮಗಳನ್ನು ನೋಡಲೇ ಖುಷಿ. ’ಬಣ್ಣಾ ನನ್ನ ಒಲವಿನ ಬಣ್ಣಾ’ ಹಾಡಿನಲ್ಲಿ ತೋರಿಸುವಂತೆ ತಟ್ಟೆಯ ಕುಂಕುಮವನ್ನು ಚಿಮ್ಮೋಣ ಎನ್ನಿಸುತ್ತದೆ. ಹಾಗೆ ಮಾಡಿದಲ್ಲಿ ನನ್ನ ಮುಂದಿನ ಸ್ಟಾಪ್ ಮಲ್ಲೇಶ್ವರದ ಪೋಲೀಸ್ ಠಾಣೆ ಎಂದುಕೊಂಡು ಸುಮ್ಮನಿರುತ್ತೇನೆ.

ಚಿಕ್ಕವನಿದ್ದಾಗ ಒಂದು ಡೌಟ್ ಇತ್ತು. ಕುಂಕುಮ ಎಲ್ಲಿಂದ ಬರುತ್ತೆ? ಮನೆಯಲ್ಲಿ ಅರಿಶಿಣದ ಬೇರುಗಳನ್ನ ಕಂಡಿದ್ದೆ. ಅರಿಶಿಣದ ಬೇರನ್ನು ಪುಡಿ ಮಾಡಿದರೆ ಅರಿಷಿಣ ಆಗುತ್ತದೆ ಎಂದು ಗೊತ್ತಿತ್ತು. ಆದರೆ ಎಂದೂ ಕುಂಕುಮದ ಬೇರನ್ನು ಕಂಡಿರಲಿಲ್ಲ, ಕೇಳಿರಲಿಲ್ಲ. ಹಾಗಿದ್ರೆ ಕುಂಕುಮ ಎಲ್ಲಿಂದ ಬರುತ್ತೆ ಅನ್ನೋದು ತಿಳಿದಿರದ ವಿಷಯವಾಗಿತ್ತು. ಈಗಿನಂತೆ ಅಂದು ಗೂಗಲ್ ಇರಲಿಲ್ಲ, ಬಾಯಿಬಿಟ್ಟು ಯಾರನ್ನಾದರೂ ಕೇಳಲು ಬಿಗುಮಾನ ಅಲಿಯಾಸ್ ಎಲ್ಲಿ ದಡ್ಡ ಎಂದುಕೊಳ್ಳುತ್ತಾರೋ ಎಂಬ ಭಯ. ಹೀಗಾಗಿಯೇ ಇನ್ನೂ ಜೀವನದಲ್ಲಿ ಉದ್ದಾರ ಆಗಿಲ್ಲ, ಬಿಡಿ!

ಇಂದು ನನಗೆ ಗೊತ್ತಿರುವಂತೆ ಅರಿಶಿಣವೇ ಕುಂಕುಮದ ತಾಯಿ! ಕೆಲವರದ್ದು ಒಂದು ಜಿಜ್ಞ್ನಾಸೆ. ಅರಿಶಿನ ದೊಡ್ಡದೋ ಕುಂಕುಮ ದೊಡ್ಡದೋ ಅಂತ. ಕೆಲವು ಮನೆಗಳಲ್ಲಿ ಗೆಜ್ಜೆವಸ್ತ್ರಕ್ಕೆ ಅರಿಶಿನ ಲೇಪಿಸಿತ್ತಾರೆ. ಮಂತ್ರಾಕ್ಷತೆ ಹಳದೀ ಬಣ್ಣ ಇರುತ್ತದೆ. ಹಲವು ಮನೆಗಳಲ್ಲಿ ಕೆಂಪು ಹಚ್ಚಿದ ವಸ್ತ್ರ, ಕೆಂಪು ಮಂತ್ರಾಕ್ಷತೆ. ’ಕಾರಣ ಇದು ಕಣ್ರೀ’ ಅಂತ ಸಂಪ್ರದಾಯ, ವಾಡಿಕೆ, ಶ್ರೇಷ್ಟತೆ ಅಂತ ಯಾವ ಲೇಬಲ್ ಆದರೂ ಹಚ್ಚಿ, ನನಗೇನೂ ಅಡ್ಡಿಯಿಲ್ಲ. ನನಗೆ ಅನ್ನಿಸುವಂತೆ ದೇವತಾರ್ಚನೆಗೆ ಅರಿಶಿನ-ಕುಂಕುಮ ಎರಡೂ ಶ್ರೇಷ್ಟ. ಅದಕ್ಕೇ ಕನ್ನಡ ತಾಯಿ ಎರಡನ್ನೂ ತನ್ನ ಧ್ವಜದಲ್ಲಿ ಏರಿಸಿಕೊಂಡಿದ್ದಾಳೆ. ದೈವಕ್ಕೆ ಎರಡೂ ಒಂದೇ, ಮಠದ ರಾಜಕೀಯಕ್ಕೆ ಬೇರೆ ಬೇರೆ ಅಷ್ಟೇ!

ಸಾಮಾನ್ಯವಾಗಿ ಕುಂಕುಮವನ್ನು ಭ್ರೂಗಳ ಮಧ್ಯೆ ಅಂದರೆ ಮೂರನೇ ಕಣ್ಣಿನ ಸ್ಥಾನದಲ್ಲಿ ಹಚ್ಚಿಕೊಳ್ಳುತ್ತಾರೆ. ಕಂಡೂ ಕಾಣದಂಥಹ ಚಿಕ್ಕ ಬೊಟ್ಟಿನ ಅಳತೆಯಿಂದ ಹಿಡಿದು ಇಡೀ ಹಣೆಯ ಪ್ರದೇಶವನ್ನೇ ಮುಚ್ಚಿಕೊಳ್ಳುವ ವಿವಿಧ ಶೈಲಿಯಲ್ಲಿ ಕುಂಕುಮವನ್ನು ಇಡುವ ಜನರನ್ನು ಕಂಡಿದ್ದೇನೆ, ಮತ್ತು ಅವರ ಬಗ್ಗೆ ಕೇಳಿದ್ದೇನೆ. 

ಬಹುತೇಕ ಮನೆಗಳಲ್ಲಿ ಕನ್ನಡಿಗೂ ಹಚ್ಚುತ್ತಾರೆ, ಅದು ಬೇರೆ ವಿಷಯ! ಒಮ್ಮೆ ನಮ್ಮ ಬಂಧುಗಳೊಬ್ಬರ ಮನೆಗೆ ಹೋಗಿದ್ದೆ. ಮನೆಯಾತ ಕನ್ನಡಿಯ ಮೇಲಿನ ಬಿಂದಿಗಳ ನಡುವೆ ಜಾಗ ಹುಡುಕಿಕೊಂಡು ನೋಡಿಕೊಳ್ಳುತ್ತ ತಮ್ಮ ಗಡ್ಡ ಕೆರೆದುಕೊಳ್ಳುತ್ತಿದ್ದರು. ಬಿಂದಿ ಜರುಗಿಸಿಡುವ ಸ್ವಾತಂತ್ರ್ಯವೂ ಅವರಿಗೆ ಇರಲಿಲ್ಲ ಅಂತ ಅಂದು ನನಗೆ ಅರ್ಥವಾಗಿದ್ರೆ ತಾನೇ? ಹೋಗ್ಲಿ ಬಿಡಿ ...

ಕುಂಕುಮ ಹಚ್ಚಿಕೊಳ್ಳುವುದಾದರೂ ಏಕೆ? ಯಾರೋ ಹೇಳಿದ ವಿಷಯ ಹೀಗಿದೆ. ಒಂದು ಕಾಲದಲ್ಲಿ ಮಾಯಾಮಾಟ ಮಾಡುವವರು ಹೆಣ್ಣಿನ ಭ್ರೂಗಳ ಮಧ್ಯೆ ದಿಟ್ಟಿಸಿ ನೋಡಿ ವಶೀಕರಿಸಿ ಬಲಿ ಕೊಡಲು ಎತ್ತಿಕೊಂಡು ಹೋಗುತ್ತಿದ್ದರಂತೆ. ಅದರಿಂದ ತಪ್ಪಿಸಿಕೊಳ್ಳಲು ಕುಂಕುಮ ಇಡುವ ಪದ್ದತಿ ಬಂತಂತೆ. ನಿಜವೋ ಸುಳ್ಳೋ ಗೊತ್ತಿಲ್ಲ, ಆದರೆ ಕುಂಕುಮ ಇಟ್ಟುಕೊಳ್ಳುವುದು ಒಳ್ಳೆಯದಕ್ಕೆ ಅನ್ನೋದು ಸಂಪ್ರದಾಯಸ್ತ ಕುಟುಂಬದವನಾದ ನನಗೆ ವಂಶಪಾರಂಪರ್ಯದಿಂದ ತಿಳಿದು ಬಂದಿರುವ ವಿಚಾರ.

ಕುಂಕುಮ ಹಚ್ಚುವುದು ಒಳ್ಳೆಯದಕ್ಕೆ ಎಂದ ಮೇಲೆ ಅದು ಹೆಂಗಳಿಗೇ ಏಕೆ ಮೀಸಲು? ಎಂದು ಒಬ್ಬರು ಕುಹಕವಾಡಿದರು! ಜಗತ್ತನ್ನೇ ಅರಿಯದ ಜನ ಈ ರೀತಿ ನುಡಿದಾರು ಅಲ್ಲವೇ... ಕದ್ರಿ ಗೋಪಾಲನಾಥ್, ಇಳಯರಾಜ, ಪುಟ್ಟಣ್ಣ ಕಣಗಾಲ್, ಹರಿಪ್ರಸಾದ್ ಚೌರಾಸಿಯಾ, ಕುನ್ನಕ್ಕುಡಿ ವೈದ್ಯನಾಥನ್, ಬಾಲಮುರಳಿ ಕೃಷ್ಣ, ಆರ್.ಕೆ.ಶ್ರೀಕಂಠನ್  .. ಒಬ್ಬರೇ ಇಬ್ಬರೇ ... ಇವರುಗಳ ಹೆಸರನ್ನು ಓದುತ್ತಿದ್ದಂತೆಯೇ ನಿಮ್ಮ ಮನದಲ್ಲಿ ಅವರ ಚಿತ್ರ ಕುಂಕುಮದ ಜೊತೆ ತಾನೇ ಕಂಡಿದ್ದು? 

ಕುಂಕುಮ ಹಚ್ಚಿದರೇನೇ ಕಳೆ ಕಣ್ರೀ ಅನ್ನುತ್ತಾರೆ ಹಲವರು. ಇಲ್ಲ ಎನ್ನಲಾರೆ ಆದರೆ ಭೀಮಸೇನ್ ಜೋಷಿ, ಏಸುದಾಸ್ ಅವರುಗಳಿಗೆ ಕಳೆ ಇಲ್ಲವೇ? ಹಚ್ಚಿದರೇ ಕಳೆ ಅಲ್ಲಾ ಆದರೆ ಹಚ್ಚಿದರೆ ಕಳೆ ಹೆಚ್ಚು ಅನ್ನಬಹುದೇನೋ?

ಸಾಮಾನ್ಯ ಜನ ಆಲಿಯಾಸ್ ಗಂಡಸರು ದಿನ ನಿತ್ಯದಲ್ಲಿ ಹಣೆಗೆ ಕುಂಕುಮ ಇಡದಿದ್ದರೂ ಹಬ್ಬದ ದಿನ ಅಥವಾ ದೇವಸ್ಥಾನಕ್ಕೆ ವಿಸಿಟ್ ಮಾಡಿದಾಗ ಕುಂಕುಮ ಇಟ್ಟುಕೊಳ್ಳೋದು ಹೆಚ್ಚು ಕಮ್ಮಿ ಗ್ಯಾರಂಟಿ. ಮಾನವನಿಗೂ ದೈವಕ್ಕೂ ಇರುವ ಮಾಧ್ಯಮ ಈ ಕುಂಕುಮ ಎನ್ನುತ್ತಾರೆ ಹಲವರು.

ಕುಂಕುಮದ ಕಥೆ ಇಷ್ಟಾದರೆ ಈ ಬರಹಕ್ಕೆ ಪ್ರೇರಣೆ ಏನು? ನನ್ನ ಪ್ರಶ್ನೆಗಳು ಏನು? ಎಂದು ಅಕಸ್ಮಾತ್ ನಿಮಗೆ ಅನ್ನಿಸಿದ್ದರೆ ಅವು ಹೀಗಿವೆ ...

ವಾರಾಂತ್ಯದ ಸ್ಪೆಷಲ್ ಅಂದರೆ ಕದ್ರಿ ಗೋಪಾಲನಾಥ್ ಅವರ ಅಯ್ಯಪ್ಪ ಸ್ವಾಮಿ ಸುಪ್ರಭಾತದ ಆಡಿಯೋ/ವಿಡಿಯೋ! ವಾಟ್ಸಾಪ್’ನಲ್ಲಿ ಎಲ್ಲೆಲ್ಲೂ ಓಡಾಡುತ್ತಿದ್ದುದು. ಅದೇ ಈ ಬರಹಕ್ಕೆ ಪ್ರೇರಣೆ. 

ಅರ್ಧಚಂದ್ರಾಕಾರದ ಕುಂಕುಮದ ಮೇಲೆ ದುಂಡನೆಯ ಕುಂಕುಮ ಅವರ ಹಣೆಯ ಮೇಲೆ. ಮೃದಂಗ ಬಾರಿಸುತ್ತಿದ್ದವರ ಹಣೆಯಲ್ಲಿ ಉದ್ದನೆಯ ಕುಂಕುಮ. ವಯೋಲಿನ್ ನುಡಿಸುತ್ತಿರುವವರ ಹಣೆಯಲ್ಲಿ ತಿಲಕ ಸ್ವರೂಪಿ ಕುಂಕುಮ. ಮೌತ್ ಆರ್ಗನ್ ನುಡಿಸುವವರ ಹಣೆಯಲ್ಲಿ ದುಂಡನೆಯ ದೊಡ್ಡ ಕುಂಕುಮದ ಬೊಟ್ಟು ಅದರ ಮೇಲೆ ಚಿಕ್ಕ ಸೈಜಿನ ಬೊಟ್ಟು. ಹಿಂದೆ ಕುಳಿತ ತಾಳ ಹಾಕುವವರ ಹುಬ್ಬುಗಳ ನಡುವೆ ದುಂಡನೆಯ ಸಿಂಗಲ್ ಬೊಟ್ಟು. ಹೀಗೇ ವಿವಿಧ ರೀತಿಯ ಕುಂಕುಮದ ಶೈಲಿಗಳು. ತಕ್ಷಣ ನೆನಪಾದವರು ಕುನ್ನಕ್ಕುಡಿ ವೈದ್ಯನಾಥನ್. ಅತಿವಿಶಿಷ್ಟ ಶೈಲಿ ಅವರದ್ದು.

ಹೀಗೆ ಹತ್ತು ಹಲವು ಶೈಲಿಯ ಕುಂಕುಮಧಾರಣೆಯ ಚಿತ್ರಗಳನ್ನು ಅವಲೋಕಿಸಿ ನಾಲ್ಕು ಸಾಲು ಬರೆದ ಮೇಲೆ ಅನ್ನಿಸಿದ್ದು ಕುಂಕುಮ ಧರಿಸಲು ಯಾವುದೇ ಒಂದು ನಿಯಮ ಇಲ್ಲ. ಬದಲಿಗೆ ಹಣೆಬರಹದ ಮೈದಾನ ಇರುವುದೇ ನಿಮ್ಮಿಚ್ಚೆಯಂತೆ ಕುಂಕುಮ ಧರಿಸಲು ಎಂದು! ಖಾಲೀ ಬಿಡಬೇಡಿ. ಕುಂಕುಮ, ವಿಭೂತಿ, ಅಂಗಾರ-ಅಕ್ಷತೆ, ಗಂಧ ಏನಾದರೂ ಅಡ್ಡಿಯಿಲ್ಲ. ನಿಮ್ಮ ನಾಮ ಫಲಕವನ್ನು ತಂಪಾಗಿರಿಸಿಕೊಂಡು ಆರೋಗ್ಯವಂತರಾಗಿರಿ ಅಂತ ಎಳ್ಳು-ಬೆಲ್ಲ ತಿಂದ ಬಾಯಿ ಒಳ್ಳೇ ಮಾತಾಡುತ್ತಿದೆ.

ನಿಮ್ಮ ಅನಿಸಿಕೆ ಏನು? ಏನೂ ಹೇಳಲ್ಲ ಅಂದ್ರೆ, ಚಿತ್ರದಲ್ಲಿರೋ ಕುಂಕುಮಗಳ ಹಣೆಯ ಒಡೆಯರನ್ನು ಗುರುತಿಸಿ ಸಾಕು ....

Tuesday, January 3, 2017

ರಶ್ಮಿ ಆನಂದ್ - ಸಾಗರ್ ಮಿಶ್ರ

ನನಗೊಂದು ಆಹ್ವಾನ ಪತ್ರಿಕೆ ಬಂದಿತ್ತು ಅಂತ ಸೀದ ಊಟಕ್ಕೇ ಹೋದೆ. ಮದುವೆ ಮನೆ ಮುಂದೆ ಎರಡು ಚಕ್ರದ ಟಿ.ವಿ.ಎಸ್-೫೦ ನಿಲ್ಲಿಸುವವರೆಗೂ ಗಂಡು ಹೆಣ್ಣಿನ ಹೆಸರೇ ಗೊತ್ತಿರಲಿಲ್ಲ. ಬರೀ ಛತ್ರದ ಅಡ್ರಸ್ ನೋಡ್ಕೊಂಡ್ ಬಂದಿದ್ದೆ ಅಷ್ಟೇ!

"ರಶ್ಮಿ ಆನಂದ್ ವೆಡ್ಸ್ ಸಾಗರ್ ಮಿಶ್ರ" ಅಂತ ನೋಡಿದಾಗ ಇನ್ನೊಂದು ವಿಷಯ ಅರಿವಿಗೆ ಬಂದಿದ್ದು ಎಂದರೆ ನನಗೆ ಇಬ್ಬರ ಪರಿಚಯವೂ ಇಲ್ಲ ಅಂತ.

ಹೋಗ್ಲಿ ಬಿಡೀ, ನನ್ನ ಮದುವೆಗೆ ಯಾರ್ಯಾರು ಬಂದಿದ್ದರು ಅಂತ ಈಗ ನೆನಪಿದೆಯೇ? ಅದೇ ಭಂಡ ಧೈರ್ಯದಿಂದ ಒಳಗೆ ಹೋಗೋಣ ಎಂದು ನಿರ್ಧಾರ ಮಾಡಿದೆ.

ನಾನು ಟಿವಿಎಸ್’ನ ಸ್ಟ್ಯಾಂಡ್ ಹಾಕುತ್ತಿದ್ದಂತೆಯೇ ಹುಡುಗ, ಹುಡುಗಿಯ ಸಮೇತ ಬಾಗಿಲ ಬಳಿಯೇ ಹಾಜರ್! ಅವರ ಹಿಂದೆ ಒಂದಷ್ಟು ಜನ. ಏನೋ ಶಾಸ್ತ್ರ ಇರಬೇಕು ಎಲ್ಲರೂ ಬಂದರು ಅಂತ ಅಂದುಕೊಂಡೇ ಛತ್ರದ ಬಾಗಿಲನ್ನು ದಾಟುವವನಿದ್ದೆ. ಅಷ್ಟರಲ್ಲಿ, ಕೈಯಲ್ಲಿ ಮದುವೆ ಕಾರ್ಡು ಹಿಡಿದಿದ್ದ ಮದುವೆ ಗಂಡು, ಕಾರ್ಡಿನ ಮೇಲೆ ಅವರಿಬ್ಬರ ಹೆಸರುಗಳನ್ನು ತೋರಿಸಿ ’ಇದರ ಬಗ್ಗೆ ಏನ್ ಹೇಳ್ತೀರಾ?’ ಅಂದ.

ಇದೊಳ್ಳೇ ಕಥೆ ಆಯ್ತಲ್ಲ? ಮೊದಲು ಮದುವೆ ಮಾಡ್ಕೋ ಮುಹೂರ್ತ ಮೀರಿ ಹೋದೀತು. ಆಮೇಲೆ ಹೇಳ್ತೀನಿ ಅಂದ್ರೆ ಕೇಳ್ತಿಲ್ಲ. ಏನಾದ್ರೂ ಹೇಳಿದ್ರೇನೇ ಒಳಗೆ ಬಿಡೋದು ಅನ್ನೋದೇ?

ಅದೂ ನೆಡೆದು ಹೋಗಲಿ ಅಂತ ಮತ್ತೊಮ್ಮೆ ಹೆಸರುಗಳನ್ನು ಓದಿದೆ .. ತಲೆಗೆ ಭಗ್ ಅಂತ ಆಲೋಚನೆ ಬಂದು ಒಂದೆರಡು ಕೂದಲು ಸುಟ್ಟು ಭಸ್ಮವಾಯಿತು!

ರಶ್ಮಿ ಆನಂದ್ - ಸಾಗರ್ ಮಿಶ್ರ .. ಆಹಾ!

"ನಿಮ್ಮ ಹೆಸರುಗಳು ಅದ್ಬುತವಾಗಿದೆ. ಹೆಣ್ಣಿನ ಹೆಸರಿನಿಂದ ’ಆನಂದ’ ತೆಗೆದುಕೊಂಡು ನಿನ್ನ ಹೆಸರಿನ ’ಸಾಗರ’ಕ್ಕೆ ಸೇರಿಸಿದರೆ ಆನಂದ ಸಾಗರ. ನಿಮ್ಮ ಜೀವನ ಆನಂದಸಾಗರವಾಗಲಿ" ಎಂದು ಫ್ರೀ ಆಶೀರ್ವಚನ ನೀಡಿದೆ.

ಮುಂದೆ? ಅಂದ ! ಓ! ಹೌದಲ್ವೇ? ಇನ್ನೂ ಆಕೆಯ ಫಸ್ಟ್ ನೇಮು ಈತನ ಲಾಸ್ಟ್ ನೇಮು ಬಾಕಿ ಇತ್ತಲ್ಲ! ಒಟ್ನಲ್ಲಿ ಇವನು ನನ್ನ ಬಿಡಲ್ಲ ಅಂತ ಈಗ ಇಂಗ್ಲೀಷ್’ನಲ್ಲಿ ಯೋಚಿಸಿದೆ.

Rashmi Anand - Sagar Mishra

ಮೊದಲಿಗೆ RASAM ಅನ್ನೋಣಾ ಎಂದುಕೊಂಡೆ, ಆದರೆ ಸುಮ್ಮನಾದೆ.

ನಂತರ "ಆಂಗ್ಲದಲ್ಲೂ ನಿಮ್ಮ ಹೆಸರುಗಳು ಅದ್ಬುತವಾಗಿದೆ ... ನಿಮ್ಮ ಹೆಸರುಗಳು ಅಂದರೆ RASHMI ಮತ್ತು MISHRA ತೆಗೆದುಕೊಂಡು ತಲಾ ಮೂರು ಭಾಗ ಮಾಡಿ. ಉದಾಹರಣೆಗೆ RA SH MI ಅಂತ. ಹೇಳಿದರೆ ಅರ್ಥವಾಗಲ್ಲ ಅಂತ ಕಾರ್ಡ್ ಮೇಲೇ ಬರೆದು ತೋರಿಸಿದೆ. ಕಡೆಯಿಂದ ಆರಂಭಿಸಿ ಎರಡೆರಡು ಅಕ್ಷರಗಳ ಗುಂಪನ್ನು ಒಟ್ಟಿಗೆ ಹಾಕಿದರೆ MISHRA ಆಗುತ್ತದೆ. ಹಾಗೆಯೇ ನಿಮ್ಮ ಹೆಸರಿನಿಂದಲೂ ಇದೇ ಸೂತ್ರ ಬಳಸಿದರೆ ಆಕೆಯ ಹೆಸರು ಮೂಡುತ್ತದೆ. ಒಟ್ಟಿನಲ್ಲಿ ಹೆಸರಿನಲ್ಲೂ ಹೇಳಿ ಮಾಡಿಸಿದ ಜೋಡಿ. ಚೆನ್ನಾಗಿ ಬೆರೆತಿದ್ದೀರಾ, ಭೇಷ್" ಅಂತಂದು ಚಪ್ಪಾಳೆ ತಟ್ಟಿದೆ. ಇನ್ಯಾರೂ ತಟ್ಟಲಿಲ್ಲ!

ಇಷ್ಟೆಲ್ಲ ಅವರ ಬಗ್ಗೆ ಹೇಳಿದೆ ಅಂದ ಮೇಲೆ ಮೃಷ್ಟಾನ್ನ ಭೋಜನ ಗ್ಯಾರಂಟಿ !

ಅಷ್ಟರಲ್ಲಿ ಮದುವೆ ಹೆಣ್ಣು, ಗಂಡನ್ನು ಕುರಿತು "ತಲೆ ತಿನ್ನಿಸಿಕೊಳ್ಳೋಕ್ಕೆ ನಿನಗೆ ಬೇರೇ ಟೈಮ್ ಇಲ್ವಾ? ನಡೀ" ಅನ್ನೋದೇ ?

ಕೇಳಿ ಕೇಳಿ ತಲೆ ತಿನ್ನಿಸಿಕೊಂಡ್ರೆ ಅದು ನನ್ ತಪ್ಪೇ?

ಹೋಗ್ಲಿ ಬಿಡಿ ... ಬೆಳ್ಳಿ ಮೂಡಿತು, ಅಲಾರಂ ಕೋಳಿ ಕೂಗಿತು. ನಾನು ಎದ್ದೆ. ಕನಸಿನಲ್ಲೂ ತಲೆ ತಿಂದಿದ್ದೇ ಬಂತು! ಮದುವೆ ಮನೆ ಊಟಕ್ಕೆ ಮಾತ್ರ ಖೋತಾ !!!

Wednesday, December 28, 2016

ಹಿರಿಯರ ಕೆಟ್ನಾಲಜಿ ಕಥಾನಕ !!!


ಕೃಷ್ಣರಾವ್ ಪಾರ್ಕ್’ನಲ್ಲಿ ಸಂಜೆ ವೇಳೆ ಹಿರಿಯರು ಕೂಡಿಕೊಂಡು ಕಾಲಕ್ಷೇಪ ಮಾಡುವ ಹೊತ್ತು. ಈಗಲೂ ಕೆಲವೆಡೆ ಇಂಥಾ ಹಿರಿಯರಿಗೆ ಹೊತ್ತು ಕಳೆವ ತಾಣಗಳು ಇರುವುದು ಅಚ್ಚರಿಗಿಂತ ಮೆಚ್ಚತಕ್ಕ ಅಂಶ.

ಮಧ್ಯವರ್ಗದ ಪ್ರತೀಕವಾದ ಹಿರಿಯರು. ನನ್ನಂತೆ ನಾನು ಎಂಬ ಧೋರಣೆಯ ಬಿಳೀ ಪಂಚೆ-ಬಿಳೀ ಶರಟಿನ ಮಂದಿ ಕೆಲವರು. ಶಾರ್ಟ್ಸ್-ಟೀ ಷರಟು ತೊಟ್ಟ ಹಿರಿಯರು ಕೆಲವರು. ಶಾರ್ಟ್ಸ್ ಧರಿಸಿಹ ಹಿರಿಯರು ಯಾರು ಎಂದರೆ, ಮೂರು ತಿಂಗಳೋ ಆರು ತಿಂಗಳೋ ವಿದೇಶದಲ್ಲಿದ್ದು ತಾವು ಹುಟ್ಟಿರೋದೇ ಅಲ್ಲಿ ಎಂಬಂತಾಡುವ ಮಕ್ಕಳನ್ನು ಹೊಂದಿರುವವರು. ಇಂಥಾ ಹಿರಿಯರಲ್ಲಿ ಕೆಲವರು ತಮ್ಮನ್ನು ತಾವು ಆ ದಿರಿಸಿಗೆ ಹೊಂದಿಸಿಕೊಂಡಿದ್ದರೂ ಮತ್ತೆ ಕೆಲವರು ಬಲವಂತಕ್ಕೆ ಏರಿಸಿಕೊಳ್ಳುವವರು.

ಹಲವರಿಗೆ ಹೊಸ ತಂತ್ರಜ್ಞ್ನಾನದ ಅರಿವು ತಕ್ಕಮಟ್ತಿಗೆ ಇದ್ದರೂ ಮತ್ತೆ ಹಲವರು ಅದರ ಗಂಧ ಗಾಳಿ ಗೊತ್ತಿಲ್ಲದೇ ಇರುವವರು. ಸಂಜೆ ವೇಳೆ ಹೀಗೆ ಸೇರುತ್ತ ಅದೂ ಇದೂ ಮಾತನಾಡುತ್ತ ಕಲಿಯುವುದು ಮಾಡಿದರೂ, ಹೆಚ್ಚುವರಿ ಸಮಯದಲ್ಲಿ ಲೋಕಲ್ ರಾಜಕೀಯದ ಮಾತು ಮುಗಿಸುವಷ್ಟರಲ್ಲಿ ಧಾರಾವಾಹಿಗಳ ಸಮಯ ಶುರುವಾಗಿರುತ್ತದೆ. ಕೆಲವರಿಗೆ ಆಸಕ್ತಿ ಇರದಿದ್ದರೂ ಸಾಮಾನ್ಯವಾಗಿ ಒಂದಿಬ್ಬರು ಹೊರಡುತ್ತಿದ್ದಂತೆಯೇ ಮಿಕ್ಕವರೂ ಜಾಗ ಖಾಲಿ ಮಾಡುವುದು ಮಾನವ ಸಹಜ ಗುಣ.

ನುಡಿದವರಾರು ಎಂಬ ಗೋಜಲಿಗೆ ಮನ ಸಿಲುಕಿಸಿಕೊಳ್ಳದೇ ಅವರ ಜಗತ್ತಿಗೆ ಕಾಲಿರಿಸಿ ಓದುತ್ತಾ ಹೋದರೆ ಬಹುಶ: ಅವರ ಅಳಲು ಅರ್ಥವಾಗಬಹುದು .... ನೋಡೋಣ ಬನ್ನಿ ಅವರಿಗೆ ಎಷ್ಟು ಬಲವಂತದ ಮಾಘಸ್ನಾನ ಮಾಡಿಸುತ್ತೇವೆ ಎಂದು ...

---

"ಮಗ ಸೊಸೆ ಎಲ್ಲ ಕ್ಷೇಮವೇ?"

"ಅವರವರ ಪಾಡಿಗೆ ಅವರು ಚೆನ್ನಾಗಿದ್ದಾರೆ. ನಾವು ಎಲ್ಲಿಯವರೆಗೆ ಒಬ್ಬರ ವಿಷಯದಲ್ಲಿ ತಲೆ ಹಾಕೋದಿಲ್ವೊ, ಮೂಗು ತೂರಿಸೋದಿಲ್ವೋ ಅಲ್ಲಿಯವರೆಗೂ ಸಂಬಂಧಗಳು ದಿವಿನಾಗೇ ಇರುತ್ವೆ. ಮಕ್ಕಳ ವಿಷಯದಲ್ಲೂ ಇದು ಸತ್ಯ. ಅಲ್ವೇ?"

"ಬಿಳೀ ಮೀಸೆಗೆ ತಕ್ಕ ಮಾತು ಆಡಿದ್ರಿ ಬಿಡಿ"

"ಹೆ ಹೆ ಹೆ .. ಏನ್ ಡೈಲಾಗ್’ರೀ ಅದೂ ... ಭಟ್ಟರ ಸಿನಿಮಾ ಡೈಲಾಗೋ ಹೇಗೆ?"

"ಹಂಗೆಲ್ಲಾ ಏನೂ ಇಲ್ರೀ ... ನಮ್ ರಾಯರು ಆಡಿದ ಮಾತು ಹಾಗಿತ್ತು. ಅನುಭವಕ್ಕೆ ತಕ್ಕ ಮಾತು ಅಂದೆ"

"ಅದೂ ನಿಜಾ ಅನ್ನಿ ... ನಮ್ಮ ಮನೆಯಲ್ಲೂ ಇದೇ ಕಥೇನೇ!. ರಾಯರು ಹೇಳಿದ ಹಾಗೆ ನಮ್ಮ ಆಚಾರ ವಿಚಾರ ನಮಗೆ. ಅವರ ನಂಬುಗೆ ಅವರಿಗೆ. ಅಲ್ವೇ ರಾಯರೇ? "

"ಹೌದು ನೋಡಿ. ನಾವು ಹೇಳೋದು ಅವರಿಗೆ ಕಂದಾಚಾರ. ಅವರದು ಮಾತ್ರ ಅದೇನೋ ಕೆಟ್ನಾಲಜಿ ಅಂತೆ. ಗಟ್ಟಿಯಾಗಿ ನಿಂತು ಇನ್ನೊಬ್ಬರಿಗೆ ಆಶ್ರಯವಾಗ್ತಾರೆ ಅಂದುಕೊಂಡರೆ, ಬರೀ ಕೆಟ್ನಾಲಜಿಗೆ ಜೋತು ಬಿದ್ದು ಪಡವಲಕಾಯಿಗಳಾಗಿದ್ದಾರೆ."

"ರಾಯರೇ ಅದು ಟೆಕ್ನಾಲಜಿ ... ಅಂದ್ರೆ ತಂತ್ರಜ್ಞ್ನಾನ ಅಂತ"

"ತಂತ್ರಜ್ಞ್ನಾನ ಇದ್ರೇನೇ ಬದುಕೇ? ನಮ್ಮದು ಪೌರೋಹಿತ್ಯ ವಂಶ. ಆದರೇನಾಯ್ತು ಇವಕ್ಕೆ ಮಂತ್ರಜ್ಞ್ನಾನವೇ ಇಲ್ಲ ಬರೀ ತಂತ್ರಜ್ಞ್ನಾನ ಅಷ್ಟೇ! ಒಂದು ಸಣ್ಣ ಗಣೇಶನ ಪೂಜೆ ಮಾಡೋದಕ್ಕೂ ಅದೇನೋ ಟ್ಯೂಬ್ ಬೇಕು ಅವರಿಗೆ. ಆ ಮುಂದಿನ ಪೀಳಿಗೆಗೆ ಅದೂ ನಿಂತು ಹೋಗುತ್ತೆ! "

"ಎರಡು ವರ್ಷಕ್ಕೆ ಒಮ್ಮೆ ಬಂದು ಹೋಗೋ ವೈಭವಕ್ಕೆ ನನ್ ಅಳಿಯ ನಮ್ ಮನೇಲಿ ಅದೆಂಥದ್ದೋ ನಿಂತ್ ಕಡೆ ಓಡೋ ಮೆಷೀನ್ ತಂದಿಟ್ಟಿದ್ದಾನೆ. ಪಕ್ಕಕ್ಕೆ ಇಡೋಕ್ಕಾಗಲ್ಲ, ಜರುಗಿಸೋದಂತೂ ಬಿಡಿ. ಒಂದು ಸಾರಿ ಪಕ್ಕಕ್ಕೆ ಇಡೋಣಾ ಅಂತ ಹೋಗಿ ಸೊಂಟ ಹಿಡ್ಕೊಂಡು ಮೂರು ದಿನ ಮೇಲಕ್ಕೇ ಏಳೋಕ್ಕಾಗಲಿಲ್ಲ. ಅದರ ಕೆಳಗೆ ಏಳಾಳುದ್ದ ಧೂಳು. ನಮಗೆ ಇದು ಬೇಡ ನಿಮ್ಮ ಮನೆಯಲ್ಲೇ ಇಟ್ಟಿರಿ ಅಂದೆ. ಅಲ್ಲೂ ಒಂದಿದೆ ಅನ್ನೋದೇ?"

"ಅವರು ಲಂಡನ್’ನಲ್ಲಿ ಇದ್ದಾಗ ಈ ಮೆಷೀನ್ ಕಥೆ ಏನು? ಸುಮ್ಮನೆ ಬಿದ್ಗೊಂಡಿರುತ್ತೋ?"

"ಅಷ್ಟು ದೊಡ್ಡ ಮೆಷೀನು ಜಾಗ ತೊಗೊಳ್ತು ಅಂತ ನಾನು ಸುಮ್ಮನಿರೋಕ್ಕೆ ಆಗುತ್ತೋ? ಒಂದು ಬೆಡ್ಶೀಟ್ ಅದರ ಮೇಲೆ ಹಾಸಿ, ನನ್ ಮೊಮ್ಮಕ್ಕಳ ಮೂರು ಚಕ್ರದ ಸೈಕಲ್ ನಿಲ್ಲಿಸಿದ್ದೀನಿ. ಮಳೆ ಬಂದಾಗ ಬಟ್ಟೆ ಒಣಗಿ ಹಾಕೋದಕ್ಕೂ ಆಗುತ್ತೆ ಬಿಡಿ ... ಹ ಹ ಹ"

"ನೆಲದ ಮೇಲೆ ಮಲಗಿರೋದಕ್ಕೆ ಬೆಡ್ಶೀಟ್ ಬೇರೆ ಹೊದ್ದಿಸಿರ್ತೀರ ಅಂದ್ರೆ ಅದು ಮಲಗದೇ ಇನ್ನೇನ್ ಮಾಡುತ್ತೆ? ಹ ಹ ಹ"

"ನೋಡಿ ಶರ್ಮ ಬಂದರು ... ಏನ್ ಸ್ವಾಮೀ ಇಷ್ಟು ತಡ?"

"ನೆನ್ನೆ ಹೇಳಿದ್ನಲ್ಲ ಉಪ್ಪುಸದ್ ಮೆಷೀನ್ ಕಥೆ ... ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗೋ ಟೈಮ್’ಗೆ ನಿಮ್ಮ ಮನೆಗೆ ಬಂದು ಕೆಟ್ಟಿರೋ ಮೆಷೀನು ರಿಪೇರಿ ಮಾಡ್ತೀನಿ ಅಂದಿದ್ದ ಆ ತಿಪ್ಪೇಶಿ ಮಗ. ಅದಕ್ಕೇ ತಡ ಆಯ್ತು"

"ಉಬ್ಬಸದ ಮೇಷೀನೇ? ಅದೇನು ಉಬ್ಬಸ ಬರಿಸುತ್ತೋ ಅಥವಾ ನಿಲ್ಲಿಸುತ್ತೋ?"

"ಎರಡೂ ಅಲ್ರೀ ... ಕರೆಂಟ್ ಹೋದಾಗ ಕಂಪ್ಯೂಟರ್ ಕೂಡ ನಿಂತು ಹೋಗದೇ ಇರಲಿ ಅಂತ ಮಗ ತಂದಿಟ್ಟಿರೋ ಉಪ್ಪುಸದ ಮೆಷೀನು"

"ಅಯ್ಯೋ ಕರ್ಮ! ಅದು ಯು.ಪಿ.ಎಸ್ಸು !"

"ಕರೆಂಟ್ ಹೋದಾಗ ಬೇರೆಲ್ಲ ಕೈ ಎತ್ತೋ ಮುಂಚೆ ಇದು ಸತ್ತಿರುತ್ತೆ. ಸಮಯಕ್ಕೆ ಸರಿಯಾಗಿ ಮಂತ್ರ ಮರೆಯೋ ಕರ್ಣನ ಹಾಗೆ"

"ಅಬ್ಬಬ್ಬ ... ಈ ಮಕ್ಕಳು ಮಾಡೋ ಅವಾಂತರಕ್ಕೆ ನನ್ ಹತ್ತಿರೋ ಇರೋ ಫೋನೂ ಒಂದು ... ಅಲ್ಲಿಂದ ಬರೋವಾಗ ಒಂದು ಐ-ಫೋನ್ ತಂದು ನನ್ನಾಕೆಗೆ ಕೊಟ್ಟಳು ಮಗಳು. ನನಗೆಂತಕೇ ಫೋನು ಅಂತ ಇವಳು ಕೇಳಿದ್ದಕ್ಕೆ ಇದು ಸ್ಮಾರ್ಟ್ ಫೋನು ಅಂತ ಏನೇನೋ ಹೇಳೋಕ್ಕೆ ಹೊರಟಲು ... ನಮ್ಮೋಳು ಅದಕ್ಕೆ ಹೇಳಿದ್ ಮಾತು ಕೇಳಿ ಬಿದ್ದೂ ಬಿದ್ದು ನಕ್ಕಿದ್ದೆ ನಾನು. ಅವಳು ಅದಕ್ಕೆ ರಾತ್ರಿ ಅಡುಗೇನೇ ಮಾಡ್ಲಿಲ್ಲ ಬಿಡಿ, ಅದು ಬೇರೇ ಕಥೆ"

"ಏನಾಯ್ತು ಅಂಥದ್ದು"

"ಮಗಳು ಸ್ಮಾರ್ಟ್ ಫೋನು ಅಂದಿದ್ದಕ್ಕೆ ನಮ್ಮೋಳು ಸ್ಮಾರ್ತರ ಫೋನೇ? ಶೃಂಗೇರೀ ಮಠದ್ದೇ? ಅಂದಳು"

"ಏನು ಕಥೆಯೋ ಏನೋ? ಇವರ ತಾಳಕ್ಕೆ ನಮ್ಮನ್ನೂ ಕುಣಿಸ್ತಾರೆ. ಅನ್ನೋ ಹಾಗಿಲ್ಲ ಅನುಭವಿಸೋ ಹಾಗಿಲ್ಲ"

"ಅದ್ಯಾವುದೋ ಯೂ-ಟ್ಯೂಬಂತೆ. ಸಿನಿಮಾ, ಹರಟೆ, ಸೀರಿಯಲ್ಲು ಅದೂ ಇದೂ ಏನೆಲ್ಲ ನೋಡಬಹುದು ಅಂತ ಹೇಳ್ತಾ ಇರ್ತಾನೆ ಮೊಮ್ಮಗ. ಅವತ್ತೊಂದು ಭಾನುವಾರ ಮಧ್ಯಾನ್ನ ಸಿನಿಮಾ ಶುರು ಮಾಡಿದ್ದಕ್ಕೆ ಸಂಜೆ ದೀಪಾ ಹೊತ್ತಿಸೋ ಹೊತ್ತಿಗೆ ಇದನ್ನು ಆರಿಸಿದ್ವಿ. ಮಧ್ಯೆ ಮಧ್ಯೆ ಪಾನೀಯಮ್ ಸಮರ್ಪಯಾಮಿ ಅನ್ನೋ ಹಾಗೆ ಜಾಹೀರಾತುಗಳು. ಜಾತ್ರೆ ಬೀದೀಲಿ ರಥ ಹೋದ ಹಾಗೆ ಮುಂದೆ ಹೋಗೋಕ್ಕಿಂತ ನಿಲ್ಲೋದೇ ಜಾಸ್ತಿ. ಚೇರ್ ಮೇಲೆ ಕೂತು ಬೆನ್ನು ನೋವು ಬಂತು ಅಂತ ಆ ಕರೀ ತಟ್ಟೆ ಲ್ಯಾಪ್ಟಾಪ್’ನ ತೊಡೇ ಮೇಲೆ ಇಟ್ಕೊಂಡ್ರೆ ಪಂಚೆ ಸುಡೋದೊಂದು ಬಾಕಿ ನೋಡಿ."

"ಹೋದ ವಾರ ನಮ್ಮ ಮನೆಯಲ್ಲಿ ಆದ ಕಥೆ ಕೇಳಿ. ಅದು ನೆಡೆದ ಮೂರು ದಿನ ಮಗನಿಂದ ಫೋನಿಲ್ಲ, ಈ-ಮೈಲ್ ಇಲ್ಲ. ಸಿಟ್ಟು ಬಂದಿತ್ತು ಅವನಿಗೆ"

"ಏನಾಯ್ತು ಅಂಥದ್ದು?"

"ಫೋನ್ ಮಾಡಿದೋನು ’ಎಲ್ಲ ಆರೋಗ್ಯಾನಾ? ಚ್ಯಾಟ್’ಗೆ ಬನ್ನಿ ಅಂತ ಮೆಸೇಜ್ ಹಾಕಿದ್ರೆ ಪತ್ತೇನೇ ಇಲ್ಲ ಹಂಗೆ ಹಿಂಗೆ ಅಂದ. ನಾನು ಇಲ್ಲಪ್ಪ ಲ್ಯಾಪ್ಟಾಪು ಕೆಲಸ ಮಾಡ್ತಿಲ್ಲ ಅಂದೆ. ಹೊಸಾದು ತಂದಿಟ್ಟಿದ್ದೆ, ಕೆಡೋಕ್ಕೆ ಏನಾಯ್ತು ಅಂದ. ನಾನು ಕಾರಣ ಹೇಳ್ದೆ, ಅದಕ್ಕೆ ಅವನಿಗೆ ಸಿಟ್ಟು"

"ಸ್ವಾಮೀ ನೀವು ಧಾರಾವಾಹಿ ನೋಡೋದು ಜಾಸ್ತಿ ಆಯ್ತು ಅನ್ನಿಸುತ್ತೆ. ಬೇಗ ಹೇಳಿ ಆ ಕಾರಣ"

"ನನ್ ಹೆಂಡ್ತಿ ಅರಿಶಿನ-ಕುಂಕುಮಕ್ಕೆ ಹೋಗಿದ್ಲು. ಅಲ್ಲಿಂದ ತಂದಿದ್ದ ಕೋಸಂಬರಿ ಕವರನ್ನ ನಾನು ತೆರೆದು ಇಟ್ಟಿದ್ದ ಲ್ಯಾಪ್ಟಾಪ್ ಮೇಲಾ ಇಡೋದು.  ಅದೇನು ಕವರ್ರು ತೂತಾಗಿತ್ತೋ ಏನೋ? ಸೌತೇಕಾಯಿ ನೀರು ಲ್ಯಾಪ್ಟಾಪ್ ಒಳಗೆ ನುಗ್ಗಿತು. ಇನ್ನೆಲ್ಲಿಂದ ಕೆಲಸ ಮಾಡುತ್ತೆ ಹೇಳಿ?"

"ಬಿಡಿ, ಇದ್ದಿದ್ದೇ ಗೋಳು. ಮಳೆ ಬರೋ ಹಾಗಿದೆ, ಹೊರಡೋಣ ನಡೀರಿ. ಈ ಕೆಟ್ನಾಲಜಿ ಕಥೆ ಇವತ್ತಿಗೆ ಮುಗಿಯೋಲ್ಲ ..."

Sunday, February 28, 2016

ಒಂಟಿ ವೃಕ್ಷ ನಾನು!


ಬಹಳ ದಿನಗಳ ನಂತರ, ಸ್ವಲ್ಪ ಗಂಭೀರವಾದ ಒಂದು ಸಣ್ಣ ಕಥೆ ಬರೆಯುವ ಮನಸ್ಸಾಯಿತು. ಆಲೋಚನೆ ಕೂಸಾಗಿದ್ದು ಹೀಗೆ:

"ನೀನು ಮುಷಂಡೀ ಹಾಗೆ ಇದ್ರೆ ಆಗಲ್ಲ. ಮುಂದೆ ನುಗ್ಗಬೇಕು. ಇಲ್ದಿದ್ರೆ ತುಳಿದುಬಿಡ್ತಾರೆ. ಇವಳೂ ನಿನ್ ಕ್ಲಾಸ್’ನಲ್ಲೇ ಇರೋದು .. ಇವಳನ್ನ ಫಾಲೋ ಮಾಡು". ಹಿರಿಯರು ಹೇಳಿದ ಮಾತು ಏನೂ ಅರ್ಥವಾಗದೇ ಇದ್ರೂ, ಆಯ್ತು ಅಂತ ಫಾಲೋ ಮಾಡಿದೆ.

"ಎಷ್ಟು ಚೆನ್ನಾಗಿ ಓದ್ತಾಳೆ ನೋಡು ಅವಳು ... ನೋಡಿ ಕಲಿ ... ಅವಳನ್ನ ಫಾಲೋ ಮಾಡು, ಜೀವನದಲ್ಲಿ ಉದ್ದಾರ ಆಗ್ತೀಯಾ". ತಲೆಗೆ ಎಷ್ಟು ವಿಷಯ ಹೋಯ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಹೇಳಿದಂತೆ ಮಾಡಿದೆ.

"ಅವಳು ನೋಡು ಓದಿನಲ್ಲೂ ಜಾಣೆ ಸಂಗೀತದಲ್ಲೂ ಜಾಣೆ. ಟಿವಿ ರಿಯಾಲಿಟಿ ಶೋ’ಗಳಲ್ಲಿ ಹಾಡ್ತಾಳೆ. ಅವಳನ್ನ ಫಾಲೋ ಮಾಡು. ಹೆಣ್ಣು ಹುಡುಗಿ ಗೆಲ್ಲಲಿ". ಅದೂ ಮಾಡಿದ್ದೆ. ಅವಳು ಗೆದ್ದು ಮುನ್ನೆಡೆದಳು.

ಹೀಗೇ ಅವಳನ್ನು ಫಾಲೋ ಮಾಡಿ ಮಾಡಿ ಪರಿಸ್ಥಿತಿ ಹೇಗೆ ಆಗಿತ್ತು ಅಂದರೆ ಅವಳ ಮೇಲೆ ಒಂದು ವಿಚ್ತ್ರ ಅಟ್ಯಾಚ್ಮೆಂಟ್ ಬೆಳೆದುಬಿಟ್ಟಿತ್ತು. ಮುಂದೆ ಒಂದು ದಿನ ಅವಳೊಂದಿಗೆ ಹಸೆಮಣೆ ಏರುತ್ತೇನೆ, ಆಗ ಒಮ್ಮೆಯಾದರೂ ಅವಳು ಕೈಹಿಡಿದು ನನ್ನನ್ನು ಫಾಲೋ ಮಾಡ್ತಾಳೆ ಅನ್ನೋ ಆಸೆ.

ಅಳೆದೂ ತೂಗಿ ರಿಹರ್ಸಲ್ ನೆಡೆಸಿ ಕೊನೆಗೂ ಧೈರ್ಯ ಮಾಡಿ ಅವಳಲ್ಲಿ ನಿವೇದಿಸಿಕೊಂಡೆ. ಆಕೆಯ ಮೊದಲ ಪ್ರಶ್ನೆ ನನ್ನನ್ನು ಮೂಕಾಗಿಸಿತ್ತು. ಆಕೆ ನುಡಿದಿದ್ದು "ನೀನು ಯಾರು?".

ನನ್ನ ನಿವೇದನೆಗೆ ಆಕೆ ಅಚ್ಚರಿಯಿಂದ ಕೇಳಿದ ಆ ಪ್ರಶ್ನೆ ನನಗೆ ’ಅಹಂಕಾರ’ ಎಂದು ತೋರಲಿಲ್ಲ. ಹಾಗಾಗಿ ಚಿಕ್ಕಂದಿನಿಂದ ಇಂದಿನವರೆಗಿನ ಕಥೆ ಸಂಕ್ಷಿಪ್ತವಾಗಿ ಹೇಳಿಕೊಂಡೆ. ಅವಳು ಸಾವಧಾನವಾಗಿ ಕೇಳಿಸಿಕೊಂಡಳು.

ನಂತರ ನುಡಿದಳು "ನೀನು ಸದಾ ನನ್ನನ್ನ ಫಾಲೋ ಮಾಡುತ್ತ ನನ್ನ ಹಿಂದೆಯೇ ಇದ್ದಿದ್ದರಿಂದ ನಾನು ನಿನ್ನನ್ನು ನೋಡೇ ಇರಲಿಲ್ಲ. ನನ್ನ ಧ್ಯೇಯ ಸದಾ ಮುಂದೆ ನೋಡುವತ್ತ ಇತ್ತು. ಹಾಗಾಗಿ ಹಿಂದಿರುಗಿ ನೋಡುವ ಪ್ರಮೇಯ ಬರಲಿಲ್ಲ. ನಾ ನೆಡೆವ ದಾರಿ ಸರಿ ಇರದಿದ್ದರೆ ಎಚ್ಚರಿಸುವ, ನಾ ನೆಡೆವ ದಾರಿಯಲ್ಲಿ ಎಡವದಂತೆ ತಡೆಯುವ ಜೊತೆಗಾರನೊಬ್ಬನ ಕೈಹಿಡಿಯುವಾಸೆ. ನೀನು ಹಿಂದೆ ಇದ್ದರೆ, ನಾ ಬಿದ್ದ ಮೇಲೆಯೇ ನಿನಗೆ ಅರಿವಾಗೋದು, ಅಲ್ಲವೇ? ಕ್ಷಮೆ ಇರಲಿ"

ಆಕೆ ಹೇಳಿದ್ದರಲ್ಲಿ ಕಿಂಚಿತ್ತೂ ತಪ್ಪು ಕಾಣಲಿಲ್ಲ. ಬದಲಿಗೆ ಈ ವಿಷಯದಲ್ಲೂ ನನಗೆ ಅವಳು ಮಾರ್ದಶಿ ಆಗಿದ್ದಳು ಅನ್ನಿಸಿತು. ನಿಜ, ಈಗಲೂ ಅವಳು ಹೇಳಿದ್ದು ಸರಿ ಎಂದಿತು ಮನ ಆದರೆ ಸ್ವಂತವಾಗಿ ವಿಚಾರ ಮಾಡಲು ಸೋತಿತ್ತು. ಅವಳಿಗೆ ನಾ ಅರ್ಹನಲ್ಲ !

ಅವಳು ನನಗೆ ಮಾಡಲ್ ಆಗಿದ್ದಳು. ಅವಳ ನೆರಳಲ್ಲಿ ನಾನು ಬರೀ ಡಲ್ ಆಗಿದ್ದೆ ಅಷ್ಟೇ!

ನನ್ನ ಸೋಲಲ್ಲಿ ಅವಳ ತಪ್ಪು ಏನೂ ಇಲ್ಲ. ತಪ್ಪು ನನ್ನದು. ನಾನು ನನ್ನ ಕರ್ತವ್ಯ ಬಿಟ್ಟು ಅವಳನ್ನು ಫಾಲೋ ಮಾಡುವುದರಲ್ಲೇ ಕಾಲ ಕಳೆದೆ. ಅಲ್ಲಲ್ಲ, ಇಲ್ಲಿ ನನ್ನ ತಪ್ಪೂ ಇಲ್ಲ. ಅವಳನ್ನು ಫಾಲೋ ಮಾಡಲು ಪ್ರೇರೇಪಿಸಿದ್ದು ಯಾರು? ಒಬ್ಬರ ಭವಿಷ್ಯವನ್ನು ರೂಪಿಸುವುದರಲ್ಲಿ ಹಿರಿಯರ ಹೊಣೆಗಾರಿಕೆ ಏನು? ಅರ್ಥವೇ ಆಗುತ್ತಿಲ್ಲ! ನಾ ಅರಿಸಿಕೊಂಡು ಸವೆದ ಹಾದಿಯಲ್ಲಿ ತುಂಬ ದೂರ ಬಂದಿದ್ದೀನಿ.

ಒಮ್ಮೆ ಹಿಂದಿರುಗಿ ನೋಡಿದೆ. ನನ್ನ ಹಿಂದೆ ಬಂದವರು ಯಾರೂ ಇರಲಿಲ್ಲ ಅಲ್ಲಿ. ಅವಳನ್ನಂತೂ ಇನ್ನು ಫಾಲೋ ಮಾಡಲಾರೆ. ಬಟಾಬಯಲಲ್ಲಿ ನಿಂತ ಒಂಟಿ ವೃಕ್ಷ ನಾನು!

Tuesday, March 31, 2015

ಮುಖದ ಮೇಲೆ ಮುಖವಾಡ

ಬೆಳ್ಳಂಬೆಳಿಗ್ಗೆ ಅಲಾರಂ ಹೊಡೆದುಕೊಳ್ಳುತ್ತಿತ್ತು ... ಯಾವುದೋ ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದ ನನಗೆ ಆ ಅಲಾರಂ ತಂಗಾಳಿಯಲ್ಲಿ ತೇಲಿಬಂದ ವೇದಮಂತ್ರದಂತೆ, ನವಿರಾದ ಕಾಲ್ಗೆಜ್ಜೆಯ ನಾದದಂತೆ, ಹಗಲಿನ ಹಕ್ಕಿಪಿಕ್ಕಿಗಳ ಹಾಡಿನಂತೆ, ಕೊಳಲ ನಾದದಂತೆ ಕೇಳಿಸಲಿಲ್ಲಾರೀ ... ಶಿವಮಣಿಯ ಡ್ರಮ್ಸ್’ನಂತೆ ತಲೆಯನ್ನು ಕುಟ್ಟಿ ಎಬ್ಬಿಸಿತ್ತು ... ಸೈಲೆನ್ಸರ್ ತೆಗೆದ ಬೈಕಿನಂತಹ ಸದ್ದು ನರನಾಡಿಯಲ್ಲಿ ನುಗ್ಗಿತ್ತು ... ಜೆಟ್ ವಿಮಾನವೊಂದು ಸುಯ್ಯ್ ಎಂದು ಎಡಗಿವಿಯಿಂದ ಹಾದು ಬಲಗಿವಿಯಿಂದ ಹೊರಬಂದಂತಾಯ್ತು ... ಅದಕ್ಕೇ ಎದ್ದೆ.

ಮಡದಿ ಒಂದೆರಡು ದಿನ ಅಂತ ಅಮ್ಮನ ಮನೆಗೆ ಹೋಗಿದ್ದಳು. ಹಾಗಾಗಿ ನಾನು, ನಾನು ಮತ್ತು ನಾನು ಅಷ್ಟೇ ನಮ್ಮ ಮನೆಯಲ್ಲಿ ! ಇನ್ನೊಂದೈದು ನಿಮಿಷ ಅಂತ ಮಲಗಿ ಒಂದು ಘಂಟೆಯ ನಂತರ ಎದ್ದ ಮೇಲಂತೂ ನಾನು ಮತ್ತು ಗಡಿಬಿಡಿ ಇಬ್ಬರೇ ... ಪ್ರತಿ ಹಲ್ಲನ್ನೂ ಅರ್ಧ ಮಾತ್ರ ಉಜ್ಜಿ ಧಡ ಧಡ ಬಟ್ಟೆ ಹಾಕಿಕೊಂಡು ಮಧ್ಯಾನ್ನ ಅಲ್ಲೇ ಏನಾದ್ರೂ ಕೊಂಡು ತಿಂದರಾಯ್ತು ಅಂತ ಹೊರಟೇ ಬಿಟ್ಟೆ.

ಗಾಡಿ ನಿಲ್ಲಿಸಿ ಒಳಗೆ ಹೋಗುತ್ತಿದ್ದಂತೆ ಗೇಟಿನ ಬಳಿ ಇದ್ದ ಗಾರ್ಡ್ ನಾಲ್ಕು ಬಾರಿ ನನ್ನನ್ನೇ ನೋಡಿದ. ಹದಿನೈದು ವರ್ಷದಲ್ಲಿ ಇಂಥಾ ಅನುಭವ ಆಗಿದ್ದು ಕೆಲಸಕ್ಕೆ ಸೇರಿದ ಮೊದಲೆರಡು ದಿನಗಳಲ್ಲಿ ಮಾತ್ರ. ಅವನು ಯಾವ ಮೂಡ್’ನಲ್ಲಿದ್ದಾನೋ ಅಂತ ನಾನೇ ಅವನನ್ನು ಹೆಸರು ಹಿಡಿದು ಕೂಗಿ ಮಾತನಾಡಿಸಿ ಮುಂದೆ ಹೋದೆ. ಬೆಳಿಗ್ಗೆಯೇ ಮೀಟಿಂಗ್ ಇದ್ದುದರಿಂದ ಮೀಟಿಂಗ್ ರೂಮಿನಲ್ಲಿ ಕೂತೇ ಕೆಲಸ ಶುರು ಮಾಡಿದ್ದೆ. ಒಬ್ಬೊಬ್ಬರಾಗಿ ಒಳಗೆ ಬಂದವರು ಎಲ್ಲಿ ಬೇಕೋ ಅಲ್ಲಿ ಆಸೀನರಾದರು. ನನ್ನ ಮುಖ ನೋಡಿ ಸುಮ್ಮನಾಗುತ್ತಿದರೇ ವಿನಹ ಕಿರುನಗೆಯೂ ಇಲ್ಲ. ಹೋಗ್ಲಿ ಬಿಡಿ, ಇವರೆಲ್ಲ ನನಗೇನು ಹೊಸಬರೇ?

ನಾನು ಕಳಿಸಬೇಕೆಂದಿದ್ದ ಈ-ಮೈಲ್ ಕೊನೇ ಹಂತದಲ್ಲಿ ಇದ್ದುದರಿಂದ ಅದನ್ನು ಮುಗಿಸಿ ನಂತರ ಮಾತು ಶುರು ಮಾಡೋಣ ಅಂತಿದ್ದೆ. ಇನ್ನೇನು ನಾನು ಎಲ್ಲರೂ ಮೀಟಿಂಗ್’ಗೆ ಬಂದದ್ದಕ್ಕೆ ಧನ್ಯವಾದ ಅರ್ಪಿಸಬೇಕು ಅನ್ನುವಷ್ಟರಲ್ಲಿ, ಇನ್ಯಾರೋ ಮಾತು ಶುರು ಮಾಡಿದರು ... "ಮಿ.ರಾವ್ ಇನ್ನೂ ಬಂದಿಲ್ಲ. ಮೀಟಿಂಗ್ ಕ್ಯಾನ್ಸಲ್ ಮಾಡಿರಬೇಕು. ಆದರೆ ನನಗೆ ಯಾವ ಈ-ಮೈಲ್ ಬರಲಿಲ್ಲ !!" ಅನ್ನುತ್ತಿದ್ದ.

ನಾನು ಒಮ್ಮೆ ಜೋರಾಗಿ ನಕ್ಕು ’ನೈಸ್ ಜೋಕ್’ ಎಂದು ಮೆಚ್ಚುಗೆ ಸೂಚಿಸಿ ಮಾತು ಶುರು ಮಾಡಿದೆ. ಇಡೀ ಮೀಟಿಂಗ್’ನಲ್ಲಿ ಜನ ನನ್ನ ಮಾತನ್ನು ಕೇಳುವುದರ ಜೊತೆ ಏನೋ ಗ್ಯಾರಂಟಿ ಮಾಡಿಕೊಳ್ಳುವವರ ಹಾಗೆ ದಿಟ್ಟಿಸಿ ನೋಡುತ್ತಿದ್ದರು.

ನಮ್ಮ ಕಛೇರಿ ದೊಡ್ಡದು. ಹಲವಾರು ಮಹಡಿಗಳ ಕಟ್ಟಡ. ಸ್ನೇಹಿತರು ಬೇರೆ ಬೇರೆ ಪ್ರಾಜಕ್ಟ್ ಎಂದು ಅಲ್ಲಿ ಇಲ್ಲಿ ಚದುರಿ ಹೋಗಿದ್ದಾರೆ. ಮಧ್ಯಾನ್ನ ಊಟಕ್ಕೆ ಕೆಫಿಟೇರಿಯಾದಲ್ಲಿ ಸಿಗುವುದು ವಾಡಿಕೆ. ಊಟದ ಸಮಯದಲ್ಲಿ ನನ್ನದೇ ಫ್ಲೋರಿನಲ್ಲಿರುವನೊಬ್ಬ ನನ್ನತ್ತ ನೋಡಿ ಹಾಗೇ ಹೊರಟು ಹೋದ. ಹೆಂಡ್ತಿ ಮೇಲಿನ ಸಿಟ್ಟನ್ನು ಮಕ್ಕಳ ಮೇಲೆ ತೋರೋ ಹಾಗೆ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಇವನಿಗೆ ಯಾರ ಮೇಲೆ ಸಿಟ್ಟೋ ನನ್ನನ್ನು ಕರೆಯದೆ ಹಾಗೇ ಹೋದ. ಊರಿಗೆ ಬಂದೋಳು ನೀರಿಗೆ ಬಾರದೇ ಹೋದಾಳೆ, ಊಟ ತಂದೋನು (ತಾರದವನೂ) ಕೆಫಿಟೇರಿಯಾದಲ್ಲಿ ಸಿಗದೇ ಹೋದಾನಾ? ಅಂದುಕೊಂಡು ಎರಡು ನಿಮಿಷದಲ್ಲಿ ನಾನೂ ಹೊರಟು ಅಲ್ಲಿಗೆ ಹೋದೆ.

ಒಂದು ನಿಮಿಷ ನನ್ನನ್ನು ಎಲ್ಲರೂ ನೋಡಿ ನಂತರ ಮಾತನಾಡಿಸಿದರು. ನನ್ನ ಫ್ಲೋರಿನವನು ’ನಿನ್ ಜಾಗದಲ್ಲಿ ಯಾರೋ ಬೇರೆಯವರು ಕೂತಿದ್ದ ಹಾಗಿತ್ತು ಅಂತ ಹೊರಟು ಬಂದೆ. ನೀನೇನಾ?" ಅಂದ. ಇದೊಳ್ಳೇ ಕಥೆಯಾಯ್ತಲ್ಲ ? ಯಾರಿಗೂ ನಾನು ನನ್ನಂತೆ ಕಾಣುತ್ತಿಲ್ಲ ! ಏನಾಯ್ತು ?

ಸಂಜೆ ಮನೆಗೆ ಹೊರಟಾಗ ಎರಡನೇ ಶಿಫ್ಟ್’ನ ಗಾರ್ಡ್ ನಿಂತಿದ್ದ, ಮಾಮೂಲಿನಂತೆ. ಎಂದಿನಂತೆ ಅವನ ಕೈಗೆ ಕೀ ಹಾಕಿ ಸುಮ್ಮನೆ ನಿಂತೆ. ಆತನೋ ಬಾಯಿಬಿಟ್ಟು ಕೇಳಿಯೇಬಿಟ್ಟ "ಸರ್, ಯುವರ್ ಬಾಡ್ಜ್ ಪ್ಲೀಸ್" ಅಂತ. ದಿನವೂ ನನಗೆ ಸಲಾಮ್ ಹೊಡೆದು. ಕೀಲಿ ತೆಗೆದುಕೊಂಡು ಗಾಡಿ ತಂದಿಡೋ ಇವನಿಗೂ ನಾನ್ಯಾರು ಅಂತ ತಿಳೀಲಿಲ್ವೇ? ಬಾಡ್ಜ್ ತೋರಿಸು ಅಂದ ಮೇಲೆ ನಿಯಮದಂತೆ ನನ್ನ ಕರ್ತವ್ಯ ಮಾಡಿದೆ. "ಸಾರಿ ಸರ್, ಗೊತ್ತಗ್ಲಿಲ್ಲ" ಅಂತಂದು ಕೀಲಿ ತೊಗೊಂಡು ಹೋದ.

ಮನೆ ಹತ್ತಿರ ಕಾರ್ ಪಾರ್ಕ್ ಮಾಡಿ ಗೇಟ್ ತೆಗೆಯಬೇಕು ಅನ್ನೊಷ್ಟರಲ್ಲಿ ಮಹಡಿ ಮೇಲೆ ಹೆಂಡ್ತಿ ದರ್ಶನ ! ನಾಳೆ ಬರೋದು ಇಂದೇ ಬಂದುಬಿಟ್ಟಳೇ ವಾವ್ ಎಂದುಕೊಂಡೂ ಮುಂದಡಿ ಇಡೋಷ್ಟರಲ್ಲಿ ನನ್ನ ಬಾಡಿಗೆ ಮನೆಯಾತ ತಂದೆ "ಯಾರು ಬೇಕಿತ್ತು?" ಅಂತ ಕನ್ನಡಕ ಒರೆಸಿಕೊಳ್ಳುತ್ತ ಕೇಳಿದರು. ಪಾಪ ಅರುಳು ಮರಳು ಅಂತ ನಕ್ಕು ಮಹಡಿ ಹತ್ತು ಹೋದೆ. ಮೂರು ವರ್ಷದಿಂದ ನೋಡಿರುವ ಇವರಿಗೂ ನಾನ್ಯಾರು ಎಂದು ಗೊತ್ತಾಗಲಿಲ್ವೇ?

ತಲೆಗೂದಲು ಸವರಿಕೊಂಡು, ಬಟ್ಟೆ ಸರಿಪಡಿಸಿಕೊಂಡು, ಮುಖದ ಮೇಲೆ ಎಂದಿನ ನಗೆ ತರಿಸಿಕೊಂಡು "ಹಾಯ್ ಸುಮಾ" ಎನ್ನುತ್ತ ಮನೆ ಬಾಗಿಲ ಬಳಿ ಸಾಗಿದೆ. ಎಲ್ಲರಂತೆ ಇವಳಿಗೂ ಮುಖ ಗುರುತು ಸಿಗದೇ ಹೋದರೂ ಕಂಠವಾದರೂ ಗುರುತು ಸಿಗಲಿ ಅಂತ. ಯಾರೋ ಆಗುಂತಕ ಅಂತ ಇವಳು ಚೀರಿ ಜನ ಸೇರಿ ನನ್ನನ್ನು ಬಡಿದು ಹಾಕಿದರೆ? ಅದನ್ನ ನೆನೆಸಿಕೊಂಡರೇ "ಅಯ್ಯಯ್ಯಪ್ಪ !" ... ಕೊನೇ ಮಾತು ನಾನು ಅಂದಿದ್ದಲ್ಲ ... "ಸುಮಾ !!"

"ಯಾಕ್ರೀ ಹಿಂಗಿದ್ದೀರಿ? ಆಫೀಸಿನಲ್ಲಿ ಮಾಡೋ ಕೆಲ್ಸ ಅಷ್ಟರಲ್ಲೇ ಇದೆ ... ಯಾಕೆ ಹಿಂಗಿದ್ದೀರಿ? ನೀವು ಮಾತಾಡದೇ ಹಾಗೇ ಬಂದು ನಿಂತಿದ್ರೆ ಹೋಗಿದ್ರೆ ಕಳ್ಳ ಅಂದುಕೊಂಡು ಬಿಡ್ತಿದ್ದೆ" ಅನ್ನೋದೇ? ... ಬುದ್ದಿ ಉಪಯೋಗಕ್ಕೆ ಬಂತು ... "ಬೆಳಿಗ್ಗೆಯಿಂದ ಇದೇ ಆಯ್ತು ... ಏನಾಗಿದ್ದೀನಿ ?"

ಹಾಗೇ ಒಂದೆರಡು ನಿಮಿಷ ನನ್ನನ್ನು ನೋಡಿ ನುಡಿದಳು ಸುಮ "ಸ್ನಾನಾ ಮಾಡಿ ಹಾಗೇ ಹೋದ ಹಾಗಿದೆ ... ತಲೆ ಸ್ನಾನ ಮಾಡಿದಾಗ ಶ್ಯಾಂಪೂ-ಕಂಡೀಶನರ್ ಹಾಕದೆ ಸುಮ್ಮನೆ ನೀರು ಹಾಕಿರೋದ್ರಿಂದ ಜಟೆ ಕಟ್ಟಿದ ಹಾಗಿದೆ ಕೂದಲು ... ಮುಖಕ್ಕೆ ಬರೀ ಸೋಪು ಹಚ್ಚಿದ್ರಿಂದ ಒಣಗಿ ಹೋಗಿದೆ ಚರ್ಮ ...ಮುಖಕ್ಕೆ ಕ್ರೀಮಿಲ್ಲ, ಪೌಡರಿಲ್ಲ .. ಕೈಗೆ moisturizer ಹಾಕಿಲ್ಲ, ಕುತ್ತಿಗೆಗೆ ಬಾಡಿ ಕ್ರೀಮ್ ಹಚ್ಚಿಲ್ಲ. ಕೊಂಕಳಿಗೆ Deodorant ಸುಳಿದೇ ಇಲ್ಲ. ಹಲ್ಲುಗಳು ಭಾಗಶಹ ಬೆಳ್ಳಗಿದ್ದು ಹೆಚ್ಚುವರಿ ಹಳದಿ ಇದೆ, ಸೋ  ದಯವಿಟ್ಟು ತುಟಿಗಳನ್ನ ಲಾಕ್ ಮಾಡಿಕೊಳ್ಳಿ. ನಾನಿಲ್ಲ ಅಂತ ಬಟ್ಟೆಗೆ ಇಸ್ತ್ರಿ ಇಲ್ಲ. ಸದ್ಯಕ್ಕೆ ನನಗೆ ಇಷ್ಟೇ ತೋಚಿದ್ದು" ...

ಇಷ್ಟು ಸಾಲದೇ ? ಬೆಳಿಗ್ಗೆ ಬೆಳಿಗ್ಗೆ ಮೀಟಿಂಗ್ ಅಂತ ಲೇಟಾಗಿ ಎದ್ದ ನಾನು ಎದ್ದುಬಿದ್ದು ಹಲ್ಲುತಿಕ್ಕಿ, ಸ್ನಾನ ಮಾಡಿ ಓಡಿದ್ದೇ ದೊಡ್ಡದು. ಇನ್ನು ಇಷ್ಟೆಲ್ಲಾ ವೈಭೋಗಕ್ಕೆ ಟೈಮು ಎಲ್ಲಿತ್ತು ?

ಓ! ಹಾಗಿದ್ರೆ ವಿಷಯ ಇದು ...

ಹಲವು ಮ್ಯಾಗಜೀನ್’ಗಳಲ್ಲಿ "ತೆರೆಯ ಮೇಲಿನ ನಿಮ್ಮ ಗ್ಲ್ಯಾಮರಸ್ ಹೀರೋಯಿನ್ ನಿಜ ಜೀವನದಲ್ಲಿ ’ರಸ್’ ಇಲ್ಲದೆ ಹೀಗಿರುತ್ತಾರೆ" ಎಂದು ಎರಡು ಚಿತ್ರಗಳು ಹಾಕಿರುವ ನೆನಪು ಬಂತು. ತೆರೆಯ ಮೇಲೆ ಹೃದಯ ಕದ್ದ ಚೋರಿ ನಿಜ ಜೀವನದಲ್ಲಿ ಮುಸುರೆ ತೊಳೆಯುವ ಹಾಗೆ ಇರುತ್ತಾಳೆ ಅಂತ ತೋರಿಸುವುದು ಉದ್ದೇಶವೋ ಅಥವಾ ತೆರೆಯ ಮೇಲೆ ನೋಡಿದ್ದೆಲ್ಲ ನಿಜವಲ್ಲ ಎಂದು ಅರಿವು ಮೂಡಿಸುವುದು ಉದ್ದೇಶವೋ ಗೊತ್ತಿಲ್ಲ ...

ನನಗೂ ಈಗ ಸೆಲೆಬ್ರಿಟಿ ಆದೆ ಹಾಗೆ ಅನ್ನಿಸಿದೆ. ಅಲ್ಲದೇ ಇಷ್ಟು ದಿನ ನನ್ನನ್ನು ಜನ ಗುರುತಿಸುತ್ತ ಇದ್ದದ್ದು ನನ್ನನ್ನಲ್ಲ ಬದಲಿಗೆ ನಾ ಹೊತ್ತ ಮುಸುಕಿಗೆ ಅಂತಾಯ್ತು ! ಪ್ರತಿ ದಿನವೂ ಹೊರಗೆ ಹೋಗುವ ಮುನ್ನ ನಮ್ಮ ಮುಖದ ಮೇಲೆ ಮುಖವಾಡ ಹೊತ್ತೇ ಸಾಗುವ ನಾವು ನೈಜವಾಗಿ ಹೋದರೆ ಜನರಿಗೆ ಗುರುತು ಹತ್ತುವುದಿಲ್ಲ ಅನ್ನೋದು ಸತ್ಯವೇ ...

ನಾವು, ಅಂಗಡಿಯಲ್ಲಿ ’ಥಳಥಳ’ ಹೊಳೆವ ಆಪಲ್’ಗಳ ಹಾಗೆ. ಗಿಡದಲ್ಲಿರುವ ತಾಜ ಸೇಬಿನ ಹಣ್ಣಿನ ಮೇಲೆ ಪ್ರಕೃತಿದತ್ತವಾದ ಮೇಣವಿರುತ್ತದೆ. ಹಣ್ಣನ್ನು ಕಿತ್ತು ಉಜ್ಜಿದಾಗ ಫಳ ಫಳ ಹೊಳೆಯುತ್ತದೆ. ನೀರಿನಲ್ಲಿ ತೊಳೆದರೆ ಕಳಾಹೀನವಾಗುತ್ತದೆ. ಹಣ್ಣಿಗೆ ಮತ್ತೊಮ್ಮೆ ಮೇಣವನ್ನು ಲೇಪಿಸಿದಾಗಲೋ ಅಥವಾ ಶೆಲ್ಲಾಕ್’ಅನ್ನು ಸ್ಪ್ರೇ ಮಾಡಿದಾಗಲೋ ಅವು ಹೊಳಪನ್ನು ಪಡೆಯುತ್ತದೆ. ನಿಮಗೆ ತಿಳಿದಂತೆ ಇವು ನೈಸರ್ಗಿಕವಲ್ಲ ಬದಲಿಗೆ ರಾಸಾಯನಿಕ. ಥಳಗುಟ್ಟದೆ ಹೋದರೆ ಬೆಲೆ ಎಲ್ಲಿ. ಸೇಬಿನ ಹಣ್ಣಿಗೂ ನಮ್ಮ ಮುಖಕ್ಕೂ ಹೆಚ್ಚು ವ್ಯತ್ಯಾಸವಿಲ್ಲ ಅಲ್ಲವೇ?

ಮೇಣವನ್ನು ತೊಳೆದ ಸೇಬು ಹಾಗೇ ಇರಿಸಿದಲ್ಲಿ ಬೇಗ ಹಾಳಾಗುತ್ತದೆ. ತೊಳೆದ ಮುಖಕ್ಕೆ ರಾಸಾಯನಿಕ ಲೇಪನ ಬಳಿದುಕೊಳ್ಳದೇ ಹೋದರೆ ಮುಖವೂ ಕಳೆಗುಂದುತ್ತದೆ. ಮೇಣ ಅಥವಾ ಸ್ಪ್ರೇ ಬೇಕೋ ಬೇಡವೋ? ನಿಮ್ಮ ಮುಖಕ್ಕೆ ಅಲಂಕಾರ ಬೇಕೋ ಬೇಡವೋ?

ಕೊನೇ ಟಚ್: ಸಿನಿಮಾದಲ್ಲಿನ ಗ್ಲ್ಯಾಮರಸ್ ಹೀರೋಯಿನ್ ನಿಜಕ್ಕೂ ಕಾಣೋದು ಹೀಗೆ ಅಂತಾರಲ್ಲ, ಹಿಂದಿನ ದಿನ ರಾತ್ರಿಯ ನಾಟಕದಲ್ಲಿ ಭೀಮನ ಪಾತ್ರ ನಿರ್ವಹಿಸಿದ್ದೆ ಅಂತ ಹೋದೆಡೆಯಲ್ಲೆಲ್ಲ ಗದೆ ಹೊತ್ತುಕೊಂಡೇ ತಿರುಗೋಕ್ಕಾಗುತ್ತಾ? ಕೊಂಚ ಯೋಚಿಸುವ ವಿಷಯವೇ, ಅಲ್ಲವೇ?

ಇಂದಿಗಿಂತ ಅಂದೇನೇ ಚೆಂದವೂ !

ಇಂದಿಗಿಂತ ಅಂದೇನೇ ಚೆಂದವೂ

ಕಾಲ ಎಷ್ಟು ಮುಂದುವರೆದರೂ ಕೆಲವೊಂದಕ್ಕೆ ಬದಲಾವಣೆಗಳ ಹಂಗಿಲ್ಲ ... ಅಂದಿನ ಸದ್ದು ಹೇಗಿತ್ತೋ ಇಂದೇ ಅದೇ ಸದ್ದಿನೊಂದಿಗೆ ಆರ್ಭಟಿಸುತ್ತದೆ ಗುಡುಗು ... ಹರಿವ ನದಿಯ ನೀರಿನ ಸದ್ದು ಇಂದಿಗೂ ಜುಳುಜುಳು, ರಾಕ್ ಮ್ಯೂಸಿಕ್ನಲ್ಲಿ ಓಡುವುದಿಲ್ಲ ಹರಿವ ನೀರು ! ಸೂರ್ಯ ಮುಳುಗುವ ಮುನ್ನ ಆಕಾಶದ ರಂಗು ಅಂದೂ ಇಂದೂ ಬಹುಶ: ಮುಂದೂ ಅದೇ ಥಳುಕಿನ ರಂಗು ರಂಗು ....

ಇಂತಹ ಒಂದು ಸುಂದರ ಸಂಜೆಯ ನದೀ ತಟದಲ್ಲಿ ಜುಳುಜುಳು ಹರಿವ ನೀರಿನ ಕಲರವ ಆಲಿಸುತ್ತಿದ್ದ ಜೋಡಿಯೊಂದರ ಹೀಗೊಂದು ಸಂಭಾಷಣೆ ಹೀಗಿತ್ತು ...

"ನ್ಯಾಚುರಲ್ ಬ್ಯೂಟಿಯೇ ಬ್ಯೂಟಿ ... ಸಿಟಿಯಲ್ಲಿದ್ದು ಇದ್ದು ಹೊರಗಿನ ಪ್ರಪಂಚ ಹೀಗಿದೆ ಅಂತ್ಲೇ ಗೊತ್ತಿರೋದಿಲ್ಲ ಎಷ್ಟೊ ಸಾರಿ ... ವಾಟ್ ಡು ಯೂ ಸೇ?"

"ಎಲ್ಲ ಕಡೆ ಲೈಟುಗಳ ಹಾವಳಿಯಿಂದ ಆಕಾಶದಲ್ಲಿ ನಕ್ಷತ್ರಗಳಿವೆ ಅಂತ್ಲೂ ಮರೆತು ಹೋಗಿದೆ"

"ರೋಡಿನ ಮೇಲೆ ನೆಡೆದಾಡುತ್ತ ತಲೆ ಎತ್ತಿ ನೋಡಿದ್ರೆ ಹೈ-ರೈಸ್ ಬಿಲ್ಡಿಂಗ್’ಗಳೇ ಕಾಣುತ್ತೆ ... ಆಕಾಶವೇ ಕಾಣೋಲ್ಲ ... ಮಧ್ಯಾನ್ನ ದಾಟಿದ ಮೇಲೆ ಸೂರ್ಯಾನೂ ಕಾಣೋಲ್ಲ !"

"ಒಮ್ಮೊಮ್ಮೆ ಅನ್ನಿಸುತ್ತೆ, ಸಾಧ್ಯವಿದ್ರೆ ಒಂದೈವತ್ತೋ ನೂರೋ ವರ್ಷ ಹಿಂದಕ್ಕೆ ಓಡಿಹೋಗಬೇಕು ಅಂತ"

"ನಿಜ ನಿಜ ... ಈಗ ನೋಡು, ಕಾರಲ್ಲಿ ಕೂತರೆ ಸಾಕು ಎಲ್ಲಿಗೆ ಬೇಕೆಂದರೆ ಅದೇ ಕರ್ಕೊಂಡ್ ಹೋಗುತ್ತೆ. Internet ಅನ್ನೋದು ಕಣ್ ತುದಿಯಲ್ಲೇ ಇದೆ. ಕಾರು ಜಮ್ಮಂತ ಹೋಗ್ತಿದ್ರೆ, ನಾವು ವಿಡಿಯೋ ನೋಡ್ಕೊಂಡ್ ಕೂತಿರೋದು."

"ಯಾರಾದ್ರೂ ನಮಗೆ ಏನಾದ್ರೂ ಹೇಳಬೇಕೂ ಅಂದ್ರೆ ವಿಡಿಯೋ ಕಾನ್ಫೆರೆನ್ಸಿಂಗ್ ಅಂತ ಪ್ರತ್ಯಕ್ಷ. Instructions Downloadಆದ ಮೇಲೆ recording ಲಭ್ಯ. Grocery ಕೂಡ ಆನ್ಲೈನ್ ಆರ್ಡರ್, Drive-thru pickup. ವ್ಯವಹಾರ ಮಾತೇ ಇಲ್ದೇ ಮುಗಿದಿರುತ್ತೆ. ಈ ನಡುವೆ ಅಪರೂಪಕ್ಕೆ ಮಾತು ಅನ್ನೋ ಹಾಗೆ ಆಗಿದೆ ಜೀವನ"

"ಯೂ ಆರ್ ರೈಟ್! ರೊಬೋಟ್’ಗಳ ಹಾಗೆ ಆಗಿಬಿಟ್ಟಿದ್ದೀವಿ. ಕಾಫಿ ಬೇಕಂದ್ರೆ ಟೇಬಲ್ಗೇ ಬರುತ್ತೆ. ಎಲ್ಲ ಜನ ಬರೀ ವಿಸಿಬಲ್ ಮೆಸೇಜ್ನಲ್ಲೇ ಇರ್ತಾರೆ. ಮುಖ ನೋಡಿ ಮಾತಾಡೊ ಅಭ್ಯಾಸವೇ ತಪ್ಪಿ ಹೋಗಿವೆ ಜನಕ್ಕೆ. ಯಾರಿಗೆ ಏನು ಬೇಕಿದ್ರೂ ಎಲ್ಲ ವಿಡಿಯೋ ಡೌನ್ಲೋಡ್. ಎಲ್ಲ ಕಡೆ humongous ಡೇಟ ಬಂದು ಜಗತ್ತೇ ಬದಲಾಗಿದೆ"

"ರೀಸೆಂಟ್ ಆಗಿ Human Now and Then ಅಂತ ಎರಡು Generations ಹಿಂದಿನ ಜೀವನದ ಬಗ್ಗೆ ವಿಡಿಯೋ ನೋಡಿದ್ಯಾ?. ಏನು ಚೆನ್ನಾಗಿದೆ ಅಂದಿನ ಜೀವನ ಅಂದ್ರೆ, ಹೇಳೋಕ್ಕೇ ಆಗಲ್ಲ.  it’s beyond wonderful !

"ಓ! ನನ್ Glass ಗೂ ರೆಲೀಸ್ ಮಾಡಿಸಿಕೊಂಡೆ. ನಾನೂ ನೋಡಿದೆ.  It’s simply amazing and unbelievable"

"Funny ಅಂದ್ರೆ, ಆ ಜನ ಮೂವಿ ಹಾಲ್ ಮುಂದೆ ಲೈನ್ ನಿಂತುಕೊಂಡ್ ಟಿಕೆಟ್ ತೊಗೊಳ್ತಾರೆ.  They pay currency!!! ಟಿಕೆಟ್ ತೊಗೊಂಡು ೧-೨ ಘಂಟೆ ಹೊರಗೆ ವೈಟ್ ಮಾಡಿ, ಮೂರು ಘಂಟೆ ಮೂವಿ ನೋಡಿ ಆಮೇಲೆ ಮಾಲ್’ನಲ್ಲಿ ಶಾಪಿಂಗ್ ಮಾಡ್ಕೊಂಡು, ಹೊರಗೆ ಊಟ ಮಾಡಿಕೊಂಡು ಮನೆಗೆ ಬರ್ತಾರೆ.  They spend 7-8 hours on that. My GOD  ನಾನು ಆ ಕಾಲದಲ್ಲಿ ಇರಬೇಕಿತ್ತು ಅನ್ನಿಸ್ತಿದೆ."

"But, u know what was hilarious? same movie was available on Internet but still they could afford 7-8 hours !!   ಇನ್ನೊಂದ್ Sequenceನಲ್ಲಿ ಒಬ್ಬ ೨-೩ ಘಂಟೆ ಟಿಕೆಟ್ ಅಂತೆಲ್ಲ ಟೈಮ್ ವೇಸ್ಟ್ ಮಾಡಿ ಥಿಯೇಟರ್ ಒಳಗೆ ಹೋಗಿ then he sleeps !!! Good that he wasted some silly $10 on that. "

"ಸಕತ್ ಮಜಾ! ಇನ್ನೊಂದ್ ವಿಷಯ ... hilarious ... ಜನ ಕೈಯಲ್ಲಿ ಫೋನ್ ಇಟ್ಕೊಂಡು ಇಂಟರ್ನೆಟ್ ನೋಡ್ತಾರೆ, ಮೆಸೇಜ್ ಕಳಿಸ್ತಾರೆ, ಆಮೇಲೆ ಯಾವುದೋ ಸೋಷಿಯಲ್ ಮೀಡಿಯಾದಲ್ಲಿ  they fight ! for everything they have to type. What a waste of time and energy. good that today we don’t talk to each other much ..."

"ಮತ್ತೆ ಇನ್ನೊಂದ್ ಸೀನ್ನಲ್ಲಿ, there are some 4-5 kids playing video games. My god, they really had an awesome time together then. Amazing ! Kids socialized a lot those days ! Our life is so so monotonous. "

"ಎಷ್ಟು ಫ್ರೀ ಆಗಿ ಓಡಾಡ್ತಿದ್ರು ಅವತ್ತು. ವಾವ್! ಅದೇ ಇವತ್ತು? ಯಾವಾಗ್ಲೂ ಹೆಡ್ ಮಸ್ಕ್ ಹಾಕ್ಕೋಬೇಕು. ಆಗಿನವರು ಜಾಸ್ತಿ ತಲೆ ಕೆಡಿಸಿಕೊಳ್ತಾ ಇರಲಿಲ್ಲ. ಇವತ್ತು  health awareness lobby has reached the peak ಅನ್ನಿಸುತ್ತೆ. ಮುಖ ಎಕ್ಸ್ಪೋಸ್ ಮಾಡಿದ್ರೆ ಈ ಖಾಯಿಲೆ ಬರುತ್ತೆ, ಕೈ ಎಕ್ಸ್ಪೋಸ್ ಮಾಡಿದ್ರೆ ಆ ಖಾಯಿಲೆ ಬರುತ್ತೆ ಅಂತೆಲ್ಲ ಹೇಳಿ ಹೇಳಿ we are packed in a box. We look like robots of those days."

"hang on ... I got a message on my glass. Ultraviolet radiation surge warning ಬಂತು. ನಾವು ಇಲ್ಲೇ ಹೊರಗಡೆ ಇದ್ರೆ, ನಮ್ಮ ಲೈಸೆನ್ಸ್ ಕಿತ್ಕೊಂಡ್ ಬೀದಿಗೆ ಬರದೇ ಇರೋ ಹಾಗೆ ಮಾಡ್ತಾರೆ. ಹೋಗೋಣ."

"this is the third time in this week. Come on let’s pack up "

"life of human 2013 video ಮತ್ತೆ ನೋಡ್ಕೊಂಡ್ ಹೋಗ್ತೀನಿ ದಾರೀಲಿ."

"I will wait for 2014 version ... I wish I was born back then"

-----------------------
ಬದಲಾವಣೆಯ ಬಿರುಗಾಳಿ ಏನಿದ್ದರೂ ಮನುಷ್ಯನ ಜೀವನ ಶೈಲಿಗೆ ಮಾತ್ರ ಎನಿಸುತ್ತದೆ. ಬದಲಾವಣೆಯ ಬಲಿಪಶು ಮನುಜನದ್ದು ಸದಾ ಅದೇ ಹಾಡು "ಇಂದಿಗಿಂತ ಅಂದೇ ಚೆನ್ನಿತ್ತು" ಅಂತ.

ಈ ಇಬ್ಬರ ಸಂಭಾಷಣೆಯಲ್ಲಿ ಕನ್ನಡವೂ ಸೇರಿದೆ ಎನ್ನುವಂತೆ ಬರೆದಿದ್ದು ನನ್ನ ಆಶಾವಾದಿತನ ಅನ್ನಿಸುತ್ತದೆ !!!

ಹತ್ತನೆಯ ತರಗತಿಯ ಪಬ್ಲಿಕ್ ಪರೀಕ್ಷೆ !

ರಾಜ್ಯದಲ್ಲಿ ಇಂದಿನಿಂದ ಹತ್ತನೆಯ ತರಗತಿಯ ಪಬ್ಲಿಕ್ ಪರೀಕ್ಷೆಗಳು ಆರಂಭ !!!

ಕ್ರಿಕೆಟ್ ವೀರರು ವರ್ಲ್ಡ್ ಕಪ್'ಗಾಗಿ ಹೋರಾಡುತ್ತಿರುವಾಗ ಅಗಾಗ್ಯೆ ತಾವೂ ಕದ್ದು ಮುಚ್ಚಿ ಟಿವಿ ನೋಡಿಕೊಂಡು, ಸ್ಕೋರ್'ಗಳನ್ನು ತಿಳಿದುಕೊಂಡು, ಓದಿನಲ್ಲೂ ಹಿಂದೆ ಬೀಳದೆ, ಈಗ ಪರೀಕ್ಷೆ ಎಂದ ರಣರಂಗಕ್ಕೆ ಹೊರಟು ನಿಂತಿಹ ಎಲ್ಲ ಪುಟ್ಟ ವೀರರಿಗೆ ಶುಭವಾಗಲಿ ...

ಜೀವನದಲ್ಲಿ ಏನನ್ನು ಮರೆತರೂ ನಾ ಬರೆದ ಎಸ್.ಎಸ್.ಎಲ್.ಸಿ ಪರೀಕ್ಷೆ ಮರೆಯಲಾರೆ ... ಅಂದು ಆಂಗ್ಲ ಪರೀಕ್ಷೆಗೆ ಇಪ್ಪತ್ತು ನಿಮಿಷ ತಡವಾಗಿ ಹೋಗಿದ್ದೆ ... ಹೆಬ್ಬಾಳದಿಂದ ಚಾಮರಾಜಪೇಟೆಗೆ ಹೋಗಲು ಎರಡು ಬಸ್ ಹಿಡಿಯಬೇಕಿತ್ತು. ಮೊದಲ ಟ್ರಿಪ್ ಏನೋ ಅಂದುಕೊಂಡ ಸಮಯಕ್ಕೆ ತಲುಪಿದ್ದೆ. ಕೈಕೊಟ್ಟಿದ್ದೇ ಮೆಜಸ್ಟಿಕ್'ನಿಂದ ಚಾಮರಾಜಪೇಟೆಗೆ ಹೋಗಲು ಕಾದಿದ್ದ ಬಸ್. ಹಿಂದಿನ ದಿನ ಸಮಯಕ್ಕೆ ಬಂದಿದ್ದ ಬಸ್ ಇಂದು ಬರಲಿಲ್ಲ ... ಕೈ ಕೊಟ್ಟಿತ್ತು !!

ಹತ್ತೂವರೆ ಘಂಟೆಗೆ ಪರೀಕ್ಷೆ ಆರಂಭ. ಹತ್ತು ಘಂಟೆ ಹತ್ತು ನಿಮಿಷಕ್ಕೆ ನಾನಿದ್ದ ಬಸ್ ಹೊರಟಿತ್ತು. ಹೆಚ್ಚೂ ಕಮ್ಮಿ ಎರಡು ಬಸ್ ಜನ ಒಂದರಲ್ಲಿ. ಕಂಡಕ್ಟರ್'ಗೆ ಟಿಕೆಟ್ ನೀಡಲೇ ಹೆಚ್ಚು ಸಮಯ ಹಿಡಿದಿತ್ತು. ಚಿಲ್ಲರೆ ತಾರದ ಜನರನ್ನು, ಬಸ್ ಪಾಸ್ ಮಾಡಿಸದ ಜನರನ್ನು ಬೈದುಕೊಂಡಿದ್ದೇ ಬಂತು. ಮೂವತ್ತೈದು ನಿಮಿಷಗಳ ಪಯಣ ಮೂವತ್ತೈದು ಯುಗಗಳಂತೆ ಕಂಡಿತ್ತು. ಬಸ್ ಸ್ಟ್ಯಾಂಡ್'ನಲ್ಲಿ ನಿಂತಿದ್ದೇ ತಡ ಧಡಾರೆಂದು ಇಳಿದು ಎದ್ದು ಬಿದ್ದು ಶಾಲೆಯ ಗೇಟಿನ ಬಳಿ ಬಂದು ಆ ಇಪ್ಪತ್ತು ಮೆಟ್ಟಿಲಿಳಿದಾಗ ಕಂಡಿದ್ದು ಹೆಡ್ ಮಾಸ್ತರ್ !!!

ತಡವಾಗಿದ್ದಕ್ಕೆ ಕ್ಷಮೆಯಾಚಿಸಿ ಕಾರಣ ಹೇಳಲು ತೊಡಗಿದ್ದೆ. "ಮೊದಲು ಪರೀಕ್ಷೆ ಬರಿ. ಮಾತು ಆಮೇಲೆ" ಎಂದು ಪರೀಕ್ಷೆ ಹಾಲ್'ಗೆ ಕಳಿಸಿದ್ದರು. ಅಷ್ಟು ಸ್ಟ್ರಿಕ್ಟ್ ಇದ್ದ ಹೆಡ್ ಮಾಸ್ತರ್ ಈ ರೀತಿ ಸಮಾಧಾನಪಡಿಸಿ ಮಾತನಾಡಿದ್ದೇ ಸೋಜಿಗ!

ರೂಮಿನೊಳಗೆ ಹೋಗಿದ್ದೇ ತಡ ಮೊದಲು ನನ್ನ ಕೈಗೆ ಸಿಕ್ಕಿದ್ದು ಪೇಪರ್ ಅಲ್ಲ ... ಉರ್ದು ಪಾಠ ಮಾಡುವ ಮೌಲ್ವಿಯವರು ಕೊಟ್ಟ ದೊಡ್ಡ ಲೋಟದಲ್ಲಿನ ನೀರು ... ಐದು ನಿಮಿಷ ಸುಧಾರಿಸಿಕೊಂಡ ಕೊಂಡ ಮೇಲೆ ಬರೆಯಲು ಆರಂಭ ....

ಎಂಥ ಅನುಭವ ... ಅಂದಿನಿಂದ ಮುಂದಿನ ಮಿಕ್ಕೆಲ್ಲ ಪರೀಕ್ಷೆಗೆ ಕನಿಷ್ಟ ಒಂದು ಘಂಟೆ ಮುಂಚೆ ತಲುಪಿರುತ್ತಿದ್ದೆ :-)

ಶುಭವಾಗಲಿ ನನ್ನೆಲ್ಲ ಗೆಳೆಯರ ಮಕ್ಕಳೇ !