Sunday, August 8, 2010
ಅಪೂರ್ಣನಾದ ಪೂರ್ಣಚಂದ್ರ !
ಪ್ರಬಂಧದ ಶೀರ್ಷಿಕೆ ಏನೆಂದು ಊಹಿಸಿ
ಅನಸೂಯಾಬಾಯಿ ಮನೆಗೆ ಬಿಗ್ ಸ್ಕ್ರೀನ್ ಬಂತು !
ಕೊಕ್
ಅರಮನೆಯ ಒಂದು ಕೋಣೆಯ ಕಥೆ
ಹಾಡ್ಕೊಂಡ್ ರಾಜಣ್ಣನ ನೆನೆಯೋಣ ಬನ್ನಿ !
Monday, April 19, 2010
ಹೀಗೊ೦ದು ಸತ್ಯ ಕಥೆ - ಡಾ| ಶರತ್
ಬೆ೦ಗಳೂರಿನ ಹೊರಭಾಗದ ಹೆಬ್ಬಾಳದ ಸಮೀಪದಲ್ಲಿರುವ ಗೆದ್ದಲಹಳ್ಳಿಯ ನಿವಾಸಿ ಮಕ್ಕಳ ತಜ್ನರಾದ ಶ್ರೀ. ಶರತ್ ಕುಮಾರ್ ಮೂಲತ: ಮ೦ಗಳೂರಿನವರು.
ಕಳೆದ ಇಪ್ಪತ್ತು ವರ್ಷಕ್ಕೂ ಮೇಲ್ಪಟ್ಟು ಗೆದ್ದಲಹಳ್ಳಿಯಲ್ಲಿ ತಮ್ಮ ಕ್ಲಿನಿಕ್ ನೆಡೆಸಿಕೊ೦ಡು ಬ೦ದು, ಸುತ್ತಮುತ್ತಲ ಅಂದರೆ ಗ೦ಗೇನಹಳ್ಳಿ, ಅಶ್ವಥ್ ನಗರ, ಸಂಜಯನಗರ,ನಾಗಶೆಟ್ಟಿಹಳ್ಳಿಯ ನಿವಾಸಿಗಳ ಮನೆ ಮಾತಾಗಿದ್ದರು.
ಸಹೃದಯ ಜೀವಿಯಾದ ಇವರ ಬಳಿ ಬರುತ್ತಿದ್ದವರಲ್ಲಿ ಬಹುತೇಕ ಹಳ್ಳಿಯ ಜನರೇ ಹೆಚ್ಛು. ರೋಗಿಗಳ ಜೊತೆ ಅವರು ಮಾತನಾಡುವಾಗ ನಮಗೆ ಕೆಲವೊಮ್ಮೆ ಮೋಜು ಎನಿಸುತ್ತಿತ್ತು. ಉದಾ: 'ಮೈ ಬಿಸಿ ಎಂದರೆ ಎಷ್ಟು ಬಿಸಿ' 'ವಾಂತಿ ಎಂದರೆ ಗಳ ಗಳಾ ಅಂತ ಮಾಡಿತ್ತಾ ಅಥವಾ ಹೇಗೆ? ಎಷ್ಟು ಸಾರಿ ಆಯ್ತು' 'ಭೇದಿ ನೀರಾಗಿ ಆಯ್ತಾ' 'ಈ ಮಾತ್ರೆ ಬೆಳಿಗ್ಗೆ ಊಟಕ್ಕೆ ಮು೦ಚೆ ಮಾತ್ರ ತೊಗೊಳ್ಳಿ ಆಯ್ತಾ? ಊಟಕ್ಕೆ ಮು೦ಚೆ ಮಾತ್ರ. ಮೂರು ದಿನ ಬಿಟ್ಟು ಬ೦ದು ನನ್ನ ನೋಡಿ' ಎಂದು. ಒಮ್ಮೆ ಹಾಗೇ ಯೋಚನೆ ಮಾಡಿದಾಗ ಅವರ ಪರಿ ಅರ್ಥವಾಯಿತು. ಸಮಸ್ಯೆ ಪೂರ್ಣವಾಗಿ ಅರ್ಥ ಮಾಡಿಕೊ೦ಡು ಅದಕ್ಕೆ ತಕ್ಕ ಮದ್ದು ನೀಡುತ್ತಿದ್ದರು. ಅಲ್ಲದೆ ರೋಗಿಗಳಿಗೆ ಅರ್ಥವಾಗಲಿ ಎ೦ದು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿದ್ದರು.
ಬಡವರಲ್ಲಿ ಹೆಚ್ಚು ಹಣ ತೆಗೆದುಕೊಳ್ಳುತ್ತಿರಲಿಲ್ಲ. ಮಕ್ಕಳ ವೈದ್ಯರೇ ಆದರೂ ಹಿರಿಯರನ್ನೂ ನೋಡುತ್ತಿದ್ದರು. ಏಳಲಾಗದ ಪರಿಸ್ಥಿತಿಯಲ್ಲಿ ಇರುವವರ ಮನೆಗೇ ಹೋಗಿ ಶುಶ್ರೂಷೆ ಮಾಡುತ್ತಿದ್ದರು. ಉದಾ: ಎಷ್ಟೋ ಸಾರಿ ನಮ್ಮ ಮನೆಗೆ ನಮ್ಮ ತಾಯಿಯನ್ನು ನೋಡಲು ರಾತ್ರಿ ಹನ್ನೊಂದಕ್ಕೂ ಬಂದ ಉದಾಹರಣೆ ಇದೆ. ಭಾರತಕ್ಕೆ ಹೋದಾಗ ಸುಮ್ಮನೆ ಹೋಗಿ ಅವರನ್ನು ಮಾತಾನಾಡಿಸಿಕೊ೦ಡು ಬರುತ್ತಿದ್ದೆ.
ಕಳೆದ ಗುರುವಾರ ರಾತ್ರಿ ಯಾರೋ ರೋಗಿಗಳ ಕಡೆಯವರು ಮಗುವಿಗೆ ತೀವ್ರ ಜ್ವರ. ಏಳಲೂ ಆಗುತ್ತಿಲ್ಲ ದಯವಿಟ್ಟು ಬ೦ದು ನೋಡಿ ಎ೦ದು ಕರೆದುಕೊ೦ಡು ಹೋದರಂತೆ.
ಕ್ಲಿನಿಕ್'ನಿ೦ದ ಹೊರಗೆ ಕಾಲಿಟ್ಟ ವೈದ್ಯ ಶರತ್ ಮತ್ತೆ ಹಿ೦ದಿರುಗಲಿಲ್ಲ !!!!
ಸುಳ್ಳು ಹೇಳಿ ವೈದ್ಯರನ್ನು ತಮ್ಮೊ೦ದಿಗೆ ಕರೆದೊಯ್ದು ಶರತ್ ಕುಮಾರ್ ಅವರ ಕುತ್ತಿಗೆ ಬಿಗಿದು ಪ್ರಾಣ ತೆಗೆದಿದ್ದಾರೆ !!!!
ಹಣ ಮತ್ತು ಒಡವೆಗಾಗಿ ಹೀಗೆ ಮಾಡಲಾಗಿದೆ ಎ೦ದು ಕೇಳ್ಪಟ್ಟೆ. ಹಾಗೆ೦ದೇ ಪತ್ರಿಕೆಯವರೂ ವರದಿ ಮಾಡಿದ್ದಾರೆ.
ಹಗಲಾಗಲಿ ಇರುಳಾಗಲಿ ರೋಗಿಗಳೇ ಸೇವೆಯನ್ನು ದೈವಾರಾಧನೆಯ೦ತೆ ನೆಡೆಸಿಕೊ೦ಡು ಬ೦ದ ವೈದ್ಯರಿಗೆ ಈ ಗತಿ ಬ೦ದಿದ್ದು ಸಹಿಸಿಕೊಳ್ಳಲಾರದ ನೋವು. ಎರಡು ಮೂರು ಹಳ್ಳಿಯ ಜನರಿಗೆ ಸಾರ್ವಜನಿಕ ದರ್ಶನ ಏರ್ಪಡಿಸಿ ನಂತರ ಅವರ ದೇಹವನ್ನು ಮಿಕ್ಕ ಕಾರ್ಯಕ್ಕೆ ಹುಟ್ಟೂರಿಗೆ ಒಯ್ದರೆ೦ದು ತಿಳಿದುಕೊ೦ಡೆ.
ಹಲವಾರು ಜೀವ ಉಳಿಸಿದ ಇ೦ತಹ ಸಹೃದಯ ವೈದ್ಯರ ಜೀವ ತೆಗೆದ ಕಡು ಪಾಪಿಗಳು ಶ್ರೀಘ್ರದಲ್ಲೇ ಕಾನೂನಿನ ಕೈಗೆ ಸಿಗಲಿ ಸಿಕ್ಕು ತಕ್ಕ ಶಿಕ್ಷೆ ಅನುಭವಿಸುತ್ತಾರೆ೦ದು ಅ೦ದುಕೊಳ್ಳೋಣ
ಮೃತರ ಆತ್ಮಕ್ಕೆ ಭಗವ೦ತ ಶಾ೦ತಿ ನೀಡಲಿ
ನನಗೆ ಸನ್ಮಾನ ಅಂತೆ !
ಮನೆಯವರೆಲ್ಲ ಬೇಸಿಗೆ ರಜಕ್ಕೆ ಊರಿಗೆ ಹೋಗಿದ್ದರು. ನಾನು ಒಬ್ಬನೇ ಮನೆಯಲ್ಲಿ. ಅರ್ಜಂಟ್ ಕೆಲಸದ ಮೇಲೆ ಹುಬ್ಬಳ್ಳಿಗೆ ಹೋಗಬೇಕಾಗಿ ಬಂತು. ಬೇಸಿಗೆ ರಜ ಬೇರೆ. ಟ್ರೈನಿನ ಟಿಕೆಟ್ ಸಿಗಲಿಲ್ಲ. ಬೇರೆ ದಾರಿ ಇಲ್ಲ. ಟೂರಿಸ್ಟ್ ಬಸ್ಸಿಗೆ ಟಿಕೆಟ್ ಬುಕ್ ಮಾಡಿಸಿ ಹೊರಟೆ. ಮಬ್ಬಾದ ಬೆಳಕಿನ ಬಸ್ಸಿನಲ್ಲಿ ಕುಳಿತಿದ್ದೆ. ಒಳ್ಳೇ ಸುಖಾಸನ. ಸ್ವಲ್ಪ ಹೊತ್ತಿಗೆ ಹೊರಡುತ್ತದೆ. ಬೊಂಬಾಟ್ ನಿದ್ದೆ ಮಾಡಬಹುದು ಎಂಬೋ ಎಣಿಕೆ. ಹಾಗೇ ಕಣ್ಣು ಮುಚ್ಚಿದೆ.
ಮೊಬೈಲು ಕಿರುಗುಟ್ಟಿತು.
ಮೊದಲ ವಿಘ್ನ ಎಂದುಕೊಳ್ಳುತ್ತ ಕರೆ ಸ್ವೀಕರಿಸಿದೆ. ಆ ಕಡೆ ವ್ಯಕ್ತಿಯ ದನಿ ಪರಿಚಯವಂತೂ ಇರಲಿಲ್ಲ. ತಮ್ಮ ಪರಿಚಯ ಹೇಳಿಕೊಂಡು, ಇಷ್ಟು ತಡವಾಗಿ ಕರೆ ಮಾಡಿದ್ದಕ್ಕೆ ಕ್ಶಮೆ ಕೇಳಿ, ನನಗೆ ಅಭಿನಂದನೆ ತಿಳಿಸಿದರು. ಯಾಕೆ, ಏನು, ಎತ್ತ ಎಂಬುದರ ಅರಿವೇ ಆಗಲಿಲ್ಲ. ಕುತೂಹಲದಿಂದ ವಿಷಯ ಏನು ಎಂದು ಕೇಳಿದೆ. ಅರ್ಧ ಘಂಟೆ ಹೇಳುತ್ತಾ ಹೋದರು. ಸಾರಾಂಶ ಇಷ್ಟೇ. ಯಾವುದೋ ಸ್ವಯಂ ಸೇವಕ ಸಂಘದವರು ನನ್ನನ್ನು "ವರ್ಷದ ಸಮಾಜ ಸೇವಕ" ಎಂದು ಗುರುತಿಸಿ ಸನ್ಮಾನ ಮಾಡಲು ನನ್ನ ಒಪ್ಪಿಗೆ ಕೇಳಿದರು. ಸಿಕ್ಕಾಪಟ್ಟೆ ಆಶ್ಚರ್ಯ ಮತ್ತು ಸಂತೋಷವಾದರೂ ತೋರ್ಪಡಿಸದೆ ಆ ದಿನ ಸ್ವಲ್ಪ ಬಿಜಿ ಇದ್ದೀನಿ ಆದರೂ ಖಂಡಿತ ಬರುತ್ತೀನಿ ಎಂದು ಲೈಟಾಗಿ ಹಿರಿಯತನ ತೋರಿ, ಮೊಬೈಲ್ ಆರಿಸಿದೆ.
ಇದು ನನ್ನ ಜೀವನದಲ್ಲಿ ’ಬಯಸದೇ ಬಂದ ಭಾಗ್ಯ’ವಾಗಿತ್ತು. ಅಲ್ಲಾ, ಬೆಳಿಗ್ಗೆ ತಾನೇ ಚಾರ್ಜ್ ಮಾಡಿದ್ದೆ. ಮಧ್ಯೆ ಮಧ್ಯೆ ಏನೊ ಕಿರುಗುಟ್ಟುತ್ತಿತ್ತು. ಚಾರ್ಜ್ ಇಲ್ಲವೋ ಅಥವಾ ಯಾರಾದರೂ ಅದೇ ಸಮಯದಲ್ಲಿ ನನಗೆ ಫೋನ್ ಮಾಡುತ್ತಿದ್ದರೋ ಗೊತ್ತಿಲ್ಲ. ಮೇಲಾಗಿ, ಇಂತಹ ಉತ್ತಮ ಫೋನ್ ಕಾಲ್ ಬಿಟ್ಟು ಬೇರೆ ಕರೆಯನ್ನು ಸ್ವೀಕರಿಸಲು ನಾನೇನು ದಡ್ಡನೇ?
ಮೊಬೈಲ್ ಮತ್ತೆ ಕಿರುಗುಟ್ಟಿತು. ನಮ್ಮ ಪಕ್ಕದ ಮನೆ ಸಿದ್ದರಾಮ. ಈ ಮನುಷ್ಯನಿಗೆ ಹೊತ್ತು ಗೊತ್ತು ಏನಿಲ್ಲ. ನೆನ್ನೆ ರಾತ್ರಿ ಇದೇ ಸಮಯಕ್ಕೆ ಫೋನ್ ಮಾಡಿ, ಹೇಗೂ ನಿಮ್ಮ ಮನೆಯವರೂ ಯಾರೂ ಇಲ್ಲ, ವಾಕಿಂಗ್ ಬರ್ತೀರೇನೂ ಅಂತ ಕೇಳಿದ್ರು. ಇವತ್ತೂ ಅದೇ ಅಂತ ಕಾಣುತ್ತೆ. ಕರೆ ಸ್ವೀಕರಿಸಲಿಲ್ಲ. ಸುಮ್ಮನಾದೆ.
ಮತ್ತೆ ಐದು ನಿಮಿಷಕ್ಕೆ ಅವರದೇ ಕರೆ. ಮೊದಲು ಅವರಿಗೆ ವಿಷಯ ತಿಳಿಸಿ, ಫೋನ್ ಆಫ್ ಮಾಡಿ, ಸನ್ಮಾನ ಸಮಾರಂಭಕ್ಕೆ ಯಾವ ಬಟ್ಟೆ ಹಾಕಿಕೊಳ್ಲಬೇಕು ಎಂಬೆಲ್ಲ ವಿಷಯ ಮನದಲ್ಲೇ ಪಟ್ಟಿ ಮಾಡಬೇಕು ಅಂತ ನಿರ್ಧರಿಸಿ, ಕರೆ ಸ್ವೀಕರಿಸಿದೆ.
ಕೂಡಲೆ ’ರ್ರೀ, ಪ್ರಾಣೇಶ್. ಎಲ್ರೀ ಇದ್ದೀರಾ? ನಿಮ್ಮ ಮನೆ ಫೋನ್ ಬೇರೆ ಕೆಟ್ಟ ಹಾಗೆ ಇದೆ. ಮೊಬೈಲ್ ಬಿಜಿ ಇದೆ. ನನಗೂ ಆಗ್ಲಿಂದ ಗುಂಡಿ ಒತ್ತಿ ಒತ್ತಿ ಸಾಕಾಯ್ತು’ ಎಂದು ರೋಸಿದ ದನಿಯಲ್ಲಿ ಪ್ರಶ್ನೆಗಳ ಸುರಿ ಮಳೆಯನ್ನೇ ಸುರಿಸಿದರು. ನಾನು ಸಂಕ್ಷಿಪ್ತವಾಗಿ ಊರಿಗೆ ಹೋಗುತ್ತಿರುವ ವಿಷಯ ತಿಳಿಸಿದೆ.
ವಿಷಯ ತಿಳಿದು ಆತಂಕದಿಂದ ನುಡಿದರು "ಅಲ್ರೀ, ಮತ್ತೆ ನಿಮ್ಮ ಮನೆಯಿಂದ ಏನೇನೋ ಸದ್ದು ಬರುತ್ತಿತ್ತು. ಏನೂ ಅಂತ ವಿಚಾರಿಸೋದಕ್ಕೇ ನಾನು ಕಾಲ್ ಮಾಡಿದ್ದು. ಈ ನಡುವೆ ಕಳ್ಳರು, ಮೊದಲು ಮನೆ ಫೋನ್ ಲೈನ್ ಕತ್ತರಿಸಿ, ಮೊಬೈಲಿಗೆ ಕಾಲ್ ಮಾಡಿ ಲೈನ್ ಬಿಜಿ ಇಡ್ತಾರಂತೆ. ಮೊದಲೇ ನೀವು ಸಮಾಜ ಸೇವಕರು. ನಿಮ್ಮ ನಂಬರ್ ಊರಿನವರಿಗೆಲ್ಲ ಗೊತ್ತಿರುತ್ತೆ. ಅಂದ ಹಾಗೇ, ನಾನು ನಿಮಗೆ ಫೋನ್ ಮಾಡಿದಾಗ ನಿಮ್ಮ ಲೈನ್ ಕೂಡ ಬಿಜಿ ಇತ್ತು. ಯಾರಾದ್ರೂ ಫೋನ್ ಮಾಡಿದ್ರೇನೂ?"
ಮೊಬೈಲ್ ಯಾವಾಗ ಕೈ ಜಾರಿ ಬಿತ್ತೋ ... ಗೊತ್ತೇ ಆಗಲಿಲ್ಲ ...
ಎರಡು ರಾತ್ರಿ ತಾನೇ. ಅವರಿಗೇನು ಹೇಳಿ ಮನೆ ಕೀಲಿ ಕೊಡೋದು ಅಂತ ಹಾಗೇ ಬಂದೆ. ಅದೇ ತಪ್ಪಾಯ್ತು !
{ಇದು ಸತ್ಯ ಕಥೆ ಅಲ್ಲ .... ಸತ್ಯ ಆಗದೆ ಇರಲಿ ಎಂಬುದೇ ಆಶಯ}
ನಾಟಕ: ಪಂಚವಟಿ LLC
ಪಾತ್ರ ಪರಿಚಯ:
ನವ್ಯ - ಸ್ಟೈಲಿಗೆ ಹೆಚ್ಚು ಕೊಡುವ ಪಾತ್ರ. ಯಾರೇನು ಅವರ ಬಗ್ಗೆ ಮಾತನಾಡಿಕೊಂಡರೂ ತಲೆ ಕೆಡಿಸಿಕೊಳ್ಳದ ವ್ಯಕ್ತಿತ್ವ.
ಭವ್ಯ - ತನ್ನಾಸೆಗಳು ಈಡೇರಿಸಿಕೊಳ್ಳಲಾಗದ ಪಾತ್ರ
ದಿವ್ಯ - ಅತ್ತೆ ಮನೆಯವರು (ಗಂಡನನ್ನೂ ಸೇರಿಸಿ) ಅಂದರೆ ಅಷ್ಟಕ್ಕಷ್ಟೇ ಎನ್ನುವ ಪಾತ್ರ
ಶ್ರಾವ್ಯ - ಎಲ್ಲವನ್ನೂ ನೇರವಾಗಿ ಅರ್ಥ ಮಾಡಿಕೊಳ್ಳುವ ಶುದ್ದ ಮನಸ್ಸಿನ ಪಾತ್ರ
ಕಾವ್ಯ - ಯಾರಲ್ಲೂ ಭಿನ್ನಾಭಿಪ್ರಾಯ ಬರದಂತೆ ಸಾಂತ್ವನಗೊಳಿಸುವ ಪಾತ್ರ
{LLC ಅಂತ ಅಂದ ಕೂಡಲೆ ನೀವು, ನಾನು ಯಾವುದೋ ಕಂಪನಿ ಅಂತ ತಲೆ ಕೆರೆದುಕೊಳ್ಳಬೇಡಿ. LLC ಅಂದರೆ Lovely Ladies Club ಅಂತ ಅರ್ಥ. ಇದೊಂದು ಲೇಡೀಸ್ ಕ್ಲಬ್. ಇಲ್ಲಿ ಐವರು ಹೆಂಗಸರು ಸೇರಿ ವಟ ವಟ ಅಂತ ಮಾತಾಡ್ತಾರೆ ಅಂತ ಹೇಳಿ ’ಪಂಚವಟಿ’ ಅಂತ ಹೆಸರು}
{ನಾಲ್ಕು ಮಂದಿ ಹೆಂಗಸರು (ಭವ್ಯ, ದಿವ್ಯ, ಕಾವ್ಯ, ಶ್ರಾವ್ಯ) ಅದೂ ಇದೂ ಮಾತಾಡಿಕೊಂಡು ಒಳಗೆ ಬರುತ್ತಾರೆ.....}
{"ತುಂಬಾ ಚೆನ್ನಾಗಿತ್ತು", "ಒಳ್ಳೇ ಕಾನ್ಸೆಪ್ಟು"}
ಭವ್ಯ : ಅಲ್ರೀ, ನವ್ಯ ಎಲ್ರೀ?
ಕಾವ್ಯ: ಅವರು ಯಾವಾಗ್ಲೂ ಲೇಟ್ ತಾನೇ... ಬರ್ತಾರೆ ಬಿಡಿ
ದಿವ್ಯ: ಇನ್ನೂ ಮೇಕಪ್ ಮಾಡಿಕೊಳ್ತಿರ್ತಾರೆ ಅಲ್ವೇ?
ಕಾವ್ಯ: ಕನ್ನಡಿಗೆ ಬೇಜಾರಾದ್ರೆ ಎದ್ದು ಬರ್ತಾರೆ
ಶ್ರಾವ್ಯ: ಅಲ್ಲಾ ಕಾವ್ಯ, ಕನ್ನಡಿಗೆ ಬೇಜಾರಾಯ್ತು ಅಂತ ಇವರಿಗೆ ಹ್ಯಾಗೆ ಗೊತ್ತಾಗುತ್ತೆ?
ಕಾವ್ಯ: ಇವರಿಗೋ, ಎಲ್ಲ ಬಿಡಿಸಿ ಹೇಳಬೇಕು
ಭವ್ಯ: (ಬೆರಳಲ್ಲಿ ದಿವ್ಯ’ಳ ಸೀರೆ ಅಂಚನ್ನು ಹಿಡಿದು ಮೆಚ್ಚುಗೆಯಿಂದ) ರೀ ದಿವ್ಯ, ನಿಮ್ಮ ಸೀರೆ ತುಂಬಾ ಚೆನ್ನಾಗಿದೆ ಕಣ್ರೀ.
ದಿವ್ಯ: (ಹೆಮ್ಮೆಯಿಂದ) ಥ್ಯಾಂಕ್ಸ್ ಭವ್ಯ. ಇದು Brasso silks ಅಂತ ಕಣ್ರೀ .. ಬೇಡ ಬೇಡ ಅಂದ್ರೂ ನಮ್ ಯಜಮಾನರು ತೊಗೋ ಅಂತ ಗಲಾಟೆ ... ಪಾಪ, ಅವರಿಗ್ಯಾಕೆ ಬೇಜಾರು ಅಂತ, ಅವರು ಒಂದು ತೊಗೋ ಅಂದರೆ ನಾನು ನಾಲ್ಕ್ ತೊಗೊಂಡೆ ಕಣ್ರೀ!!
ಭವ್ಯ: (ಮೆಚ್ಚುಗೆಯಿಂದ) ಅಬ್ಬ, ಸೆಲೆಕ್ಷನ್ ಅಂದರೆ ನಿಮ್ದು ರ್ರೀ!
ದಿವ್ಯ: (ಹೆಮ್ಮೆಯಿಂದ) ನಮ್ಮ ಮನೆ ಕಡೆ ಯಾರು ಏನೇ ಸೆಲೆಕ್ಟ್ ಮಾಡಿದರೂ ನನ್ನನ್ನೇ ಕರೆಯೋದು ಕಣ್ರೀ! (ಬೇಸರದಿಂದ) ಆದ್ರೆ, ಆ ನಮ್ಮಪ್ಪ ಮಾತ್ರ ತಮಗೆ ಅಳಿಯನ್ನ ಹುಡುಕಿದಾಗ (ಶ್ರಾವ್ಯಳ ಕಡೆ ತಿರುಗಿ) ಅದೇ ನಮ್ಮೆಜಮಾನರನ್ನ ಹುಡುಕಿದಾಗ ಆ ಕೆಲಸ ಮಾಡ್ಲಿಲ್ಲ ನೋಡಿ
ಕಾವ್ಯ: ಹೋಗ್ಲಿ ಬಿಡ್ರಿ ... ಹಳೇ ಕಥೆ ಈಗ್ಯಾಕೆ? ಪಾಲಿಗೆ ಬಂದದ್ದು ಪಂಚಾಮೃತ. ಅದು ಬಿಡಿ. ಸೀರೆ ಎಲ್ಲಿ ತೊಗೊಂಡ್ರಿ, ಅದು ಹೇಳಿ ?
ಶ್ರಾವ್ಯ: (ಮೆಲ್ಲಗೆ ತಲೆ ಕೆರೆದುಕೊಂಡು) ಸೀರೇ ಅಂಗಡಿಯಲ್ಲೇ ತೊಗೊಂಡಿರ್ತಾರೆ. ಇನ್ನೇನು ದಿನಸಿ ಅಂಗಡೀಲಿ ತೊಗೊಳ್ತಾರೆಯೇ? .... ಅಲ್ವೇನ್ರೀ ದಿವ್ಯ?
{ಮಿಕ್ಕವರು ಮುಸಿ ಮುಸಿ ನಗುತ್ತ ಮೆಲ್ಲಗೆ ತಲೆ ಚೆಚ್ಚಿ ಕೊಳ್ಳುತ್ತಾರೆ}
ದಿವ್ಯ: (ನಗುತ್ತ) ಹೌದ್ರೀ ... ಪರದೇಸೀ ಸಿಲ್ಕ್ ಸ್ಯಾರೀಸ್’ನಲ್ಲಿ ತೊಗೊಂಡೆ ... ಅಲ್ರೀ, ಭವ್ಯ ನೀವೇನೋ ಸರ ತೊಗೋಬೇಕೂ ಅಂತಿದ್ರಲ್ಲ ... ಏನಾಯ್ತು ವಿಷಯ?
ಭವ್ಯ: (ಸಿಟ್ಟಿನಿಂದ) ಮೊನ್ನೆ ನಾನು ಆ ’ಬೋಡ್ ತಲೆ ಜುವೆಲರ್ಸ್’ಗೆ ಹೋಗಿದ್ದೆ ಕಣ್ರೀ. ಅವಲಕ್ಕಿ ಸರ ಇದ್ರೆ ತೋರಿಸಿ ಅಂದೆ ... ಅವನು ಚಿನ್ನದ ರೇಟು ತುಂಬಾ ಜಾಸ್ತಿ ... ಹೊಸ ವೆರೈಟಿ ಬಂದಿದೆ ... ’ಅಕ್ಕಿ ಸರ’ ಅಂತ .. ತೋರಿಸ್ಲಾ ಅಂದ ...
ಶ್ರಾವ್ಯ: ರ್ರೀ, ನನಗೊಂದು ಡೌಟು ... ಅಕ್ಕಿ ಸರ ಅಂದ್ರಲ್ಲ ... ಅದೂ .... ಸಣ್ಣಕ್ಕೀನೋ ? ಸೋನಾ ಮಸೂರೀನೋ?
ಕಾವ್ಯ: ರ್ರೀ, ನೀವು ಸ್ವಲ್ಪ ಸುಮ್ಮನೆ ಇರ್ತೀರ ...
ದಿವ್ಯ: ಪಾಪ ಸುಮ್ನೆ ಇರ್ರೀ ... ಹೌದು ಭವ್ಯ ... ರೇಟ್ ಏರಿ ಹೋಗಿದೆ ... ಹೋದವಾರ ಸುಂದ್ರಮ್ಮನ್ನ ಮಗಳ ಮದುವೆಗೆ ಹೋಗಿದ್ದಾಗ, ಆ ಮಿಟುಕ್ಲಾಡಿ ಮೀನಾಕ್ಷಿ, ಮೈತುಂಬಾ ಒಡವೆ ಹಾಕ್ಕೊಂಡು ಕೆಲ್ಸ ಇಲ್ದೆ ಇದ್ರೂ ಸುಮ್ಸುಮ್ನೆ ... ಹೂ ... ಆ ಕಡೆ ಈ ಕಡೆ ’ಟಿಂಗ್ ಟಿಂಗ್’ ಅಂತ ಓಡಾಡ್ತಿದ್ಲು ...
ಶ್ರಾವ್ಯ: ಹೋಗ್ಲಿ ಬಿಡಿ ... ನೀವ್ಯಾಕೆ ಹೊಟ್ಟೆ ಉರಿಪಟ್ಟುಕೊಂಡು ಅಲ್ಸರ್ ಬರಿಸಿಕೊಳ್ತೀರಾ ... ಈ ಕಾಲದಲ್ಲೂ ಆ ಪಾಟಿ ಒಡವೆ ಹಾಕಿಕೊಂಡಿಲೂ ಅಂದ್ರೆ, ಅದು ಗಿಲೀಟ್ ಇರಬೇಕು !
{ಅಷ್ಟರಲ್ಲಿ ನವ್ಯ ಒಳಗೆ ಬರುತ್ತಾರೆ}
ನವ್ಯ: (ಕೈಯಲ್ಲೇ ಗಾಳಿ ಬೀಸಿಕೊಳ್ಳುತ್ತ) ಅಬ್ಬಬ್ಬ ಎಷ್ಟು ಬಿಸಿಲು ರೀ ! ಕಾರ್ ಅಲ್ಲಿ ನಿಲ್ಲಿಸಿ ಇಲ್ಲಿ ಬರೋಷ್ಟರಲ್ಲಿ ಬೆವತು ಹೋದೆ its so hot, yaar
ಶ್ರಾವ್ಯ: (ಮೂದಲಿಸುತ್ತ) ಬಿಸಿಲಲ್ಲಿ ಬಂದರೆ ಹಾಟ್ ಅಲ್ದೇ ಕೋಲ್ಡ್ ಆಗುತ್ತ ?
ಕಾವ್ಯ: (ಸಮಾಧಾನಪಡಿಸುತ್ತ) ನೀವು ಸ್ವಲ್ಪ ಸುಮ್ಮನೆ ಇರ್ತೀರಾ?
ಶ್ರಾವ್ಯ: ತಮ್ಮ ಹತ್ತಿರಾನೇ ಕಾರ್ ಇರೋದು ಅಂತ ತೋರಿಸ್ಕೋತಾರೆ .... ಬರೀ ಸಾಲದ್ ಕಾರು (ಮೂತಿ ತಿರಿಗಿಸುತ್ತ)
ನವ್ಯ: (ಯಾವುದಕ್ಕೂ ಕೇರ್ ಮಾಡದೆ) ವಿಷಯಾ ಗೊತ್ತಾಯ್ತೇನ್ರೀ? u know what happened ?
ಮಿಕ್ಕ ನಾಲ್ವರೂ (ಜೋರಾಗಿ): ಏನ್ರೀ ಅದೂ ?
ನವ್ಯ: ಅಬ್ಬಬ್ಬಬ್ಬಬ್ಬ ಮೆಲ್ಲಗೆ ! ನನ್ನ ear drum ಒಡೆದು ಹೋಯ್ತು. ಮೊದಲು ಒಂದು ಲೋಟ ನೀರು ಕೊಡಿ ... ಗಂಟಲು ಬಾಯಿ ಒಣಗ್ತಿದೆ ... will let u know later
{ಶ್ರಾವ್ಯ ನೀರು ಕೊಡ್ತಾರೆ. ನವ್ಯ ಕುಡಿದು ಅವರಿಗೇ ಕೊಟ್ಟು "ಸ್ವಲ್ಪ ಅಲ್ಲಿ ಇಟ್ಬಿಡಿ" ಅಂದು, ಟೂ ಹಾಟ್ ಎಂದುಕೊಳ್ಳುತ್ತಾ, ಸುಮ್ಮನೆ ಗಾಳಿ ಬೀಸಿಕೊಂಡು ನಿಲ್ತಾರೆ}
ಭವ್ಯ: (ಅಸಹನೆಯಿಂದ) ವಿಷಯ ಹೇಳ್ರೀ ..
ನವ್ಯ: (ಅರಾಮವಾಗಿ) ಸೆಖೆ ಆಗ್ತಿದೆ... just wait
ದಿವ್ಯ: (ಸಿಡಿಗುಟ್ಟುತ್ತ) ರ್ರೀ, ಏನು ಬೇಕಾದರೂ ತಡದೇನೂ ... ನನಗೆ ಈ curiosity ತಡ್ಕೊಳ್ಳೋಕ್ಕಾಗಲ್ಲ ನೋಡಿ... ಬೇಗ ಹೇಳ್ರೀ
ನವ್ಯ: (ಮೂತಿ ಉದ್ದ ಮಾಡುತ್ತ, ಕೈ ತಿರುವುತ್ತ) ನಮ್ಮ ಹಿಂದಿನ ಬೀದಿ ರಂಗಮ್ಮನ ಮಗಳು ಓಡಿ ಹೋದ್ಲಂತೆ ... she ran away, u know (ಕೈಯಲ್ಲಿ ಓಡಿ ಹೋದಂತೆ ತೋರಿಸುತ್ತಾರೆ)
ಭವ್ಯ,ದಿವ್ಯ,ಕಾವ್ಯ: ಹೌದೇನ್ರೀ ?
ಶ್ರಾವ್ಯ: ಹಾಳಾದ್ದು, ಈ Auto Strike ಮತ್ತೆ ಶುರುವಾಯ್ತೇನ್ರೀ ? ಓಡಿ ಹೋಗೋ ಬದಲು ಆಟೋದಲ್ಲಾದರೂ ಹೋಗಬಹುದಿತ್ತು ಪಾಪ ...
ಕಾವ್ಯ: (ರಾಗವಾಗಿ ಪ್ರಶ್ನೆ ಮಾಡುತ್ತ) ನೀವ್ಯಾಕ್ರೀ ಹೀಗೆ? ನಿಮಗೆ ಎಲ್ಲ ವಿಷಯಾನೂ ಹತ್ತಿ ಬಿಡಿಸೋ ತರಹ ಬಿಡಿಸೀ ಬಿಡಿಸೀ ಹೇಳ್ಬೇಕಾ?
ದಿವ್ಯ: (ಏನೋ ನೆನಪಿಸಿಕೊಳ್ಳುವಂತೆ) ಅದಾ ವಿಷಯ ... ಬೆಳಿಗ್ಗೆ ಆ ಶೆಟ್ಟಿ ಅಂಗಡಿಗೆ ಹೋದಾಗ ರಂಗಮ್ಮಾನೂ ಬಂದಿದ್ರು ... ಯಾವಾಗ ಸಿಕ್ರೂ ಒಂದು ಘಂಟೆ ಮಾತಾಡೊ ಅವರು, ನನ್ನನ್ನು ನೋಡಿ ಹಾಗೇ ಕಣ್ಣು ತಪ್ಪಿಸಿ ಓಡಿ ಹೋಗಿದ್ದು ನೋಡಿ ನನಗೆ ಆಗಲೇ ಡೌಟ್ ಬಂತು ....
ಶ್ರಾವ್ಯ: (ತಲೇ ಮೇಲೆ ಕೈ ಹೊತ್ತು) ಅಯ್ಯೋ ಶಿವನೇ ! ರಂಗಮ್ಮಾನೂ ಓಡಿ ಹೋದ್ರಾ?
ಕಾವ್ಯ: (ಕೈ ಜೋಡಿಸುತ್ತ) ನೀವು ಸ್ವಲ್ಪ ಸುಮ್ಮನೆ ಇರ್ತೀರಾ?
ಶ್ರಾವ್ಯ: (ಏನೋ ಅನುಮಾನದಿಂದ) ರ್ರೀ, ನನಗೊಂದು ಡೌಟು ..., ರಂಗಮ್ಮನ ಮಗಳು ಯಾವ ಡ್ರಸ್ ಹಾಕಿಕೊಂಡಿದ್ಲಂತೇ?
ನವ್ಯ: ಓಡಿ ಹೋಗಿದ್ದು ವಿಷಯ ಅಷ್ಟೇ ... ಡ್ರಸ್ ಯಾವುದಾದ್ರೆ ಏನ್ರೀ? why is that important?
ಶ್ರಾವ್ಯ: ಅಲ್ಲಾ, ಸೀರೆ ಉಟ್ಕೊಂಡು ಹೋಗಿದ್ರೆ ಕಾಲಿಗೆ ಸಿಕ್ಕಿಕೊಂಡು ಬಿದ್ದು-ಗಿದ್ದು ಮಾಡಿದ್ರೆ ಪಾಪ? ... ಜೀನ್ಸೋ, ಚೂಡಿದಾರ್ರೋ ಆದ್ರೆ ಸುಲಭ ಅಂತ ಹೇಳ್ದೆ ಅಷ್ಟೇ !
ಕಾವ್ಯ: (ಶಾಂತಗೊಳಿಸುವಂತೆ) ಅವಳು ವಾಪಸ್ಸು ಬಂದ ಮೇಲೆ ನೀವೇ ಅವಳನ್ನು ಕೇಳಿ ನಮಗೂ ಹೇಳಿ ... ಆಯ್ತಾ? ಅಲ್ಲೀವರೆಗೂ ಸ್ವಲ್ಪ ಸುಮ್ಮನಿರಿ.
ಭವ್ಯ: ಅದಿರ್ಲೀ ಕಣ್ರೀ, ನವ್ಯ ...ತುಂಬಾ ದಿನದಿಂದ ಕೇಳ್ಬೇಕೂ ಅಂತಿದ್ದೆ ... ನೀವ್ಯಾಕೆ ಎಲ್ಲ ಕನ್ನಡದಲ್ಲಿ ಹೇಳಿ ಕೊನೇ ಲೈನ್ ಮಾತ್ರ ಇಂಗ್ಲೀಷ್’ನಲ್ಲಿ ಹೇಳ್ತೀರ?
ನವ್ಯ: (ಸ್ಟೈಲಾಗಿ) ಅದೇನೋ ಗೊತ್ತಿಲ್ಲ ರ್ರೀ ! ನಮ್ಮನೇಲಿ ನಮ್ಮಪ್ಪ ಬರೀ ಕನ್ನಡ. ನಮ್ಮಮ್ಮ ಓನ್ಲಿ ಇಂಗ್ಲೀಷ್. ನನ್ನ ದೊಡ್ಡಕ್ಕ ಮಾತಿನ ಮುಂಚೆ ಇಂಗ್ಲೀಷು, ಎರಡನೇಯವಳು ಮಧ್ಯದಲ್ಲಿ, ನಾನು ಕಡೆಯಲ್ಲಿ ... just like that
ಶ್ರಾವ್ಯ: ಒಳ್ಳೇ ಕಂಗ್ಲೀಷ್ ಫ್ಯಾಮಿಲಿ ಕಣ್ರೀ ನಿಮ್ದು ! ರ್ರೀ, ನನಗೊಂದು ಡೌಟು ... ನಿಮಗೆ ಒಬ್ಬಳು ತಂಗಿ ಇದ್ದಿದ್ದರೆ?
ಕಾವ್ಯ: ನೀವು ಸ್ವಲ್ಪ ಸುಮ್ಮನೆ ಇರ್ತೀರಾ? .. ಇವರೊಬ್ಬರು ... (ನವ್ಯಳಿಗೆ ಕೇಳಿಸದ ಹಾಗೆ ರಾಗವಾಗಿ) ಇನ್ನು ಇವರೋ, ಬೆಳಿಗ್ಗೆ ಏನೂ ತಿಂದಿಲ್ವೇನೋ, ಇಲ್ಲಿ ಬಂದು ನಮ್ಮ ತಲೆ ತಿನ್ತಾ ಇದ್ದಾರೆ !
ದಿವ್ಯ: ಅದು ಬಿಡಿ .. ಏನಾಯ್ತು ಅಂತೀರಾ? .. ನನಗೆ ಇವತ್ತು ಬೆಳಿಗ್ಗೆ ಬೆಳಿಗ್ಗೆ ಮೂಡ್ ಔಟ್ ಆಗಿ ಹೋಯ್ತು ಕಣ್ರೀ !!
ಶ್ರಾವ್ಯ: (ಅನುಮಾನದಿಂದ) ರ್ರೀ, ನನಗೊಂದು ಡೌಟು ... ಬೆಳಿಗ್ಗೆ ಅಂದರೆ ಎಷ್ಟು ಘಂಟೆಗೆ? ಎದ್ದ ಮೇಲೋ? ಏಳೋಕ್ಕೂ ಮುಂಚೇನಾ?
ದಿವ್ಯ: (ಸೀರೆ ಸೊಂಟಕ್ಕೆ ಸಿಕ್ಕಿಸಿಕೊಂಡು) ರ್ರೀ! ಸ್ವಲ್ಪ ಯೋಚನೆ ಮಾಡ್ರೀ !! (ಮುಷ್ಟಿಯಿಂದ ಪ್ರಶ್ನೆ ಕೇಳುವಂತೆ ಸನ್ನೆ ಮಾಡುತ್ತ) ಏಳೋಕ್ಕೆ ಮುಂಚೆ ಹೇಗ್ರೀ ಮೂಡ್ ಔಟ್ ಆಗುತ್ತೇ?
ಶ್ರಾವ್ಯ: (ಕತ್ತು ಕೊಂಕಿಸುತ್ತ) ಕೆಟ್ಟ ಕನಸು ಬಿದ್ರೆ ಆಗೋಲ್ವಾ?
ಕಾವ್ಯ: ನೀವು ಸ್ವಲ್ಪ ಸುಮ್ಮನೆ ಇರ್ತೀರಾ? ಈಗ ಅವರಿಗ್ಯಾಕೆ ಮೂಡ್ ಔಟ್ ಆಯ್ತು ಕೇಳೋಣ .. ನೀವು ಹೇಳಿ ದಿವ್ಯ ...
ದಿವ್ಯ: (ದೂಷಿಸುವಂತೆ) ಎಲ್ಲ ಆಗಿದ್ದು ಆ ನನ್ನ ಬಾಬ್-ಕಟ್ ಅತ್ತೆಯಿಂದ !
ಕಾವ್ಯ: (ಪ್ರಶ್ನಾರ್ಥಕವಾಗಿ) ಅಲ್ರೀ, ಅವರು ಲಂಡನ್’ನಲ್ಲಿ ಇದ್ದಾರೆ ಅಂತ ಹೇಳಿದ್ರೀ?
ದಿವ್ಯ: ಅದೇ ನೋಡಿ ಅವರ capacity . ಅಲ್ಲಿದ್ದುಗೊಂಡೇ ಇಲ್ಲಿ ನನ್ನ ಮೂಡ್ ಔಟ್ ಮಾಡಿದರು.
ಭವ್ಯ: (ಅಸಹನೆಯಿಂದ) ಆಯೋ .. ಅತ್ಲಾಗೆ ಏನಾಯ್ತು ಹೇಳ್ರೀ ...
ದಿವ್ಯ: ನೆನ್ನೆ ಅವರ ಮಗನಿಗೆ ಈ-ಮೈಲ್ ಬರೆದಿದ್ದರು ...
ಶ್ರಾವ್ಯ: ರ್ರೀ, ನನಗೊಂದು ಡೌಟು ... ಅವರ ಮಗ ಅಂದರೆ ಯಾರು ?
ದಿವ್ಯ: ಅಯ್ಯೋ! ನಮ್ಮೆಜಮಾನ್ರು ಕಣ್ರೀ ... ಇವರೊಳ್ಳೇ, ಥತ್ ! ಕೇಳಿ, ಇಷ್ಟುದ್ದ ಈ-ಮೈಲ್ ಆದ ಮೇಲೆ ಕೊನೆಯಲ್ಲಿ bold letters ನಲ್ಲಿ "ದಿವ್ಯ, ನಿಂದು ಓದಿದ್ದು ಮುಗ್ದಿದ್ದರೆ ನನ್ನ ಮಗನಿಗೂ ಓದೋದಕ್ಕೆ ಹೇಳು" ಅಂತ ...
ಶ್ರಾವ್ಯ: (ಅನುಮಾನದಿಂದ) ರ್ರೀ, ನನಗೊಂದು ಡೌಟು ... ನಿಮ್ಮ ಯಜಮಾನರ ಈ-ಮೈಲ್ ಹಾಗಿದ್ರೆ ನೀವೇ ಮೊದಲು ಓದೋದಾ?
ಕಾವ್ಯ: (ಆಶ್ಚರ್ಯದಿಂದ) ವಾಹ್! ವಾಹ್ !! ಎಷ್ಟು ಬೇಗ ಅರ್ಥ ಮಾಡಿಕೊಂಡ್ರಿ ಈ ಸಾರಿ
ಶ್ರಾವ್ಯ: ಹಾಗೇನಿಲ್ಲ, ನಮ್ ಯಜಮಾನರ ಈ-ಮೈಲ್ ನಾನೇ ಮಾಡೋದು ಚೆಕ್ ಮಾಡೋದು. ಆಮೇಲೆ ಅದನ್ನ Unread ಮಾಡಿಬಿಡ್ತೀನಿ. ಬೇರೆಯವರ ಈ-ಮೈಲ್ ಚೆಕ್ ಮಾಡೊದು ತಪ್ಪಲ್ವೇ?
ನವ್ಯ: ನೀವೆಲ್ಲ, ತುಂಬಾ ಟೈಮ್ ವೇಸ್ಟ್ ಮಾಡ್ತೀರಪ್ಪ.. ಈಗ ನಾವು ಉಗಾದಿ ಹಬ್ಬದ ಬಗ್ಗೆ ಮಾತನಾಡೋಣವಾ? lets discuss from where we left
ಭವ್ಯ: ಮೊದಲು ನಾನು ಹೇಳ್ತೀನಿ ... ಸರ’ದ ಕಥೆ ಹಾಗಾಯ್ತು ಅಂತ ಉಗಾದೀಗೆ ಸೀರೆ ತೊಗೊಳ್ಳೋಣಾ ಅಂತ ಅಂಗಡಿಗೆ ಹೋದೆ .. ಆ ಸೀರೇ ಅಂಗಡಿ ಸಿದ್ದರಾಮ ಇದ್ದಾನಲ್ಲ ಅವನಿಗೇನು ಕೊಬ್ಬು ಅಂತೀನಿ ... ಅಬ್ಬಬ್ಬ !
ದಿವ್ಯ,ಕಾವ್ಯ,ಶ್ರಾವ್ಯ: ಈಗೇನಾಯ್ತು ?
ಭವ್ಯ: ’ಜೊತೆ ಜೊತೆಯಲಿ’ ಸೀರೇ ತೋರಿಸಪ್ಪಾ ಅಂದರೆ ... ತುಂಬಾ ಹಳೆದಾಯ್ತು ಮೇಡಂ ಅಂದ ... ಹೋಗ್ಲೀ ’ಮಳೆಯಲಿ ಜೊತೆಯಲಿ’ ಸೀರೆ ಇದೆಯಾ ಅಂದೆ ... ನಮ್ಮಂಗಡೀಲಿ ಒದ್ದೆ ಬಟ್ಟೆ ಇಡಲ್ಲ ಅಂತಾನೆ ... ನಾನು ಕೇಳಿದೆ ನಿನ್ನ ಅಂಗಡೀಲಿ ಒಣಗಿರೋದು, ಲೇಟೆಸ್ಟ್ ಯಾವುದಿದೆ ಅಂತ ...
ಕಾವ್ಯ: ಏನಂದ ಸಿದ್ದರಾಮ?
ಭವ್ಯ: ಕೆಟ್ಟದಾಗಿರೋ ಪಟಾ-ಪಟಿ ಸೀರೆ ತೋರಿಸಿದ ... ನಾನು ಕೇಳಿದೆ ’ಇದ್ಯಾವುದಪ್ಪ ಹೊಸಾ ಸ್ಟೈಲೂ ಅಂತ ... ಅದಕ್ಕೆ ಅವನು ಇದು "ಕಾಡಿನಲ್ಲಿ ಕೋಮಲಾಂಗಿ" ಸೀರೆ ಮೇಡಮ್ ... ಹೊಸದು ಅಂದ ... ಸಿಟ್ಟು ಬಂತು .. ನೀನೇ ಉಟ್ಕೋ ಕತ್ತೆ ಥರ ಕಾಣ್ತೀಯಾ ಅಂತ ಎದ್ದು ಬಂದೆ
ಶ್ರಾವ್ಯ: (ಉತ್ಸಾಹದಿಂದ) ನನ್ನ ವಿಷಯ ಏನಾಯ್ತು ಗೊತ್ತಾ?
ದಿವ್ಯ: (ತಡೆಯುತ್ತ) ರ್ರೀ ತಡೀರಿ .. ಅಲ್ರೀ, ನವ್ಯ ಹೇಳಿದ್ದು ನಮ್ಮ ’ಪಂಚವಟಿ’ ಕ್ಲಬ್ ಉಗಾದಿ ಬಗ್ಗೆ ಅಲ್ವಾ?
ನವ್ಯ: (ಸಮಾಧಾನಪಟ್ಟುಕೊಳ್ಳುವಂತೆ) ಸಧ್ಯ ಒಬ್ಬರಾದರೂ ಅರ್ಥ ಮಾಡಿಕೊಂಡ್ರಲ್ಲ? ದಿವ್ಯ, u r absolutely right, yah
ಭವ್ಯ: (ಗಂಭೀರವಾಗಿ) ರ್ರೀ ಕಾವ್ಯ, ನೀವು ಹಬ್ಬಕ್ಕೆ ಹೋಳಿಗೆ ಮಾಡಿಸೋಣ ಅಂತ ಹೇಳಿ, ಯಾರನ್ನೋ ವಿಚಾರಿಸುತ್ತೀನಿ ಅಂದ್ರಲ್ಲಾ... ಏನಾಯ್ತು ವಿಷಯ?
ಕಾವ್ಯ: ಹೌದ್ರೀ, ಭಾನುವಾರ, ನಾನು ಭಟ್ಟರ ಹತ್ತಿರ ಮಾತನಾಡಿದೆ ... ಅವರು ಹೋಳಿಗೆ ಮಾಡಿಕೊಡೋಣ ಆದರೆ ಯಾವ ಟಾಪಿಂಗ್ ಬೇಕೂ ಅಂದ್ರು ...
ಶ್ರಾವ್ಯ: (ಗಲಿಬಿಲಿಯಿಂದ) ಟಾಪಿಂಗಾ? ಅಲ್ರೀ, ನೀವು ಹೋಳಿಗೆ ಮಾಡೊಕ್ಕೆ ಕೇಳಿದ್ರೋ ಇಲ್ಲ ಪಿಜ್ಜಾ ಮಾಡೋಕ್ಕೆ ಕೇಳಿದ್ರೋ?
ಕಾವ್ಯ: ಹೌದ್ರೀ, ಅವರು ಹಂಗೆ ಕೇಳಿದ್ದಕ್ಕೆ ನನಗೂ ತಲೆ ಕಿತ್ಕೊಳ್ಳೋ ಹಾಗೆ ಆಯ್ತು
ಶ್ರಾವ್ಯ: ರ್ರೀ, ನನಗೊಂದು ಡೌಟು ... ತಲೇನೇ ಕಿತ್ಕೊಂಡ್ರೋ ಇಲ್ಲಾ ತಲೆ ಕೂದಲು ಕಿತ್ಕೊಂಡ್ರಾ ?
ಭವ್ಯ: ರ್ರೀ .... ನೀವು ಸ್ವಲ್ಪ ಸುಮ್ಮನೆ ಇರ್ತೀರಾ ... ನೀವು ಹೇಳಿ ಕಾವ್ಯ ...
ಕಾವ್ಯ: (ಮರೆತು ಹೋದವರಂತೆ) ನಾನು ಎಲ್ಲಿದೆ ? (ಶ್ರಾವ್ಯ ’ಇಲ್ಲೇ’ ಎನ್ನುವಂತೆ ಕೈ ತೋರಿಸುತ್ತಾರೆ ಆದರೆ ಮಾತನಾಡೊಲ್ಲ) ... ಹಾ! ನಾನು ಭಟ್ಟರನ್ನು ಕೇಳ್ದೆ ... ಹೋಳಿಗೆ ಮೇಲೆ ಟಾಪಿಂಗ್ ಅಂದ್ರೆ ಏನು ಅಂತ ... ಅದಕ್ಕೆ ಅವರು ’ಅಲ್ಲಮ್ಮ, ನಿಮಗೆ ಹೂರ್ಣದ ಹೋಳಿಗೆ ಬೇಕೋ ಇಲ್ಲ ಕಾಯಿ ಹೋಳಿಗೆ ಬೇಕೋ’ ಅಂದರು ಶ್ರಾವ್ಯ, ಕಾಯಿ ಅಂದರೆ ಇಡೀ ಕಾಯಿ ಅಲ್ಲ, ಕಾಯಿ ತುರಿ ಅಂತ...(ಶ್ರಾವ್ಯ ಸರಿ ಅನ್ನುವಂತೆ ತಲೆ ಆಡಿಸುತ್ತಾಎ).. ಆಮೇಲೆ ನಾನು ಹೇಳ್ದೆ ’ಭಟ್ರೇ, ಅದು ಟಾಪಿಂಗ್ ಅಲ್ಲ ಫಿಲ್ಲಿಂಗೂ ಅಂತ’... ಅಲ್ದೇ, ಅವರು ಕೆಲವು ಸ್ಪೆಷಾಲಿಟಿ ಹೋಳಿಗೇನೂ ಮಾಡ್ತಾರಂತೆ ಕಣ್ರೀ !!!
ದಿವ್ಯ: ಸ್ಪೆಶಾಲಿಟಿ ಹೋಳಿಗೆ ಅಂದರೇನ್ರೀ?
ಕಾವ್ಯ: ಸ್ವೀಟ್ ಸೇರದೆ ಇರೋವ್ರಿಗೆ Jalapeno ಹೋಳಿಗೆ ಮಾಡ್ತಾರಂತೆ
ಭವ್ಯ: ಸ್ಪೆಷಲ್ ಭಟ್ಟರು ಕಣ್ರೀ ಅವರು
ಕಾವ್ಯ: ಇನ್ನೊಂದು ವಿಷಯಾ ಇದೆ ಕಣ್ರೀ ... ನಿಮಗೆ ಲೋಕಲ್ ಬೇಕೋ ಇಂಪೋರ್ಟೆಡ್ ಬೇಕೋ ಅಂದರು
ಶ್ರಾವ್ಯ: ರ್ರೀ, ನನಗೊಂದು ಡೌಟು ... ಇಂಪೋರ್ಟೆಡ್ ಅಂದರೆ ಎಲ್ಲಿಂದ ತರಿಸ್ತಾರಂತೆ?
ಕಾವ್ಯ: ಎಲ್ಲಿಂದ್ಲೂ ಇಲ್ಲ .... ಲೋಕಲ್, ಇಂಪೋರ್ಟೆಡ್ ಎರಡೂ ಇವರ ಮನೇ ಅಡಿಗೇ ಮನೇಲೇ ಮಾಡೋದು ... ಇಂಪೋರ್ಟೆಡ್ ಆದರೆ ಹೋಳಿಗೆ ಮೇಲೇ Made in China ಅಂತ ಸೀಲ್ ಹಾಕ್ತಾರಂತೆ ...
ನವ್ಯ: ಅದೆಲ್ಲ ಬಿಡಿ, ಕೊನೆಗೆ ಏನಾಯ್ತು? ಆರ್ಡರ್ ಯಾವುದಕ್ಕೆ ಕೊಟ್ರೀ? did you place the order?
ಕಾವ್ಯ: ನಾನೇ ನಿರ್ಧಾರ ತೊಗೊಂಡು Local, single Topping ಹೂರ್ಣದ ಹೋಳಿಗೆ ಮಾಡಿ ಅಂತ ಹೇಳಿದೆ ... ಇವತ್ತು ಸ್ಯಾಂಪಲ್ ಕೊಟ್ಟಿದ್ದಾರೆ ... ಬನ್ನಿ ಕೊಡ್ತೀನಿ ...
ಶ್ರಾವ್ಯ: ಸರಿ ಬನ್ರೀ ಹಾಗಿದ್ರೆ ... ನನಗೆ ಹಸಿವೆ ಆಗ್ತಿದೆ .... ಆಮೇಲೆ ಬಟ್ಟೆ ಅಂಗಡಿಗೆ ಬೇರೆ ಹೋಗಬೇಕು
ದಿವ್ಯ: ನೆಡೀರಿ ಹಾಗಿದ್ರೆ, ನಮಗೂ ಕೆಲಸ ಇದೆ ... ಅಲ್ಲಾ, ಸರಿಯಾಗಿ ವಿಷಯ ತಿಳಿಸಿಬಿಟ್ಟೇ ಹೋಗೋಣ ಅಲ್ವಾ?
(ಪ್ರೇಕ್ಷಕರನ್ನು ಉದ್ದೇಶಿಸಿ)
ಭವ್ಯ: ಹೌದೂ... ನೋಡೀ, ಕಳೆದ ದೀಪಾವಳಿ ಇಂದ ನಾವು ಮೀಟಿಂಗ್ ಮಾಡ್ತಾ ಇದ್ದೀವಿ ... ಐದು ಮೀಟಿಂಗ್ ಆದ್ರೂ ಹೋಳಿಗೆ ಬಿಟ್ಟು ಮುಂದೆ ಹೋಗಿಲ್ಲ ಮಾತು ....
ಕಾವ್ಯ: ಮೀಟಿಂಗ್ ಎಲ್ಲ ಬರೀ ಈಟಿಂಗ್’ನಲ್ಲೇ ಮುಗಿಯುತ್ತೆ ಅಂತ ಅಂದುಕೊಳ್ಳಬೇಡಿ ...
ನವ್ಯ: ಈಗ ಸೀರೆ ಅಂಗಡಿಗೆ ಹೋಗೋದು, ಶಾಪಿಂಗ್ ಮಾಡೋದು ಮತ್ತೆ ಈ ಹೋಳಿಗೆ ಯಾರಿಗೆ ಅಂತ ಅಂದುಕೊಂಡ್ರಿ? Any idea?
ದಿವ್ಯ: ಈ ಸಾರಿ ಉಗಾದಿ ಹಬ್ಬಕ್ಕೆ ನಮ್ಮ ಕ್ಲಬ್’ನ ಐದೂ ಹೆಂಗಸರು ಸೇರಿ ಬಟ್ಟೆ, ಗಿಫ್ಟು ಮತ್ತೆ ಸ್ವೀಟ್’ಗಳನ್ನ ಅನಾಥಾಶ್ರಮಕ್ಕೆ ದಾನ ಕೊಡ್ತಿದ್ದೀವಿ ...
ಶ್ರಾವ್ಯ: ನಾವೂ ಹೋಗಿ ಹೋಳಿಗೆ ರುಚಿ ನೋಡ್ತೀವಿ ... ಅದರ ಬಗ್ಗೆ ನನಗೇನೂ ಡೌಟಿಲ್ಲ... ನೀವೂ ನಿಮ್ಮ ಊಟ ಎಂಜಾಯ್ ಮಾಡಿ bye
{ಈ ನಾಟಕವನ್ನು ಬರೆದು ನಿರ್ದೇಶನ ಮಾಡಿದವರು - ಶ್ರೀನಾಥ್ ಭಲ್ಲೆ.
ಕಳೆದ ಶನಿವಾರ ಅಂದರೆ ಏಪ್ರಿಲ್ ೧೭, ೨೦೧೦’ರಂದು ಅಮೇರಿಕದ ವರ್ಜೀನಿಯಾ ರಾಜ್ಯದ ರಿಚ್ಮಂಡ್ ನಗರದಲ್ಲಿ ನೆಡೆದ ಉಗಾದಿ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಈ ನಾಟಕ ಆಡಲಾಯಿತು.}
Sunday, March 28, 2010
ಹೀಗೊಂದು ತಲೆಮಾರಿನ ಕಥೆ !
ಅಂದು: ಸದಾಶಿವರಾಯರು ಮನೆಯವರ ವಿರೋಧ ಲೆಕ್ಕಿಸದೆ ಪರಜಾತಿ ಯುವತಿಯನ್ನು ’ಪ್ರೇಮಿಸಿ’ ಮದುವೆಯಾಗಿ ದಿಟ್ಟ ಹೆಜ್ಜೆಯನ್ನಿಡುತ್ತ ಎಲ್ಲರ ಹುಬ್ಬೇರುವಂತೆ ಮಾಡಿದ್ದರು !
ನಂತರ: ಸದಾಶಿವರಾಯರ ಮಗ ಹೊರದೇಶದಲ್ಲಿದ್ದುಕೊಂಡು ಭಾರತದಲ್ಲಿ ’ಅಪ್ಪ-ಅಮ್ಮ ನೋಡಿದ’ ಹುಡುಗಿಯನ್ನು ಮದುವೆಯಾಗಿ ಸಹೋದ್ಯೋಗಿಗಳ ಹುಬ್ಬೇರುವಂತೆ ಮಾಡಿದ್ದರು !!
ಈಗ: ಸದಾಶಿವರಾಯರ ಮೊಮ್ಮಗ "ಹುಡುಗಿ"ಯನ್ನು ಮದುವೆಯಾಗಿ ಹಲವಾರು ಮಂದಿಯ ಹುಬ್ಬೇರುವಂತೆ ಮಾಡಿದ್ದಾನೆ !!!
ಮುಂದೆ: ಸದಾಶಿವರಾಯರ ಮರಿಮಗ "ಮದುವೆಯಾಗಿ" ಮಾತೆ ಖುಷ್ಬೂದೇವಿ’ಯವರ ಅನುಯಾಯಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದಾನೆ !!!!
ಜೀವನದ ಆಟ
ಯಾರಿಗೆ ಬೇಕು ಈ ಲೆಕ್ಕ ?
ಒಂದು ದಿನ ಹೀಗೆ ದಿಢೀರನೆ ಒಂದು ಯೋಚನೆ ಬಂತು. ಏನು ಅಂತೀರಾ?
ಜಗತ್ತಿನಲ್ಲಿ ಖ್ಯಾತನಾಮರ ಪ್ರತಿಮೆಗಳು ಎಷ್ಟಿವೆ ?
ತಿಳಿದವರನ್ನು ಕೇಳೋಣವೆಂದುಕೊಂಡು ಗೂಗಲಿಸಿದೆ. ನನ್ನ ಹಾಗೇ ಯಾರಿಗೋ ಕುತೂಹಲ ಹೆಚ್ಚಾಗಿ ಈ ಪ್ರಶ್ನೆ ಕೇಳಿದ್ದಕ್ಕೆ ಒಬ್ಬರು ಏನೆಂದು ಉತ್ತರಿಸಿದ್ದಾರೆ ಗೊತ್ತೆ "ಕಳೆದ ಒಂದು ಘಂಟೆಯಲ್ಲಿ ಎಷ್ಟಿದ್ದವೋ ಅದಕ್ಕಿಂತ ಹೆಚ್ಚು" ಎಂದು. ಹೆಚ್ಚು ಕಮ್ಮಿ ಬೀರಬಲ್’ನ ಕಾಗೆಗಳ ಸಂಖ್ಯೆಯ ಕಥೆಯನ್ನು ನೆನಪಿಗೆ ತರಿಸುವಂತಹ ಉತ್ತರ. ಇರಲಿ, ಒಟ್ಟಾರೆ ನನಗೆ ಅರ್ಥವಾಗಿದ್ದು, ಪ್ರತಿ ಒಂದು ಘಂಟೆಯಲ್ಲಿ ಕನಿಷ್ಟ ಒಂದು ಪ್ರತಿಮೆಯಾದರೂ ಏಳುತ್ತದೆ ಎಂದು. ನಿಜವೋ ಸುಳ್ಳೋ ಗೊತ್ತಿಲ್ಲ.
ಗೂಗಲ್ ದೇವನಿಗೆ ತಿಳಿದಿಲ್ಲದ ಉತ್ತರವನ್ನು ಇನ್ಯಾರಿಂದಲಾದರೂ ಪಡೆಯೋಣ ಎಂದುಕೊಂಡೆ. ಯಾರ್ಯಾರನ್ನೋ ಕೇಳಿದೆ. ಯಾರಿಗೂ ಗೊತ್ತಿಲ್ಲ. ಒಬ್ಬರು "ಅಲ್ರೀ, ತೆಂಡೂಲ್ಕರ್ ಇದುವರೆಗೂ ಎಷ್ಟು ರನ್’ಗಳು ಮಾಡಿದ್ದಾನೆ ಕೇಳಿ. ಅಂಕಿ-ಅಂಶದ ಸಮೇತ ಹೇಳಬಲ್ಲೆ. ಅದು ಬಿಟ್ಟು ..." ಮತ್ತೊಬ್ಬ ಹಿರಿಯರು "ಅಶ್ವಥ್ ಎಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಅಂತ ಕೇಳಿ, ಬೇಕಿದ್ರೆ ಹೇಳ್ತೀನಿ... ಆದ್ರೆ...". ಹೋಗ್ಲಿ ಬಿಡಿ... ಎರಡೂ ದೊಡ್ಡ ಸಂಖ್ಯೇನೇ ! ಸದ್ಯಕ್ಕೆ ಆ ಎರಡೂ ವಿಷಯ ಬೇಕಿಲ್ಲ.
ಅದೃಷ್ಟವಶಾತ್ ಒಬ್ಬರಿಗೆ ತಿಳಿದಿತ್ತು ... ವಾವ್ .. ಅಂದಿರಾ? ... ತಡ್ಕೊಳ್ಳಿ ... ಅವರಿಗೆ ತಿಳಿದಿದ್ದು ಉತ್ತರವಲ್ಲ! ಇಂಥವರನ್ನು ಕೇಳಿ, ಅವರಿಗೆ ಗೊತ್ತಿರಬಹುದು ಅಂತ. ಜೊತೆಗೆ, ನಿಮಗೆ ತಿಳಿದ ಮೇಲೆ ನನಗೂ ಹೇಳಿ ಅಂದರು.
ಅವರನ್ನು ಅರಸಿ ಹೋದೆ. ಇವರ ಹೇಳಿದ ಬೀದಿ ಅಂತೂ ಸಿಕ್ಕಿತು. ಮೂಲೆಯಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಕೂಡ ಇತ್ತು. ಯಾರನ್ನೋ ವಿಳಾಸ ಕೇಳಿದೆ. ನೇರವಾಗಿ ಹೋಗಿ. ಅಲ್ಲೊಂದು ಹಳೇ ಅಂಬಾಸಡರ್ ಕಾರ್ ನಿಂತಿರುತ್ತೆ. ಅಲ್ಲೇ ಅವರ ಮನೆ. ಅನುಮಾನ ಬಂತು ಕೇಳಿಯೇಬಿಟ್ಟೆ "ಇವತ್ತು ಆ ಕಾರ್ ಅಲ್ಲಿ ಇಲ್ದೇ ಇದ್ರೆ?". ಕೆಕ್ಕರಿಸಿ ನೋಡಿ ಹೇಳಿದರು "ನಾಲ್ಕೂ ಚಕ್ರಗಳಲ್ಲಿ ಗಾಳಿ ಇಲ್ಲದೆ, ತುಕ್ಕು ಹಿಡಿದ ಆ ಕಾರ್ ಹತ್ತು ವರ್ಷದಿಂದ್ಲೂ ಅಲ್ಲೇ ನಿಂತಿದೆ. ಈಗಲೂ ಅಲ್ಲೇ ಇರುತ್ತೆ ಅನ್ನೋ ಗ್ಯಾರಂಟಿ ಕೊಡಲೇನು?". ತೆಪ್ಪಗೆ ಜಾಗ ಖಾಲಿ ಮಾಡಿದೆ.
ಮನೆಯ ಮುಂದೆ ಬೋರ್ಡ್ ಲಗತ್ತಿಸಿದ್ದರು "ಮೂರ್ತಿ" ಅಂತ. "ಮೂರ್ತಿಗಳ ಬಗ್ಗೆ ಮೂರ್ತಿಯವರಲ್ಲಿ ಕೇಳಲು ಮೂರ್ತಿಗಳು ಅವರ ಮನೆಗೆ ಭೇಟಿ ಇತ್ತಿದ್ದರು" ಎಂಬ ಪದಸಾಲು ಎಷ್ಟು ಚೆನ್ನಾಗಿದೆ ಅಲ್ಲವೇ?
ಅವರನ್ನು ಭೇಟಿಯಾಗಿ ಇದೇ ಪ್ರಶ್ನೆ ಕೇಳಿದೆ. "ಜಗತ್ತಿನಲ್ಲಿನ ಖ್ಯಾತನಾಮರ ಪ್ರತಿಮೆಗಳು ಒಟ್ಟು ಎಷ್ಟಿವೆ? ನಿಮಗೆ ಗೊತ್ತೆ?" ಅಂತ.
ತಿಳಿದುಕೊಂಡು ಏನ್ ಮಾಡ್ತೀಯೋ ಮಂಕೇ? ಅನ್ನೋ ರೀತಿಯಲ್ಲಿ ನೋಡಿ "ನೋಡ್ತೀನಿ" ಅಂತ.
ಯಾವುದೋ ಪುಸ್ತಕ ತೆಗೆದು ಕೈಯಲ್ಲಿ ಪೆನ್ ಹಿಡಿದು ಕೇಳಿದರು "ನಿಮಗೆ ಒಟ್ಟು ಎಷ್ಟಿವೆ ಅನ್ನೋದರ ಜೊತೆಗೆ ಒಬ್ಬೊಬ್ಬ ಖ್ಯಾತ ನಾಮರ ಎಷ್ಟೆಷ್ಟು ಪ್ರತಿಮೆಗಳು ಇವೆ ಎಂದು ಬೇಕೆ?" ಎಂದು.
ಓ! ಹೌದಲ್ಲ? ಇದರ ಬಗ್ಗೆ ಯೋಚಿಸಲೇ ಇಲ್ಲ. ಗಾಂಧೀಜಿ, ಅಂಬೇಡ್ಕರ್ ಇವರ ಪ್ರತಿಮೆಗಳು ಸಿಕ್ಕಾಪಟ್ಟೆ ಇವೆ. ಹಾಗಾಗಿ ಹೇಳಿದೆ "ಗೊತ್ತಿದ್ದಲ್ಲಿ ಒಬ್ಬೊಬ್ಬರದೂ ಎಷ್ಟು ಪ್ರತಿಮೆಗಳು ಇವೆ ಎಂದೇ ತಿಳಿಸಿ" ಅಂದೆ.
ಮತ್ತೊಂದು ಪ್ರಶ್ನೆ ಬಂತು ಅವರಿಂದ "ಪ್ರತಿಮೆಗಳಲ್ಲಿ life sizeನವುಗಳು bust size ನವುಗಳೂ ಬೇರೆ ಬೇರೆ ಲೆಕ್ಕ ಬೇಕೇ?" ಎಂದು
ಓಹೋ ! ಇದು ಇನ್ನೂ ಉತ್ತಮ !! ಉದಾಹರಣೆಗೆ ಮೈಸೂರು ಮಹಾರಾಜರ ಪ್ರತಿಮೆ ಎರಡೂ ರೀತಿಯಲ್ಲಿ ಇರುತ್ತದೆ. ಇರಲಿ ಎರಡೂ ಹೇಳಿ ಎಂದೆ.
ಅವರಿಂದ ಇನ್ನೊಂದು ಪ್ರಶ್ನೆ ಬಂತು "ಖ್ಯಾತನಾಮರು ಅಂದರೆ ನಿಮಗೆ ರಾಜಕಾರಣಿಗಳು, ನಟ/ನಟಿಯರು, ಯತಿಗಳು, ಆಟಗಾರರು, ಸಾಹಿತಿಗಳು ಹೀಗೆ ಎಲ್ಲರದೂ ಬೇಕೆ?"
ಕುಳಿತಿದ್ದ ಸೀಟಿನಲ್ಲಿ ಇನ್ನೂ ಸ್ವಲ್ಪ ಮುಂದೆ ಬಂದೆ. ’ಎಷ್ಟು ಹೆಚ್ಚು ಮಾಹಿತಿ ಇದ್ರೆ ಅಷ್ಟು ಉತ್ತಮ’ ಎಂದೆ
"ಪ್ರತಿಮೆಗಳನ್ನು ಕಂಚು, ಕಲ್ಲು, ಅಮೃತಶಿಲೆ’ಗಳನ್ನು ಬಳಸಿ ಮಾಡಿರುತ್ತಾರೆ. ಎಲ್ಲ ಮಾಹಿತಿ ಬೇರೆ ಬೇರೆ ಬೇಕೇ?" ಎಂದು ಕೇಳಿದರು.
ಇದ್ಯಾಕೋ ಅತೀ ಅಯ್ತು ಅನ್ನಿಸಿದರೂ ’ಇದ್ರೆ ಸಂತೋಷ, ಕೊಡಿ’ ಎಂದೆ. ಉತ್ಸಾಹ ಕಡಿಮೆಯಾಗಲು ತೊಡಗಿತು.
ಮತ್ತೊಂದು ಪ್ರಶ್ನೆ ತೂರಿ ಬಂತು "ನಿಮಗೆ ಕುಳಿತಿರೋ ಪ್ರತಿಮೆ, ನಿಂತಿರೋ ಪ್ರತಿಮೆ, ವೀರರು ಕುದುರೆ ಮೇಲೆ ಕುಳಿತಿರೋ ಪ್ರತಿಮೆ ಹೀಗೆ ಎಲ್ಲವೂ ಬೇಕೇ?"
ಇವರು ಕೇಳ್ತಿರೋ ಪ್ರಶ್ನೆಗಳ ಸರಣಿ ನನ್ನಲ್ಲಿ ಯಾಕೋ ಅನುಮಾನ ತರಿಸುತ್ತಿದೆ. ಸುಮ್ಮನೆ ಮಾಹಿತಿ ಕೊಡಿ ಎಂದು ಕೇಳಿದರೆ, ಇಷ್ಟೆಲ್ಲ ಯಾರಾದರೂ ಮಾಹಿತಿ ನೀಡಿಯಾರೇ? ಒಂದೋ ಇವರಲ್ಲಿ ಮಾಹಿತಿ ಇಲ್ಲ. ಅಥವಾ ಅಷ್ಟು ಮಾಹಿತಿ ಕೊಡಲು ಇಷ್ಟು ದುಡ್ಡು ಕೊಡಿ ಎಂದು ಕೇಳಬಹುದು.
ಇರಲಿ ನಿಂತಿರುವ, ಕುಳಿತಿರುವ ಪ್ರತಿಮೆಗಳು ಸರಿ ಆದರೆ ಈ ಕುದುರೆ ವಿಷಯ ಆಸಕ್ತಿ ಮೂಡಿಸಿತು "ಕುದುರೆ ಮೇಲೆ ಕುಳಿತ ವೀರರ ಪ್ರತಿಮೆ ಬಗ್ಗೆ ಹೇಳಿದಿರಲ್ಲ. ಅದರ ಬಗ್ಗೆ ಸ್ವಲ್ಪ ವಿವರ ಕೊಡ್ತೀರಾ?"
ಅವರು ಅದಕ್ಕೆ "ಒಂದು ಕಾಲೆತ್ತಿರೋ ಕುದುರೆ ಮೇಲಿನ ವೀರ / ವೀರ ವನಿತೆ , ಯುದ್ದದಲ್ಲಿ ಗಾಯಾಳುವಾಗಿ ಸತ್ತರೆಂದು ಅರ್ಥ. ಪ್ರತಿಮೆಯ ಕುದುರೆಯ ನಾಲ್ಕೂ ಕಾಲುಗಳು ಊರಿದ್ದರೆ ಅವರದು ಸ್ವಾಭಾವಿಕ ಸಾವು ಎಂದರ್ಥ" ಅಂದರು. ಸೂಕ್ಷ್ಮ ವಿಷಯಗಳು. ಧನ್ಯವಾದ ತಿಳಿಸಿದೆ.
ಅದರ ಹಿಂದೆಯೇ ಮತ್ತೊಂದು ಪ್ರಶ್ನೆ ಗುಂಡಿನಂತೆ ತೂರಿ ಬಂತು "ನಿಮಗೆ ಬದುಕಿರುವವರ ಪ್ರತಿಮೆಗಳ ಸಂಖ್ಯೆ ಬೇಕೇ? ಅಥವಾ ಹೋದವರದು ಮಾತ್ರ ಸಾಕೇ?".
ಅದಕ್ಕೆ ನಾನು "ಬೇಗ ಹೇಳಿದರೆ ಇದ್ದವರ ಪ್ರತಿಮೆಗಳ ಲಿಸ್ಟ್’ನಲ್ಲಿ ನಿಮ್ಮದೂ ಇರುತ್ತೆ ಇಲ್ದೆ ಇದ್ರೆ ಎರಡನೇ ಲಿಸ್ಟ್’ನಲ್ಲಿ ಖಂಡಿತ ಇರುತ್ತೆ" ಅಂತ ಹೇಳುವಾ ಎಂದು ನಾಲಿಗೆ ತುದಿವರೆಗೂ ಬಂತು... ಬದಲಿಗೆ ಇತಿಶ್ರೀ ಹಾಡಲೆಂದು "ನಿಮ್ಮಲ್ಲಿ ನಿಜಕ್ಕೂ ಇಷ್ಟೆಲ್ಲ ಮಾಹಿತಿ ಇದೆಯೇ?" ಎಂದು ಕೇಳಿಯೇ ಬಿಟ್ಟೆ.
ಅವರು ಅಷ್ಟೇ ಶಾಂತವಾಗಿ "ನಿಜ ಹೇಳಬೇಕೂ ಅಂದರೆ ಯಾವ ಮಾಹಿತೀನೂ ಇಲ್ಲ. ನಾನು ಪ್ರತಿಮೆಗಳನ್ನು ಡೆಲಿವರಿ ಮಾಡುವವನು. ಲೆಕ್ಕ ಇಡೋವ್ನಲ್ಲ. ಬೇರೆಲ್ಲಾದರೂ ವಿಚಾರಿಸಿ ತಿಳಿಸಬೇಕೂ ಅಂದಲ್ಲಿ ನಿಮಗೆ ಏನೇನು ಮಾಹಿತಿ ಬೇಕೂ ಅಂತ ಪ್ರಶ್ನೆಗಳನ್ನು ಬರೆದುಕೊಳ್ತಾ ಇದ್ದೀನಿ" ಅನ್ನೋದೇ?
ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ಸು ಬರುವಾಗ ಬೆರಳ ತೋರುತ್ತ ನಿಂತಿದ್ದ ಅಂಬೇಡ್ಕರ್ ಅವರ ಪ್ರತಿಮೆ ಮತ್ತೆ ನೋಡಿದೆ. ಮೊದಲು ನಾನು ಆ ಪ್ರತಿಮೆ ನೋಡಿದಾಗ ಏನು ಹೇಳಿದರು? ಈಗೇನು ಹೇಳುತ್ತಿದ್ದಾರೆ? ಗೊತ್ತಗ್ತಿಲ್ಲ !
ಪ್ರತಿಮೆಗಳಿಗೂ ಮಾತು ಬರುವಂತಿದ್ದಿದ್ದರೆ ?
ಜೀವನದ ನಾನಾ ಪಾತ್ರೆ
ನವ ಮಾಸ ಬೆಚ್ಚಗೆ ಬೆಳೆಯಲು
ಹೆತ್ತೊಡಲೊಂದು ತೊಗಲಿನ ಪಾತ್ರೆ
ಒಡಲನು ಬಿಟ್ಟು ಭೂಮಿಗೆ ಜಾರೆ
ಇಳಿದುದು ಜಗವೆಂಬ ನಿಟ್ಟುಸುರಿನ ಪಾತ್ರೆ
ಜನರೊಟ್ಟಿಗಿದ್ದು ಬದುಕನು ಕಲಿವ
ಮನೆಯೊಂದು ನಲಿವಿನ ಪಾತ್ರೆ
ಮಮತೆಯ ಮೆರೆವ ತಾಯ ಹೃದಯ
ಮಧು ತುಂಬಿದ ಹೂವಿನ ಪಾತ್ರೆ
ರೋಗ ರುಜಿನ ಹೊತ್ತಿಹ ದೇಹವದು
ತೂತಾದ ಕಂಚಿನ ಪಾತ್ರೆ
ಓದಿದ್ದರೂ ನಡತೆಯಿಲ್ಲದ ಮಾನವ
ಅಜ್ಞ್ನಾನದ ಮಸಿ ಹಿಡಿದ ಪಾತ್ರೆ
ಅರಿಷಡ್ವರ್ಗಗಳ ಹೊತ್ತಿಹ ಮಸ್ತಕವು
ಕೊಳಕು ದೇಹದ ಕಲುಷಿತ ಪಾತ್ರೆ
ಚಟ್ಟ ಸಿಂಹಾಸನದಿ ಸುಟ್ಟ ಬೂದಿಯನು
ತುಂಬಿಕೊಳ್ವ ಮಡಿಕೆಯೊಂದು ಮಣ್ಣಿನ ಪಾತ್ರೆ
ತೊಗಲಿನ ಪಾತ್ರೆಯಿಂ ಮಣ್ಣಿನ ಪಾತ್ರೆವರೆಗೂ
ನೆಡವ ಜೀವನವು ಹೋರಾಟದ ಅಕ್ಷಯಪಾತ್ರೆ
ಹೀಗೊಂದು ಸಂಗೀತ ಸಂಜೆ !
ಹಿಂದೊಮ್ಮೆ ಮನೆ ಸಾಮಾನುಗಳು ನೆಡೆಸಿದ್ದ ಸಂಗೀತ ಸಂಜೆ ಬಗ್ಗೆ ಕೇಳಿದ್ದಿರಿ ... ತಪ್ಪಿ ಹೋಗಿದ್ದಲ್ಲಿ ಅದರ ಕೊಂಡಿ ಇಲ್ಲಿದೆ ....
http://sampada.net/a...
ಇರಲಿ, ಈಗ ಮನುಜನ ರೋಗಗಳು / ಸಂಕಷ್ಟಗಳು ಹಾಡೋ ಹಾಡುಗಳನ್ನು ಕೇಳಿ ... ಕೆಲವನ್ನು ಮಾತ್ರ ಹೆಸರಿಸಿ ಹಾಡಿನ ಒಂದು ಸಾಲನ್ನು ಮಾತ್ರ ಹಾಕಿದ್ದೇನೆ ...
ಸಂದರ್ಭ ಹೀಗಿದೆ:
ಮನುಜನ ಖಾಯಿಲೆಗಳು / ಸಂಕಷ್ಟಗಳು ಒಮ್ಮೆ ಯಮಧರ್ಮನಲ್ಲಿ ಮೊರೆಯಿಟ್ಟವು. "ಪ್ರಭೂ, ನಮಗೆ ಮನುಜನನ್ನು ಕಾಡಿಸಿ ಪೀಡಿಸಿ ಬೇಸರವಾಗಿದೆ. ನಮಗೊಂದು ದಿನ ರಜೆ ನೀಡು" ಎಂದು. ಯಮಧರ್ಮ ಈ ಪ್ರಶ್ನೆಗೆ ಹೌಹಾರಿ ಬಿದ್ದು "ಎಲ್ಲಾದರೂ ಉಂಟೆ? ... ಸಾಧ್ಯವೇ ಇಲ್ಲ ... ನೀವುಗಳು ದೈವಸೃಷ್ಟಿ. ಮನುಜನು ಮಾಡಿರುವ ಪಾಪಗಳಿಗೆ ಶಿಕ್ಷೆಯ ರೂಪವೇ ನೀವುಗಳು. ಮನುಜ ಎಷ್ಟೇ ಪ್ರಗತಿ ಸಾಧಿಸಿದರೂ ದೈವತ್ವವನ್ನು ಮೀರದೆ ಇರುವುದರ ಮೂಲ ಕಾರಣ ನೀವು. ನಿಮಗೇ ರಜೆ ನೀಡುವುದು ದುಸ್ಸಾಧ್ಯ. ಆದರೆ ಕೆಲವು ಘಂಟೆಗಳು ಮಾತ್ರ ಮನರಂಜನಾ ಕಾರ್ಯಕ್ರಮ ನೆಡೆಸಲು ಅನುಮತಿ ನೀಡುತ್ತೇನೆ" ಎಂದ.
ಅದೇ ಈ "ಖಾಯಿಲೆಗಳ ಸಂಗೀತ ಸಂಜೆ" ... ಯಾವ ರೋಗ / ಸಂಕಷ್ಟಗಳು ಯಾವ ಹಾಡನ್ನು ಹೇಳಿತು ಕೇಳೋಣವೇ?
-----
Alzheimer: ನಿನ್ನ ನೀನು ಮರೆತರೇನು ಸುಖವಿದೆ, ತನ್ನ ತನವ ತೊರದರೇನು ಸೊಗಸಿದೇ? (ದೇವರ ಕಣ್ಣು)
H1N1 (ಹಂದಿ ಜ್ವರ) : ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ (ಪ್ರೊಫೆಸರ್ ಹುಚ್ಚೂರಾಯ)
ಗಂಟಳು ಕಟ್ಟಿದಾಗ: ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ (ಕಿಟ್ಟು ಪುಟ್ಟು)
Diabetes (ಸಕ್ಕರೆ ಖಾಯಿಲೆ): ಹಸಿವೇ ದೂರಾ ನೀನಿರು .... ಹಸಿವೆ ದೂರ ನೀನಿರೂ (ಪ್ರೀತಿಸಿ ನೋಡು)
Jaundice (ಕಾಮಾಲೆ): ಬಣ್ಣಾ ನನ್ನ ಒಲವಿನ ಬಣ್ಣ ... ನನ್ನ ಬದುಕಿನ ಬಣ್ಣ (ಬಂಧನ)
ನೆಗಡಿ: ಹರಿಯೋ ನದಿಯು ಒಂದೇ ಕಡೆ ನಿಲ್ಲೋಕ್ಕಾಗಲ್ಲಾ... ಹುಟ್ಟಿದ ಮನುಷ್ಯ ಒಂದೇ ಊರಲಿ ಬಾಳೋಕ್ಕಾಗಲ್ಲ (ಜಿಮ್ಮಿ ಗಲ್ಲು)
Piles (ಪೈಲ್ಸ್): ಕುಂತ್ರೆ ನಿಂತ್ರೆ ಅವನ್ದೇ ಧ್ಯಾನ ಜೀವಕ್ಕಿಲ್ಲ ಸಮಾಧಾನ ಅವನಿಗೆ ಎಂಥಾ ಬಿಗುಮಾನ (ತ್ರಿಶೂಲ)
ಉಳುಕು: ಬಳ್ಳಿಯೊಂದು ಬಳುಕುತಿದೇ, ಆಹಾ ಆಹಾ ನಲಿಯುತಿದೆ (ಮಿ.ರಾಜಕುಮಾರ್)
ಛಳಿ-ಜ್ವರ: ಛಳಿ ಛಳಿ ತಾಳೆನು ಈ ಛಳಿಯಾ, ಗೆಳೆಯನೆ ಬಾರೆಯಾ ನೀ ಸನಿಹಾ (ಚಕ್ರವ್ಯೂಹ)
ದದ್ದೆ: ಕೆಂಪಾದವೋ ಎಲ್ಲ ಕೆಂಪಾದವೋ ... ನೆತ್ತಾರಾ ಕುಡಿದಾಂಗೆ ಕೆಂಪಾದವೋ (ಎಲ್ಲೆಂದಲೋ ಬಂದವರು)
Smallpox (ಅಮ್ಮ): ಯಾರಿಟ್ಟರೀ ಚುಕ್ಕಿ ... ಯಾಕಿಟ್ಟರೀ ಚುಕ್ಕೀ (ಪ್ರೀತ್ಸೆ)
ಏಡ್ಸ್: ಉಪ್ಪ ತಿಂದಾ ಮ್ಯಾಲೆ, ನೀರ ಕುಡಿಯಲೇಬೇಕು, ತಪ್ಪಾ ಮಾಡಿದ ಮ್ಯಾಲೇ, ಶಿಕ್ಷೆ ಅನುಭವಿಸಲೇ ಬೇಕು (ಕಾಲೇಜು ರಂಗ)
ಮಲಬದ್ದತೆ: ಬಾ ಬಾರೋ ಬಾರೋ ರಣಧೀರ ... ನೀ ಬಂದರೆ ದಿಗ್ವಿಜಯದ ಹಾರ (ರಣಧೀರ)
Morning Sickness ವಾಂತಿ: ಬಂದೆಯ ಬಾಳಿನ ಬೆಳಕಾಗಿ, ಬಂದೆಯ ಪ್ರೇಮದ ಸಿರಿಯಾಗಿ, ನನಗಾಗಿ ನನ್ನ ಜೊತೆಯಾಗಿ (ಅವಳ ಹೆಜ್ಜೆ)
ಮೈಕೈ ನೋವು: ಯವ್ವೋ! ಯಾಕೋ ಮೈಗೆ ಉಸಾರಿಲ್ಲ ಡಿಶುಂ !! (ರಸಿಕ)
ಮುಜುಗರ: ಹೇಳಲಾರೆನು ತಾಳಲಾರೆನು ಎನ್ನ ಮನಸಿನ ಭಾವನೆ (ಬೆಂಕಿ ಬಿರುಗಾಳಿ)
Night Blindness (ಇರುಳುಗಣ್ಣು) : ರವಿ ನೀನು ಆಗಸದಿಂದಾ ಮರೆಯಾಗಿ ಹೋಗದೆ ನಿಲ್ಲೂ, ಬಾಳಲ್ಲಿ ಕತ್ತಲೆ ತುಂಬಿ ನೀ ಹೋಗದೆ (ಹೊಸ ಬೆಳಕು)
ತಲೆನೋವು: ಈ ಬಂಧನಾ ಜನುಮ ಜನುಮದಾ ಅನುಬಂಧನಾ (ಬಂಧನ)
ತಲೆಸುತ್ತು: ಆಕಾಶ ಕೆಳಗೇಕೆ ಬಂತು .. ಊಹೂ ... ಈ ಭೂಮಿ ಮೇಲೇಕೆ ಹೋಯ್ತು ... ಇದು ತಾರೆಯೋ, ಇದು ಮೋಡವೋ (ಸಮಯದ ಗೊಂಬೆ)
ಚೆನ್ನೈ ಕಣ್ಣು : ಕಣ್ಣೂ ಕಣ್ಣೂ ಕಲೆತಾಗ, ಬದುಕು ಉಯ್ಯಾಲೆಯಾಗಿದೆ ತೂಗಿ, ಹೃದಯಾ ಬಿಡಲಾರೆ ಎಂದಿದೇ ಕೂಗಿ (ಕಾಮನಬಿಲ್ಲು)
ಬಿ.ಪಿ: ಹೃದಯ ಸಮುದ್ರ ಕಲಕಿ, ಉಕ್ಕಿದ ದ್ವೇಷದ ಬೆಂಕಿ, ರೋಷಾಗ್ನಿ ಜ್ವಾಲೆ ಉರಿದುರಿದೂ (ಅಶ್ವಮೇಧ)
ಶ್ವಾಸಕೋಶ ತೊಂದರೆ: ಉಸಿರೇ, ಉಸಿರೇ, ಈ ಉಸಿರು ನಿಂತ ಮೇಲೆ .... (ಹುಚ್ಚ)
ಮುಂದೆ ... ನಿಮ್ಮಿಂದ....
Saturday, February 6, 2010
ಇಂದೂ ಕಾಡಿದೆ ಅಮ್ಮನ ನೆನಪು !
ಇಂದು ನನ್ನ ಹುಟ್ಟುಹಬ್ಬ. ಕೇಕ್ ಕತ್ತರಿಸುವ ವಯಸ್ಸಲ್ಲ ... ನನಗಾಗಿ ಜನರು ಸಿಹಿ ಹಂಚುವಷ್ಟು ದೊಡ್ಡ ಮನುಷ್ಯನೂ ನಾನಲ್ಲ. ಹೊಟ್ಟೆಪಾಡಿಗಾಗಿ ಹೊರದೇಶದಲ್ಲಿ ನೆಲೆಸಿರುವ ಸೀದಾಸಾದ ಭಾರತೀಯ ನಾನು. ಶವರ್’ನಿಂದ ಧುಮ್ಮಿಕ್ಕುತ್ತ ನೀರು ತಲೆಯ ಮೇಲೆ ಬೀಳುತ್ತಿದ್ದಂತೆ, ಮನಸ್ಸು ನೆನಪುಗಳ ಸಾಗರಕ್ಕೆ ಧುಮುಕಿತು.
**
ಅಂದೂ, ನನ್ನ ಹುಟ್ಟುಹಬ್ಬದ ದಿನ.
ಭಾರತದಲ್ಲೀಗ ಸಂಜೆಯ ಸಮಯ. ಬೆಳಗಿನ ಕಾಫೀ ಹೀರುತ್ತ ಕರೆ ಮಾಡಿದೆ. ಅಮ್ಮನ ದನಿ ಮೂಡಿ ಬಂತು. ನನ್ನ ಕರೆಗೇ ಕಾದಿದ್ದರೆಂದು ತಿಳಿದಿತ್ತು. ಲವಲವಿಕೆಯ ದನಿ ಕೇಳಿ ಸಂತಸವಾಯ್ತು. ಫೋನಿನಲ್ಲೇ ಆಶೀರ್ವಾದ ಪಡೆದೆ. ಉಭಯ ಕುಶಲೋಪರಿಯ ಮಾತುಕಥೆಗಳಾದ ಮೇಲೆ ’ಸದ್ಯಕ್ಕೆ ಬರಲು ಆಗುವುದಿಲ್ಲ ಅಲ್ಲವೇ?’ ಎಂದು ಕೇಳಿದರು.
ಕಳೆದ ವರ್ಷ ಹೋಗಿ ಬಂದಿದ್ದೆ. ಇಲ್ಲಿ ನನ್ನ ಕೆಲಸ ಕಾರ್ಯದ ಬಗ್ಗೆ ಚೆನ್ನಾಗಿ ಅರಿವಿದ್ದ ಅಮ್ಮ, ಸಾಮಾನ್ಯವಾಗಿ ಕೇಳದ ಈ ಪ್ರಶ್ನೆ ಧಿಡೀರನೆ ಇಂದೇಕೆ ಕೇಳಿದರು ಎಂದು ಅರ್ಥವಾಗಲಿಲ್ಲ. ಇಂತಹ ಪ್ರಶ್ನೆಯನ್ನು ನನ್ನಂತೆ ಹೊರದೇಶದಲ್ಲಿ ನೆಲೆಸಿರುವವರೆಲ್ಲರೂ ಒಂದಲ್ಲಾ ಒಂದು ರೀತಿ ಕೇಳಿಯೇ ಇರುತ್ತಾರೆ. ಥಟ್ಟನೆ ಬೇರೇನೂ ಹೇಳಲಾಗದೆ ಇದ್ದುದರಿಂದ "ಪ್ರಯತ್ನ ಪಡುತ್ತೇನೆ" ಎಂದು ಮಾತ್ರ ಹೇಳಲು ಸಾಧ್ಯವಾಯಿತು. "ನೋಡಬೇಕು ಅನ್ನಿಸಿತು ಅದಕ್ಕೇ ಕೇಳಿದೆ. ತೊಂದರೆ ಮಾಡಿಕೊಳ್ಳಬೇಡ" ಅಂದರು.
ಹತ್ತು-ಹದಿನೈದು ನಿಮಿಷಗಳು ನೆಡೆದ ಆ ಕರೆ ... ನನ್ನ ಹುಟ್ಟುಹಬ್ಬದ ದಿನದಂದು ಮಾಡಿದ ಆ ಕರೆ.... ಅಮ್ಮನೊಡನೆ ನೆಡೆಸಿದ ಕೊನೆಯ ಸಂವಾದದ ಕರೆ ಎಂದು ನನಗೆ ಅರಿವಾಗುವುದರ ಹೊತ್ತಿಗೆ ಕಾಲ ಮಿಂಚಿತ್ತು.
"ಪ್ರಯತ್ನ ಮಾಡುತ್ತೇನೆ" ಎಂದು ನಾನು ನುಡಿದ ಮಾತುಗಳು ಆ ಸಮಯಕ್ಕೆ ಸಮಾಧಾನಕ್ಕಾಗಿ ನುಡಿದದ್ದೇ ಆದರೂ ಅಮ್ಮ ನನ್ನನ್ನು ಕರೆಸಿಕೊಂಡಿದ್ದರು. ಆದರೆ ಈ ಬಾರಿ ಸ್ವಾಗತಿಸಲು ಆ ಹೆತ್ತೊಡಲು ಇರಲಿಲ್ಲ.
ಸಾಯುವ ಕಾಲಕ್ಕೆ ಎಲ್ಲರೂ ದಶರಥರೇ?
---
ಕೆಲ ಸಮಯದಿಂದ ಅಮ್ಮನ ಆರೋಗ್ಯದಲ್ಲಿ ಏರಿಳಿತ ಇತ್ತು. ಮೂರು ದಿನಗಳಿಗೊಮ್ಮೆ ಕರೆ ಮಾಡಿ ಆರೊಗ್ಯ ವಿಚಾರಿಸುವುದು ಹೆಚ್ಚು ಕಮ್ಮಿ ಈ ನಡುವಿನ ಪರಿಪಾಠ. ಔಷದಿ-ಪಥ್ಯ ಚೆನ್ನಾಗಿ ನೆಡೆಯುತ್ತಿದೆ, ಆರೋಗ್ಯ ಸುಧಾರಿಸುತ್ತಿದೆ ಎಂದು ತಿಳಿದಾಗ ಏನೋ ನೆಮ್ಮದಿ.
ಆದರೆ, ಆರೋಗ್ಯದ ವಿಚಾರದಲ್ಲಿ ಸಂಪೂರ್ಣ ಮಾಹಿತಿ ಸಿಗದೆ ’ಎಲ್ಲ ಚೆನ್ನಾಗಿದ್ದೀವಿ’ ಎಂದೇ ಕೇಳಲ್ಪಡುವ ಈ ಪರಿ, ಹೊರದೇಶದಲ್ಲಿರುವ ಭಾರತೀಯರಿಗೆಲ್ಲ ಕಟ್ಟಿಟ್ಟಬುತ್ತಿ. ನಾನೇನೂ ಅದಕ್ಕೆ ಹೊರತಲ್ಲ.
ಮುಂದಿನ ಕೆಲದಿನಗಳಲ್ಲಿ ಮತ್ತೊಮ್ಮೆ ಕರೆ ಮಾಡಿದೆ. ಅನಾರೋಗ್ಯ ಹೆಚ್ಚಿ ಅಮ್ಮನನ್ನು ಆಸ್ಪತ್ರೆಗೆ ಸೇರಿಸಿದ್ದರು. ಈ ಹಿಂದೆ ಒಂದೆರಡು ಬಾರಿ ಹೀಗೇ ಆಗಿದ್ದರಿಂದ ಆತಂಕ ಪಡುವುದೇನೂ ಇಲ್ಲ ಎಂಬ ವಿಷಯ ತಿಳಿದು ಸದ್ಯಕ್ಕೆ ಸಮಾಧಾನ ಅನ್ನಿಸಿದರೂ, ಮನ ನುಡಿದದ್ದು ಹೃದಯ ಒಪ್ಪಲಿಲ್ಲ. ಹೋಗಿ ನೋಡಿಕೊಂಡು ಬರಬೇಕೆಂದು ಅನ್ನಿಸುತ್ತಿತ್ತು.
ಭಾನುವಾರ ಬೆಳಿಗ್ಗೆ, ಇನ್ನೂ ಹಾಸಿಗೆಯಲ್ಲಿರುವಂತೇ, ಊರಿಂದ ಕರೆ ಬಂತು. "ಸಾಧ್ಯವಾದಷ್ಟು ಬೇಗ ಹೊರಟು ಬರಲು ಸಾಧ್ಯವೇ?" ಎಂಬ ಸಂದೇಶ ಹೊತ್ತ ಆ ಕರೆ, ನಿದ್ದೆ ಹೆಂಚು ಹಾರಿ ಹೋಗುವಂತೆ ಮಾಡಿತ್ತು.
ಹಿಂದಿನ ದಿನವಿಡೀ ಕೋಮಾದಲ್ಲೇ ಇದ್ದರೆಂದು ತಿಳಿಯಿತು. ಕಾಫೀ ಪ್ರಿಯಳಾದ ಅಮ್ಮನಿಗೆ ಅಂದು ಕಾಫಿ ಬೇಕಿರಲಿಲ್ಲವಂತೆ ! ಯಾರೊಂದಿಗೂ ಮಾತು ಬೇಕಿರಲಿಲ್ಲವಂತೆ !!
ಇಹಲೋಕದ ಬಂಧನ ಕಳಚಿಕೊಂಡು ಪರಲೋಕದ ಹಾದಿ ತುಳಿಯುವಾಗ ವ್ಯಾಮೋಹ ಕಡಿಮೆಯಾಗುತ್ತದಂತೆ.
ಅಮ್ಮನ ಪ್ರಾಣ ಹೋಗುವ ಮುನ್ನ ನಾನಲ್ಲಿಗೆ ಹೋಗುವ ಸಾಧ್ಯತೆ ಎಷ್ಟು? ಇನ್ನೊಮ್ಮೆ ಮಾತನಾಡಲು ಅವಕಾಶ ದೊರಕೀತೇ?
ಮೊಬೈಲ್’ಗೆ ಕರೆ ಮಾಡಿ ಕೇಳಿದೆ. ಹೋಗುತ್ತಿರುವ ಜೀವ ತಡೆಯುವವರು ಯಾರೂ ಇಲ್ಲದಿದ್ದುದರಿಂದ, ಮೊಬೈಲನ್ನು ಸ್ಪೆಷಲ್ ವಾರ್ಡಿಗೆ ಒಯ್ಯಲು ತಡೆಯುವ ಅವಶ್ಯಕತೆ ಇಲ್ಲವೆಂದು ಡಾಕ್ಟರ್ ತಿಳಿಸಿದ್ದರು.
ನನ್ನ ಕರೆಯನ್ನು ಅಲ್ಲಿನವರು ಅಮ್ಮನ ಕಿವಿಗೆ ಹಿಡಿದರು ! ನಾನಿಲ್ಲಿಂದ ’ಅಮ್ಮಾ’ ಎಂದು ಕೂಗುತ್ತಲೇ ಇದ್ದೆ !!
ಕಾಲನ ಕರೆಗೆ ಓಗೊಡುತ್ತಿದ್ದ ಆ ಜೀವಕ್ಕೆ, ನನ್ನ ಕರೆ ತಿಳಿಯಲೇ ಇಲ್ಲ. ನನ್ನ ಕೂಗು ಕೇವಲ ಅರಣ್ಯರೋದನವಾಗಿತ್ತು !
ಫೋನಿನಿಂದ ಬಂದ ಕೀರಲು ದನಿ ಕೇಳಿ ನೋಡಿದರೆ Signal Faded. ಎಂತಹ ಕಾಕತಾಳೀಯ ?
ಆಗಲೇ ಮಧ್ಯಾನ್ನ ಘಂಟೆ ಹನ್ನೆರಡಾಗಿತ್ತು. ಮರುದಿನ ಹೊರಡುವುದಕ್ಕೇ ಟಿಕೆಟ್ ಬುಕ್ ಮಾಡಿಸಿದೆ. ಚೆಕ್-ಇನ್ ಮಾಡುವ ಗೋಜು ಬೇಡವೆಂದು ಒಂದು ಚಿಕ್ಕ ಸೂಟ್ ಕೇಸನ್ನು ಸಿದ್ದಪಡಿಸಿಕೊಂಡೆ. ಮರುದಿನ ಆಫೀಸಿಗೆ ಹೋಗಿ ವಿಷಯ ತಿಳಿಸಿ, ರಜೆ ಹಾಕಿ ಮಧ್ಯಾನ್ನ ಹೊರಟೆ. ಸಂಜೆ ಆರಕ್ಕೆ ವಿಮಾನ ಬಾನಿಗೆ ಚಿಮ್ಮಿತು.
ಬೆಂಗಳೂರಿನಲ್ಲಿಳಿದು ಬಂಧು ಜನ ತಂದಿದ್ದ ಕಾರಿನಲ್ಲಿ ಮನೆ ತಲುಪಿದೆ. ಎಲ್ಲೆಡೆ ನೀರವತೆ ಹರಡಿತ್ತು. ನನ್ನ ಮನ ಕೂಗಿ ಕೂಗಿ ಹೇಳುತ್ತಿದ್ದರೂ ಕೊನೆ ಆಸೆಯಿಂದ ಕೇಳಿದೆ ’ಈಗಲೇ ಆಸ್ಪತ್ರೆಗೆ ಹೋಗಿ ನೋಡಿಕೊಂಡು ಬರೋಣವೇ’ ಎಂದು.
"ಈಗ ಹೋದರೂ ಪ್ರಯೋಜನವಿಲ್ಲ. ಬಾಡಿ ಎಂಟು ಘಂಟೆಗೆ ಕೊಡ್ತಾರೆ" ಎಂಬ ವಿಷಯ ತಿಳಿಯಿತು!
ಅಮ್ಮ ನಮ್ಮೆಲ್ಲರನ್ನೂ ಬಿಟ್ಟು ದೂರವಾಗಿ ಹಲವಾರು ಘಂಟೆಗಳೇ ಕಳೆದುಹೋಗಿದ್ದವು!!
ಮನಸ್ಸಿಗೆ ಬಹಳ ಹಿಂಸೆಯಾಯಿತು. ಉಸಿರಾಡುವ ತನಕ ಇರುವ ಐಡೆಂಟಿಟಿ ಉಸಿರು ನಿಂತ ತಕ್ಷಣ ಬರೀ ’ದೇಹ’, ’ಬಾಡಿ’ ಅಂತ ಕರೆಸಿಕೊಳ್ಳುತ್ತಲ್ಲ ಎಂದು.
’ನೋಡಬೇಕು’ ಅಂತ ಬಯಸಿದೆಯೆಲ್ಲಮ್ಮ .. ನಾನಂತೂ ಬಂದೆ. ಆದರೆ ನಮ್ಮನ್ನು ಬಿಟ್ಟು ನೀ ಹೋದೆ ಎಲ್ಲಿಗೆ?
**
ಶಿರದಿಂದ ಹರಿವ ನೀರು, ನನ್ನ ಕಣ್ಣೀರನ್ನೂ ತನ್ನೊಡನೆ ಸೇರಿಸಿಕೊಂಡು ಬಚ್ಚಲಿನತ್ತ ಧಾವಿಸಿತು.
ಜೀವವಿದ್ದಿದ್ದರೆ, ’ಇದೆಷ್ಟನೇ ಬಾರಿಯೋ ನನ್ನೊಡಲಲ್ಲಿ ನಿನ್ನ ಕಣ್ಣೀರು ಸೇರುತ್ತಿರುವುದು’ ಎಂಬ ವಿಷಾದ ನಗೆಯೊಂದನು ಬೀರುತ್ತಿತ್ತೇನೋ ಈ ಬಚ್ಚಲು?