Saturday, February 6, 2010

ಇಂದೂ ಕಾಡಿದೆ ಅಮ್ಮನ ನೆನಪು !

ಇಂದು ನನ್ನ ಹುಟ್ಟುಹಬ್ಬ. ಕೇಕ್ ಕತ್ತರಿಸುವ ವಯಸ್ಸಲ್ಲ ... ನನಗಾಗಿ ಜನರು ಸಿಹಿ ಹಂಚುವಷ್ಟು ದೊಡ್ಡ ಮನುಷ್ಯನೂ ನಾನಲ್ಲ. ಹೊಟ್ಟೆಪಾಡಿಗಾಗಿ ಹೊರದೇಶದಲ್ಲಿ ನೆಲೆಸಿರುವ ಸೀದಾಸಾದ ಭಾರತೀಯ ನಾನು. ಶವರ್’ನಿಂದ ಧುಮ್ಮಿಕ್ಕುತ್ತ ನೀರು ತಲೆಯ ಮೇಲೆ ಬೀಳುತ್ತಿದ್ದಂತೆ, ಮನಸ್ಸು ನೆನಪುಗಳ ಸಾಗರಕ್ಕೆ ಧುಮುಕಿತು.

**
ಅಂದೂ, ನನ್ನ ಹುಟ್ಟುಹಬ್ಬದ ದಿನ.

ಭಾರತದಲ್ಲೀಗ ಸಂಜೆಯ ಸಮಯ. ಬೆಳಗಿನ ಕಾಫೀ ಹೀರುತ್ತ ಕರೆ ಮಾಡಿದೆ. ಅಮ್ಮನ ದನಿ ಮೂಡಿ ಬಂತು. ನನ್ನ ಕರೆಗೇ ಕಾದಿದ್ದರೆಂದು ತಿಳಿದಿತ್ತು. ಲವಲವಿಕೆಯ ದನಿ ಕೇಳಿ ಸಂತಸವಾಯ್ತು. ಫೋನಿನಲ್ಲೇ ಆಶೀರ್ವಾದ ಪಡೆದೆ. ಉಭಯ ಕುಶಲೋಪರಿಯ ಮಾತುಕಥೆಗಳಾದ ಮೇಲೆ ’ಸದ್ಯಕ್ಕೆ ಬರಲು ಆಗುವುದಿಲ್ಲ ಅಲ್ಲವೇ?’ ಎಂದು ಕೇಳಿದರು.

ಕಳೆದ ವರ್ಷ ಹೋಗಿ ಬಂದಿದ್ದೆ. ಇಲ್ಲಿ ನನ್ನ ಕೆಲಸ ಕಾರ್ಯದ ಬಗ್ಗೆ ಚೆನ್ನಾಗಿ ಅರಿವಿದ್ದ ಅಮ್ಮ, ಸಾಮಾನ್ಯವಾಗಿ ಕೇಳದ ಈ ಪ್ರಶ್ನೆ ಧಿಡೀರನೆ ಇಂದೇಕೆ ಕೇಳಿದರು ಎಂದು ಅರ್ಥವಾಗಲಿಲ್ಲ. ಇಂತಹ ಪ್ರಶ್ನೆಯನ್ನು ನನ್ನಂತೆ ಹೊರದೇಶದಲ್ಲಿ ನೆಲೆಸಿರುವವರೆಲ್ಲರೂ ಒಂದಲ್ಲಾ ಒಂದು ರೀತಿ ಕೇಳಿಯೇ ಇರುತ್ತಾರೆ. ಥಟ್ಟನೆ ಬೇರೇನೂ ಹೇಳಲಾಗದೆ ಇದ್ದುದರಿಂದ "ಪ್ರಯತ್ನ ಪಡುತ್ತೇನೆ" ಎಂದು ಮಾತ್ರ ಹೇಳಲು ಸಾಧ್ಯವಾಯಿತು. "ನೋಡಬೇಕು ಅನ್ನಿಸಿತು ಅದಕ್ಕೇ ಕೇಳಿದೆ. ತೊಂದರೆ ಮಾಡಿಕೊಳ್ಳಬೇಡ" ಅಂದರು.

ಹತ್ತು-ಹದಿನೈದು ನಿಮಿಷಗಳು ನೆಡೆದ ಆ ಕರೆ ... ನನ್ನ ಹುಟ್ಟುಹಬ್ಬದ ದಿನದಂದು ಮಾಡಿದ ಆ ಕರೆ.... ಅಮ್ಮನೊಡನೆ ನೆಡೆಸಿದ ಕೊನೆಯ ಸಂವಾದದ ಕರೆ ಎಂದು ನನಗೆ ಅರಿವಾಗುವುದರ ಹೊತ್ತಿಗೆ ಕಾಲ ಮಿಂಚಿತ್ತು.
"ಪ್ರಯತ್ನ ಮಾಡುತ್ತೇನೆ" ಎಂದು ನಾನು ನುಡಿದ ಮಾತುಗಳು ಆ ಸಮಯಕ್ಕೆ ಸಮಾಧಾನಕ್ಕಾಗಿ ನುಡಿದದ್ದೇ ಆದರೂ ಅಮ್ಮ ನನ್ನನ್ನು ಕರೆಸಿಕೊಂಡಿದ್ದರು. ಆದರೆ ಈ ಬಾರಿ ಸ್ವಾಗತಿಸಲು ಆ ಹೆತ್ತೊಡಲು ಇರಲಿಲ್ಲ.

ಸಾಯುವ ಕಾಲಕ್ಕೆ ಎಲ್ಲರೂ ದಶರಥರೇ?

---

ಕೆಲ ಸಮಯದಿಂದ ಅಮ್ಮನ ಆರೋಗ್ಯದಲ್ಲಿ ಏರಿಳಿತ ಇತ್ತು. ಮೂರು ದಿನಗಳಿಗೊಮ್ಮೆ ಕರೆ ಮಾಡಿ ಆರೊಗ್ಯ ವಿಚಾರಿಸುವುದು ಹೆಚ್ಚು ಕಮ್ಮಿ ಈ ನಡುವಿನ ಪರಿಪಾಠ. ಔಷದಿ-ಪಥ್ಯ ಚೆನ್ನಾಗಿ ನೆಡೆಯುತ್ತಿದೆ, ಆರೋಗ್ಯ ಸುಧಾರಿಸುತ್ತಿದೆ ಎಂದು ತಿಳಿದಾಗ ಏನೋ ನೆಮ್ಮದಿ.

ಆದರೆ, ಆರೋಗ್ಯದ ವಿಚಾರದಲ್ಲಿ ಸಂಪೂರ್ಣ ಮಾಹಿತಿ ಸಿಗದೆ ’ಎಲ್ಲ ಚೆನ್ನಾಗಿದ್ದೀವಿ’ ಎಂದೇ ಕೇಳಲ್ಪಡುವ ಈ ಪರಿ, ಹೊರದೇಶದಲ್ಲಿರುವ ಭಾರತೀಯರಿಗೆಲ್ಲ ಕಟ್ಟಿಟ್ಟಬುತ್ತಿ. ನಾನೇನೂ ಅದಕ್ಕೆ ಹೊರತಲ್ಲ.

ಮುಂದಿನ ಕೆಲದಿನಗಳಲ್ಲಿ ಮತ್ತೊಮ್ಮೆ ಕರೆ ಮಾಡಿದೆ. ಅನಾರೋಗ್ಯ ಹೆಚ್ಚಿ ಅಮ್ಮನನ್ನು ಆಸ್ಪತ್ರೆಗೆ ಸೇರಿಸಿದ್ದರು. ಈ ಹಿಂದೆ ಒಂದೆರಡು ಬಾರಿ ಹೀಗೇ ಆಗಿದ್ದರಿಂದ ಆತಂಕ ಪಡುವುದೇನೂ ಇಲ್ಲ ಎಂಬ ವಿಷಯ ತಿಳಿದು ಸದ್ಯಕ್ಕೆ ಸಮಾಧಾನ ಅನ್ನಿಸಿದರೂ, ಮನ ನುಡಿದದ್ದು ಹೃದಯ ಒಪ್ಪಲಿಲ್ಲ. ಹೋಗಿ ನೋಡಿಕೊಂಡು ಬರಬೇಕೆಂದು ಅನ್ನಿಸುತ್ತಿತ್ತು.

ಭಾನುವಾರ ಬೆಳಿಗ್ಗೆ, ಇನ್ನೂ ಹಾಸಿಗೆಯಲ್ಲಿರುವಂತೇ, ಊರಿಂದ ಕರೆ ಬಂತು. "ಸಾಧ್ಯವಾದಷ್ಟು ಬೇಗ ಹೊರಟು ಬರಲು ಸಾಧ್ಯವೇ?" ಎಂಬ ಸಂದೇಶ ಹೊತ್ತ ಆ ಕರೆ, ನಿದ್ದೆ ಹೆಂಚು ಹಾರಿ ಹೋಗುವಂತೆ ಮಾಡಿತ್ತು.

ಹಿಂದಿನ ದಿನವಿಡೀ ಕೋಮಾದಲ್ಲೇ ಇದ್ದರೆಂದು ತಿಳಿಯಿತು. ಕಾಫೀ ಪ್ರಿಯಳಾದ ಅಮ್ಮನಿಗೆ ಅಂದು ಕಾಫಿ ಬೇಕಿರಲಿಲ್ಲವಂತೆ ! ಯಾರೊಂದಿಗೂ ಮಾತು ಬೇಕಿರಲಿಲ್ಲವಂತೆ !!

ಇಹಲೋಕದ ಬಂಧನ ಕಳಚಿಕೊಂಡು ಪರಲೋಕದ ಹಾದಿ ತುಳಿಯುವಾಗ ವ್ಯಾಮೋಹ ಕಡಿಮೆಯಾಗುತ್ತದಂತೆ.
ಅಮ್ಮನ ಪ್ರಾಣ ಹೋಗುವ ಮುನ್ನ ನಾನಲ್ಲಿಗೆ ಹೋಗುವ ಸಾಧ್ಯತೆ ಎಷ್ಟು? ಇನ್ನೊಮ್ಮೆ ಮಾತನಾಡಲು ಅವಕಾಶ ದೊರಕೀತೇ?

ಮೊಬೈಲ್’ಗೆ ಕರೆ ಮಾಡಿ ಕೇಳಿದೆ. ಹೋಗುತ್ತಿರುವ ಜೀವ ತಡೆಯುವವರು ಯಾರೂ ಇಲ್ಲದಿದ್ದುದರಿಂದ, ಮೊಬೈಲನ್ನು ಸ್ಪೆಷಲ್ ವಾರ್ಡಿಗೆ ಒಯ್ಯಲು ತಡೆಯುವ ಅವಶ್ಯಕತೆ ಇಲ್ಲವೆಂದು ಡಾಕ್ಟರ್ ತಿಳಿಸಿದ್ದರು.

ನನ್ನ ಕರೆಯನ್ನು ಅಲ್ಲಿನವರು ಅಮ್ಮನ ಕಿವಿಗೆ ಹಿಡಿದರು ! ನಾನಿಲ್ಲಿಂದ ’ಅಮ್ಮಾ’ ಎಂದು ಕೂಗುತ್ತಲೇ ಇದ್ದೆ !!

ಕಾಲನ ಕರೆಗೆ ಓಗೊಡುತ್ತಿದ್ದ ಆ ಜೀವಕ್ಕೆ, ನನ್ನ ಕರೆ ತಿಳಿಯಲೇ ಇಲ್ಲ. ನನ್ನ ಕೂಗು ಕೇವಲ ಅರಣ್ಯರೋದನವಾಗಿತ್ತು !

ಫೋನಿನಿಂದ ಬಂದ ಕೀರಲು ದನಿ ಕೇಳಿ ನೋಡಿದರೆ Signal Faded. ಎಂತಹ ಕಾಕತಾಳೀಯ ?

ಆಗಲೇ ಮಧ್ಯಾನ್ನ ಘಂಟೆ ಹನ್ನೆರಡಾಗಿತ್ತು. ಮರುದಿನ ಹೊರಡುವುದಕ್ಕೇ ಟಿಕೆಟ್ ಬುಕ್ ಮಾಡಿಸಿದೆ. ಚೆಕ್-ಇನ್ ಮಾಡುವ ಗೋಜು ಬೇಡವೆಂದು ಒಂದು ಚಿಕ್ಕ ಸೂಟ್ ಕೇಸನ್ನು ಸಿದ್ದಪಡಿಸಿಕೊಂಡೆ. ಮರುದಿನ ಆಫೀಸಿಗೆ ಹೋಗಿ ವಿಷಯ ತಿಳಿಸಿ, ರಜೆ ಹಾಕಿ ಮಧ್ಯಾನ್ನ ಹೊರಟೆ. ಸಂಜೆ ಆರಕ್ಕೆ ವಿಮಾನ ಬಾನಿಗೆ ಚಿಮ್ಮಿತು.

ಬೆಂಗಳೂರಿನಲ್ಲಿಳಿದು ಬಂಧು ಜನ ತಂದಿದ್ದ ಕಾರಿನಲ್ಲಿ ಮನೆ ತಲುಪಿದೆ. ಎಲ್ಲೆಡೆ ನೀರವತೆ ಹರಡಿತ್ತು. ನನ್ನ ಮನ ಕೂಗಿ ಕೂಗಿ ಹೇಳುತ್ತಿದ್ದರೂ ಕೊನೆ ಆಸೆಯಿಂದ ಕೇಳಿದೆ ’ಈಗಲೇ ಆಸ್ಪತ್ರೆಗೆ ಹೋಗಿ ನೋಡಿಕೊಂಡು ಬರೋಣವೇ’ ಎಂದು.

"ಈಗ ಹೋದರೂ ಪ್ರಯೋಜನವಿಲ್ಲ. ಬಾಡಿ ಎಂಟು ಘಂಟೆಗೆ ಕೊಡ್ತಾರೆ" ಎಂಬ ವಿಷಯ ತಿಳಿಯಿತು!

ಅಮ್ಮ ನಮ್ಮೆಲ್ಲರನ್ನೂ ಬಿಟ್ಟು ದೂರವಾಗಿ ಹಲವಾರು ಘಂಟೆಗಳೇ ಕಳೆದುಹೋಗಿದ್ದವು!!

ಮನಸ್ಸಿಗೆ ಬಹಳ ಹಿಂಸೆಯಾಯಿತು. ಉಸಿರಾಡುವ ತನಕ ಇರುವ ಐಡೆಂಟಿಟಿ ಉಸಿರು ನಿಂತ ತಕ್ಷಣ ಬರೀ ’ದೇಹ’, ’ಬಾಡಿ’ ಅಂತ ಕರೆಸಿಕೊಳ್ಳುತ್ತಲ್ಲ ಎಂದು.

’ನೋಡಬೇಕು’ ಅಂತ ಬಯಸಿದೆಯೆಲ್ಲಮ್ಮ .. ನಾನಂತೂ ಬಂದೆ. ಆದರೆ ನಮ್ಮನ್ನು ಬಿಟ್ಟು ನೀ ಹೋದೆ ಎಲ್ಲಿಗೆ?

**

ಶಿರದಿಂದ ಹರಿವ ನೀರು, ನನ್ನ ಕಣ್ಣೀರನ್ನೂ ತನ್ನೊಡನೆ ಸೇರಿಸಿಕೊಂಡು ಬಚ್ಚಲಿನತ್ತ ಧಾವಿಸಿತು.
ಜೀವವಿದ್ದಿದ್ದರೆ, ’ಇದೆಷ್ಟನೇ ಬಾರಿಯೋ ನನ್ನೊಡಲಲ್ಲಿ ನಿನ್ನ ಕಣ್ಣೀರು ಸೇರುತ್ತಿರುವುದು’ ಎಂಬ ವಿಷಾದ ನಗೆಯೊಂದನು ಬೀರುತ್ತಿತ್ತೇನೋ ಈ ಬಚ್ಚಲು?

Friday, February 5, 2010

ಇಂದೂ ಕಾಡಿದೆ ಅಮ್ಮನ ನೆನಪು !

ಇಂದೂ ಕಾಡಿದೆ ಅಮ್ಮನ ನೆನಪು

ಇಂದು ನನ್ನ ಹುಟ್ಟುಹಬ್ಬ. ಕೇಕ್ ಕತ್ತರಿಸುವ ವಯಸ್ಸಲ್ಲ ... ನನಗಾಗಿ ಜನರು ಸಿಹಿ ಹಂಚುವಷ್ಟು ದೊಡ್ಡ ಮನುಷ್ಯನೂ ನಾನಲ್ಲ. ಹೊಟ್ಟೆಪಾಡಿಗಾಗಿ ಹೊರದೇಶದಲ್ಲಿ ನೆಲೆಸಿರುವ ಭಾರತೀಯ ನಾನು. ಶವರ್’ನಿಂದ ಧುಮ್ಮಿಕ್ಕುತ್ತ ನೀರು ತಲೆಯ ಮೇಲೆ ಬೀಳುತ್ತಿದ್ದಂತೆ, ಮನಸ್ಸು ನೆನಪುಗಳ ಸಾಗರಕ್ಕೆ ಧುಮುಕಿತು.

**

ಅಂದೂ, ನನ್ನ ಹುಟ್ಟುಹಬ್ಬದ ದಿನ.

ಭಾರತದಲ್ಲೀಗ ಸಂಜೆಯ ಸಮಯ. ಬೆಳಗಿನ ಕಾಫೀ ಹೀರುತ್ತ ಕರೆ ಮಾಡಿದೆ. ಅಮ್ಮನ ದನಿ ಮೂಡಿ ಬಂತು. ನನ್ನ ಕರೆಗೇ ಕಾದಿದ್ದರೆಂದು ತಿಳಿದಿತ್ತು. ಲವಲವಿಕೆಯ ದನಿ ಕೇಳಿ ಸಂತಸವಾಯ್ತು. ಫೋನಿನಲ್ಲೇ ಆಶೀರ್ವಾದ ಪಡೆದೆ. ಉಭಯ ಕುಶಲೋಪರಿಯ ಮಾತುಕಥೆಗಳಾದ ಮೇಲೆ ’ಸದ್ಯಕ್ಕೆ ಬರಲು ಆಗುವುದಿಲ್ಲ ಅಲ್ಲವೇ?’ ಎಂದು ಕೇಳಿದರು.

ಕಳೆದ ವರ್ಷ ಹೋಗಿ ಬಂದಿದ್ದೆ. ಇಲ್ಲಿ ನನ್ನ ಕೆಲಸ ಕಾರ್ಯದ ಬಗ್ಗೆ ಚೆನ್ನಾಗಿ ಅರಿವಿದ್ದ ಅಮ್ಮ, ಸಾಮಾನ್ಯವಾಗಿ ಕೇಳದ ಈ ಪ್ರಶ್ನೆ ಧಿಡೀರನೆ ಇಂದೇಕೆ ಕೇಳಿದರು ಎಂದು ಅರ್ಥವಾಗಲಿಲ್ಲ. ಇಂತಹ ಪ್ರಶ್ನೆಯನ್ನು ನನ್ನಂತೆ ಹೊರದೇಶದಲ್ಲಿ ನೆಲೆಸಿರುವವರೆಲ್ಲರೂ ಒಂದಲ್ಲಾ ಒಂದು ರೀತಿ ಕೇಳಿಯೇ ಇರುತ್ತಾರೆ. ಥಟ್ಟನೆ ಬೇರೇನೂ ಹೇಳಲಾಗದೆ ಇದ್ದುದರಿಂದ "ಪ್ರಯತ್ನ ಪಡುತ್ತೇನೆ" ಎಂದು ಮಾತ್ರ ಹೇಳಲು ಸಾಧ್ಯವಾಯಿತು. "ನೋಡಬೇಕು ಅನ್ನಿಸಿತು ಅದಕ್ಕೇ ಕೇಳಿದೆ. ತೊಂದರೆ ಮಾಡಿಕೊಳ್ಳಬೇಡ" ಅಂದರು.

ಹತ್ತು-ಹದಿನೈದು ನಿಮಿಷಗಳು ನೆಡೆದ ಆ ಕರೆ ... ನನ್ನ ಹುಟ್ಟುಹಬ್ಬದ ದಿನದಂದು ಮಾಡಿದ ಆ ಕರೆ.... ಅಮ್ಮನೊಡನೆ ನೆಡೆಸಿದ ಕೊನೆಯ ಸಂವಾದದ ಕರೆ ಎಂದು ನನಗೆ ಅರಿವಾಗುವುದರ ಹೊತ್ತಿಗೆ ಕಾಲ ಮಿಂಚಿತ್ತು.

"ಪ್ರಯತ್ನ ಮಾಡುತ್ತೇನೆ" ಎಂದು ನಾನು ನುಡಿದ ಮಾತುಗಳು ಆ ಸಮಯಕ್ಕೆ ಸಮಾಧಾನಕ್ಕಾಗಿ ನುಡಿದದ್ದೇ ಆದರೂ ಅಮ್ಮ ನನ್ನನ್ನು ಕರೆಸಿಕೊಂಡಿದ್ದರು. ಆದರೆ ಈ ಬಾರಿ ಸ್ವಾಗತಿಸಲು ಆ ಹೆತ್ತೊಡಲು ಇರಲಿಲ್ಲ.

ಸಾಯುವ ಕಾಲಕ್ಕೆ ಎಲ್ಲರೂ ದಶರಥರೇ?

---

ಕೆಲ ಸಮಯದಿಂದ ಅಮ್ಮನ ಆರೋಗ್ಯದಲ್ಲಿ ಏರಿಳಿತ ಇತ್ತು. ಮೂರು ದಿನಗಳಿಗೊಮ್ಮೆ ಕರೆ ಮಾಡಿ ಆರೊಗ್ಯ ವಿಚಾರಿಸುವುದು ಹೆಚ್ಚು ಕಮ್ಮಿ ಈ ನಡುವಿನ ಪರಿಪಾಠ. ಔಷದಿ-ಪಥ್ಯ ಚೆನ್ನಾಗಿ ನೆಡೆಯುತ್ತಿದೆ, ಆರೋಗ್ಯ ಸುಧಾರಿಸುತ್ತಿದೆ ಎಂದು ತಿಳಿದಾಗ ಏನೋ ನೆಮ್ಮದಿ.

ಆದರೆ, ಆರೋಗ್ಯದ ವಿಚಾರದಲ್ಲಿ ಸಂಪೂರ್ಣ ಮಾಹಿತಿ ಸಿಗದೆ ’ಎಲ್ಲ ಚೆನ್ನಾಗಿದ್ದೀವಿ’ ಎಂದೇ ಕೇಳಲ್ಪಡುವ ಈ ಪರಿ, ಹೊರದೇಶದಲ್ಲಿರುವ ಭಾರತೀಯರಿಗೆಲ್ಲ ಕಟ್ಟಿಟ್ಟಬುತ್ತಿ. ನಾನೇನೂ ಅದಕ್ಕೆ ಹೊರತಲ್ಲ.

ಮುಂದಿನ ಕೆಲದಿನಗಳಲ್ಲಿ ಮತ್ತೊಮ್ಮೆ ಕರೆ ಮಾಡಿದೆ. ಅನಾರೋಗ್ಯ ಹೆಚ್ಚಿ ಅಮ್ಮನನ್ನು ಆಸ್ಪತ್ರೆಗೆ ಸೇರಿಸಿದ್ದರು. ಈ ಹಿಂದೆ ಒಂದೆರಡು ಬಾರಿ ಹೀಗೇ ಆಗಿದ್ದರಿಂದ ಆತಂಕ ಪಡುವುದೇನೂ ಇಲ್ಲ ಎಂಬ ವಿಷಯ ತಿಳಿದು ಸದ್ಯಕ್ಕೆ ಸಮಾಧಾನ ಅನ್ನಿಸಿದರೂ, ಮನ ನುಡಿದದ್ದು ಹೃದಯ ಒಪ್ಪಲಿಲ್ಲ. ಹೋಗಿ ನೋಡಿಕೊಂಡು ಬರಬೇಕೆಂದು ಅನ್ನಿಸುತ್ತಿತ್ತು.

ಭಾನುವಾರ ಬೆಳಿಗ್ಗೆ, ಇನ್ನೂ ಹಾಸಿಗೆಯಲ್ಲಿರುವಂತೇ, ಊರಿಂದ ಕರೆ ಬಂತು. "ಸಾಧ್ಯವಾದಷ್ಟು ಬೇಗ ಹೊರಟು ಬರಲು ಸಾಧ್ಯವೇ?" ಎಂಬ ಸಂದೇಶ ಹೊತ್ತ ಆ ಕರೆ, ನಿದ್ದೆ ಹೆಂಚು ಹಾರಿ ಹೋಗುವಂತೆ ಮಾಡಿತ್ತು.

ಹಿಂದಿನ ದಿನವಿಡೀ ಕೋಮಾದಲ್ಲೇ ಇದ್ದರೆಂದು ತಿಳಿಯಿತು. ಕಾಫೀ ಪ್ರಿಯಳಾದ ಅಮ್ಮನಿಗೆ ಅಂದು ಕಾಫಿ ಬೇಕಿರಲಿಲ್ಲವಂತೆ ! ಯಾರೊಂದಿಗೂ ಮಾತು ಬೇಕಿರಲಿಲ್ಲವಂತೆ !!

ಇಹಲೋಕದ ಬಂಧನ ಕಳಚಿಕೊಂಡು ಪರಲೋಕದ ಹಾದಿ ತುಳಿಯುವಾಗ ವ್ಯಾಮೋಹ ಕಡಿಮೆಯಾಗುತ್ತದಂತೆ.

ಅಮ್ಮನ ಪ್ರಾಣ ಹೋಗುವ ಮುನ್ನ ನಾನಲ್ಲಿಗೆ ಹೋಗುವ ಸಾಧ್ಯತೆ ಎಷ್ಟು? ಇನ್ನೊಮ್ಮೆ ಮಾತನಾಡಲು ಅವಕಾಶ ದೊರಕೀತೇ?

ಮೊಬೈಲ್’ಗೆ ಕರೆ ಮಾಡಿ ಕೇಳಿದೆ. ಹೋಗುತ್ತಿರುವ ಜೀವ ತಡೆಯುವವರು ಯಾರೂ ಇಲ್ಲದಿದ್ದುದರಿಂದ, ಮೊಬೈಲನ್ನು ಸ್ಪೆಷಲ್ ವಾರ್ಡಿಗೆ ಒಯ್ಯಲು ತಡೆಯುವ ಅವಶ್ಯಕತೆ ಇಲ್ಲವೆಂದು ಡಾಕ್ಟರ್ ತಿಳಿಸಿದ್ದರು.

ನನ್ನ ಕರೆಯನ್ನು ಅಲ್ಲಿನವರು ಅಮ್ಮನ ಕಿವಿಗೆ ಹಿಡಿದರು ! ನಾನಿಲ್ಲಿಂದ ’ಅಮ್ಮಾ’ ಎಂದು ಕೂಗುತ್ತಾಲೇ ಇದ್ದೆ !!

ಕಾಲನ ಕರೆಗೆ ಓಗೊಡುತ್ತಿದ್ದ ಆ ಜೀವಕ್ಕೆ, ನನ್ನ ಕರೆ ತಿಳಿಯಲೇ ಇಲ್ಲ. ನನ್ನ ಕೂಗು ಕೇವಲ ಅರಣ್ಯರೋದನವಾಗಿತ್ತು !

ಫೋನಿನಿಂದ ಬಂದ ಕೀರಲು ದನಿ ಕೇಳಿ ನೋಡಿದರೆ Signal Faded. ಎಂತಹ ಕಾಕತಾಳೀಯ ?

ಆಗಲೇ ಮಧ್ಯಾನ್ನ ಘಂಟೆ ಹನ್ನೆರಡಾಗಿತ್ತು. ಮರುದಿನ ಹೊರಡುವುದಕ್ಕೇ ಟಿಕೆಟ್ ಬುಕ್ ಮಾಡಿಸಿದೆ. ಚೆಕ್-ಇನ್ ಮಾಡುವ ಗೋಜು ಬೇಡವೆಂದು ಒಂದು ಚಿಕ್ಕ ಸೂಟ್ ಕೇಸನ್ನು ಸಿದ್ದಪಡಿಸಿಕೊಂಡೆ. ಮರುದಿನ ಆಫೀಸಿಗೆ ಹೋಗಿ ವಿಷಯ ತಿಳಿಸಿ, ರಜೆ ಹಾಕಿ ಮಧ್ಯಾನ್ನ ಹೊರಟೆ. ಸಂಜೆ ಆರಕ್ಕೆ ವಿಮಾನ ಬಾನಿಗೆ ಚಿಮ್ಮಿತು.

ಬೆಂಗಳೂರಿನಲ್ಲಿಳಿದು ಬಂಧು ಜನ ತಂದಿದ್ದ ಕಾರಿನಲ್ಲಿ ಮನೆ ತಲುಪಿದೆ. ಎಲ್ಲೆಡೆ ನೀರವತೆ ಹರಡಿತ್ತು. ನನ್ನ ಮನ ಕೂಗಿ ಕೂಗಿ ಹೇಳುತ್ತಿದ್ದರೂ ಕೊನೆ ಆಸೆಯಿಂದ ಕೇಳಿದೆ ’ಈಗಲೇ ಆಸ್ಪತ್ರೆಗೆ ಹೋಗಿ ನೋಡಿಕೊಂಡು ಬರೋಣವೇ’ ಎಂದು

"ಈಗ ಹೋದರೂ ಪ್ರಯೋಜನವಿಲ್ಲ. ಬಾಡಿ ಎಂಟು ಘಂಟೆಗೆ ಕೊಡ್ತಾರೆ" ಎಂಬ ವಿಷಯ ತಿಳಿಯಿತು!

ಅಮ್ಮ ನಮ್ಮೆಲ್ಲರನ್ನೂ ಬಿಟ್ಟು ದೂರವಾಗಿ ಹಲವಾರು ಘಂಟೆಗಳೇ ಕಳೆದುಹೋಗಿದ್ದವು!!

ಮನಸ್ಸಿಗೆ ಬಹಳ ಹಿಂಸೆಯಾಯಿತು. ಉಸಿರಾಡುವ ತನಕ ಇರುವ ಐಡೆಂಟಿಟಿ ಉಸಿರು ನಿಂತ ತಕ್ಷಣ ಬರೀ ’ದೇಹ’, ’ಬಾಡಿ’ ಅಂತ ಕರೆಸಿಕೊಳ್ಳುತ್ತಲ್ಲ ಎಂದು.

’ನೋಡಬೇಕು’ ಅಂತ ಬಯಸಿದೆಯೆಲ್ಲಮ್ಮ .. ನಾನಂತೂ ಬಂದೆ. ಆದರೆ ನಮ್ಮನ್ನು ಬಿಟ್ಟು ನೀ ಹೋದೆ ಎಲ್ಲಿಗೆ?

**

ಶಿರದಿಂದ ಹರಿವ ನೀರು, ನನ್ನ ಕಣ್ಣೀರನ್ನೂ ತನ್ನೊಡನೆ ಸೇರಿಸಿಕೊಂಡು ಬಚ್ಚಲಿನತ್ತ ಧಾವಿಸಿತು.

ಜೀವವಿದ್ದಿದ್ದರೆ, ’ಇದೆಷ್ಟನೇ ಬಾರಿಯೋ ನನ್ನೊಡಲಲ್ಲಿ ನಿನ್ನ ಕಣ್ಣೀರು ಸೇರುತ್ತಿರುವುದು’ ಎಂಬ ವಿಷಾದ ನಗೆಯೊಂದನು ಬೀರುತ್ತಿತ್ತೇನೋ ಈ ಬಚ್ಚಲು?

ನಡುಗಿತು ಭೂಮಿ ಹೈಟಿಯಲ್ಲಿ

ನಡುಗಿತು ಭೂಮಿ ಹೈಟಿಯಲ್ಲಿ

ಹತ್ತು ಘಂಟೆ ರಾತ್ರಿಯಲ್ಲಿ

ಮೊರೆಯಿಡುತಿಹರು ಸಹಾಯದ ಹಸ್ತಕ್ಕಾಗಿ

ಕಾಣದೆ ಹೋದ ತಮ್ಮ ಬಂಧು ಮಿತ್ರರಿಗಾಗಿ

ರಕ್ಷಣೆಗೆ ಬಂದವರ ಮನದಲ್ಲಿ ಮೂಡಿದ್ದೇನು ?

ಉಳಿದಿರುವವರ ಬದುಕಿಸಲೇನು, ಬದುಕಿರುವವರ ಉಳಿಸಲೇನು?

ಬೀದಿ ಬೀದಿಗಳಲಿ ರಾಶಿ ರಾಶಿ ಹೆಣಗಳು

ಎತ್ತ ನೋಡಿರತ್ತ ಮುರಿದು ಬಿದ್ದ ಮನೆಗಳು

ಉಣ್ಣಲು ಅನ್ನವಿಲ್ಲ, ಕುಡಿಯಲು ನೀರಿಲ್ಲ ತಲೆ ಮೇಲೆ ಸೂರಿಲ್ಲ

ಮಲಗಲು ಸ್ಥಳವಿಲ್ಲ ಹೆಣಗಳು ತಲೆದಿಂಬು ಆಗಲಾರದಲ್ಲ

ಊಟ, ನೀರು, ಔಷದಿಗಳು ಹರಿದು ಬರುತ್ತಿದೆ

ದುಸ್ತರವಾಗಿದೆ ವಿಮಾನ ಇಳಿಯಲು ಸ್ಥಳವಿಲ್ಲದೆ

ಬಂದು ಸೇರಿದ ಅನ್ನಕ್ಕಾಗಿ ನೆಡೆದಿದೆ ಪೈಪೋಟಿ

ಮಾರಾಮಾರಿ ತಡೆಯಲು ಅವರು ಎತ್ತಿದರೋ ಲಾಠಿ

ಗಂಡು, ಹೆಣ್ಣು ಭೇದವಿಲ್ಲ ಮುನಿದರೆ ಪರಿಸರ

ಧರೆ ನಡುಗಿ ಕಳಚಿ ಬಿದ್ದಿದೆ ಅವರ ಜೀವನಾಧಾರ

ಎಲ್ಲ ಕಳಕೊಂಡು ಮಾಡೋದೇನಿದೆ, ಹೊಟ್ಟೆಗೂ ಇಲ್ಲದೆ

ಊರ ಬಿಟ್ಟು ಹೋಗಲಾಗೋದಿಲ್ಲ ಕೈಯಲ್ಲಿ ಕಾಸು ಇಲ್ಲದೆ

ಊಟ, ವಸತಿ, ಬಟ್ಟೆಗಾಗಿ ಕಿತ್ತಾಡ್ತಿದ್ರೆ ಹೈಟಿಯಾ ಜನ

ಕ್ರೂಸ್ನಲ್ ನಿಂತ್ಕೊಂಡ್ ಕಾಕ್ಟೈಲ್ ಕುಡ್ಕೊಂಡ್ ನೋಡ್ತಿದ್ರು ಆ ಜನ

ಎಲ್ಲೆಡೆ ನೆಡೆದಿದೆ ಇಂದು ಭರಾಟೆ ’ಪರಿಹಾರ ನಿಧಿ’

ಮೋಸದ ಜಾಲದ ಬಲೆಗೆ ಬಿದ್ದಲ್ಲಿ ಅದು ನಿಮ್ಮ ದುರ್ವಿಧಿ

ಉಸುರಿದರಾರೋ ಪ್ರಳಯಕ್ಕಿನ್ನೂ ಇದೆಯೆಲ್ಲ ಎರಡು ವರ್ಷ?

ಕಾಯ್ಬೇಕೇಕೆ ಅಲ್ಲೀವರೆಗೂ ಆಗ್ತಿರೋದೇನು ಪ್ರತೀ ವರ್ಷ?

ಜೀವನದಲ್ಲಿ ದುಡ್ಡೇ ಎಲ್ಲ ಅಲ್ಲ!

ಕೆಲವರಿಗೆ ಎಷ್ಟು ಬಡ್ಕೊಂಡ್ರೂ ಅರ್ಥವೇ ಆಗೋಲ್ಲ !!

ಶುದ್ದ ಭಾನುವಾರ ಬೆಳಿಗ್ಗೆ ಕಾಫೀ ಹೀರುತ್ತ ಕಿಟಿಕಿಯಿಂದ ಹೊರಗೆ ಕಣ್ಣು ಹಾಯಿಸಿದಾಕ್ಷಣ ಕಣ್ಣಿಗೆ ಬಿದ್ದದ್ದು ಸುಬ್ಬಣ್ಣನ ಬರುವಿಕೆ ! ಕನಿಷ್ಟ ಇನ್ನೊಂದು ಘಂಟೆ ಅವನಿಗೆ ಉಪದೇಶ ಮಾಡಬೇಕು.

"ಸುಬ್ಬೂ, ಜೀವನದಲ್ಲಿ ದುಡ್ಡೇ ಎಲ್ಲ ಅಲ್ಲ !" ಅನ್ನೋ ಮಾತನ್ನ ನಾನು ಈ ಸುಬ್ಬಣ್ಣನಿಗೆ ಎಷ್ಟು ಸಾರಿ ಹೇಳಿದ್ದೀನೋ ಗೊತ್ತಿಲ್ಲ. ಹಲವಾರು ಉದಾಹರಣೆ ಕೊಟ್ಟು ಹೇಳಿದ್ದೀನಿ ಕೂಡ. ನಿಮ್ಮೊಂದಿಗೂ ಹಂಚಿಕೊಳ್ಳುತ್ತೇನೆ ನೋಡಿ ...

ಎಷ್ಟು ದುಡ್ಡಿದ್ದರೇನು ಹೋದ ಮಾನ ತಿರುಗಿ ಬರುವುದೇ ಟೈಗರ್ ವುಡ್ಸ್’ಗೆ ? ಇವತ್ತು ಜನರಿಗೆ ಮುಖ ತೋರಿಸಲಾಗದೆ ಎಲ್ಲಿ ಅಡಗಿ ಕುಳಿತಿದ್ದಾನೋ ಏನೋ? ಇವನ ಹಿಂದೆ ಬಿದ್ದಿದ್ದ ಜಾಹೀರಾತು ಕಂಪನಿಯವರೆಲ್ಲ ಇಂದು ಅವನ ಕೈ ಬಿಟ್ಟು ದೂರ ಹೋಗಿದ್ದಾರೆ.

ಯಾವುದೋ ಸ್ಕೀಮಿನಲ್ಲಿ ಐವತ್ತು ಬಿಲಿಯನ್ ಡಾಲರ್ ನುಂಗಿ ಹಾಕಿದ ಮ್ಯಾಡಾಫ್ ಇಂದು ಜೈಲಿನಲ್ಲಿ ಬಿದ್ದಿದ್ದಾನೆ. ಛಾಪ ಕಾಗದ ಹಗರಣದ ತೆಲಗಿ, ಶೇರು ಪೇಟೆ ಹಗರಣದ ಹರ್ಷದ್ ಮೆಹತ, ಹಣ ದುಪ್ಪಟ್ಟು ಮಾಡುವ ವಿನಿವಿಂಕ್ ಶಾಸ್ತ್ರಿ, ಹೀಗೆ ಉದಾಹರಣೆ ಕೊಡ್ತಾ ಹೋದರೆ ಲೇಖನ ಪೂರ್ತಿ ಸಹಸ್ರ ನಾಮಾವಳಿ ಆಗುತ್ತದೆಯೇ ವಿನಹ ಬೇರೇನೂ ಉಪಯೋಗವಿಲ್ಲ. ’ದುಡ್ಡೇ ಎಲ್ಲ’ ಎಂಬಂತೆ ಇನ್ನೊಬ್ಬರಿಗೆ ನಾಮಾ ಹಾಕಿ ಅವರಿಗೂ ಬೋಳಿಸಿ, ತಾವೂ ಅನುಭವಿಸದೆ ಜೈಲಿನಲ್ಲಿ ಬಿದ್ದು ಕೊನೆಗೆ ಯಾರಿಗೂ ಬೇಡದಂತೆ ನೆಗೆದುಬಿದ್ದು ಹೋಗಿರುವ ಹಲವಾರು ಮಂದಿ ಇದ್ದಾರೆ.

ಸುಬ್ಬನಿಗೆ ಹೇಳಿದ್ದೆ ’ನೋಡು ಸುಬ್ಬು, ಎಷ್ಟೇ ದುಡ್ಡಿದ್ದರೂ ಹೋದ ಮನುಷ್ಯನ ಜೀವ ತಿರುಗಿ ಬರುತ್ತಾ? ನೀನು ದುಡ್ಡಿನ ಪಾರ್ಟಿ ಇರಬಹುದು ಆದರೆ ಹೋದ ನಿಮ್ಮ ಅಪ್ಪ-ಅಮ್ಮನ ಜೀವ ಕೊಡೋಕ್ಕೆ ಸಾಧ್ಯಾನಾ? ಅಮ್ಮನ ಪ್ರೀತಿ, ವಾತ್ಸಲ್ಯ, ಅಪ್ಪನ ಜವಾಬ್ದಾರಿ, ಮಗುವಿನ ಮುಗ್ದತೆ, ಹಕ್ಕಿಗಳ ಚಿಲಿಪಿಲಿ ಇವನ್ನೆಲ್ಲ ಅನುಭವಿಸಲು ಸಾಧ್ಯವಷ್ಟೇ ಆದರೆ ಕೊಂಡುಕೊಳ್ಳಲು ಸಾಧ್ಯವಿಲ್ಲಪ್ಪಾ...’

ಭಾವನೆಗಳನ್ನು ಕೊಳ್ಳಲು ಸಾಧ್ಯವಿಲ್ಲ ನಿಜ ಆದರೆ ಭಾವನೆಗಳನ್ನು ಉಂಟು ಮಾಡಬಹುದು ಅನ್ನೋದನ್ನ ತಿಳಿದುಕೋ. ಅರ್ಥವಾಗಲಿಲ್ವಾ?

ವರಮಹಾಶಯನೊಬ್ಬ ಮದುವೆಯ ಹಿಂದಿನ ದಿನ ತನಗೆ ಹತ್ತು ಲಕ್ಷ ವರದಕ್ಷಿಣೆ ಕೊಟ್ಟರೇನೇ ತಾಳಿ ಕಟ್ಟೋದು ಅಂದಾಗ ಅಥವಾ ಮಾತುಕತೆ ಸಮಯದಲ್ಲಿ ಸಿಂಪಲ್ ಆಗಿ ಮದುವೆ ಮಾಡಿಕೊಡಿ ಸಾಕು, ವರದಕ್ಷಿಣೆ ಬೇಡ ಅಂದಾಗ ಭಾವನಾ ಸ್ಪಂದನವನ್ನೇ ಸೃಷ್ಟಿ ಮಾಡಬಹುದು. ಇರಲಿ ವಿಷಯಾಂತರ ಬೇಡ. ದುಡ್ಡು ಕೊಟ್ಟಂತೆಲ್ಲಾ ಭಾವನೆಗಳು ಉಂಟಾಗುತ್ತದೆ ಅಂತ ಸಿನಿಮಾ ನಟ-ನಟಿಯರ ಅಂಬೋಣ. ಅದು ಬೇರೆ ವಿಷಯ.

ಸುಬ್ಬು ಮೇಲೆ ಹೇಳಿದ್ದಕ್ಕೆಲ್ಲ ಹೂಗುಟ್ಟಿದ್ದ ಅಂದ ಮಾತ್ರಕ್ಕೆ ಅರ್ಥವಾಗಿದೆ ಅಂತ ಅಲ್ಲ. ಇನ್ನೊಂದು ವಿಷಯ ಹೇಳಿದೆ.

ಸುಬ್ಬೂ, ಈ SMS ಕಥೆ ನಿನಗೆ ಗೊತ್ತಿರಬಹುದು. ಪ್ರತಿದಿನ ಹೊತ್ತಾಗಿ ಮನೆಗೆ ಬರುತ್ತಿದ್ದ ತಂದೆಗೆ ಸಣ್ಣ ವಯಸ್ಸಿನ ಮಗ ಕೇಳುತ್ತಾನೆ "ಅಪ್ಪ, ನಿಮಗೆ ಒಂದು ಘಂಟೆಗೆ ಎಷ್ಟು ದುಡ್ಡು ಕೊಡ್ತಾರೆ" ಅಂತ. ಅಧಿಕಪ್ರಸಂಗತನದ ಪ್ರಶ್ನೆಗೆ ಸಿಡಿಮಿಡಿಗೊಂಡ ತಂದೆ "ಅವೆಲ್ಲ ನಿನಗೇಕೆ" ಎಂದು ಕೇಳಿ ನಂತರ ತನ್ನ ಒಂದು ಘಂಟೆಯ ಕಮಾಯಿಯನ್ನು ತಿಳಿಸುತ್ತಾನೆ. ಹುಡುಗನು ತನ್ನಲ್ಲಿದ್ದ ದುಡ್ಡನ್ನು ಎಣಿಸಿದಾಗ ಅವನಲ್ಲಿ ಅಷ್ಟು ದುಡ್ಡು ಇಲ್ಲ ಎಂದು ತಿಳಿದು, ಉಳಿದ ದುಡ್ಡನ್ನು ತಂದೆಯಲ್ಲಿ ಸಾಲ ಕೇಳುತ್ತಾನೆ. ಮಗನು ಏತಕ್ಕಾಗಿ ದುಡ್ಡು ಕೇಳುತ್ತಿದ್ದಾನೆಂದು ಅರ್ಥವಾಗದೆ ತಂದೆ ಅವನನ್ನು ಬೈದು ಕಳಿಸುತ್ತಾನೆ. ಸ್ವಲ್ಪ ಹೊತ್ತಾದ ಮೇಲೆ ಮರುಕಗೊಂಡು, ಎಂದೂ ಹೀಗೆ ದುಡ್ಡು ಕೇಳದ ಮಗನ ಬಳಿ ಹೋಗಿ ಅವನು ಕೇಳಿದಷ್ಟು ದುಡ್ಡನ್ನು ಕೊಟ್ಟು "ನಿನಗೇಕೆ ಬೇಕಿತ್ತು" ಎಂದು ಕೇಳುತ್ತಾನೆ. ಸಂತಸಗೊಂಡ ಹುಡುಗ ಅಷ್ಟೂ ದುಡ್ಡನ್ನು ಸೇರಿಸಿ ಅಪ್ಪನಿಗೇ ಕೊಟ್ಟು, ’ನಾಳೆ ನನ್ನೊಂದಿಗೆ ಒಂದು ಘಂಟೆ ಕಳೆಯುವಿರಾ’ ಎಂದು ಕೇಳುತ್ತಾನೆ". ದುಡ್ಡೇ ಎಲ್ಲ ಎಂದು ತಿಳಿದಿದ್ದ ಅಪ್ಪನಿಗೆ ಮಗ ಪಾಠ ಕಲಿಸಿದ್ದ.

ಈ ಕಥೆ ಕೇಳಿ ಸುಬ್ಬಣ್ಣ ಮರುಕಗೊಂಡ .... ಆದರೆ ತಿದ್ದಿಕೊಳ್ಳಲಿಲ್ಲ !

ಇದಿಷ್ಟೂ ಹಳೆ ಸುದ್ದಿ. ಸುಬ್ಬೂಗೆ ಇನ್ನೂ ಜ್ಞ್ನಾನೋದಯವಾಗಿಲ್ಲ. ಬೆಳಿಗ್ಗೆಯೇ ವಕ್ಕರಿಸಲಿದ್ದಾನೆ! ನನ್ನ ರವಿವಾರ ಹಂತಕ !!

ಬಂದು ಕುಳಿತ ಅವನಿಗೆ ಒಂದು ಲೋಟ ಕಾಫೀ ಕೊಟ್ಟ ಮೇಲೆ ಮತ್ತೆ ನನ್ನ ಟೇಪನ್ನು ರೀವೈಂಡ್ ಮಾಡಿದೆ. ಏನೂ ಉಪಯೋಗವಾಗಲಿಲ್ಲ.

ಇನ್ನೂ ಕೆಲವು ನೀತಿ ಪಾಠಗಳನ್ನು ಹೇಳಿದೆ "ನೋಡು ಸುಬ್ಬೂ, ದುಡ್ಡೇ ಎಲ್ಲ ಅಲ್ಲ. ಸ್ನೇಹಿತರು, ಅಣ್ಣ-ತಮ್ಮಂದಿರು, ಬಂಧುಗಳ ಮಧ್ಯೆ ಬರುವ ಹಣದ ವ್ಯವಹಾರ ದ್ವೇಷಕ್ಕೂ ತಿರುಗುತ್ತದೆ. " ಎನ್ನುತ್ತ ಫುಲ್ ಶರಟಿನ ತೋಳು ಮಡಿಸಿದೆ. ಬಿಸಿ ಕಾಫೀ ಕುಡಿದಿದ್ದರಿಂದ ಸ್ವಲ್ಪ ಸೆಖೆಯಾದಂತಾಗಿ ನಾನು ತೋಳು ಮಡಿಸಿದ್ದು !

ಸುಬ್ಬು ಸ್ವಲ್ಪ ಅಧೀರನಾದಂತೆ ನನಗೆ ತೋರಿತು.

ಸುಬ್ಬು ಹಿಂಜರಿಯುತ್ತಲೇ ಕೇಳಿದ "ಅಲ್ಲ ಕಣೋ, ಅವತ್ತು ಸಿಕ್ಕಾಪಟ್ಟೆ ಅರ್ಜಂಟ್ ಇದೆ .. ಹತ್ತು ಸಾವಿರ ಕೊಟ್ಟಿರು ಅಂತ ನೀನು ಕೇಳಿದ ತಕ್ಷಣ ನಾನು ಕೊಡಲಿಲ್ವಾ? ನನ್ನ ದುಡ್ಡನ್ನ ತಾನೇ ನಾನು ವಾಪಸ್ಸು ಕೇಳ್ತಿರೋದೂ?" ಅಂದ !!

ನನಗೆ ಬೇರೆ ದಾರಿ ಇರಲಿಲ್ಲ ... ಮತ್ತೊಮ್ಮೆ ಹೇಳಿದೆ "ಸುಬ್ಬೂ, ನಿನ್ನ ಸಂಕಟ ನನಗೆ ಅರ್ಥವಾಗುತ್ತೆ. ಜೀವನದಲ್ಲಿ ದುಡ್ಡೇ ಎಲ್ಲ ಅಲ್ಲ ಕಣೋ !"

ಅಮಾವಾಸ್ಯೆಯ ಒಂದು ರಾತ್ರಿ !

ಜಮೀನ್ದಾರ ಸಿದ್ದರಾಮೇಗೌಡರು ಊರಿನ ದೊಡ್ಡ ಮನುಷ್ಯರು. ಯಾರೂ ಅವರ ಮಾತಿಗೆ ದನಿ ಎತ್ತುತ್ತಿರಲಿಲ್ಲ. ಮಾತಿನಲ್ಲಿ ಎಷ್ಟು ತೂಕವೋ ದೇಹದಲ್ಲೂ ಅಷ್ಟೇ ತೂಕ. ತಮ್ಮ ಚೇರಿನಲ್ಲಿ ಕುಳಿತು ಆಜ್ಞ್ನೆ ಹೊರಡಿಸಿದರೆಂದರೆ ಆ ಕೆಲಸ ನೆಡೆಯಿತು ಅಂತಲೇ ಅರ್ಥ. ಹೆಂಡತಿ ಶಾಂತಮ್ಮ ಹೆಸರಿಗೆ ತಕ್ಕ ಹಾಗೇ ಶಾಂತ ಸ್ವಭಾವದವರು. ಗಂಡನಿಗೆ ಎಂದೂ ಎದುರು ಆಡಿದವರಲ್ಲ. ಅದರ ಪ್ರಮೇಯವೇ ಇರಲಿಲ್ಲ ಬಿಡಿ

ಏನಿದ್ದರೇನು ಮಕ್ಕಳಿಲ್ಲ ಎಂಬ ಕೊರಗು ಅವರಿಗೆ ಇದ್ದೇ ಇತ್ತು. ಮನೆಯ ಕೆಲಸದಾಳು ಊರಿನಲ್ಲಿ ಯಾವಾಗಲೋ ಒಮ್ಮೆ ಈ ಮಾತು ಬಂದಾಗ "ಸದ್ಯ ಒಳ್ಳೇದಾಯ್ತು" ಎಂದಷ್ಟೇ ನುಡಿದು ಸುಮ್ಮನಾಗಿದ್ದ. ಇದಾದ ಎರಡು ದಿನದಲ್ಲೇ ಅವನ ಬಾಯಿ ನಿಂತು, ಏನೇನೋ ಆಗಿ ಕಣ್ಮರೆಯಾಗಿ ಹೋದ. ಈ ವಿಷಯ ಅರಿತು ಜಮೀನ್ದಾರರು ಮಮ್ಮಲ ಮರುಗಿದರು. ಅವನ ಸಂಸಾರಕ್ಕೆ ಒಂದಷ್ಟು ದುಡ್ಡು ಕೊಟ್ಟು "ಸುಮ್ಮನೆ ಜನರ ಬಾಯಿಗೆ ಬೀಳುವುದು ಏಕೆ? ನೀವುಗಳು ಬೇರೆಲ್ಲಾದರೂ ಬದುಕಿಕೊಳ್ಳಿ" ಎಂದು ಬೇರೆ ಊರಿಗೇ ಕಳಿಸಿಕೊಟ್ಟು, ಜೀವನದ ವ್ಯವಸ್ಥೆ ಮಾಡಿಕೊಟ್ಟಿದ್ದರು. ಒಳ್ಳೆಯ ಜನರ ಬಗ್ಗೆ ಅಡ್ಡ ಮಾತನಾಡಿದ ಅವನಿಗೆ ಸರಿಯಾದ ಶಾಸ್ತಿಯಾಯಿತು ಎಂದರಿತು ಜನ ಆ ವಿಷಯದ ಬಗ್ಗೆ ಮಾತನಾಡುವ ಗೋಜಿಗೇ ಹೋಗುತ್ತಿರಲಿಲ್ಲ. ಪಟ್ಟಣದಲ್ಲಿ ಅಲ್ಪ ಸ್ವಲ್ಪ ಓದಿಕೊಂಡು ಬಂದಿದ್ದ ಸೋಮನಿಗೆ ಆ ಕೆಲಸ ಸಿಕ್ಕಿತ್ತು. ಸ್ವಲ್ಪ ಓದು ಬರಹ ಬಲ್ಲವನಾದ್ದರಿಂದ ಹೊರಗಿನ ಕೆಲಸಗಳಿಗೂ ಉಪಯೋಗಕ್ಕೆ ಬರುತ್ತಿದ್ದ.

ಹೀಗೆ ಒಂದು ಅಮಾವಾಸ್ಯೆ ರಾತ್ರಿ ಪರ ಊರಿನಲ್ಲೇನೋ ಕೆಲಸ ಮುಗಿಸಿಕೊಂಡು ತನ್ನೂರಿಗೆ ವಾಪಸ್ಸು ಬರುತ್ತಿದ್ದ ಸೋಮ. ಬಹಳ ತಡವಾಗಿತ್ತು. ಗ್ರಹಚಾರಕ್ಕೆ, ಮಾರ್ಗ ಮಧ್ಯದಲ್ಲಿ ಗಾಡಿ ಸುಮ್ಮನೆ ಹಾಗೇ ಕೆಟ್ಟು ನಿಂತಿತು. ಮೊನ್ನೆ ತಾನೇ ರಿಪೇರಿಯಾಗಿ ಬಂದಿದೆ. ಟ್ಯಾಂಕಿನಲ್ಲಿ ಎಣ್ಣೆ ಇದ್ದರೂ ಇದ್ಯಾಕೆ ಕೆಡ್ತು ಎಂದು ಯೋಚಿಸತೊಡಗಿದ ಸೋಮ. ಓಬೀರಾಯನ ಕಾಲದ ಈ ಗಾಡಿ ಬಿಟ್ಟು ಬೇರೆ ಗಾಡಿ ಕೊಳ್ಳಬೇಕು ಅನ್ನೋ ಯೋಚನೆ ಬಹಳ ದಿನದಿಂದ ಇದ್ದಿದ್ದು, ಈಗ ಬಲವಾಯ್ತು.

ಪಟ್ಟಣದ ಹಾದಿಯ ರೋಡಿನಲ್ಲಿ ಹೀಗಾಗಿದ್ದಿದ್ದರೆ ಬರುವ ಯಾವುದಾದರೂ ಗಾಡಿಯವರನ್ನು ಬೇಡಿ ಹೇಗೋ ಮನೆ ಸೇರಿಕೊಳ್ಳಬಹುದಿತ್ತು. ಇದೋ ಎರಡು ಊರಿನ ಮಧ್ಯೆಯ ಕಚ್ಚಾ ರಸ್ತೆ. ಗಾಡಿ ನೂಕಿಕೊಂಡೇ ಸ್ವಲ್ಪ ದೂರ ಹೋದ ಸೋಮ. ಆ ಕಡೆ ಸ್ವಲ್ಪ ದೂರದಲ್ಲೊಂದು ಕಾರು !! ಬೆಳಿಗ್ಗೆ ನರಿ ಮುಖ ನೋಡಿರಬೇಕು ನಾನು ಎಂದುಕೊಳ್ಳುತ್ತ ಸ್ವಲ್ಪ ಹತ್ತಿರ ಹೋದರೆ ಅದು ಜಮೀನ್ದಾರರ ಕಾರು ಎಂದು ಅರಿವಾಯ್ತು.

ಅದೂ ಸರಿಯೇ ಅನ್ನಿ. ಇಂತಹ ಕಾರು ಅವರ ಬಳಿ ಅಲ್ಲದೇ ಇನ್ಯಾರ ಬಳಿ ಇರುತ್ತೆ ಈ ಊರಿನಲ್ಲಿ? ಈ ಕೆಟ್ಟಿರೋ ಗಾಡಿ ಇಲ್ಲೇ ಹಾಕಿ ಅವರೊಂದಿಗೇ ಮನೆಗೆ ಹೋದರಾಯ್ತು ಎಂದು ಅಂದುಕೊಳ್ಳುತ್ತಿರುವಾಗಲೇ ಥಟ್ಟನೆ ಮನಕೆ ಬಂದ ಆಲೋಚನೆ ಅವನನ್ನು ಅಲ್ಲೇ ನಿಲ್ಲುವಂತೆ ಮಾಡಿತು.

ದಿನವೂ ಒಂಬತ್ತಕ್ಕೆಲ್ಲ ಮಲಗೋ ಧಣಿ, ನಮ್ ಜಾಮೀನ್ದಾರರಿಗೆ ಎರಡು ಊರಿನ ಮಧ್ಯೆಯ ಈ ರಸ್ತೆಯಲ್ಲಿ ಅದೂ ಈ ಸರಿರಾತ್ರಿಯಲ್ಲೇನು ಕೆಲಸ ???
ತನ್ನ ಗಾಡಿಯನ್ನು ಅಲ್ಲೇ ಪೊದೆಯಲ್ಲಿ ತೂರಿಸಿ ಮೆಲ್ಲಗೆ ಕಾರಿನ ಬಳಿ ನೆಡೆದ ಸೋಮ. ಆಕಡೆ ಈ ಕಡೆ ನೋಡಿ ಯಾರೂ ಇಲ್ಲವೆಂದು ಖಾತ್ರಿಪಡಿಸಿಕೊಂಡು ಕಾರಿನ ಕಿಟಕಿಯಲ್ಲಿ ಬಗ್ಗಿ ನೋಡಿದ. ಮೊದಲೇ ಕತ್ತಲು, ಏನು ಕಂಡೀತು? ತಾನು ’ಇರಲಿ’ ಎಂದು ತಂದಿದ್ದ ಸಣ್ಣ ಟಾರ್ಚಿನ ಬೆಳಕಿನಲ್ಲಿ ನೋಡಿದಾಗ ಕಂಡ ದೃಶ್ಯ ಅವನನ್ನು ಬೆಚ್ಚಿ ಬೀಳಿಸಿತು. ಸೀಟಿನ ಮೇಲೆ ಸಿಗರೇಟಿನ ಪ್ಯಾಕೆಟ್ !!

ಯಜಮಾನರು ಸಿಗರೇಟ್ ಸೇದೋದನ್ನ ನಾನೆಂದೂ ಕಂಡಿಲ್ಲ ! ಇದೇನು ಹೊಸ ಅವತಾರ? ಅಥವಾ ಅವರ ಕಾರನ್ನು ಆ ಕೆಂಪು ಕಣ್ಣಿನ ಡ್ರೈವರ್ ಏನಾದ್ರೂ ತಂದಿದ್ದಾನಾ? ಕಾರಿನಲ್ಲಿ ಯಾರೂ ಇದ್ದಂತೆ ಕಾಣಲಿಲ್ಲ. ಕಾರಿನ ಇನ್ನೊಂದು ಬದಿ ಬಂದು ನೋಡಿದಾಗ ಸಣ್ಣ ಕಾಲುದಾರಿ ಗೋಚರಿಸಿತು. ಕಾರನ್ನು ಇಲ್ಲಿ ನಿಲ್ಲಿಸಿ ಈ ಕಡೆ ನೆಡೆದುಕೊಂಡು ಹೋಗಿರಬಹುದು ಎಂದು ಅನ್ನಿಸಿ, ಅದೇ ದಾರಿಯಲ್ಲಿ ತಾನೂ ನೆಡೆದ ಸೋಮ.

ಶಬ್ದ ಬರದಂತೆ ಹೆಜ್ಜೆ ಹಾಕುತ್ತ ಸ್ವಲ್ಪ ದೂರ ನೆಡೆದಂತೆ ಯಾರೋ ಇಬ್ಬರು ಮಾತನಾಡುತ್ತ ನಿಂತಿದ್ದಂತೆ ಕಂಡಿತು. ಗಕ್ಕನೆ ಹಾಗೇ ಮರಕ್ಕೆ ಒರಗಿ ನಿಂತ. ಮರದ ಮೇಲೆ ಸದ್ದಾಯ್ತು. ಕಾಲ ಕೆಳಗಿನ ಎಲೆ ಕೂಡ ಸದ್ದಾಯಿತು. ಆ ಇಬ್ಬರೂ ತಿರುಗಿ ನೋಡಿದರು. ಸ್ವಲ್ಪ ಹೊತ್ತು ಹಾಗೇ ನೋಡುತ್ತಿದ್ದವರು ಏನೂ ಇಲ್ಲ ಎನ್ನಿಸಿತೋ ಏನೋ ಇಬ್ಬರೂ ಹೊರಟರು. ಸ್ವಲ್ಪ ದೂರ ಹೋಗುತ್ತಲೇ ಸೋಮನೂ ಅವರನ್ನು ಹಿಂಬಾಲಿಸಿದ.

ಮುಂದೆ ಹೋಗುತ್ತಿದ್ದ ಇಬ್ಬರು, ಒಂದು ಪಾಳು ಬಿದ್ದ ಮನೆಯ ಮುಂದೆ ನಿಂತರು. ’ಭೂತ ಬಂಗಲೆ’ ಅದೂ ಇದೂ ಅಂತೆಲ್ಲ ಈ ಮನೆಯ ಬಗ್ಗೆ ಜನರು ಆಡಿಕೊಳ್ಳುತ್ತಿದರೂ ಸೋಮ ಅದನ್ನು ನಂಬಿರಲಿಲ್ಲ. ಮೊದಲೇ ಭೂತ-ಪ್ರೇತಗಳ ಬಗ್ಗೆ ಅವನಿಗೆ ನಂಬಿಕೆ ಇಲ್ಲ. ತನ್ನ ನಂಬಿಕೆ ಈಗ ನಿಜ ಅನ್ನಿಸಿತು ಸೋಮನಿಗೆ. ಭೂತದ ಹೆಸರಿನಲ್ಲಿ ಮನುಷ್ಯರು ಮಾಡುತ್ತಿರುವ ಮೋಸ ಇರಬೇಕು. ವಿಷಯ ತಿಳಿದುಕೊಂಡು ಜಮೀನ್ದಾರರಿಗೆ ನಾಳೇನೇ ಒಪ್ಪಿಸಬೇಕು.

ಆ ಇಬ್ಬರು, ಭೂತ ಬಂಗಲೆಯ ಬಾಗಿಲು ತೆರೆದುಕೊಂಡು ಹೋದರು. ಹಿಂದೆಯೇ ಬಾಗಿಲೂ ಮುಚ್ಚಿಕೊಂಡಿತು. ಸೋಮ ಸ್ವಲ್ಪ ಹೊತ್ತು ತಡೆದು ತಾನೂ ಆ ಮನೆಯ ಕಡೆ ನೆಡೆದ. ಬಾಗಿಲ ಬಳಿ ಬಂದು ನಿಂತ.

ಮೆಲ್ಲಗೆ ಬಾಗಿಲು ನೂಕಿದ ! ಚಿಲುಕ ಹಾಕಿರಲಿಲ್ಲ !! ಕಿರ್ ಎಂದು ಬಾಗಿಲು ತೆರೆದುಕೊಂಡಿತು. ಥತ್! ಕೆಲಸ ಕೆಟ್ಟಿತು ... ಶಬ್ದ ಆಗಬಾರದು ಅಂದುಕೊಂಡ್ರೆ ಎಂದು ಮನದಲ್ಲಿ ಬೈದುಕೊಳ್ಳುತ್ತಲೇ, ಅಡಿ ಇರಿಸಿದ ...

ಒಳಗೋ ಗಮಟು ವಾಸನೆ.

ಹಾಗೇ ಒಳ ನೆಡೆದ. ಎರಡು ಹೆಜ್ಜೆ ಇಡುತ್ತಿದ್ದಂತೆಯೇ ಬಾಗಿಲು ಮುಚ್ಚಿಕೊಂಡಿತು.

ಮೊದಲ ಬಾರಿಗೆ ಭೀತನಾದ ಸೋಮ. ಟಾರ್ಚ್ ತೆಗೆಯಲು ಜೇಬಿಗೆ ಕೈ ಹಾಕಿದ. ಖಾಲೀ !!!!! ಈಗ ತಾನೇ ಕಾರಿನ ಬಳಿ ಉಪಯೋಗಿಸಿದ್ದೆನಲ್ಲ? ಎಲ್ಲಿ ಹೋಯ್ತು ??

ಎಲ್ಲೆಲ್ಲೂ ಕತ್ತಲು. ಒಳಗೆ ಹೋಗಲೋ? ಹೊರಗೆ ಓಡಿಬಿಡಲೋ? ಮನಸ್ಸು ಹೊಯ್ದಾಟದಲ್ಲಿರುವಾಗಲೇ ದನಿಯೊಂದು ಮೂಡಿಬಂತು "ನಿನ್ನ ಟಾರ್ಚ್ ಸಿಗಲಿಲ್ವಾ ಸೋಮಾ?". ಅರ್ರೇ ! ಜಮೀನ್ದಾರರ ದನಿ !! "ಆಗ್ಲಿಂದಾನೂ ಇವನೇ ಧಣಿ ನಮ್ ಹಿಂದೆ ಬರ್ತಿದ್ದೋನು" ಅನ್ನೋ ಮತ್ತೊಂದು ದನಿ. ಓ! ಇದು ಆ ಕೆಂಪು ಕಣ್ಣಿನ ಡ್ರೈವರ್ ದನಿ.

ಹೃದಯವೇ ಬಾಯಿಗೆ ಬಂದ ಹಾಗೆ ಆಯ್ತು ಸೋಮನಿಗೆ. ಹರ ಕೊಲ್ಲಲ್ ಪರ ಕಾಯ್ವನೇ? ಏನೋ ಹೇಳಲು ಬಾಯಿ ತೆರೆದ. ಆಗ ...

---

"ಓ! ಏನ್ರಮ್ಮಾ? ಎಲ್ಲರದೂ ಊಟ ಆಯ್ತಾ? ಹೋಗ್ರೋ ಮಾಕ್ಳಾ ... ಈಗ ಎಲ್ರೂ ಮನೆಗೆ ಹೋಗಿ ಮಲಗಿಕೊಳ್ಳಿ ... ಕಥೆ ನಾಳೆ ಹೇಳ್ತೀನಿ"
ಮೂಲೆ ಮನೆ ರಿಟೈರ್ಡ್ ಶಾಲಾ ಮೇಷ್ಟ್ರು ಇಷ್ಟು ಹೊತ್ತೂ ಹೇಳ್ತಿದ್ದ ಕಥೆಯನ್ನ ಬಾಯಿ ಬಿಟ್ಟುಕೊಂಡು ಕೇಳ್ತಿದ್ರು ಮಕ್ಕಳು. ಅವರಿಗೇ ಅರಿವಿಲ್ಲದಂತೆ ಅವರ ಅಮ್ಮಂದಿರು ಇಡುತ್ತಿದ್ದ ಅನ್ನದ ತುತ್ತುಗಳನ್ನು ಒಂದರ ಮೇಲೊಂದರಂತೆ ಸ್ವಹಾ ಮಾಡುತ್ತಿದ್ದರು.

ಏನೂ ರಗಳೆ ಇಲ್ಲದೆ ಮಕ್ಕಳ ಊಟ ಆಯ್ತು ಅನ್ನೋ ಸಮಾಧಾನ ಅಮ್ಮಂದಿರಿಗೆ. ಸಂಜೆ ಹೊತ್ತು ಸ್ವಲ್ಪ ಟೈಮ್ ಪಾಸ್ ಮೇಷ್ಟ್ರಿಗೆ. ಆದರೆ ಮೇಷ್ಟರ ಪತ್ನಿ ಮಾತ್ರ "ಮಕ್ಕಳಿಗೆ ರಾಮಾಯಣವೋ ಮಹಾಭಾರತವೋ ಹೇಳೋದು ಬಿಟ್ಟು ಇಂಥಾ ಕಥೆಗಳನ್ನೇ ಹೇಳೋದೂ? ಅದೂ ಯಾವಾಗಲೂ ಇದೇ ಅರ್ಧ ಕಥೆ? ಮಕ್ಕಳು ಹೆದರಿಕೊಂಡು ಬಟ್ಟೆ ಒದ್ದೆ ಮಾಡಿಕೊಳ್ಳೋಲ್ವೇ ?" ಅಂತ ಮೂದಲಿಸಿದರು. "ಹಂಗಾದ್ರೂ ಹಾಸಿಗೆಯ ಬಟ್ಟೆ ಒಗೀತಾರೆ ಬಿಡು ಈ ಅಮ್ಮಣ್ಣೀರು. ಕಥೆ ಪೂರ್ತಿ ಹೇಳೋಕೆ ಮುಂದೆ ಎನಾಗುತ್ತೆ ಅಂತ ನನಗೇನು ಗೊತ್ತು? " ಅಂತ ಬೊಚ್ಚು ಬಾಯಿ ಬಿಟ್ಕೊಂಡು ನಗುತ್ತ ಒಳ ನೆಡೆದರು ಮೇಷ್ಟ್ರು.