Tuesday, March 31, 2015

ಮುಖದ ಮೇಲೆ ಮುಖವಾಡ

ಬೆಳ್ಳಂಬೆಳಿಗ್ಗೆ ಅಲಾರಂ ಹೊಡೆದುಕೊಳ್ಳುತ್ತಿತ್ತು ... ಯಾವುದೋ ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದ ನನಗೆ ಆ ಅಲಾರಂ ತಂಗಾಳಿಯಲ್ಲಿ ತೇಲಿಬಂದ ವೇದಮಂತ್ರದಂತೆ, ನವಿರಾದ ಕಾಲ್ಗೆಜ್ಜೆಯ ನಾದದಂತೆ, ಹಗಲಿನ ಹಕ್ಕಿಪಿಕ್ಕಿಗಳ ಹಾಡಿನಂತೆ, ಕೊಳಲ ನಾದದಂತೆ ಕೇಳಿಸಲಿಲ್ಲಾರೀ ... ಶಿವಮಣಿಯ ಡ್ರಮ್ಸ್’ನಂತೆ ತಲೆಯನ್ನು ಕುಟ್ಟಿ ಎಬ್ಬಿಸಿತ್ತು ... ಸೈಲೆನ್ಸರ್ ತೆಗೆದ ಬೈಕಿನಂತಹ ಸದ್ದು ನರನಾಡಿಯಲ್ಲಿ ನುಗ್ಗಿತ್ತು ... ಜೆಟ್ ವಿಮಾನವೊಂದು ಸುಯ್ಯ್ ಎಂದು ಎಡಗಿವಿಯಿಂದ ಹಾದು ಬಲಗಿವಿಯಿಂದ ಹೊರಬಂದಂತಾಯ್ತು ... ಅದಕ್ಕೇ ಎದ್ದೆ.

ಮಡದಿ ಒಂದೆರಡು ದಿನ ಅಂತ ಅಮ್ಮನ ಮನೆಗೆ ಹೋಗಿದ್ದಳು. ಹಾಗಾಗಿ ನಾನು, ನಾನು ಮತ್ತು ನಾನು ಅಷ್ಟೇ ನಮ್ಮ ಮನೆಯಲ್ಲಿ ! ಇನ್ನೊಂದೈದು ನಿಮಿಷ ಅಂತ ಮಲಗಿ ಒಂದು ಘಂಟೆಯ ನಂತರ ಎದ್ದ ಮೇಲಂತೂ ನಾನು ಮತ್ತು ಗಡಿಬಿಡಿ ಇಬ್ಬರೇ ... ಪ್ರತಿ ಹಲ್ಲನ್ನೂ ಅರ್ಧ ಮಾತ್ರ ಉಜ್ಜಿ ಧಡ ಧಡ ಬಟ್ಟೆ ಹಾಕಿಕೊಂಡು ಮಧ್ಯಾನ್ನ ಅಲ್ಲೇ ಏನಾದ್ರೂ ಕೊಂಡು ತಿಂದರಾಯ್ತು ಅಂತ ಹೊರಟೇ ಬಿಟ್ಟೆ.

ಗಾಡಿ ನಿಲ್ಲಿಸಿ ಒಳಗೆ ಹೋಗುತ್ತಿದ್ದಂತೆ ಗೇಟಿನ ಬಳಿ ಇದ್ದ ಗಾರ್ಡ್ ನಾಲ್ಕು ಬಾರಿ ನನ್ನನ್ನೇ ನೋಡಿದ. ಹದಿನೈದು ವರ್ಷದಲ್ಲಿ ಇಂಥಾ ಅನುಭವ ಆಗಿದ್ದು ಕೆಲಸಕ್ಕೆ ಸೇರಿದ ಮೊದಲೆರಡು ದಿನಗಳಲ್ಲಿ ಮಾತ್ರ. ಅವನು ಯಾವ ಮೂಡ್’ನಲ್ಲಿದ್ದಾನೋ ಅಂತ ನಾನೇ ಅವನನ್ನು ಹೆಸರು ಹಿಡಿದು ಕೂಗಿ ಮಾತನಾಡಿಸಿ ಮುಂದೆ ಹೋದೆ. ಬೆಳಿಗ್ಗೆಯೇ ಮೀಟಿಂಗ್ ಇದ್ದುದರಿಂದ ಮೀಟಿಂಗ್ ರೂಮಿನಲ್ಲಿ ಕೂತೇ ಕೆಲಸ ಶುರು ಮಾಡಿದ್ದೆ. ಒಬ್ಬೊಬ್ಬರಾಗಿ ಒಳಗೆ ಬಂದವರು ಎಲ್ಲಿ ಬೇಕೋ ಅಲ್ಲಿ ಆಸೀನರಾದರು. ನನ್ನ ಮುಖ ನೋಡಿ ಸುಮ್ಮನಾಗುತ್ತಿದರೇ ವಿನಹ ಕಿರುನಗೆಯೂ ಇಲ್ಲ. ಹೋಗ್ಲಿ ಬಿಡಿ, ಇವರೆಲ್ಲ ನನಗೇನು ಹೊಸಬರೇ?

ನಾನು ಕಳಿಸಬೇಕೆಂದಿದ್ದ ಈ-ಮೈಲ್ ಕೊನೇ ಹಂತದಲ್ಲಿ ಇದ್ದುದರಿಂದ ಅದನ್ನು ಮುಗಿಸಿ ನಂತರ ಮಾತು ಶುರು ಮಾಡೋಣ ಅಂತಿದ್ದೆ. ಇನ್ನೇನು ನಾನು ಎಲ್ಲರೂ ಮೀಟಿಂಗ್’ಗೆ ಬಂದದ್ದಕ್ಕೆ ಧನ್ಯವಾದ ಅರ್ಪಿಸಬೇಕು ಅನ್ನುವಷ್ಟರಲ್ಲಿ, ಇನ್ಯಾರೋ ಮಾತು ಶುರು ಮಾಡಿದರು ... "ಮಿ.ರಾವ್ ಇನ್ನೂ ಬಂದಿಲ್ಲ. ಮೀಟಿಂಗ್ ಕ್ಯಾನ್ಸಲ್ ಮಾಡಿರಬೇಕು. ಆದರೆ ನನಗೆ ಯಾವ ಈ-ಮೈಲ್ ಬರಲಿಲ್ಲ !!" ಅನ್ನುತ್ತಿದ್ದ.

ನಾನು ಒಮ್ಮೆ ಜೋರಾಗಿ ನಕ್ಕು ’ನೈಸ್ ಜೋಕ್’ ಎಂದು ಮೆಚ್ಚುಗೆ ಸೂಚಿಸಿ ಮಾತು ಶುರು ಮಾಡಿದೆ. ಇಡೀ ಮೀಟಿಂಗ್’ನಲ್ಲಿ ಜನ ನನ್ನ ಮಾತನ್ನು ಕೇಳುವುದರ ಜೊತೆ ಏನೋ ಗ್ಯಾರಂಟಿ ಮಾಡಿಕೊಳ್ಳುವವರ ಹಾಗೆ ದಿಟ್ಟಿಸಿ ನೋಡುತ್ತಿದ್ದರು.

ನಮ್ಮ ಕಛೇರಿ ದೊಡ್ಡದು. ಹಲವಾರು ಮಹಡಿಗಳ ಕಟ್ಟಡ. ಸ್ನೇಹಿತರು ಬೇರೆ ಬೇರೆ ಪ್ರಾಜಕ್ಟ್ ಎಂದು ಅಲ್ಲಿ ಇಲ್ಲಿ ಚದುರಿ ಹೋಗಿದ್ದಾರೆ. ಮಧ್ಯಾನ್ನ ಊಟಕ್ಕೆ ಕೆಫಿಟೇರಿಯಾದಲ್ಲಿ ಸಿಗುವುದು ವಾಡಿಕೆ. ಊಟದ ಸಮಯದಲ್ಲಿ ನನ್ನದೇ ಫ್ಲೋರಿನಲ್ಲಿರುವನೊಬ್ಬ ನನ್ನತ್ತ ನೋಡಿ ಹಾಗೇ ಹೊರಟು ಹೋದ. ಹೆಂಡ್ತಿ ಮೇಲಿನ ಸಿಟ್ಟನ್ನು ಮಕ್ಕಳ ಮೇಲೆ ತೋರೋ ಹಾಗೆ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಇವನಿಗೆ ಯಾರ ಮೇಲೆ ಸಿಟ್ಟೋ ನನ್ನನ್ನು ಕರೆಯದೆ ಹಾಗೇ ಹೋದ. ಊರಿಗೆ ಬಂದೋಳು ನೀರಿಗೆ ಬಾರದೇ ಹೋದಾಳೆ, ಊಟ ತಂದೋನು (ತಾರದವನೂ) ಕೆಫಿಟೇರಿಯಾದಲ್ಲಿ ಸಿಗದೇ ಹೋದಾನಾ? ಅಂದುಕೊಂಡು ಎರಡು ನಿಮಿಷದಲ್ಲಿ ನಾನೂ ಹೊರಟು ಅಲ್ಲಿಗೆ ಹೋದೆ.

ಒಂದು ನಿಮಿಷ ನನ್ನನ್ನು ಎಲ್ಲರೂ ನೋಡಿ ನಂತರ ಮಾತನಾಡಿಸಿದರು. ನನ್ನ ಫ್ಲೋರಿನವನು ’ನಿನ್ ಜಾಗದಲ್ಲಿ ಯಾರೋ ಬೇರೆಯವರು ಕೂತಿದ್ದ ಹಾಗಿತ್ತು ಅಂತ ಹೊರಟು ಬಂದೆ. ನೀನೇನಾ?" ಅಂದ. ಇದೊಳ್ಳೇ ಕಥೆಯಾಯ್ತಲ್ಲ ? ಯಾರಿಗೂ ನಾನು ನನ್ನಂತೆ ಕಾಣುತ್ತಿಲ್ಲ ! ಏನಾಯ್ತು ?

ಸಂಜೆ ಮನೆಗೆ ಹೊರಟಾಗ ಎರಡನೇ ಶಿಫ್ಟ್’ನ ಗಾರ್ಡ್ ನಿಂತಿದ್ದ, ಮಾಮೂಲಿನಂತೆ. ಎಂದಿನಂತೆ ಅವನ ಕೈಗೆ ಕೀ ಹಾಕಿ ಸುಮ್ಮನೆ ನಿಂತೆ. ಆತನೋ ಬಾಯಿಬಿಟ್ಟು ಕೇಳಿಯೇಬಿಟ್ಟ "ಸರ್, ಯುವರ್ ಬಾಡ್ಜ್ ಪ್ಲೀಸ್" ಅಂತ. ದಿನವೂ ನನಗೆ ಸಲಾಮ್ ಹೊಡೆದು. ಕೀಲಿ ತೆಗೆದುಕೊಂಡು ಗಾಡಿ ತಂದಿಡೋ ಇವನಿಗೂ ನಾನ್ಯಾರು ಅಂತ ತಿಳೀಲಿಲ್ವೇ? ಬಾಡ್ಜ್ ತೋರಿಸು ಅಂದ ಮೇಲೆ ನಿಯಮದಂತೆ ನನ್ನ ಕರ್ತವ್ಯ ಮಾಡಿದೆ. "ಸಾರಿ ಸರ್, ಗೊತ್ತಗ್ಲಿಲ್ಲ" ಅಂತಂದು ಕೀಲಿ ತೊಗೊಂಡು ಹೋದ.

ಮನೆ ಹತ್ತಿರ ಕಾರ್ ಪಾರ್ಕ್ ಮಾಡಿ ಗೇಟ್ ತೆಗೆಯಬೇಕು ಅನ್ನೊಷ್ಟರಲ್ಲಿ ಮಹಡಿ ಮೇಲೆ ಹೆಂಡ್ತಿ ದರ್ಶನ ! ನಾಳೆ ಬರೋದು ಇಂದೇ ಬಂದುಬಿಟ್ಟಳೇ ವಾವ್ ಎಂದುಕೊಂಡೂ ಮುಂದಡಿ ಇಡೋಷ್ಟರಲ್ಲಿ ನನ್ನ ಬಾಡಿಗೆ ಮನೆಯಾತ ತಂದೆ "ಯಾರು ಬೇಕಿತ್ತು?" ಅಂತ ಕನ್ನಡಕ ಒರೆಸಿಕೊಳ್ಳುತ್ತ ಕೇಳಿದರು. ಪಾಪ ಅರುಳು ಮರಳು ಅಂತ ನಕ್ಕು ಮಹಡಿ ಹತ್ತು ಹೋದೆ. ಮೂರು ವರ್ಷದಿಂದ ನೋಡಿರುವ ಇವರಿಗೂ ನಾನ್ಯಾರು ಎಂದು ಗೊತ್ತಾಗಲಿಲ್ವೇ?

ತಲೆಗೂದಲು ಸವರಿಕೊಂಡು, ಬಟ್ಟೆ ಸರಿಪಡಿಸಿಕೊಂಡು, ಮುಖದ ಮೇಲೆ ಎಂದಿನ ನಗೆ ತರಿಸಿಕೊಂಡು "ಹಾಯ್ ಸುಮಾ" ಎನ್ನುತ್ತ ಮನೆ ಬಾಗಿಲ ಬಳಿ ಸಾಗಿದೆ. ಎಲ್ಲರಂತೆ ಇವಳಿಗೂ ಮುಖ ಗುರುತು ಸಿಗದೇ ಹೋದರೂ ಕಂಠವಾದರೂ ಗುರುತು ಸಿಗಲಿ ಅಂತ. ಯಾರೋ ಆಗುಂತಕ ಅಂತ ಇವಳು ಚೀರಿ ಜನ ಸೇರಿ ನನ್ನನ್ನು ಬಡಿದು ಹಾಕಿದರೆ? ಅದನ್ನ ನೆನೆಸಿಕೊಂಡರೇ "ಅಯ್ಯಯ್ಯಪ್ಪ !" ... ಕೊನೇ ಮಾತು ನಾನು ಅಂದಿದ್ದಲ್ಲ ... "ಸುಮಾ !!"

"ಯಾಕ್ರೀ ಹಿಂಗಿದ್ದೀರಿ? ಆಫೀಸಿನಲ್ಲಿ ಮಾಡೋ ಕೆಲ್ಸ ಅಷ್ಟರಲ್ಲೇ ಇದೆ ... ಯಾಕೆ ಹಿಂಗಿದ್ದೀರಿ? ನೀವು ಮಾತಾಡದೇ ಹಾಗೇ ಬಂದು ನಿಂತಿದ್ರೆ ಹೋಗಿದ್ರೆ ಕಳ್ಳ ಅಂದುಕೊಂಡು ಬಿಡ್ತಿದ್ದೆ" ಅನ್ನೋದೇ? ... ಬುದ್ದಿ ಉಪಯೋಗಕ್ಕೆ ಬಂತು ... "ಬೆಳಿಗ್ಗೆಯಿಂದ ಇದೇ ಆಯ್ತು ... ಏನಾಗಿದ್ದೀನಿ ?"

ಹಾಗೇ ಒಂದೆರಡು ನಿಮಿಷ ನನ್ನನ್ನು ನೋಡಿ ನುಡಿದಳು ಸುಮ "ಸ್ನಾನಾ ಮಾಡಿ ಹಾಗೇ ಹೋದ ಹಾಗಿದೆ ... ತಲೆ ಸ್ನಾನ ಮಾಡಿದಾಗ ಶ್ಯಾಂಪೂ-ಕಂಡೀಶನರ್ ಹಾಕದೆ ಸುಮ್ಮನೆ ನೀರು ಹಾಕಿರೋದ್ರಿಂದ ಜಟೆ ಕಟ್ಟಿದ ಹಾಗಿದೆ ಕೂದಲು ... ಮುಖಕ್ಕೆ ಬರೀ ಸೋಪು ಹಚ್ಚಿದ್ರಿಂದ ಒಣಗಿ ಹೋಗಿದೆ ಚರ್ಮ ...ಮುಖಕ್ಕೆ ಕ್ರೀಮಿಲ್ಲ, ಪೌಡರಿಲ್ಲ .. ಕೈಗೆ moisturizer ಹಾಕಿಲ್ಲ, ಕುತ್ತಿಗೆಗೆ ಬಾಡಿ ಕ್ರೀಮ್ ಹಚ್ಚಿಲ್ಲ. ಕೊಂಕಳಿಗೆ Deodorant ಸುಳಿದೇ ಇಲ್ಲ. ಹಲ್ಲುಗಳು ಭಾಗಶಹ ಬೆಳ್ಳಗಿದ್ದು ಹೆಚ್ಚುವರಿ ಹಳದಿ ಇದೆ, ಸೋ  ದಯವಿಟ್ಟು ತುಟಿಗಳನ್ನ ಲಾಕ್ ಮಾಡಿಕೊಳ್ಳಿ. ನಾನಿಲ್ಲ ಅಂತ ಬಟ್ಟೆಗೆ ಇಸ್ತ್ರಿ ಇಲ್ಲ. ಸದ್ಯಕ್ಕೆ ನನಗೆ ಇಷ್ಟೇ ತೋಚಿದ್ದು" ...

ಇಷ್ಟು ಸಾಲದೇ ? ಬೆಳಿಗ್ಗೆ ಬೆಳಿಗ್ಗೆ ಮೀಟಿಂಗ್ ಅಂತ ಲೇಟಾಗಿ ಎದ್ದ ನಾನು ಎದ್ದುಬಿದ್ದು ಹಲ್ಲುತಿಕ್ಕಿ, ಸ್ನಾನ ಮಾಡಿ ಓಡಿದ್ದೇ ದೊಡ್ಡದು. ಇನ್ನು ಇಷ್ಟೆಲ್ಲಾ ವೈಭೋಗಕ್ಕೆ ಟೈಮು ಎಲ್ಲಿತ್ತು ?

ಓ! ಹಾಗಿದ್ರೆ ವಿಷಯ ಇದು ...

ಹಲವು ಮ್ಯಾಗಜೀನ್’ಗಳಲ್ಲಿ "ತೆರೆಯ ಮೇಲಿನ ನಿಮ್ಮ ಗ್ಲ್ಯಾಮರಸ್ ಹೀರೋಯಿನ್ ನಿಜ ಜೀವನದಲ್ಲಿ ’ರಸ್’ ಇಲ್ಲದೆ ಹೀಗಿರುತ್ತಾರೆ" ಎಂದು ಎರಡು ಚಿತ್ರಗಳು ಹಾಕಿರುವ ನೆನಪು ಬಂತು. ತೆರೆಯ ಮೇಲೆ ಹೃದಯ ಕದ್ದ ಚೋರಿ ನಿಜ ಜೀವನದಲ್ಲಿ ಮುಸುರೆ ತೊಳೆಯುವ ಹಾಗೆ ಇರುತ್ತಾಳೆ ಅಂತ ತೋರಿಸುವುದು ಉದ್ದೇಶವೋ ಅಥವಾ ತೆರೆಯ ಮೇಲೆ ನೋಡಿದ್ದೆಲ್ಲ ನಿಜವಲ್ಲ ಎಂದು ಅರಿವು ಮೂಡಿಸುವುದು ಉದ್ದೇಶವೋ ಗೊತ್ತಿಲ್ಲ ...

ನನಗೂ ಈಗ ಸೆಲೆಬ್ರಿಟಿ ಆದೆ ಹಾಗೆ ಅನ್ನಿಸಿದೆ. ಅಲ್ಲದೇ ಇಷ್ಟು ದಿನ ನನ್ನನ್ನು ಜನ ಗುರುತಿಸುತ್ತ ಇದ್ದದ್ದು ನನ್ನನ್ನಲ್ಲ ಬದಲಿಗೆ ನಾ ಹೊತ್ತ ಮುಸುಕಿಗೆ ಅಂತಾಯ್ತು ! ಪ್ರತಿ ದಿನವೂ ಹೊರಗೆ ಹೋಗುವ ಮುನ್ನ ನಮ್ಮ ಮುಖದ ಮೇಲೆ ಮುಖವಾಡ ಹೊತ್ತೇ ಸಾಗುವ ನಾವು ನೈಜವಾಗಿ ಹೋದರೆ ಜನರಿಗೆ ಗುರುತು ಹತ್ತುವುದಿಲ್ಲ ಅನ್ನೋದು ಸತ್ಯವೇ ...

ನಾವು, ಅಂಗಡಿಯಲ್ಲಿ ’ಥಳಥಳ’ ಹೊಳೆವ ಆಪಲ್’ಗಳ ಹಾಗೆ. ಗಿಡದಲ್ಲಿರುವ ತಾಜ ಸೇಬಿನ ಹಣ್ಣಿನ ಮೇಲೆ ಪ್ರಕೃತಿದತ್ತವಾದ ಮೇಣವಿರುತ್ತದೆ. ಹಣ್ಣನ್ನು ಕಿತ್ತು ಉಜ್ಜಿದಾಗ ಫಳ ಫಳ ಹೊಳೆಯುತ್ತದೆ. ನೀರಿನಲ್ಲಿ ತೊಳೆದರೆ ಕಳಾಹೀನವಾಗುತ್ತದೆ. ಹಣ್ಣಿಗೆ ಮತ್ತೊಮ್ಮೆ ಮೇಣವನ್ನು ಲೇಪಿಸಿದಾಗಲೋ ಅಥವಾ ಶೆಲ್ಲಾಕ್’ಅನ್ನು ಸ್ಪ್ರೇ ಮಾಡಿದಾಗಲೋ ಅವು ಹೊಳಪನ್ನು ಪಡೆಯುತ್ತದೆ. ನಿಮಗೆ ತಿಳಿದಂತೆ ಇವು ನೈಸರ್ಗಿಕವಲ್ಲ ಬದಲಿಗೆ ರಾಸಾಯನಿಕ. ಥಳಗುಟ್ಟದೆ ಹೋದರೆ ಬೆಲೆ ಎಲ್ಲಿ. ಸೇಬಿನ ಹಣ್ಣಿಗೂ ನಮ್ಮ ಮುಖಕ್ಕೂ ಹೆಚ್ಚು ವ್ಯತ್ಯಾಸವಿಲ್ಲ ಅಲ್ಲವೇ?

ಮೇಣವನ್ನು ತೊಳೆದ ಸೇಬು ಹಾಗೇ ಇರಿಸಿದಲ್ಲಿ ಬೇಗ ಹಾಳಾಗುತ್ತದೆ. ತೊಳೆದ ಮುಖಕ್ಕೆ ರಾಸಾಯನಿಕ ಲೇಪನ ಬಳಿದುಕೊಳ್ಳದೇ ಹೋದರೆ ಮುಖವೂ ಕಳೆಗುಂದುತ್ತದೆ. ಮೇಣ ಅಥವಾ ಸ್ಪ್ರೇ ಬೇಕೋ ಬೇಡವೋ? ನಿಮ್ಮ ಮುಖಕ್ಕೆ ಅಲಂಕಾರ ಬೇಕೋ ಬೇಡವೋ?

ಕೊನೇ ಟಚ್: ಸಿನಿಮಾದಲ್ಲಿನ ಗ್ಲ್ಯಾಮರಸ್ ಹೀರೋಯಿನ್ ನಿಜಕ್ಕೂ ಕಾಣೋದು ಹೀಗೆ ಅಂತಾರಲ್ಲ, ಹಿಂದಿನ ದಿನ ರಾತ್ರಿಯ ನಾಟಕದಲ್ಲಿ ಭೀಮನ ಪಾತ್ರ ನಿರ್ವಹಿಸಿದ್ದೆ ಅಂತ ಹೋದೆಡೆಯಲ್ಲೆಲ್ಲ ಗದೆ ಹೊತ್ತುಕೊಂಡೇ ತಿರುಗೋಕ್ಕಾಗುತ್ತಾ? ಕೊಂಚ ಯೋಚಿಸುವ ವಿಷಯವೇ, ಅಲ್ಲವೇ?

ಇಂದಿಗಿಂತ ಅಂದೇನೇ ಚೆಂದವೂ !

ಇಂದಿಗಿಂತ ಅಂದೇನೇ ಚೆಂದವೂ

ಕಾಲ ಎಷ್ಟು ಮುಂದುವರೆದರೂ ಕೆಲವೊಂದಕ್ಕೆ ಬದಲಾವಣೆಗಳ ಹಂಗಿಲ್ಲ ... ಅಂದಿನ ಸದ್ದು ಹೇಗಿತ್ತೋ ಇಂದೇ ಅದೇ ಸದ್ದಿನೊಂದಿಗೆ ಆರ್ಭಟಿಸುತ್ತದೆ ಗುಡುಗು ... ಹರಿವ ನದಿಯ ನೀರಿನ ಸದ್ದು ಇಂದಿಗೂ ಜುಳುಜುಳು, ರಾಕ್ ಮ್ಯೂಸಿಕ್ನಲ್ಲಿ ಓಡುವುದಿಲ್ಲ ಹರಿವ ನೀರು ! ಸೂರ್ಯ ಮುಳುಗುವ ಮುನ್ನ ಆಕಾಶದ ರಂಗು ಅಂದೂ ಇಂದೂ ಬಹುಶ: ಮುಂದೂ ಅದೇ ಥಳುಕಿನ ರಂಗು ರಂಗು ....

ಇಂತಹ ಒಂದು ಸುಂದರ ಸಂಜೆಯ ನದೀ ತಟದಲ್ಲಿ ಜುಳುಜುಳು ಹರಿವ ನೀರಿನ ಕಲರವ ಆಲಿಸುತ್ತಿದ್ದ ಜೋಡಿಯೊಂದರ ಹೀಗೊಂದು ಸಂಭಾಷಣೆ ಹೀಗಿತ್ತು ...

"ನ್ಯಾಚುರಲ್ ಬ್ಯೂಟಿಯೇ ಬ್ಯೂಟಿ ... ಸಿಟಿಯಲ್ಲಿದ್ದು ಇದ್ದು ಹೊರಗಿನ ಪ್ರಪಂಚ ಹೀಗಿದೆ ಅಂತ್ಲೇ ಗೊತ್ತಿರೋದಿಲ್ಲ ಎಷ್ಟೊ ಸಾರಿ ... ವಾಟ್ ಡು ಯೂ ಸೇ?"

"ಎಲ್ಲ ಕಡೆ ಲೈಟುಗಳ ಹಾವಳಿಯಿಂದ ಆಕಾಶದಲ್ಲಿ ನಕ್ಷತ್ರಗಳಿವೆ ಅಂತ್ಲೂ ಮರೆತು ಹೋಗಿದೆ"

"ರೋಡಿನ ಮೇಲೆ ನೆಡೆದಾಡುತ್ತ ತಲೆ ಎತ್ತಿ ನೋಡಿದ್ರೆ ಹೈ-ರೈಸ್ ಬಿಲ್ಡಿಂಗ್’ಗಳೇ ಕಾಣುತ್ತೆ ... ಆಕಾಶವೇ ಕಾಣೋಲ್ಲ ... ಮಧ್ಯಾನ್ನ ದಾಟಿದ ಮೇಲೆ ಸೂರ್ಯಾನೂ ಕಾಣೋಲ್ಲ !"

"ಒಮ್ಮೊಮ್ಮೆ ಅನ್ನಿಸುತ್ತೆ, ಸಾಧ್ಯವಿದ್ರೆ ಒಂದೈವತ್ತೋ ನೂರೋ ವರ್ಷ ಹಿಂದಕ್ಕೆ ಓಡಿಹೋಗಬೇಕು ಅಂತ"

"ನಿಜ ನಿಜ ... ಈಗ ನೋಡು, ಕಾರಲ್ಲಿ ಕೂತರೆ ಸಾಕು ಎಲ್ಲಿಗೆ ಬೇಕೆಂದರೆ ಅದೇ ಕರ್ಕೊಂಡ್ ಹೋಗುತ್ತೆ. Internet ಅನ್ನೋದು ಕಣ್ ತುದಿಯಲ್ಲೇ ಇದೆ. ಕಾರು ಜಮ್ಮಂತ ಹೋಗ್ತಿದ್ರೆ, ನಾವು ವಿಡಿಯೋ ನೋಡ್ಕೊಂಡ್ ಕೂತಿರೋದು."

"ಯಾರಾದ್ರೂ ನಮಗೆ ಏನಾದ್ರೂ ಹೇಳಬೇಕೂ ಅಂದ್ರೆ ವಿಡಿಯೋ ಕಾನ್ಫೆರೆನ್ಸಿಂಗ್ ಅಂತ ಪ್ರತ್ಯಕ್ಷ. Instructions Downloadಆದ ಮೇಲೆ recording ಲಭ್ಯ. Grocery ಕೂಡ ಆನ್ಲೈನ್ ಆರ್ಡರ್, Drive-thru pickup. ವ್ಯವಹಾರ ಮಾತೇ ಇಲ್ದೇ ಮುಗಿದಿರುತ್ತೆ. ಈ ನಡುವೆ ಅಪರೂಪಕ್ಕೆ ಮಾತು ಅನ್ನೋ ಹಾಗೆ ಆಗಿದೆ ಜೀವನ"

"ಯೂ ಆರ್ ರೈಟ್! ರೊಬೋಟ್’ಗಳ ಹಾಗೆ ಆಗಿಬಿಟ್ಟಿದ್ದೀವಿ. ಕಾಫಿ ಬೇಕಂದ್ರೆ ಟೇಬಲ್ಗೇ ಬರುತ್ತೆ. ಎಲ್ಲ ಜನ ಬರೀ ವಿಸಿಬಲ್ ಮೆಸೇಜ್ನಲ್ಲೇ ಇರ್ತಾರೆ. ಮುಖ ನೋಡಿ ಮಾತಾಡೊ ಅಭ್ಯಾಸವೇ ತಪ್ಪಿ ಹೋಗಿವೆ ಜನಕ್ಕೆ. ಯಾರಿಗೆ ಏನು ಬೇಕಿದ್ರೂ ಎಲ್ಲ ವಿಡಿಯೋ ಡೌನ್ಲೋಡ್. ಎಲ್ಲ ಕಡೆ humongous ಡೇಟ ಬಂದು ಜಗತ್ತೇ ಬದಲಾಗಿದೆ"

"ರೀಸೆಂಟ್ ಆಗಿ Human Now and Then ಅಂತ ಎರಡು Generations ಹಿಂದಿನ ಜೀವನದ ಬಗ್ಗೆ ವಿಡಿಯೋ ನೋಡಿದ್ಯಾ?. ಏನು ಚೆನ್ನಾಗಿದೆ ಅಂದಿನ ಜೀವನ ಅಂದ್ರೆ, ಹೇಳೋಕ್ಕೇ ಆಗಲ್ಲ.  it’s beyond wonderful !

"ಓ! ನನ್ Glass ಗೂ ರೆಲೀಸ್ ಮಾಡಿಸಿಕೊಂಡೆ. ನಾನೂ ನೋಡಿದೆ.  It’s simply amazing and unbelievable"

"Funny ಅಂದ್ರೆ, ಆ ಜನ ಮೂವಿ ಹಾಲ್ ಮುಂದೆ ಲೈನ್ ನಿಂತುಕೊಂಡ್ ಟಿಕೆಟ್ ತೊಗೊಳ್ತಾರೆ.  They pay currency!!! ಟಿಕೆಟ್ ತೊಗೊಂಡು ೧-೨ ಘಂಟೆ ಹೊರಗೆ ವೈಟ್ ಮಾಡಿ, ಮೂರು ಘಂಟೆ ಮೂವಿ ನೋಡಿ ಆಮೇಲೆ ಮಾಲ್’ನಲ್ಲಿ ಶಾಪಿಂಗ್ ಮಾಡ್ಕೊಂಡು, ಹೊರಗೆ ಊಟ ಮಾಡಿಕೊಂಡು ಮನೆಗೆ ಬರ್ತಾರೆ.  They spend 7-8 hours on that. My GOD  ನಾನು ಆ ಕಾಲದಲ್ಲಿ ಇರಬೇಕಿತ್ತು ಅನ್ನಿಸ್ತಿದೆ."

"But, u know what was hilarious? same movie was available on Internet but still they could afford 7-8 hours !!   ಇನ್ನೊಂದ್ Sequenceನಲ್ಲಿ ಒಬ್ಬ ೨-೩ ಘಂಟೆ ಟಿಕೆಟ್ ಅಂತೆಲ್ಲ ಟೈಮ್ ವೇಸ್ಟ್ ಮಾಡಿ ಥಿಯೇಟರ್ ಒಳಗೆ ಹೋಗಿ then he sleeps !!! Good that he wasted some silly $10 on that. "

"ಸಕತ್ ಮಜಾ! ಇನ್ನೊಂದ್ ವಿಷಯ ... hilarious ... ಜನ ಕೈಯಲ್ಲಿ ಫೋನ್ ಇಟ್ಕೊಂಡು ಇಂಟರ್ನೆಟ್ ನೋಡ್ತಾರೆ, ಮೆಸೇಜ್ ಕಳಿಸ್ತಾರೆ, ಆಮೇಲೆ ಯಾವುದೋ ಸೋಷಿಯಲ್ ಮೀಡಿಯಾದಲ್ಲಿ  they fight ! for everything they have to type. What a waste of time and energy. good that today we don’t talk to each other much ..."

"ಮತ್ತೆ ಇನ್ನೊಂದ್ ಸೀನ್ನಲ್ಲಿ, there are some 4-5 kids playing video games. My god, they really had an awesome time together then. Amazing ! Kids socialized a lot those days ! Our life is so so monotonous. "

"ಎಷ್ಟು ಫ್ರೀ ಆಗಿ ಓಡಾಡ್ತಿದ್ರು ಅವತ್ತು. ವಾವ್! ಅದೇ ಇವತ್ತು? ಯಾವಾಗ್ಲೂ ಹೆಡ್ ಮಸ್ಕ್ ಹಾಕ್ಕೋಬೇಕು. ಆಗಿನವರು ಜಾಸ್ತಿ ತಲೆ ಕೆಡಿಸಿಕೊಳ್ತಾ ಇರಲಿಲ್ಲ. ಇವತ್ತು  health awareness lobby has reached the peak ಅನ್ನಿಸುತ್ತೆ. ಮುಖ ಎಕ್ಸ್ಪೋಸ್ ಮಾಡಿದ್ರೆ ಈ ಖಾಯಿಲೆ ಬರುತ್ತೆ, ಕೈ ಎಕ್ಸ್ಪೋಸ್ ಮಾಡಿದ್ರೆ ಆ ಖಾಯಿಲೆ ಬರುತ್ತೆ ಅಂತೆಲ್ಲ ಹೇಳಿ ಹೇಳಿ we are packed in a box. We look like robots of those days."

"hang on ... I got a message on my glass. Ultraviolet radiation surge warning ಬಂತು. ನಾವು ಇಲ್ಲೇ ಹೊರಗಡೆ ಇದ್ರೆ, ನಮ್ಮ ಲೈಸೆನ್ಸ್ ಕಿತ್ಕೊಂಡ್ ಬೀದಿಗೆ ಬರದೇ ಇರೋ ಹಾಗೆ ಮಾಡ್ತಾರೆ. ಹೋಗೋಣ."

"this is the third time in this week. Come on let’s pack up "

"life of human 2013 video ಮತ್ತೆ ನೋಡ್ಕೊಂಡ್ ಹೋಗ್ತೀನಿ ದಾರೀಲಿ."

"I will wait for 2014 version ... I wish I was born back then"

-----------------------
ಬದಲಾವಣೆಯ ಬಿರುಗಾಳಿ ಏನಿದ್ದರೂ ಮನುಷ್ಯನ ಜೀವನ ಶೈಲಿಗೆ ಮಾತ್ರ ಎನಿಸುತ್ತದೆ. ಬದಲಾವಣೆಯ ಬಲಿಪಶು ಮನುಜನದ್ದು ಸದಾ ಅದೇ ಹಾಡು "ಇಂದಿಗಿಂತ ಅಂದೇ ಚೆನ್ನಿತ್ತು" ಅಂತ.

ಈ ಇಬ್ಬರ ಸಂಭಾಷಣೆಯಲ್ಲಿ ಕನ್ನಡವೂ ಸೇರಿದೆ ಎನ್ನುವಂತೆ ಬರೆದಿದ್ದು ನನ್ನ ಆಶಾವಾದಿತನ ಅನ್ನಿಸುತ್ತದೆ !!!

ಹತ್ತನೆಯ ತರಗತಿಯ ಪಬ್ಲಿಕ್ ಪರೀಕ್ಷೆ !

ರಾಜ್ಯದಲ್ಲಿ ಇಂದಿನಿಂದ ಹತ್ತನೆಯ ತರಗತಿಯ ಪಬ್ಲಿಕ್ ಪರೀಕ್ಷೆಗಳು ಆರಂಭ !!!

ಕ್ರಿಕೆಟ್ ವೀರರು ವರ್ಲ್ಡ್ ಕಪ್'ಗಾಗಿ ಹೋರಾಡುತ್ತಿರುವಾಗ ಅಗಾಗ್ಯೆ ತಾವೂ ಕದ್ದು ಮುಚ್ಚಿ ಟಿವಿ ನೋಡಿಕೊಂಡು, ಸ್ಕೋರ್'ಗಳನ್ನು ತಿಳಿದುಕೊಂಡು, ಓದಿನಲ್ಲೂ ಹಿಂದೆ ಬೀಳದೆ, ಈಗ ಪರೀಕ್ಷೆ ಎಂದ ರಣರಂಗಕ್ಕೆ ಹೊರಟು ನಿಂತಿಹ ಎಲ್ಲ ಪುಟ್ಟ ವೀರರಿಗೆ ಶುಭವಾಗಲಿ ...

ಜೀವನದಲ್ಲಿ ಏನನ್ನು ಮರೆತರೂ ನಾ ಬರೆದ ಎಸ್.ಎಸ್.ಎಲ್.ಸಿ ಪರೀಕ್ಷೆ ಮರೆಯಲಾರೆ ... ಅಂದು ಆಂಗ್ಲ ಪರೀಕ್ಷೆಗೆ ಇಪ್ಪತ್ತು ನಿಮಿಷ ತಡವಾಗಿ ಹೋಗಿದ್ದೆ ... ಹೆಬ್ಬಾಳದಿಂದ ಚಾಮರಾಜಪೇಟೆಗೆ ಹೋಗಲು ಎರಡು ಬಸ್ ಹಿಡಿಯಬೇಕಿತ್ತು. ಮೊದಲ ಟ್ರಿಪ್ ಏನೋ ಅಂದುಕೊಂಡ ಸಮಯಕ್ಕೆ ತಲುಪಿದ್ದೆ. ಕೈಕೊಟ್ಟಿದ್ದೇ ಮೆಜಸ್ಟಿಕ್'ನಿಂದ ಚಾಮರಾಜಪೇಟೆಗೆ ಹೋಗಲು ಕಾದಿದ್ದ ಬಸ್. ಹಿಂದಿನ ದಿನ ಸಮಯಕ್ಕೆ ಬಂದಿದ್ದ ಬಸ್ ಇಂದು ಬರಲಿಲ್ಲ ... ಕೈ ಕೊಟ್ಟಿತ್ತು !!

ಹತ್ತೂವರೆ ಘಂಟೆಗೆ ಪರೀಕ್ಷೆ ಆರಂಭ. ಹತ್ತು ಘಂಟೆ ಹತ್ತು ನಿಮಿಷಕ್ಕೆ ನಾನಿದ್ದ ಬಸ್ ಹೊರಟಿತ್ತು. ಹೆಚ್ಚೂ ಕಮ್ಮಿ ಎರಡು ಬಸ್ ಜನ ಒಂದರಲ್ಲಿ. ಕಂಡಕ್ಟರ್'ಗೆ ಟಿಕೆಟ್ ನೀಡಲೇ ಹೆಚ್ಚು ಸಮಯ ಹಿಡಿದಿತ್ತು. ಚಿಲ್ಲರೆ ತಾರದ ಜನರನ್ನು, ಬಸ್ ಪಾಸ್ ಮಾಡಿಸದ ಜನರನ್ನು ಬೈದುಕೊಂಡಿದ್ದೇ ಬಂತು. ಮೂವತ್ತೈದು ನಿಮಿಷಗಳ ಪಯಣ ಮೂವತ್ತೈದು ಯುಗಗಳಂತೆ ಕಂಡಿತ್ತು. ಬಸ್ ಸ್ಟ್ಯಾಂಡ್'ನಲ್ಲಿ ನಿಂತಿದ್ದೇ ತಡ ಧಡಾರೆಂದು ಇಳಿದು ಎದ್ದು ಬಿದ್ದು ಶಾಲೆಯ ಗೇಟಿನ ಬಳಿ ಬಂದು ಆ ಇಪ್ಪತ್ತು ಮೆಟ್ಟಿಲಿಳಿದಾಗ ಕಂಡಿದ್ದು ಹೆಡ್ ಮಾಸ್ತರ್ !!!

ತಡವಾಗಿದ್ದಕ್ಕೆ ಕ್ಷಮೆಯಾಚಿಸಿ ಕಾರಣ ಹೇಳಲು ತೊಡಗಿದ್ದೆ. "ಮೊದಲು ಪರೀಕ್ಷೆ ಬರಿ. ಮಾತು ಆಮೇಲೆ" ಎಂದು ಪರೀಕ್ಷೆ ಹಾಲ್'ಗೆ ಕಳಿಸಿದ್ದರು. ಅಷ್ಟು ಸ್ಟ್ರಿಕ್ಟ್ ಇದ್ದ ಹೆಡ್ ಮಾಸ್ತರ್ ಈ ರೀತಿ ಸಮಾಧಾನಪಡಿಸಿ ಮಾತನಾಡಿದ್ದೇ ಸೋಜಿಗ!

ರೂಮಿನೊಳಗೆ ಹೋಗಿದ್ದೇ ತಡ ಮೊದಲು ನನ್ನ ಕೈಗೆ ಸಿಕ್ಕಿದ್ದು ಪೇಪರ್ ಅಲ್ಲ ... ಉರ್ದು ಪಾಠ ಮಾಡುವ ಮೌಲ್ವಿಯವರು ಕೊಟ್ಟ ದೊಡ್ಡ ಲೋಟದಲ್ಲಿನ ನೀರು ... ಐದು ನಿಮಿಷ ಸುಧಾರಿಸಿಕೊಂಡ ಕೊಂಡ ಮೇಲೆ ಬರೆಯಲು ಆರಂಭ ....

ಎಂಥ ಅನುಭವ ... ಅಂದಿನಿಂದ ಮುಂದಿನ ಮಿಕ್ಕೆಲ್ಲ ಪರೀಕ್ಷೆಗೆ ಕನಿಷ್ಟ ಒಂದು ಘಂಟೆ ಮುಂಚೆ ತಲುಪಿರುತ್ತಿದ್ದೆ :-)

ಶುಭವಾಗಲಿ ನನ್ನೆಲ್ಲ ಗೆಳೆಯರ ಮಕ್ಕಳೇ !


Tuesday, March 3, 2015

ಗುರುವಾರ ಸಂಜೆ ನಾ ಓಡಾಡ್ತಿದ್ದೆ ಮಲ್ಲೇಶ್ವರದಲ್ಲೀ ...


ಎಂಟನೇ ಕ್ರಾಸ್ ರಾಯರ ಮಠದ ಗೇಟಿನ ಬಳಿ ಸ್ಕೂಟರ್ ನಿಲ್ಲಿಸಿಕೊಂಡಿದ್ದ ಹಿರಿಯರೊಬ್ಬರು ಗೇಟಿನತ್ತಲೇ ನೋಡುತ್ತಿದ್ದರು. ಹಿಂದಿನಿಂದ ಒಬ್ಬಾಕೆ (ಅವರ ಮನೆಯವರು ಅಂತ ನಂತರ ತಿಳೀತು) ಬಂದಾಗ ...

"ಎಲ್ಲಿ ಹೊರಟು ಹೋಗಿದ್ಯಮ್ಮಾ? ಆಗ್ಲಿಂದ ನಾನು ಕಾಯ್ತಿದ್ದೀನಿ?"

"ಮಠಕ್ಕೆ ಹೋಗಿದ್ದೆ ನಮಸ್ಕಾರ ಹಾಕಿಕೊಂಡು ಬರೋಕ್ಕೆ ಅಂದ ಮೇಲೆ ಮಠಕ್ಕೆ ಹೋಗಿದ್ದೆ ಅಂತ ತಾನೇ?"

"ಮಠ ಬಾಗಿಲು ಹಾಕಿ ಹತ್ತು ನಿಮಿಷ ಆಯ್ತು"

"ನಾನು ಆ ಗೇಟ್’ನ ಹತ್ತಿರ ಕಾಯ್ತಿದ್ದೆ. ಅಲ್ಲಿಗೇ ಬರೋದ್ ತಾನೇ ಸ್ಕೂಟರ್ ತೊಗೊಂಡು?"

"ಈ ಗೇಟ್’ನಿಂದ ಹೋದ ಮೇಲೆ ಇಲ್ಲಿಂದ ತಾನೇ ಬರಬೇಕು?"

"ಮಠದಿಂದ ಹೊರಗೆ ಬಂದ ಮೇಲೆ ಆ ಗೇಟ್ ತಾನೇ ಹತ್ತಿರಾ ಇರೋದು?"

"ನೀನು ಹೋದ ಕಡೆ ಎಲ್ಲ ಸ್ಕೂಟರ್ ಓಡಿಸಿಕೊಂಡೋ / ನೂಕಿಕೊಂಡೋ ಬರೋಕ್ಕೆ ಆಗಲ್ಲ ನನಗೆ. ಒಂದು ಬೀದಿ ಒನ್-ವೇ ಇದ್ರೆ ಇನ್ನೊಂದರಲ್ಲಿ ದನ ಅಡ್ಡ ನಿಂತಿರುತ್ತೆ. ನೀನೇ ತಿಳ್ಕೋಬೇಕು ... ಅದು ಹೋಗ್ಲಿ, ಅಲ್ಲಿ ನಿಂತಿದ್ದೀನಿ ಅಂತ ಒಂದು ಫೋನ್ ಮಾಡಬಾರದಾ?"

"ಮಠಕ್ಕೆ ಬರೋವಾಗ್ಲೂ ಕೈಲಿ ಚಿಟಿಕೆ ಥರಾ ಅದನ್ಯಾಕೆ ತರಲಿ? ಗಲಾಟೆಯೇ ಇಲ್ದಿರೋ ಮನೆಯಲ್ಲೇ ಅಡುಗೇ ಮನೆಯಿಂದ ಕರೆದಿದ್ದು ಹಾಲ್’ನಲ್ಲಿ ಕೂತಿದ್ದಾಗ ನಿಮಗೆ ಕೇಳಿಸೋಲ್ಲ. ಇನ್ನು ಈ ಬೀದೀಲಿ ಫೋನ್ ಮಾಡಿದಾಗ ಕೇಳಿಸುತ್ಯೇ?"

"ಒಂದು ಹೇಳಿದ್ರೆ ನಾಲ್ಕು ಹೇಳ್ತೀ"

"ಸರಿ, ಸರಿ ನಡೀರಿ .... ನಿಧಾನ ....

{ರಾಯರು ನಿಧಾನಕ್ಕೆ ಓಡಿಸಿಕೊಂಡು ಹೋಗುತ್ತ ಏನೋ ಗೊಣಗುತ್ತ ಸಾಗುತ್ತಾರೆ}

"ನನ್ ಬೈದುಕೊಂಡು ಓಡಿಸಬೇಡಿ .. ಗಾಡಿ ಓಡಿಸಿಕೊಂಡು ನಿಮ್ಮಷ್ಟಕ್ಕೆ ನೀವೇ ಮಾತಾಡಿಕೊಂಡು ಹೋಗಬೇಡಿ ಅಂತ ಎಷ್ಟು ಸಾರಿ ಹೇಳಿದ್ದೀನಿ"

"ಅಯ್ಯೋ! ಇಲ್ವೇ ಮಾರಾಯ್ತೀ ..."

"ತಲೆ ಅಲ್ಲಾಡಿಸಿಕೊಂಡು ಗಾಡಿ ಓಡಿಸ್ತಿದ್ರೆ ನನಗೆ ಗೊತ್ತಾಗೋಲ್ವೇ? ಅಯ್ಯೋ, ಮುಂದೆ ನೋಡಿಕೊಂಡು ಓಡಿಸಿ ... ಆ ವಯಸ್ಸಾದೋರಿಗೆ ಗುದ್ದು ಬಿಡ್ತಿದ್ರೀ ಈಗ. ನಿಮಗೋ ಕಣ್ ಕಾಣೋಲ್ಲ ನೆಟ್ಟಗೆ"

"ಕಣ್ಣು ನಿನಗೆ ಕಾಣಲ್ಲ ಅನ್ನು. ಕನ್ನಡಕ ಹಾಕ್ಕೊಂಡ್ ಬಾ ಅಂದ್ರೆ ಏನೋ ಬಿಗುಮಾನ. ಆ ವಯಸ್ಸಾದೋರು ಬೇರೇ ಯಾರೂ ಅಲ್ಲ. ನಿನ್ ತಂಗಿ ಸರೋಜ. ಗಾಡಿ ನಿಲ್ಲಿಸ್ಲಾ?"

"ತೊಗೊಂಡ್ ಬಂದಿರೋದು ನಿಂತರೆ ಮುಂದಕ್ ಹೋಗದೇ ಇರೋ ಸ್ಕೂಟರ್ರು. ಇಲ್ಲಿ ನಿಲ್ಲಿಸಿ ಅವಳನ್ನು ಹತ್ತಿಸಿಕೊಂಡು ಏನು ಮುಂದೆ ನಿಲ್ಲಿಸ್ಕೊಳ್ತೀರಾ? ಸುಮ್ನೆ ನಡೀರಿ. ಎಲ್ ಹೋಗ್ತಾಳೆ? ಪ್ರವಚನಕ್ಕೆ ಹೋಗಿ ಬರ್ತೀನಿ ಅಂತ ಬಂದ್ಳು. ಪ್ರವಚನ ಮಾಡಿದವರೂ ಮನೆಗೆ ಹೋಗಿ ಊಟ ಮಾಡಿ ಮಲಗಿರ್ತಾರೆ. ಇವ್ಳು ಈಗ ಬರ್ತಿದ್ದಾಳೆ"

"ಏನು ಕೆಲಸವೋ ಏನೋ ಬಿಡು" ...

ಧುಡುಮ್!

"ಏನು? ಇದ್ದೀಯೋ? ಬಿದ್ಯೋ?"

"ಅಯ್ಯೋ !!"

"ನಿಜಕ್ಕೂ ಬಿದ್ ಹೋದ್ಯಾ? ಹಿಂದುಗಡೆ ಕೂತ್ಕೊಂಡಾಗ ಗಟ್ಟಿಯಾಗಿ ಗಾಡಿ ಹಿಡ್ಕೋ ಅಂತ ಹೇಳಿದ್ರೆ ಕೇಳೋಲ್ಲ. ಕೈಬಾಯಿ ತಿರುಗಿಸಿಕೊಂಡು ಮಾತಾಡ್ತಿದ್ರೆ ಮೈಮೇಲೆ ಅರಿವೆ ಇರೋಲ್ಲ! ಜೊತೆಗೆ ನನಗೇ ಹೇಳೋದು ... " {ಧಡ ಧಡ ಗಾಡಿ ಸ್ಟ್ಯಾಂಡ್ ಹಾಕಿ ಧಾವಿಸಿ ಬಂದರು}

"ನನಗೆ ಅರಿವು ಇರಿಲಿ ... ಧಡಬಡ ಮಾಡ್ಕೊಂಡ್ ಬರ್ತಿದ್ದೀರಾ ... ನಿಮ್ ಅರಿವೆ ಬಿಚ್ಚಿ ಹೋಗ್ತಿದೆ. ಮೊದಲು ಅದನ್ನ ಕಟ್ಟಿಕೊಳ್ಳಿ ... ಪಂಚೆ ತುದಿ ಕಾಲಿಗೆ ಸಿಕ್ಕು ಬಿದ್ರೆ ನಿಮಗೇನಾದ್ರೂ ಆದೀತು ... "

"ನನಗೆ ಉಪದೇಶ ಆಮೇಲೆ ಆಗಲಿ .. ಸ್ವಲ್ಪ ಸುಮ್ಮನೆ ಇದ್ದು ಸುಧಾರಿಸಿಕೋ ... ಆಯಾಸ ಮಾಡ್ಕೋಬೇಡಾ"

"ಅಯ್ಯೋ, ಮೈಕೈ ಎಲ್ಲ ನೋಯ್ತಿದೆ ... ಏನೂ ಮುರಿದಿಲ್ಲ ಅನ್ನಿಸುತ್ತೆ ಸದ್ಯ ..."

"ನಮಸ್ಕಾರ ಹಾಕೊಂಡ್ ಬಂದಿದ್ದಿ ... ಅದಕ್ಕೇ ಏನೂ ಆಗಿಲ್ಲ. ಉಪ್ಪಿನ ಮೂಟೆ ಹಾಗೆ ಕುಸಿದಿದ್ದೀಯಾ ಅಷ್ಟೇ. ನಿಧಾನಕ್ಕೆ ನನ್ನ ಕುತ್ತಿಗೆ ಸುತ್ತ ಕೈ ಹಾಕಿ ಎದ್ದು ನಿಂತ್ಕೋ ... ಹುಷಾರು"

"ಹಾ! ಹುಷಾರು ... ನನ್ ಭಾರಕ್ಕೆ ನೀವು ಕುಸಿದೀರಾ "

"ಆಹಾ .. ಏನು ವೈಭೋಗ ನೋಡು ... ಈ ವಯಸ್ಸಲ್ಲಿ ಬೀದಿ ಮಧ್ಯೆ ನಮ್ ರೋಮಾನ್ಸು ..."

"ನಿಮ್ ತಲೆ ... ನಿಲ್ಲೋಕ್ಕೇ ಆಗ್ತಿಲ್ಲ ಅಂದ್ರೆ ರೋಮಾನ್ಸ್ ಅಂತೆ ... ಕೈ ಕೈ ಹಿಡ್ಕೊಂಡ್ ಮರ ಸುತ್ತೋಕ್ಕೆ ಮರ ಎಲ್ಲಿದೆ? ಪಾರ್ಥೇನಿಯಮ್ ಗಿಡದ ಸುತ್ತಲೇ ಒಂದು ಸುತ್ತು ಹಾಕಬೇಕು ಅಷ್ಟೇ!"

"ನಿಧಾನಕ್ಕೆ ಮನೆಗೆ ನಡಿ. ತುಳಸೀಕಟ್ಟೆಗೆ ಸುತ್ತು ಹಾಕೋಣ ಪುಣ್ಯವಾದ್ರೂ ಬರುತ್ತೆ. ಅದು ಸರೀ, ಈ ಸ್ಕೂಟರ್ ಹೇಗೆ ತೊಗೊಂಡ್ ಹೋಗೋದು?"

"ನಿಮ್ ಸ್ಕೂಟರ್’ಗೆ ನಿಮ್ ಅರ್ಧದಷ್ಟು ವಯಸ್ಸಾಗಿದೆ. ಇಲ್ಲೇ ಇಟ್ರೂ ಯಾರೂ ಮುಟ್ಟೋಲ್ಲ ! ಇಲ್ಲೇ ಸ್ವಲ್ಪ ಆ ಕಡೆ ಇಟ್ಟು ಲಾಕ್ ಮಾಡಿ. ರಾಮನಾಥ ಹನ್ನೆರಡು ಘಂಟೆ ರಾತ್ರಿಗೆ ಬಂದು ತೊಗೊಂಡ್ ಬರ್ತಾನೆ"

"ಯಾರೂ ನೋಡ್ದೇ ಇರೋ ಟೈಮಿಗೆ ಬಂದು ತೊಗೊಂಡ್ ಬರೋಷ್ಟು ಕೆಟ್ಟದಾಗಿದ್ಯೇ ಗಾಡಿ?"

"ಮೊದಲು ನಡೀರಿ ... ಸರೋಜ ನೋಡಿದ್ರೆ ಸುಮ್ನೆ ಬೀದಿಗೆಲ್ಲ ಸಾರ್ತಾಳೆ ..."

"ಸರಿ ... ನಡಿ ... ನಡೆ ಮುಂದೆ ನಡೆ ಮುಂದೆ ಕುಂಟ್ಕೊಂಡ್ ನಡೆ ಮುಂದೆ ..."

{ಮಠದ ಬಳಿ ಸ್ಕೂಟರ್ ಹಿಡ್ಕೊಂಡ್ ನಿಂತಿದ್ದ ಹಿರಿಯರನ್ನು ನೋಡಿದ್ದು, ಎಷ್ಟು ಹೊತ್ತಿಂದ ಕಾಯ್ತಿದ್ದೆ ಎಲ್ಲಿ ಹೋಗಿದ್ದೀ ಅನ್ನೋದಷ್ಟು ಬಿಟ್ರೆ ಮಿಕ್ಕಿದ್ದೆಲ್ಲ ನನ್ನ ಒಗ್ಗರಣೆ ...}

Thursday, February 5, 2015

ಚಾಲ್ತಿಯ ಪಂಚಾಯತಿ

ತಾವು ಚಲಾವಣೆಯ ನಾಣ್ಯವಾಗಿ ಸದಾ ಸುದ್ದಿಯಲ್ಲಿರಬೇಕು ಎಂಬುವುದು ಬೇರೆ ಯಾವ ಕ್ಷೇತ್ರಗಳಿಗೆ ಅನ್ಯಯಿಸುವುದೋ ಇಲ್ಲವೋ, ಮನರಂಜನೆಯ ಉದ್ಯಮಕ್ಕಂತೂ  ಇದು ಅಕ್ಷರಶ: ಅನ್ವಯಿಸುತ್ತದೆ. ಈ ಲೇಖನದ ಉದ್ದೇಶ ಚಾಲ್ತಿ ಅಥವಾ ಚಲಾವಣೆ ಕುರಿತಾಗಿ ನನ್ನದೆರಡು ಅನಿಸಿಕೆ.

ಮನರಂಜನೆಯ ಉದ್ಯಮದಲ್ಲಿ ಚಲಾವಣೆಯಲ್ಲಿರಿಸಿಕೊಳ್ಳಲು ನೆಡೆಸುವ ಕಸರತ್ತುಗಳೇ ಒಂದು ವಿಸ್ಮಯ. ಪ್ರಚಾರ ಮಾಧ್ಯಮಗಳ ಪ್ರಭಾವ ಅಷ್ಟಾಗಿ ಇಲ್ಲದಿದ್ದ ದಿನಗಳಲ್ಲಿ ಈ ರೀತಿಯ ಥಳುಕುಗಳು ಆ ಕಲ್ಲಕ್ಕೆ ತಕ್ಕಂತೆ ಇದ್ದರೂ ಸಾಮಾನ್ಯ ಜನಜೀವನದ ಕದ ತಟ್ಟುತ್ತಿರಲಿಲ್ಲ. ಸಮುದ್ರದಲ್ಲಿ ಹುಟ್ಟೋ ಮೀನೊಂದು ಜನ್ಮ ತಾಳಿ ಇನ್ನಾವುದೋ ದೊಡ್ಡ ಮೀನಿಗೆ ಬಲಿಯಾಗಿದ್ದು ಹೇಗೆ ಹೊರ ಜಗತ್ತಿಗೆ ತಿಳಿಯುವುದೇ ಇಲ್ಲವೋ ಹಾಗೆ.

ಸಿನಿಮಾ ಪತ್ರಿಕೆಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದು ಹಲವಾದರೆ ಸುದ್ದಿಗೇ ಸಿಕ್ಕದೇ ಹೋದದ್ದು ಸಾವಿರಾರು. ಎಷ್ಟೊ ಬಾರಿ ಈ ಚಲಾವಣೆಯ ಆಟ ವಿಪರೀತಕ್ಕೆ ಹೋಗಿ, ಜಗತ್ತಿನ ನಿಗೂಢ ಸಾವುಗಳು ಉಂಟಾಗಿ ಅವರೊಂದಿಗೇ ಸಮಾಧಿ ಸೇರಿದೆ. ಇಂದಿಗೂ ನಿಗೂಢವಾಗೇ ಉಳಿದಿವೆ. ಇಂದಿನವರು ಅಂದಿನ ಇಂಥಾ ಘಟನೆಗಳನ್ನು ಹೊರ ತೆಗೆದು ನವಿರಾದ ಲೇಪನ ಹಚ್ಚಿ ಚಿತ್ರ ಮಾಡಿ ಅಳಿದ ಕಲಾವಿದರ ನಿಗೂಢ ರಹಸ್ಯವನ್ನು ಬಯಲಿಗೆಳೆಯುವ ಪ್ರಯತ್ನ ಮಾಡಿದ್ದಾರೆ.

ಇಂದು ಪ್ರಚಾರ ಮಾಧ್ಯಮ ಬಲವಾಗಿದೆ. ಟಿವಿ, ಅಂತರ್ಜಾಲ ಮಾಧ್ಯಮಗಳು ಅವಶ್ಯಕತೆಗಿಂತ ಹೆಚ್ಚೇ ವಿಷಯ ಬಯಲು ಮಾಡುತ್ತಿವೆ. ಸಾಮಾಜಿಕ ತಾಣದಲ್ಲಂತೂ ಒಂದು ಸಣ್ಣ ಸುದ್ದಿಯೂ ವಿರಾಟ ರೂಪ ತಾಳಬಲ್ಲುದಾಗಿಸುವ ಶಕ್ತಿ ಹೊಂದಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಯಾರಾದರೂ ತಮ್ಮನ್ನು ಚಲಾವಣೆಯಲ್ಲಿ ಇರಿಸಿಕೊಳ್ಳಲು ವೇದಿಕೆಗಳು ಸಾಕಷ್ಟಿವೆ. ಗಾಡಿ ಚಾಲ್ತಿಯಲ್ಲಿ ಇಲ್ಲದಿದ್ದರೆ ನಿಂತೇ ಹೋಗುತ್ತೆ !

ತಮ್ಮ ಚಿತ್ರ ಜನ ನೋಡಲಿಲ್ಲ ಎಂಬುದೇ ದೊಡ್ಡ ವಿಷಯವಾಗಿ ಸಿನಿಮಾಕ್ಕಿಂತಲೂ ಆತನ ಆಕ್ರೋಶದ ವಿಡಿಯೋ ಕ್ಲಿಪ್ಪಿಂಗ್ ಹೆಚ್ಚು ಹೆಸರು ಮಾಡಿದೆ ಎಂದರೆ ನೀವೇ ಅರ್ಥೈಸಿಕೊಳ್ಳಬಹುದು. ಚಲಾವಣೆಯಲ್ಲಿ ಇರಿಸಿಕೊಳ್ಳಲು ಇದೂ ಒಂದು ತಂತ್ರ.

ಬೆಳ್ಳಿತೆರೆಯ ಒಂದು ಸಣ್ಣ ಅಂಗ ಎಂದೇ ಜನ್ಮ ತಾಳಿದ ವಾಮನ ರೂಪಿ ಕಿರುತೆರೆ ಇಂದು ದೈತ್ಯಾಕಾರವಾಗಿ ತ್ರಿವಿಕ್ರಮವಾಗಿದೆ. ಕಿರುತೆರೆ ಎಂದು ಮೂಗೆಳೆಯುತ್ತಿದ್ದ ಸಿನಿಮಾ ಮಂದಿ, ಇಂದು ಆ ಕಿರುತೆರೆ ಮನೆಮನೆಗಳಲ್ಲಿ ಪಡೆದಿರುವ ಸ್ಥಾನ ಗುರುತಿಸಿ, ಎರಡು-ಮೂರು ಘಂಟೆ ಮಾತ್ರ ಮುಖ ತೋರಿಸಿ ಹೋಗುವುದಕ್ಕಿಂತ ವಾರಕ್ಕೆ ಐದೋ-ಆರೋ ದಿನಗಳ ಕಾಲ ತಾವು ಜನರ ಮುಂದೆ ಬಂದು ಚಲಾವಣೆಯಲ್ಲಿ ಇರಲು ಬಯಸುತ್ತಿದ್ದಾರೆ. ಸಿನಿಮಾಕ್ಕಿಂತ ಹೆಚ್ಚು ಒಲವು ಟಿವಿ ಕಡೆ ತೋರಿದ್ದಾರೆ.

ಮೊದಲ ಹಂತದಲ್ಲಿ ಧಾರಾವಹಿಗಳಿಗೆ ಲಗ್ಗೆ ಹಾಕಿದ ಮೇಲೆ ಈ ನಡುವೆ ರಿಯಾಲಿಟಿ ಶೋಗಳಲ್ಲೇ ಮಿಂಚುತ್ತಿದ್ದಾರೆ. ಈ ಸನ್ನಿವೇಶ ಒಂದು ರೀತಿ ವಿನ್-ವಿನ್ ಮಾದರಿ. ತಾರೆಯರು ರಿಯಾಲಿಟಿ ಶೋ’ಗೆ ಬರುತ್ತಾರೆ ಎಂದರೆ ಕಾರ್ಯಕ್ರಮದ ಟಿ.ಆರ್.ಪಿ ಏರುತ್ತದೆ. ಜನರ ಮುಂದೆ ತಮ್ಮ ಮುಖ ತೋರಿಸಿ ತಮ್ಮ ಬೇಳೇಕಾಳು ಬೇಯಿಸಿಕೊಳ್ಳಲು ಇವರಿಗೆ ಸಹಾಯಕವಾಗುತ್ತದೆ.

ರಮೇಶ್, ಎಸ್.ಪಿ, ಹಂಸಲೇಖ, ಹೀಗೆ ಕೆಲವರು ತಮ್ಮ ಛಾಪನ್ನು ತೋರಿಸಿ ಅವರ ಕಾರ್ಯಕ್ರಮಗಳಿಗೆ ಸೂಕ್ತ ಆಯ್ಕೆ ಎನ್ನಿಸಿ ನ್ಯಾಯ ಒದಗಿಸಿದ್ದಾರೆ. ಇಂಥವರು ಬೆರಳೆಣಿಕೆಯಷ್ಟು ಮಾತ್ರ. ಇನ್ನು ಹಲವರದ್ದು ’ಇವರು ನಿಜಕ್ಕೂ ಬೇಕೇ?’ ಅನ್ನಿಸುತ್ತದೆ.

ನೃತ್ಯ ಬಾರದವರು ಟಿವಿ’ಯ ರಿಯಾಲಿಟಿ ಶೋಗಳಲ್ಲಿ ಮುಖ್ಯ ತೀರ್ಪುಗಾರರಾಗಿ ಕಾಣಿಸಿಕೊಂಡು, ತಮಗೇ ಬಾರದ ವಿದ್ಯೆಯ ಬಗ್ಗೆ ಇನ್ನೊಬ್ಬರ ಮೌಲ್ಯಮಾಪನ ಮಾಡುತ್ತಾರೆ. ಅವರು ವೇದಿಕೆ ಮೇಲಿದ್ದಾರೆ ಅನ್ನೋದನ್ನ ಬಿಟ್ಟರೆ ಬೇರೆ ಪ್ರಯೋಜನ ಅಷ್ಟೇನೂ ಅನ್ನಿಸುವುದಿಲ್ಲ. ಇನ್ನು ಅವರ ಹಾವಭಾವ ಮತ್ತು ದಿರಿಸಿನ ಬಗ್ಗೆ ನಂತರ ಮಾತನಾಡೋಣ.

ಗ್ಲ್ಯಾಮರ್ ಜಗತ್ತು ಯಾರನ್ನು ತಾನೇ ಸೆಳೆದಿಲ್ಲ. ಒಂದಲ್ಲಾ ಒಂದು ಹಂತದಲ್ಲಿ ತಾವು ತಮ್ಮ ನೆಚ್ಚಿನ ಹೀರೋ ಅಥವಾ ಹೀರೋಯಿನ್’ನಂತೆ ಆಡುವುದು ಬಹಳ ಸಾಮಾನ್ಯ.

ಇಂದಿನ ಪ್ರಭಾವಶಾಲಿ ಪ್ರಚಾರ ಮಾಧ್ಯಮದಲ್ಲಂತೂ, ನಟ/ನಟಿಯರು ನಿಂತರೂ ಸುದ್ದಿ, ಕುಂತರೂ ಸುದ್ದಿ, ಕುಸಿದರಂತೂ ಸುದ್ದಿಯೋ ಸುದ್ದಿ. ಇವರು ಹೆಂಡಿರನ್ನು ದಿವೋರ್ಸ್ ಮಾಡಿದರಂತೆ, ಅವರು ಅವಳೊಡನೆ ಪಾರ್ಟಿಯಲ್ಲಿ ಕಾಣಿಸಿಕೊಂಡರಂತೆ, ಯಾವನೋ ಒಬ್ಬ ಈಕೆಗೆ ಕೆನ್ನೆ ಹೊಡೆದನಂತೆ, ಆಕೆ ಮೂಗು ಮೊಂಡು ಮಾಡಿಕೊಂಡಳಂತೆ, ಇಂಥಾ ನಟಿಗೆ ಮಗು ಬೇಡವಂತೆ ನಾಯಿ ಬೇಕಂತೆ ಹೀಗೆ ....

ತಾರೆಯರ ಕುಟುಂಬದಿಂದ ಉದಯಿಸುವ ನವತಾರೆಗೆ ಇಂದು ಸಾಮಾಜಿಕ ತಾಣ ಒಂದು ಅದ್ಬುತ ಮಣೆ ಹಾಕುತ್ತದೆ. ಅವರೋ ನೆಲದ ಮೇಲೆ ಕಾಲಿಡದೆ ಒಂದು ಹೆಜ್ಜೆ ಮೇಲಿಟ್ಟುಕೊಂಡೇ ಎಂಟ್ರಿ ಕೊಡುತ್ತಾರೆ. ಚಿತ್ರಕ್ಕೆ ಬಳಸಲಾಗುವ ಜಾಹೀರಾತುಗಳ ಬಲದಿಂದ ರಾತ್ರೋ ರಾತ್ರಿ ಸೂಪರ್ ಸ್ಟಾರ್’ಗಳಾಗಿರುತ್ತಾರೆ. ಚಿತ್ರದ ಬಿಡುಗಡೆಯ ನಂತರದ್ದು ಇನ್ನೊಂದು ಕಥೆ ಬಿಡಿ. ಒಂದು ಸಿನಿಮಾ ಇಪ್ಪತ್ತೈದು ದಿನಗಳು ನುಗ್ಗಿತೋ ಆತ/ಆಕೆಯ ಸ್ಟಾರ್ ವಾಲ್ಯೂ ಗಗನಕ್ಕೇರಿರುತ್ತದೆ. ಇದು ಹಿಂದಿ ಚಿತ್ರರಂಗಕ್ಕೆ ಜಾಸ್ತಿ ಹೊಂದೋ ಮಾತು. ಚಿತ್ರ ನೂರು ಕೋಟಿಯ ಕ್ಲಬ್ ಸೇರಿತು ಅಂತ ಎಲ್ಲೆಲ್ಲೂ ಪ್ರಚಾರ. ಆಗ ನಟಿ/ನಟಿಯರದೇ ಒಂದು ಬಳಗ, ಟ್ವಿಟ್ಟರ್’ನ ಹಿಂಬಾಲಕರು, ಫೇಸ್ಬುಕ್’ನಲ್ಲಿ ಮೆಚ್ಚುವರು ಹೀಗೆ. ಅವರನ್ನು ಎಲ್ಲಿಗೋ ತೆಗೆದುಕೊಂಡು ಹೋಗಿ ಕೂಡಿಸಿಬಿಡುತ್ತದೆ.

ಹೀಗೆ ಶ್ರೀಸಾಮಾನ್ಯರಾದವರು ಸರ್ವಮಾನ್ಯರಾಗಿ ಅವರು ಮಾಡಿದ್ದೇ ಸರಿ ಎನ್ನುವ ಹಾಗೆ ಜನ ಅವರನ್ನು ನೋಡುತ್ತಾರೆ. ಸಭೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮೋಡಗಳ ಮಧ್ಯದಿಂದ ಇಳಿದು ಬಂದವರಂತೆ ಆಡುತ್ತ ಜನರನ್ನು ರಂಜಿಸುತ್ತಾರೆ. ಹಲವಾರು ಬಾರಿ ತೆರೆಯ ಹೊರಗಿನಲ್ಲೂ ತೋರುವ ಈ ನಟನೆ ನಿಜಕ್ಕೂ ಅತಿರೇಕ ಅನ್ನಿಸುತ್ತದೆ. ಇವರುಗಳು ತಾವೇ ತಾವಾಗಿ ಹಾಗೆ ವಯ್ಯಾರ ಮಾಡುತ್ತಾರೋ ಅಥವಾ ಅವರು ಹಾಗೆ ನೆಡೆದುಕೊಳ್ಳಬೇಕೆಂಬುದು ಪಾರ್ಟಿಯ / ಕಾರ್ಯಕ್ರಮದ ಬೇಡಿಕೆಯೋ ಗೊತ್ತಿಲ್ಲ.

ಅವರ ತಪ್ಪೇ ಇಲ್ಲದೆ ಎಂಥದೋ ಸ್ಥಿತಿಗೆ ತಲುಪುತ್ತಾರೆ. ಹೀಗೆ ಎಲ್ಲೋ ಹೋಗಿ ಕೂತವರು ’ಅರ್ಧ ರಾತ್ರಿಯಲ್ಲಿ ಐಶ್ವರ್ಯ’ ಬಂದವರಂತೆ ಆಗುತ್ತಾರೆ. ತಾವು ಇರಬೇಕಾದೇ ಉನ್ನತ ಸ್ಥಾನದಲ್ಲಿ ಎಂದು ಅಹಂ ಬೆಳೆಸಿಕೊಂಡು ಶ್ರೀಘ್ರದಲ್ಲೇ ನೆಲಕ್ಕೆ ಬಿಡಿ ಪಾತಾಳಕ್ಕೇ ಕುಸಿಯುತ್ತಾರೆ. ಆ ನಂತರ ಇನ್ಯಾವುದೋ ವಹಿವಾಟಿನಲ್ಲಿ ಸಿಲುಕುತ್ತಾರೆ. ಅದು ಅವರ ದೌರ್ಭಾಗ್ಯ. ಇನ್ನು ಕೆಲವರು ತಾವು ಎಂದೆಂದೂ ಉನ್ನತ ಸ್ಥಾನದಲ್ಲೇ ಇರಬೇಕು ಎಂಬುದನ್ನು ಅರಿತುಕೊಂಡು ಅದನ್ನು ಸರ್ವಸನ್ನದರಾಗುತ್ತಾರೆ. ಆಗ ಶುರುವಾಗುವುದೇ ಈ ಚಾಲ್ತಿ ಅಥವಾ ಚಲಾವಣೆಯ ಆಟ. ಚಾಲ್ತಿಯಲ್ಲಿರಲು ಏನೂ ಮಾಡಲಿಕ್ಕೆ ತಯಾರಾಗುತ್ತಾರೆ.

ನಿರ್ಮಾಪಕರ ಹಿತದೃಷ್ಟಿಯಿಂದ, ಅಥವಾ ತಮಗೆ ಮುಂದಿನ ದೊಡ್ಡ ಬ್ಯಾನರ್’ನಲ್ಲಿ ಅವಕಾಶ ದೊರಕಿಸಿಕೊಳ್ಳಲೋಸ್ಕರ ಅವರ ಸಿನಿಮಾ ರಿಲೀಸ್ ಆಗುವ ಸಮಯಕ್ಕೆ ಯಾವುದೋ ವಿವಾದಕ್ಕೆ ಸಿಲುಕಿಸಿಕೊಳ್ಳುತ್ತಾರೆ. ಋಣಾತ್ಮಕ ಪಬ್ಲಿಸಿಟಿಯಿಂದ ಪ್ರೇಕ್ಷಕರ ಮುಂದೆ ಬರುತ್ತಾರೆ. ಸಾಮಾಜಿಕ ತಾಣ, ಟಿವಿ ಮಾಧ್ಯಮ (ಬ್ರೇಕಿಂಗ್ ನ್ಯೂಸ್), ಸುದ್ದಿ ಪತ್ರಿಕೆಗಳು, ನಿಯತಕಾಲಿಕೆಗಳು ಹೀಗೆ ಎಲ್ಲೆಲ್ಲೂ ಇದೇ ಚರ್ಚೆ. ಅನುಕಂಪ ಗಿಟ್ಟಿಸಿಕೊಂಡು ತಮ್ಮ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಾರೆ. ಚಿತ್ರ ರಿಲೀಸ್ ಆಗಿ ’ಹಿಟ್ಟೋ ತರಿಯೋ’ ಆದ ಮೇಲೆ ಹುಟ್ಟಿಕೊಂಡ ವಿವಾದ ಥಣ್ಣಗಾಗುತ್ತೆ. ಅಲ್ಲಿಯವರೆಗೆ ದನಿ ಎತ್ತಿದ ಸಂಘಟನೆಗಳು ಘಟನೆಯೇ ನೆಡೆದಿಲ್ಲವಂತೆ ಸುಮ್ಮನಾಗುತ್ತಾರೆ.

ಚಲಾವಣೆಯ ವಿಚಾರದಲ್ಲಿ ಮತ್ತೊಂದು ವಿಚಾರ ಅಡಕವಾಗಿದೆ. ಅದೇ ಅನುಕರಣಿಕೆ. ಇದೇನೂ ಇಂದು ನೆನ್ನೆಯದಲ್ಲ ಆದರೆ ಇಂದು ನೆಡೆಯುತ್ತಿರುವುದು ನೋಡಿದರೆ ನೆನ್ನೆಯವರೆಲ್ಲ ವೇಸ್ಟ್ ಎನಿಸುತ್ತದೆ ! ಪಾಶ್ಚಾತ್ಯರು ಇಲ್ಲಿನ ನಟೀಮಣಿ ಸೀರೆ ಉಟ್ಟಳು ಎಂದು ತಾವೂ ಸೀರೆ ಉಟ್ಟಿದ್ದು ನಾನಂತೂ ಕಂಡಿಲ್ಲ ಕೇಳಿಲ್ಲ. ಆದರೆ ನಮ್ಮಲ್ಲಿ ಹಾಗಲ್ಲ. ಅವರು ಹಾಗೆ ಉಡುಗೆ ತೊಟ್ಟಿದ್ದರು ನಾವೂ ತೊಡುತ್ತೇವೆ ಎಂಬ ಧೋರಣೆ. ಈಚೆಗೆ ಹೆಚ್ಚಿರುವ ನಟೀಮಣಿಯರ ಎದೆಗಾರಿಕೆ ಪಾಶ್ಚಾತ್ಯರನ್ನೂ ಮೀರಿಸುವ ಹಾಗಿದೆ. ಅಂದ ಹಾಗೆ ಇನ್ನೊಂದು ವಿಷಯ. ಇಂದು ನಟೀಮಣಿಯರಿಗೆ ಮರೆವಿನ ರೋಗ ಹೆಚ್ಚಿದೆ. ಮೊದಲೇ ಕನಿಷ್ಟ ವಸ್ತ್ರಧಾರಿಣಿಯರು, ಅದರ ಜೊತೆ ಮುಖ್ಯವಾದ ವಸ್ತ್ರಗಳನ್ನು ಮನೆಯಲ್ಲೇ ಮರೆತು ಬರುತ್ತಾರೆ. ಇದೂ ಚಲಾವಣೆಯ ಒಂದು ನಾಟಕ. ಇರಲಿ ಆದರೆ ಇವರಿಂದ ಯುವಜನತೆ ಏನು ಕಲಿಯುತ್ತಿದ್ದಾರೆ ಎಂಬುದು ಯೋಚಿಸಿದರೂ ಭಯವಾಗುತ್ತೆ.

ಕೇವಲ ’ಮನರಂಜನೆ ಮಾಧ್ಯಮ’ಕ್ಕೆ ಮಾತ್ರ ಸೀಮಿತವಾಗಿರುವ ಒಂದು ವಿಚಾರ ಇದೆ. ಅದೇ 'wardrobe malfunction'. ಸಾವಿರಾರು / ಲಕ್ಷಾಂತರ ಜನರ ಮುಂದೆ ಸ್ಟೇಜಿನ ಮೇಲೆ ಬರುವ ಆಕೆಗೆ ಮಾತ್ರ ಏನೇನೋ ಆಗುತ್ತೆ. ಇದನ್ನೇ ಚಲಾವಣೆಯ ನಾಟಕ ಅನ್ನೋದು. ತಾವು ನೆಡೆಸಿಕೊಟ್ಟ  ಅಥವಾ ಭಾಗವಹಿಸಿದ ಕಾರ್ಯಕ್ರಮದ ಬಗ್ಗೆ ಮರುದಿನ ಜಗತ್ತು ಮಾತನಾಡಬೇಕು ಅಂದರೆ ಸ್ಟೇಜ್ ಮೇಲೆ ಅವರಿಗೆ ಅರಿವಿಲ್ಲದಂತೆ ಅರಿವೆ’ಗೆ ಏನೋ ಆಗಬೇಕು. ಆಗ ಕಾರ್ಯಕ್ರಮ ಯಶಸ್ವಿ ಅಂತರ್ಥ. ಪ್ರತಿ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಜೆನ್ನಿಫರ್ ಲೋಪೇಜಳ ವಸ್ತ್ರ ನೋಡಿದರೆ ಸಿರಿವಂತರ ವಸ್ತ್ರ ಬಡತನದ ಬಗ್ಗೆ ಖೇದವಾಗುತ್ತೆ.

ಚಲಾವಣೆಯ ವಿಚಾರವಾಗಿ ಅಮೇರಿಕದ ವಿಷಯವೇ ಹೇಳಿದರೆ ಜೆನ್ನಿಫರ್ ಲೋಪೇಜ್, ಲೇಡಿ ಗಾಗಾ, ಮೈಲಿ ಸೈರಸ್, ಬಿಯಾನ್ಸೆ, ಮರಾಯ ಕರಿ, ಬ್ರಿಟನಿ ಸ್ಪಿಯರ್ಸ್, ಸೆಲೇನಾ, ಜಸ್ಟಿನ್ ಬೀಬರ್.... ಒಬ್ಬರೇ? ಇಬ್ಬರೇ? ಉಫ್! ಪಟ್ಟಿ ಬೆಳೆಯುತ್ತಾ ಹೋಗುತ್ತೆ. ಮೈಲಿ ಸೈರಸ್’ಳ ಶೋಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಲಾಗಲಿ, ಕಳಿಸಲಾಗಲಿ ಹೆತ್ತವರು ಹೆದರುತ್ತಾರೆ. ಬಹುಶ: ಅಂತಹ ಗಾಳಿ ಭಾರತಕ್ಕೆ ಬೀಸಿಲ್ಲ ಎಂದೇ ನನ್ನ ನಂಬುಗೆ.

ನಟ/ನಟಿಯರು ತೆರೆಯ ಮೇಲೆ, ಪಾರ್ಟಿಗಳಲ್ಲಿ, ಅವಾರ್ಡ್ ಕಾರ್ಯಕ್ರಮಗಳಲ್ಲಿ ಚಲಾವಣೆಯಲ್ಲಿ ಇರಲಿಕ್ಕಾಗಿಯೇ ತೋರುವ ಹಾವಭಾವವನ್ನು ನಿಜವೆಂದು ಭ್ರಮಿಸಿ ಅನುಕರಿಸುವ ಯುವ ಪೀಳಿಗೆ ಎತ್ತ ಹೊರಟಿದೆ? ಇಂಥವರನ್ನು ವೈಭವೀಕರಿಸಿ ಮಾಧ್ಯಮ ಸಮಾಜವನ್ನು ಎಲ್ಲಿಗೆ ಎಳೆದೊಯ್ಯುತ್ತಿದೆ? ಅಥವಾ ಜಗವೇ ಹೀಗೆ, ನಾನೇ ಸರಿ ಇಲ್ಲವೇ?

- ಬರೆದವರು: ಶ್ರೀನಾಥ್ ಭಲ್ಲೆ


--------------

ಚಾಲ್ತಿಯ ಹೆಸರಲ್ಲಿ ನಟ ನಟಿಯರು ನೆಡೆಸುವ ಕಸರತ್ತುಗಳನ್ನು ನೋಡಿ, ರೋಸಿ ಅದರ ಬಗ್ಗೆ ಬರೆಯುವ ಮನಸ್ಸಾಗಿ ಬರೆದ ಲೇಖನ ನಿಮ್ಮ ಮುಂದಿದೆ.

Sunday, January 18, 2015

ಗುರು-ಶಿಷ್ಯರ ಸಂಬಂಧಗಳು

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ:
ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ:

ಗುರುವನ್ನು ಸ್ತುತಿಸುವ ಆದಿಶಂಕರರಿಂದ ರಚಿತವಾದ ಈ ಶ್ಲೋಕ ಯಾರಿಗೆ ಗೊತ್ತಿಲ್ಲ ? ಗುರುಗಳನ್ನು ತ್ರಿಮೂರ್ತಿಗಳಿಗೆ ಹೋಲಿಸುತ್ತ ವಂದಿಸುವ ಈ ಶ್ಲೋಕ ಬಹಳ ಅರ್ಥಪೂರ್ಣ. ಸಂಧ್ಯಾವಂದನೆಯ ಮೊದಲ ಮಂತ್ರವೇ ’ಶ್ರೀ ಗುರುಭ್ಯೋ ನಮ: ಹರಿ: ಓಂ’ ಎಂದು. ಗುರುವಿನ ಸ್ಥಾನ ಅಂತಹುದು. ’ಗುರುವಿನ ಗುಲಾಮನನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಪುರಂದರದಾಸರೇ ಹೇಳಿಲ್ಲವೆ?

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಲ್ಲದ ಯಾರೇ ಆಗಲಿ ಅವನು ಕೀಳು, ಅನಾಥ ಅಥವಾ ದುರ್ದೈವಿ ಎನ್ನುವಂತೆ ಕಾಣುತ್ತಿದ್ದ ಕಾಲವೊಂದಿತ್ತು. ತಕ್ಕ ಗುರುವನ್ನು  ಅರಸುತ್ತ ಹೋಗಿ ತಮ್ಮ ಗುರಿ ಸಾಧಿಸಿರುವವರ ಕಥೆಯನ್ನು ’ಹಂಸಗೀತೆ’ ’ಸಂಧ್ಯಾ ರಾಗ’ ಚಿತ್ರಗಳಲ್ಲಿ ನಾವು ಕಾಣಬಹುದು. ’ಹಂಸಗೀತೆ’ ಚಿತ್ರದ ಮತ್ತೊಂದು ಸನ್ನಿವೇಶ ಎಂದರೆ, ಗುರಿವಿಗೇ ಸವಾಲೊಡ್ಡಿ ಗೆದ್ದು ಗುರುವಿನ ಸಾವಿಗೂ ಕಾರಣನಾದವನನ್ನು ಎಲ್ಲರೂ ತುಚ್ಚೀಕರಿಸಿ ನೋಡುತ್ತಾರೆ. ಗುರುವಿಗೆ ಇದ್ದ ಮಹತ್ವ ಆ ಮಟ್ಟಗಿನದು.

’ಗುರು’ ಎಂಬ ಪದ ಎಷ್ಟು ಪ್ರಾಚೀನ ಹಾಗು ಅರ್ಥಪೂರ್ಣ ಎಂದರೆ ಪಾಶ್ಚಾತ್ಯ ದೇಶದವರೂ ತಮ್ಮ ನಿಘಂಟಿನಲ್ಲಿ ಅದನ್ನು ಸೇರಿಸಿಕೊಂಡಿದ್ದಾರೆ. MS-WORD ನಲ್ಲಿ ಅದಕ್ಕೆ ಕೊಡುವ ಪರ್ಯಾಯಪದ ’ಮಹರ್ಷಿ’ ಇತ್ಯಾದಿ.

ಗುರುಗಳೆಂದರೆ ಅವರು ಹಿಂದಿನ ಕಾಲದವರಂತೆ ಪಂಚೆಯುಟ್ಟು, ಗಡ್ಡ ಬಿಟ್ಟು ಮರದ ಕೆಳಗೆ ಕೂತು ವೇದ ಪಾಠ ಮಾಡುವವರೇ ಆಗಬೇಕಿಲ್ಲ ಅಥವಾ ಕೈಯಲ್ಲಿ ಬೆತ್ತ ಹಿಡಿದಿರಬೇಕೂ ಅಂತಲೂ ಅಲ್ಲ. ಕೌಶಿಕನಿಗೆ ದಾರಿ ತೋರಿದ ಒಬ್ಬ ನಿಷ್ಟಾವಂತ ಗೃಹಿಣಿಯಾಗಿರಬಹುದು ಅಥವಾ ಅವನಿಗೆ ಬದುಕಿನ ಅರ್ಥ ತಿಳಿಸಿಕೊಟ್ಟ ಕಟುಕ ಧರ್ಮವ್ಯಾಧನೇ ಆಗಿರಬಹುದು. ಹಾಗಾದರೆ ಈ ’ಗುರು’ ಯಾರು ?

’ಗುರು’ ಎಂಬ ಪದದಲ್ಲಿ ’ಗು’ ಎಂದರೆ ನೆರಳು ’ರು’ ಎಂದರೆ ಚದುರಿಸುವುದು  ಎಂದರ್ಥ. ಯಾರು ಅಜ್ಞ್ನಾನ ಅಂಧಕಾರವನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿರುತ್ತಾರೋ ಅವರೇ ನಿಜವಾದ ಗುರು. ಗುರುವು ಶಿಕ್ಷಣ ಕೊಡುತ್ತಾರೆ. ಗುರುವು ಮಾರ್ಗದರ್ಶನ ಮಾಡುತ್ತಾರೆ. ಗುರುವು ಜೀವನೋಪಾಯದ ದಾರಿ ತೋರುತ್ತಾರೆ. ಶಿಷ್ಯರಿಗೆ  ಕಲಿಸಿಕೊಡುವ ಅವರು ಸಾಮಾನ್ಯವಾಗಿ ಶಿಷ್ಯರಿಗಿಂತ ಒಂದು ಕೈ ಮೇಲಿರುತ್ತಾರೆ. ಅದಕ್ಕೆ ಹೊರತಾಗಿ ಉಳಿದವರನ್ನು ’ಗುರುವನ್ನು ಮೀರಿಸಿದ ಶಿಷ್ಯ’ ಎನ್ನುತ್ತಾರೆ.

ಹೀಗೊಂದು ಕಥೆಯಿದೆ. ಒಬ್ಬ ಮಲ್ಲರ ಗುರುವಿನ ಬಳಿ ಹಲವಾರು ಶಿಷ್ಯರಿರುತ್ತಾರೆ. ಅದರಲ್ಲಿ ಒಬ್ಬ ಬಹಳ ಪ್ರಾವೀಣ್ಯತೆ ಸಂಪಾದಿಸಿ ದುರಹಂಕಾರದಿಂದ ಗುರುವಿಗೆ ಸವಾಲು ಹಾಕುತ್ತಾನೆ. ಇಬ್ಬರಿಗೂ ಮಲ್ಲಯುದ್ಧ ಆರಂಭವಾಗಿ ಗುರುವು ಶಿಷ್ಯನನ್ನು ಒಂದೇ ಪಟ್ಟಿನಲ್ಲಿ ಕೆಳಕ್ಕೆ ಬೀಳಿಸುತ್ತಾರೆ. ಶಿಷ್ಯನಿಗೆ ಆಶ್ಚರ್ಯವಾಗುತ್ತದೆ. ಈ ಪಟ್ಟು ತನಗೆ ಕಲಿಸಲಿಲ್ಲವಲ್ಲ ಗುರುಗಳೂ ಎಂದು. ಅದಕ್ಕೆ ಗುರುಗಳು ಹೇಳುತ್ತಾರೆ ’ವಿದ್ಯೆಗಿಂತ ವಿನಯ ದೊಡ್ಡದು. ನಿನಗೆ ಎಲ್ಲಾ ಗೊತ್ತು ಎಂಬ ಅಹಂಭಾವ ಇರುವುದನ್ನು ಕಂಡೇ ನಾನು ಕೆಲವು ಪಟ್ಟುಗಳನ್ನು ಹೇಳಿಕೊಟ್ಟಿಲ್ಲ.  ನೀನು ನನಗೇ ಸವಾಲು ಹಾಕುವ ದಿನಗಳು ಬರುತ್ತದೆ ಎಂದು ನನಗೆ ಗೊತ್ತಿತ್ತು’ ಎನ್ನುತ್ತಾರೆ. ಗುರುಗಳಿಗೆ ದೂರದೃಷ್ಟಿ ಇರುತ್ತದೆ ಎನ್ನುವುದನ್ನು ನಾವು ಈ ಕಥೆಯಿಂದ ಅರಿಯಬಹುದು.

ಮತ್ತೊಂದು ಕಥೆಯಲ್ಲಿ ಗುರುಕುಲದಲ್ಲಿದ್ದ ಒಬ್ಬ ಹುಡುಗ ಕಳ್ಳತನ ಮಾಡುವ ಕೆಟ್ಟ ಹವ್ಯಾಸವನ್ನು ಹೊಂದಿರುತ್ತಾನೆ. ಗುರುಗಳು ಹಲವು ಬಾರಿ ಹೇಳಿ ನೋಡಿದರೂ ಅವನು ಕೇಳಲಿಲ್ಲ. ಹಾಗಾಗಿ ಪ್ರತಿ ಬಾರಿ ಅವನು ಕಳ್ಳತನ ಮಾಡಿದಾಗಲೂ ಒಂದು ಮೊಳೆಯನ್ನು ಗೋಡೆಗೆ ಹೊಡೆಯುತ್ತಿದ್ದರು. ಹಲವಾರು ಮೊಳೆಗಳು ಗೋಡೆ ಸೇರಿದವು. ಕಾಲಾನಂತರ ಹುಡುಗ ತನ್ನ ತುಡುಗ ಬುದ್ದಿಯನ್ನು ತಿದ್ದಿಕೊಂಡ. ಅಂದಿನಿಂದ ಅವನು ಪ್ರತಿ ಒಂದು ಒಳ್ಳೆ ಕೆಲಸ ಮಾಡಿದಾಗಲೂ ಗುರುಗಳು ಒಂದು ಮೊಳೆಯನ್ನು ಗೋಡೆಯಿಂದ ತೆಗೆಯುತ್ತಿದ್ದರು. ಹೀಗೆ ಒಂದು ದಿನ ಗೋಡೆಯಿಂದ ಮೊಳೆಗಳೆಲ್ಲಾ ಹೊರ ಬಂದವು. ಆದರೂ ಗೋಡೆಯಲ್ಲಿನ ತೂತುಗಳು ಮಾತ್ರ ಹಾಗೆ ಇದ್ದವು. ಅದೇಕೆಂದು ಹುಡುಗನು ಕೇಳಿದಾಗ ಗುರುಗಳು ಹೇಳುತ್ತಾರೆ ’ನಿನ್ನಲ್ಲಿ ಕೆಟ್ಟ ಬುದ್ದಿ ಹೋಗಿದೆ ಅದಕ್ಕೇ ಗೊಡೆಯಲ್ಲಿ ಮೊಳೆಗಳಿಲ್ಲ. ಆದರೆ ನೀನು ಕಳ್ಳ ಎಂಬ ನಿನ್ನ ಮೇಲಿರುವ ಆ ಕಪ್ಪು ಚುಕ್ಕಿಯೇ ಈ ಗೋಡೆಯ ಗುರುತುಗಳು. ಅದು ಅಷ್ಟು ಸುಲಭವಾಗಿ ಹೋಗುವುದಿಲ್ಲ’. ಕ್ಲಿಷ್ಟವಾದ ವಿಷಯವನ್ನು ಸರಳವಾಗಿ ಹೇಗೆ ಹೇಳಬಹುದು ಎಂಬುದಕ್ಕೆ ಇದೊಂದು ನಿದರ್ಶನ.

ಮಾರ್ಮಿಕವಾಗಿ ಮಾತನಾಡುವುದು ಒಂದು ಕಲೆ. ಗುರುಗಳು ಈ ರೀತಿ ಸೂಚ್ಯವಾಗಿ ಹೇಳುವಾಗ ಶಿಷ್ಯನಾದವನು ಅಷ್ಟೇ ಚತುರ್ಮತಿಯಾಗಿದ್ದರೆ ಮಾತ್ರ ಅರ್ಥವಾಗುತ್ತದೆ. ಹಿಮಾಲಯಕ್ಕೆ ತೆರಳಿದ್ದ ಗುರುಗಳೊಬ್ಬರು ಹಿಂದಿರುಗಿದಾಗ ತನ್ನ ಪ್ರಿಯ ಶಿಷ್ಯನಾದ ರಾಜನ ಸುತ್ತಲಿರುವವರೂ ನಯವಂಚಕರು ಎಂದು ಅರಿವಾಗುತ್ತದೆ. ಶಿಷ್ಯನು ಅತೀ ಒಳ್ಳೆಯವನಾದ ಪ್ರಯುಕ್ತ ಹೀಗಾಗಿದೆ ಎಂದು ಅರಿತರೂ ಎದುರಿಗೆ ಹೇಳಲಾಗುವುದಿಲ್ಲ. ಬದಿಗೆ ಕರೆದೋ ಅಥವಾ ಗೌಪ್ಯವಾಗಿಯೋ ಕೂಡ ಹೇಳಲಾಗುವುದಿಲ್ಲ. ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬುದೇ ಒಂದು ಕ್ಲಿಷ್ಟ ಸಮಸ್ಯೆಯಾಯಿತು. ಹಾಗಾಗಿ ಎಲ್ಲರ ಸಮಕ್ಷಮದಲ್ಲಿ ರಾಜನಿಗೆ ಹೇಳುತ್ತಾರೆ "ಎಲೈ ರಾಜನ್! ನಿನ್ನ ರಾಜ್ಯವೊಂದು ಶ್ರೀಗಂಧದ ಮರದಂತೆ. ನಿನ್ನ ಒಳ್ಳೆಯತನವೆಂಬ ಸುಗಂಧವು ಎಲ್ಲೆಡೆ ಆವರಿಸಿದ್ದು ತಕ್ಕ ಅಧಿಕಾರಿಗಳು ನಿನ್ನನ್ನು ರಕ್ಷಿಸುತ್ತಿದ್ದಾರೆ" ಎಂದರು. ಗುರುಗಳ ಬೋಳೆತನಕ್ಕೆ ಒಳಗೊಳಗೇ ನಕ್ಕರು ಅಧಿಕಾರಿಗಳು. ಆದರೆ ರಾಜನಿಗೆ "ಶ್ರೀಗಂಧದ ಮರವನ್ನು ಆವರಿಸುವುದು ಸರ್ಪಗಳು" ಎಂದು ಅರಿವಾಗಿ ಕಾಲಕ್ರಮೇಣ ತಕ್ಕ ಕ್ರಮ ತೆಗೆದುಕೊಂಡು ದಕ್ಷ ನಾಯಕರನ್ನು ನೇಮಿಸಿದನಂತೆ. ಇದು ಕಥೆಯೇ ಆಗಿದ್ದರೂ ಗುರು-ಶಿಷ್ಯರು ಒಬ್ಬರನ್ನೊಬ್ಬರು ಎಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು ಎಂಬುದನ್ನು ಸಾಬೀತು ಮಾಡುತ್ತದೆ. ಇಂಥದ್ದೇ ಮಾರ್ಮಿಕ ಅರ್ಥವುಳ್ಳ ಸಂಭಾಷಣೆಯನ್ನು ’ಅರಗಿನ ಮನೆಯ ಸಂದರ್ಭದಲ್ಲಿ’ ವಿದುರ-ಧರ್ಮರಾಯನ ನಡುವೆ ಕೂಡ ಕಾಣಬಹುದು.

ಗುರುಗಳು ಎಲ್ಲ ಕಾಲಕ್ಕೂ, ಎಲ್ಲ ದೇಶದಲ್ಲೂ, ಎಲ್ಲ ಪಂಥದಲ್ಲೂ ಇರುತ್ತಾರೆ. ತಾವು ಕಲಿತ ಅನುಭವ ಪಾಠವನ್ನು ಇನ್ನೊಬ್ಬರಿಗೆ ತಿಳಿಸಿಕೊಡುವವನೂ ಗುರುವೇ ಆಗುತ್ತಾನೆ. ತಮ್ಮ ಜ್ಞ್ನಾನವನ್ನು ಇನ್ನೊಬ್ಬರಿಗೆ ತಿಳಿಸಿ ಕೊಡುವುದರಿಂದ ಜ್ಞ್ನಾನ ಜ್ಯೋತಿ ಬೆಳಗುತ್ತದೆ. ಹೀಗೆ ತಿಳಿಸಿಕೊಡದೇ ಹೋದ ಅಥವಾ ಕಲಿಯದೇ ಹೋದ ವಿಷಯಗಳೇ ಮುಂದೆ ನಶಿಸಿ ಹೋಗುತ್ತದೆ. ಈಗಿನ ನವಯುಗದಲ್ಲಿ ಹಲವಾರು ಕುಲುಕಸುಬುಗಳು ಇದೇ ದಾರಿಯನ್ನು ಹಿಡಿದಿವೆ ಎಂದರೆ ಅದು ಅತಿಶಯೋಕ್ತಿಯಲ್ಲ.

ಎಲ್ಲ ಉತ್ತಮ ಕೆಲಸಗಳನ್ನು ನೆನೆಯಲು ಒಂದು ಶುಭದಿನವಿರುವ ಹಾಗೆ ಗುರುಗಳ ನೆನೆವುದಕ್ಕೂ ಒಂದು ಶುಭದಿನವಿದೆ. ಅದೇ ’ಗುರು ಪೂರ್ಣಿಮಾ’. ತನ್ನ ಜ್ಞ್ನಾನದ ಪರಿಪೂರ್ಣತೆಯಲ್ಲಿ ಗುರುಗಳಿಗೆ ಅಭಿವಂದಿಸುವ ಶುಭ ದಿನವೇ ಗುರು ಪೂರ್ಣಿಮ. ಹಿಂದಿನ ವರ್ಷದಲ್ಲಿ ತಾನು ಕಲಿತಿದ್ದೆಷ್ಟು ಎಂದು ಅರಿತು ತನ್ನ ಮುಂದಿನ ವರ್ಷದಲ್ಲಿ ತಾನೇನು ಕಲಿಯಬೇಕೆನ್ನುವ ದಾರಿಯನ್ನು ನಿರ್ಧಾರ ಮಾಡಿ ಅದರ ಮೇಲೆ ಸಂಪೂರ್ಣ ಗಮನವಿಡುವವುದು ಈ ಶುಭದಿನದ ಮೂಲ ಉದ್ದೇಶ. ಒಂದು ರೀತಿ ವಾರ್ಷಿಕ ಪರೀಕ್ಷೆಯ ತರಹ.

ಡಾ|| ಎಸ್.ರಾಧಾಕೃಷ್ನನ್ ಅವರು ಸರ್ವಶ್ರೇಷ್ಠ ಶಿಕ್ಷಕರು ಎಂದು ಹೆಸರು ಪಡೆದಿದ್ದರು. ಅವರ ಜನ್ಮ ದಿನವಾದ ಸೆಪ್ಟಂಬರ್ ಒಂಬತ್ತರಂದು ’ಶಿಕ್ಷಕರ ದಿನ’ ಎಂದು ಆಚರಿಸುತ್ತೇವೆ.

’ಉಪನಿಷದ್’ ಎಂಬ ಪದದಲ್ಲಿ ’ಉಪ’ ಎಂದರೆ ಹತ್ತಿರ, ’ನಿ’ ಎಂದರೆ ಕೆಳಗೆ, ’ಷದ್’ ಎಂದರೆ ಕುಳಿತುಕೊಳ್ಳುವುದು. ’ಉಪನಿಷದ್’ ಎಂದರೆ ಗುರುವಿನ ಬಳಿ ಹತ್ತಿರದಲ್ಲಿ ಕುಳಿತು ಮಾರ್ಗದರ್ಶನ ಪಡೆಯುವುದು ಎಂದು. ಕುರುಕ್ಷೇತ್ರ ಯುದ್ದದಲ್ಲಿ  ಕೃಷ್ಣ-ಅರ್ಜುನರ ನಡುವೆ ನೆಡೆದದ್ದು ಇದೇ ಅಲ್ಲವೇ?

ಪಾಠ ಕಲಿಸಿದ ಗುರುವಿಗೆ ಕೃತಜ್ಞ್ನತಾ ಪೂರ್ವಕವಾಗಿ ಕೊಡುವ ಯಾವುದೇ ಆದರೂ ಅದನ್ನು ’ಗುರುದಕ್ಷಿಣೆ’ ಎನ್ನುತ್ತರೆ. ಅದನ್ನು ಗುರುವು ಆಜ್ಞ್ನಾಪೂರ್ವಕವಾಗಿ ಶಿಷ್ಯನಲ್ಲಿ ಕೇಳಿದ್ದಾಗಬಹುದು ಅಥವ ಶಿಷ್ಯನ ಬಲವಂತಕ್ಕೆ ಗುರುವು  ಕೇಳುವುದೂ ಆಗಬಹುದು. ಆಜ್ಞ್ನಾಪೂರ್ವಕವಾಗಿ ಶಿಷ್ಯನ ಹೆಬ್ಬರಳನ್ನೇ ಕೇಳಿದವರು ಗುರು ದ್ರೋಣಚಾರ್ಯರು. ಅದರ ಹಿಂದಿನ ಉದ್ದೇಶ ಬೇರೆ. ಅದು ಇಲ್ಲಿ ಮುಖ್ಯವಲ್ಲ. ಗುರುದಕ್ಷಿಣೆಯ ಅತೀ ಕಠೋರ ರೂಪಕ್ಕೆ ಒಂದು ಉದಾಹರಣೆ ಅಷ್ಟೆ!

ಗುರು ಸಾಂದೀಪನಿಯ ಶಿಷ್ಯರು ಶ್ರೀ ಕೃಷ್ಣ, ಬಲರಾಮ ಹಾಗೂ ಸುಧಾಮ. ಸಕಲ ವಿದ್ಯೆಗಳನ್ನು ಪಾರಂಗತ ಮಾಡಿಕೊಂಡು ಗುರುದಕ್ಷಿಣೆ ಬಗ್ಗೆ ಕೇಳಿದಾಗ, ಅಪಹೃತ ಮಗನ ಚಿಂತೆಯಲ್ಲಿನ ನಿರ್ಲಿಪ್ತತೆಯಿಂದಾಗಿ ಗುರುಗಳು ತಮಗೇನೂ ಬೇಡವೆಂದು ಹೇಳುತ್ತಾರೆ. ಇನ್ನೂ ಬಲವಂತ ಮಾಡಿದಾಗ ಋಷಿಪತ್ನಿಯೊಡನೆ ಕೇಳುವಂತೆ ಹೇಳುತ್ತಾರೆ. ಋಷಿಪತ್ನಿಯು ದು:ಖದಿಂದ ’ಕಳೆದುಹೋದ ನಮ್ಮ ಮಗನನ್ನು ವಾಪಸ್ಸು ಕರೆದುಕೊಂಡು ಬಾ’ ಎಂದು ಕೇಳುತ್ತಾಳೆ. ಸಾಮಾನ್ಯರಿಗೆ ಇದು ಕಷ್ಟವಾದ ಕೆಲಸ ಆದರೆ ಪರಮಾತ್ಮನಿಗೆ ಅಲ್ಲ. ’ಪಾಂಚಜನ್ಯ’ ಎಂಬ ರಕ್ಕಸನು ಋಷಿಕುಮಾರನನ್ನು ಕದ್ದೊಯ್ದಿದ್ದನು. ಕೃಷ್ಣನು ಅವನೊಡನೆ ಯುದ್ಧ ಮಾಡಿ, ಅವನನ್ನು ಸೋಲಿಸಿ, ಋಷಿಕುಮಾರನನ್ನು ಕರೆದುತಂದು ಗುರು ದಕ್ಷಿಣೆಯಾಗಿ ಕೊಡುತ್ತಾನೆ. ಇದು ಗುರುದಕ್ಷಿಣೆ ವಿಚಾರವಾಗಿ ಇನ್ನೊಂದು ಕಥೆ.

ಗುರುದಕ್ಷಿಣೆಯ ಕಠೋರ ರೂಪಕ್ಕೆ ಇನ್ನೊಂದು ಉದಾಹರಣೆ ಉತ್ತಂಕ. ಗುರು ವೇದರ ಪಟ್ಟ ಶಿಷ್ಯ ಉತ್ತಾಲಕ (ಅಥವ ಉತ್ತಂಕ). ಗುರುದಕ್ಷಿಣೆ ಕೊಡುವೆನೆಂದಾಗ ಗುರುಗಳು ಅವನನ್ನು ಗುರು ಪತ್ನಿಯ ಬಳಿ ಕಳಿಸುತ್ತಾರೆ. ಗುರು ಪತ್ನಿಯು ಉತ್ತಂಕನಿಗೆ ಹೇಳುತ್ತಾಳೆ ’ನನಗೆ ಮಹಾರಾಜ ಪೌಶ್ಯನ ಪತ್ನಿಯ ಕಿವಿಯ ಓಲೆಗಳು ಬೇಕು. ಇನ್ನು ನಾಲ್ಕು ದಿನಗಳಲ್ಲಿ ತರದಿದ್ದಲ್ಲಿ ನಿಷ್ಪ್ರಯೋಜಕನಾಗೆಂದು ಶಪಿಸಿ ಬಿಡುತ್ತೇನೆ’ ಎಂದಳು. ಎಂತಹ ಅಗ್ನಿಪರೀಕ್ಷೆ ! ಆತನು ಪೌಶ್ಯನಲ್ಲಿ ಹೋಗಿ ಆತನ ಪತ್ನಿಯನ್ನು ಬೇಡಿ ಓಲೆಗಳನ್ನು ತೆಗೆದುಕೊಳ್ಳುತ್ತಾನೆ. ವಾಪಸ್ಸು ಬರುವಾಗ ಬಾಯಾರಿಕೆಯಾಗಿ ಓಲೆಗಳನ್ನು ಕೆಳಗೆ ಇಟ್ಟಾಗ ಅದನ್ನು ತಕ್ಷಕನು ಕದ್ದೊಯ್ಯುತ್ತಾನೆ. ಅವನನ್ನು ಹಿಂಬಾಲಿಸಿಕೊಂಡು ಹೋಗಿ ಇಂದ್ರನ ಸಹಾಯದಿಂದ ವಾಪಸ್ಸು ಪಡೆದುಕೊಂಡು ಅವನದೇ ಕುದುರೆಯ ಸಹಾಯದಿಂದ ಋಷಿಪತ್ನಿಯ ಬಳಿ ಹೋಗಿ ಅವಳಿಗೆ ಅದನ್ನು ಒಪ್ಪಿಸುತ್ತಾನೆ.

ನಳ-ಋತುಪರ್ಣರ ವಿಷಯದಲ್ಲಿ ಇಬ್ಬರೂ ಗುರುಗಳೇ ! ಆದರೆ ಒಬ್ಬ ಹೇಳಿಕೊಡುವಾಗ ಮತ್ತೊಬ್ಬ ಶಿಷ್ಯನಾಗುತ್ತಾನೆ ... ನಳ ’ಅಶ್ವ ಹೃದಯ’ ವಿದ್ಯೆಯನ್ನು ಋತುಪರ್ಣನಿಗೆ ಹೇಳಿಕೊಟ್ಟರೆ, ಅವನು ನಳನಿಗೆ ಪಗಡೆಯಾಟದಲ್ಲಿ ಗೆಲ್ಲುವ ಮರ್ಮ ಹೇಳಿಕೊಟ್ಟ. ಈ ವಿದ್ಯೆಯಿಂದ ನಳ ತನ್ನ ರಾಜ್ಯವನ್ನು ಮತ್ತೆ ಗೆದ್ದುಕೊಳ್ಳಲು ಸಹಾಯವಾಯಿತು.

ಯಾವ ವಿದ್ಯೆಯಿಂದ ಯಾವಾಗ ಉಪಯೋಗವಾಗುವುದೆಂದು ಯಾರಿಗೆ ಗೊತ್ತು ? ಯಾವುದೇ ವಿದ್ಯೆ ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಅಜಿತಸೇನಾಚಾರ್ಯರು ಮತ್ತು ರನ್ನರ ನಡುವಿನ ಈ ನುಡಿ ಸಂವಾದ ಯಾರು ತಾನೇ ಅರಿಯರು? ಗುರುಗಳ ಹೇಳಿಕೆ ಹೀಗಿದೆ:

ಕೊಂಡು ತಂದು ಹೊತ್ತು ಮಾರಿ
ಲಾಭಗಳಿಸಿ ಹೊಟ್ಟೆಹೊರೆಯಲು
ವಿದ್ಯೆಯೇನು ಬಳೆಯ ಮಲಾರವೇ?

ಈ ಕಾಲಕ್ಕೆ ಮನಸ್ಸಿಗೆ ಬರುವ ಗುರು-ಶಿಷ್ಯರ ಜೋಡಿ ಎಂದರೆ ರಾಮಕೃಷ್ಣ ಪರಮಹಂಸ - ವಿವೇಕಾನಂದ. ಇಂದಿಗೂ ಇವರುಗಳು ಹಾಕಿಕೊಟ್ಟ ಹಾದಿ ನಮಗೆ ಮಾರ್ಗದರ್ಶನವಾಗಿದೆ. ಒಬ್ಬ ಟೀಚರ್ ಶಾಲೆಯಲ್ಲಿ ಮಕ್ಕಳಿಗೆ ಹೇಳಿದರಂತೆ ’ನನಗೆ ವಿವೇಕಾನಂದರಂತಹ ಒಬ್ಬ ವಿದ್ಯಾರ್ಥಿ ಸಿಗಲಿಲ್ಲವಲ್ಲ’ ಎಂದು. ಒಬ್ಬ ಹುಡುಗ ಅದಕ್ಕೆ ಹೇಳಿದ ’ನಮಗೂ ಅಷ್ಟೆ ಸಾರ್. ರಾಮಕೃಷ್ಣರಂತಹ ಒಬ್ಬ ಗುರುಗಳು ಸಿಗಲಿಲ್ಲವಲ್ಲ’ ಎಂದು.

ಹಲವಾರು ಬಾರಿ ಗುರು-ಶಿಷ್ಯರ  ನಡುವೆ ಎಂಥಾ ಸಂಬಂಧ ಉಂಟಾಗಿರುತ್ತದೆ ಎಂದರೆ ಸಾವಿನಲ್ಲೂ ಅದು ಮುಂದುವರೆಯುತ್ತದೆ. ಇದಕ್ಕೊಂದು ಜ್ವಲಂತ ಉದಾಹರಣೆಯೆಂದರೆ ನನ್ನ ತಂದೆ ಹಾಗೂ ಅವರ ಗುರು ಶ್ರೀನಿವಾಸ ಮೂರ್ತಿಗಳ ನಡುವಿನ ಬಾಂಧವ್ಯ. ಇಹಲೋಕದ ವ್ಯಾಪಾರ ಮುಗಿಸಲು ಇಂಥಾ ವಯಸ್ಸು ಎಂಬುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದ್ದೇ. ಅವರ ಶಿಷ್ಯರಾದ ನನ್ನ ತಂದೆಯವರು ತಮ್ಮ ಪ್ರಯಾಣ ಮುಗಿಸಿದರು. ತಮ್ಮ ದೇಹದ ಒಂದು ಅಂಗವೇ ಕಳೆದುಕೊಂಡಂತಾದ ಅವರ ಗುರುಗಳಿಗೆ ಅದೊಂದು ದೊಡ್ಡ ಆಘಾತವೆನ್ನಬಹುದು. ನಮ್ಮ ತಂದೆಯ ಕಾಲಾನಂತರ ಬಹುಶ: ಆರೇ ತಿಂಗಳಲ್ಲಿ ಅವರೂ ಹರಿಪಾದ ಸೇರಿದರು.

ಗುರು-ಶಿಷ್ಯ ಜೋಡಿಯ ಕಥೆಗಳು ಇನ್ನೂ ಬೇಕಾದಷ್ಟು ಇದೆ. ವಿಶ್ವಾಮಿತ್ರ-ಹರಿಶ್ಚಂದ್ರ, ಚಾಣಕ್ಯ-ಚಂದ್ರಗುಪ್ತ, ಗುರು ಗೋವಿಂದ-ಷರೀಫ ಹೀಗೆ. ಎಲ್ಲ ಕಥೆಯಲ್ಲೂ ನಾವು ಕಾಣುವ ಸಾಮಾನ್ಯ ಅಂಶ ಏನೆಂದರೆ  ಶಿಷ್ಯನು ಗುರುವಿನ ಮೇಲಿಟ್ಟಿದ್ದ ಅಪರಿಮಿತ ಭಕ್ತಿ, ಶಿಷ್ಯನ ಶಿಸ್ತು ಹಾಗೂ ಕಠಿಣವಾದ ಆಜ್ಞ್ನಾಪಾಲನೆ. ತೊಡೆಯ ಮೇಲೆ ತಲೆ ಇಟ್ಟು ಮಲಗಿದ್ದ ಗುರುಗಳಿಗೆ ತೊಂದರೆಯಾಗದಿರಲಿ ಎಂದು ದುಂಬಿಯ ಕಡಿತವನ್ನು ಸಹಿಸಿಯೂ ಶಾಪಕ್ಕೊಳಗಾದ ಕರ್ಣನ ಕಥೆ ಯಾರಿಗೆ ಗೊತ್ತಿಲ್ಲ?

ಈ ದಿನಗಳಲ್ಲಿ ’ಗುರು-ಶಿಷ್ಯ’ ಅರ್ಥದ ಸೊಬಗೇ ಕಳೆದುಹೋಗಿದೆ. ಹಾಗಂತ ಅಂದಿನ ಕಾಲದ್ದೇ ಶ್ರೇಷ್ಟ ಎಂದೇನೂ ಅಲ್ಲ. ಬಲರಾಮನಂತಹ ಗುರುವಿಗೆ ದುರ್ಯೋಧನ ಶಿಷ್ಯನಾಗಿದ್ದ. ಇಂದಿನ ವಿಚಾರವಾಗಿ ನಾ ಹೇಳಹೊರಟಿದ್ದು ಇಂದು ಇದೊಂದು ಲೇವಡಿಯ ಭಾಷಾ ಪ್ರಯೋಗವಾಗಿದೆ. ’ಏನ್ ಗುರೂ, ಕ್ಲಾಸ್ ಬಂಕ್ ಮಾಡಿ ಫಿಲಂಗೆ ಹೋಗಣ್ವಾ?’ ಅನ್ನೋದು ಕೆಲವು ವರ್ಷಗಳ ಹಿಂದಿನ ಮಾತಾದರೆ, ಈಗ ’ಶಿಷ್ಯಾ! ಇವೆಲ್ಲ ನನ್ ಹತ್ರ ಬೇಡ. ನಾನು ಒಂದ್ಸಾರಿ ಲಾಂಗ್ ಎತ್ತಿದರೆ ನಿನ್ನ ಪಟಾಲಂ ಶಾರ್ಟ್ ಆಗತ್ತೆ, ಹುಷಾರ್!!!’.

ಒಳ್ಳೆಯದೂ ಕೆಟ್ಟದ್ದೂ ಎಲ್ಲ ಕಾಲಕ್ಕೂ ಇರುವುದೇ ನಿಜ. ಆದರೂ ಹೀಗೊಂದು ಕವಿತೆ ಇದೆ:

ಆಗಿನ ಕಾಲ:
--------
ಹಿಂದೆ ಗುರುವಿದ್ದ
ಮುಂದೆ ಗುರಿಯಿತ್ತು
ಸಾಗುತ್ತಿತ್ತು ರಣಧೀರರ ಗುಂಪು

ಈಗಿನ ಕಾಲ:
--------
ಹಿಂದೆ ಗುರುವಿಲ್ಲ
ಮುಂದೆ ಗುರಿಯಿಲ್ಲ
ಸಾಗುತ್ತಿದೆ ರಣಹೇಡಿಗಳ ಗುಂಪು

೧೧ನೇ ಜುಲೈ ಹುಣ್ಣಿಮೆಯಂದು ಎಲ್ಲೆಲ್ಲೂ ಗುರು ಪೌರ್ಣಿಮಾ ಆಚರಿಸಲಾಗುತ್ತಿದೆ. ಈ ಸುಸಂಧರ್ಭದಲ್ಲಿ ಜಗತ್ತಿನ ಎಲ್ಲ ಗುರುಗಳಿಗೂ ನನ್ನ ಅನಂತ ವಂದನೆಗಳು ...