Saturday, December 19, 2009

ಮೀಟಿಂಗ್ Crashers

ಸಲಾಹಿ ದಂಪತಿಗಳು ಇತ್ತೀಚೆಗೆ ಭಾರತದ ಪ್ರಧಾನಿ ಹಾಗೂ ಅಮೇರಿಕದ ರಾಷ್ಟ್ರಪತಿ’ಯವರ ಸಭೆಗೆ ಹೋಗಿ (ನುಗ್ಗಿ) ಬಂದರು. ನನಗೆ ತಿಳಿದ ಮಟ್ಟಿಗೆ ಅವರು ಮಾಡಿದ್ದು ಇಷ್ಟೇ ! ಹೋದರು, ಫೋಟೋ ತೆಗೆಸಿಕೊಂಡರು, ಹೊರ ಬಂದರು, ವದನಪುಸ್ತಕ’ದಲ್ಲಿ ಫೋಟೋಗಳನ್ನು ಹಾಕಿದರು .... ಮುಂದೆ ನೆಡೆದದ್ದು ಚರಿತ್ರೆ ....

ಎಲ್ಲ ಸಂದರ್ಶನಗಳಲ್ಲೂ ಇವರು, ತಾವು ಮೀಟಿಂಗ್ Crashers ಅಲ್ಲ ಅಂತ ಹೇಳ್ತಾ ಬಂದಿದ್ದಾರೆ ... ಮೀಟಿಂಗ್’ಗೆ ಹೋಗಿ, ಇದ್ದು, ಬಂದ ಮಾತ್ರಕ್ಕೆ ಅದು ಕ್ರಾಶ್ ಅಲ್ಲ ... ಅವರ ಇರುವಿಕೇ ಒಂದು ಕ್ರಾಶ್ ... ರವಿಚಂದ್ರನ್ ಸಿನಿಮಾಗಳಲ್ಲಿ ತೋರಿಸುವಂತೆ ಧ್ವಂಸ ಮಾಡಿದರೇ ಕ್ರಾಶ್ ಅಲ್ಲ ...

Crashers ಅಂತ ಯಾಕೆ ಕರೆದೆ ಅಂದರೆ, ಇವರುಗಳು ಒಂದು ತರಹ ಹಿಂಸಾತ್ಮಕ ವ್ಯಕ್ತಿಗಳು ... ಚೂರಿ ತೆಗೆದುಕೊಂಡು ಚುಚ್ಚಿದರೆ ಮಾತ್ರ ಹಿಂಸೆ ಅಂತೇನಲ್ಲ ...

ಬಿಟ್ಬಿಡು ಗುರೂ.. ಕೊರೀ ಬೇಡಾ... ರಕ್ತ ಬರ್ತಿದೇ ಅಂದಿರಾ ... ಬಿಡಲ್ಲ... ಮುಖ್ಯ ವಿಚಾರಕ್ಕೆ ಬರ್ತೀನಿ ... ಇಂದಿನ ವಿಚಾರ ಮೀಟಿಂಗ್’ನಲ್ಲಿರೋ ಇಂತಹ ಕ್ರಾಶರ್ಸ್ ಬಗ್ಗೆ ...

ಕೆಲವೆಲ್ಲ ನನಗೆ ಸರಿ ಹೋಗೋಲ್ಲ !! ಏನು ಸರಿ ಹೋಗೋಲ್ಲ ಅಂದ್ರಾ? ಕೇಳಿ ..

ನಾನೊಮ್ಮೆ ಯಾವುದೋ ಹೋಟೆಲ್ಲಿನಲ್ಲಿ ನೆಡೆದ ಮೀಟಿಂಗ್’ಗೆ ಹೋಗಿದ್ದೆ. ನನ್ನಂತಹ ಕೇಳುಗರು, ಅಲ್ಲಲ್ಲೇ ಹಾಕಿದ್ದ ಗುಂಡಗಿನ ಟೇಬಲ್’ನ ಚೇರುಗಳನ್ನು ಅಲಂಕರಿಸಿದ್ದೆವು. ಬೆಳಗಿನಿಂದ ಊಟದ ಸಮಯ ಬರುವವರೆಗೂ ಭಯಂಕರ ಕಸಿವಿಸಿ. ಯಾಕೆ ಅಂದರೆ, ಟೇಬಲ್ ಮೇಲೆ ಹಾಕಿದ್ದ ಬಿಳೀ ವಸ್ತ್ರದ ಒಂದು ಭಾಗ ಇಸ್ತ್ರಿ ಆಗಿರಲಿಲ್ಲ. ಮುದುರು ಮುದುರಾಗಿತ್ತು. ಆ ವಸ್ತ್ರವು ಎಲ್ಲ ಕಡೆ ನೀಟಾಗಿ ಇದ್ದರೂ ಒಂದೆಡೆ ಮಾತ್ರ ಹೀಗಿತ್ತು. ಅದೂ ನಾನು ಕುಳಿತ ಕಡೆ ಮಾತ್ರ. ಥತ್! ಬಟ್ಟೆ ತೆಗೆದುಕೊಂಡು ಹೋಗಿ ಇಸ್ತ್ರಿ ಮಾಡಿಬಿಡೋಣ ಎನ್ನುವಷ್ಟು ಕಸಿವಿಸಿ.

ಊಟದ ಸಮಯಕ್ಕೆ, ಬೇರೆಡೆ ಖಾಲಿ ಇದ್ದ ಮತ್ತೊಂದು ಚೇರನ್ನು ಹುಡುಕಿ ಕುಳಿತುಕೊಂಡೆ. ವಸ್ತ್ರ ಲಕ್ಷಣವಾಗಿತ್ತು, ಆದರೆ ಅಲ್ಲೇ ಮೂಲೆಯಲ್ಲಿ ಇನ್ನೂ ಶುಚಿ ಮಾಡದ ಊಟದ ಟೇಬಲ್ ಇರಬೇಕೆ? ಹೋಗ್ಲಿ ಅಂತ ಅಂದುಕೊಂಡರೆ, ಸಂಜೆವರೆಗೂ ಮತ್ತೆ ಕಸಿವಿಸಿ. ಈಗೇನಾಯ್ತು ದೊಡ್ಡರೋಗ ಅಂದಿರಾ. ’ಮಜ್ಜಿಗೆ ಹುಳಿ’ಗೆ ಯಾರೋ ಫಲಕ ನೇತು ಹಾಕಿದ್ದು "ಮಜ್ಜಿಗೆ ಹುಳ" ಎಂದು. ಆ ಫಲಕ ನೋಡೀ ನೋಡೀ ಮನಸ್ಸಿಗೆ ಹಿಂಸೆ ಮಾಡಿಕೊಳ್ಳುತ್ತಿದ್ದೆ !!

ಇದಿಷ್ಟು ಪೀಠಿಕೆ ... ಆಫೀಸಿನ ಮೀಟಿಂಗ್’ಗಳಲ್ಲಿ ನನಗಾಗೋ ಹಿಂಸೆಗಳನ್ನು ಕೇಳಿ:

೧. ಎಲ್ಲರೂ ಧ್ಯಾನಾಸಕ್ತರಾಗಿ ಕುಳಿತರಲು, ನನ್ನ ಪಕ್ಕದಲ್ಲಿ ಕುಳಿತಿರುವವನು ಆಗಾಗ ತನ್ನ ಪೆನ್ನನ್ನು ಆನ್-ಆಫ್ ಮಾಡುತ್ತಿದ್ದ. ಕಿಟಿ-ಕಿಟಿ ಕಿಟಿ-ಕಿಟಿ ಕಿಟಿ-ಕಿಟಿ ...

೨. ಕೆಲವರು ಉಗುರು ಕಚ್ಚುವುದು, ಪೆನ್ ಕಚ್ಚುವುದು ಇತ್ಯಾದಿಗಳನ್ನು ಮೀಟಿಂಗ್ ನೆಡೆಯುವಾಗಲೇ ಮಾಡುವುದು .. ಬಹುಶ: ನಾನಿದ್ದಾಗ ಮಾತ್ರ ಅಂತ ಅನ್ನಿಸುತ್ತೆ !!

೩. ನಾ ಕಂಡ ಮತ್ತೊಬ್ಬರದು ಮಹಾ ವಿಶೇಷ ... ಪ್ರತಿ ಐದು ನಿಮಿಷಕ್ಕೆ ಕಿವಿಯಲ್ಲಿ ಬೆರಳ ತೂರಿಸಿ ಕೂದಲು ಕಿತ್ತುವುದು. ಅಲ್ಲಾ, ಐದು ನಿಮಿಷಕ್ಕೇ ಕೂದಲು ಮತ್ತೆ ಬೆಳೆಯುತ್ತದೆಯೇ?

೪. ಇಲ್ಲಿನ ಮೀಟಿಂಗ್’ಗಳು ನೆಡೆಯುವಾಗಲೇ ಪಾನೀಯ ಅಥವಾ ಆಹಾರ ಸೇವನೆ ಮಾಡಬಹುದು. ನನ್ನ ಟೀಮಿನ ಒಬ್ಬಾತ, ಎಲ್ಲೆಡೆ ನಿಶಬ್ದವಾಗಿರಲು ಚಿಪ್ಸ್ ತಿನ್ನುತ್ತಾನೆ .... ಕರಂ ಕರಂ ಕರಂ .... ಚಿತ್ರ ಹಿಂಸೆ .... ಮೈ ಪರಚಿಕೊಳ್ಳುವಂತೆ ಆಗುತ್ತೆ, ನನಗೆ...

೫. ಬಹಳ ವರ್ಷಗಳ ಮುನ್ನ ಒಬ್ಬಾತನ ವಿಶೇಷ ಗುಣ ಕಂಡು ದಂಗುಬಡಿದು ಹೋಗಿದ್ದೆ. ಮೀಟಿಂಗ್ ಸಮಯದಲ್ಲಿ ಹೋಟೆಲ್ಲಿನಿಂದ ಕಾಫೀ ತರಿಸಿದ್ದೆವು. ಈತ, ಲೋಟದಲ್ಲಿನ ಕಾಫೀ ಹೀರುವಾಗ ಒಂದೆರಡು ಹನಿ ಲೋಟದ ಹೊರಗೆ ಸೋರಿತು. ಎಲ್ಲಿ ಕೆಳಗೆ ಬೀಳುತ್ತೋ ಎಂದು ಥಟ್ಟನೆ ಪಿಂಗಾಣಿ ಲೋಟದ ಹೊರಭಾಗ ನೆಕ್ಕೋದೇ?

೬. ಮತ್ತೊಬ್ಬನ ವಿಚಾರ ಕೇಳಿ. ಮೀಟಿಂಗ್ ಶುರುವಾದ ಮೇಲೆ ಈತ ಒಳಗೆ ಬರುತ್ತಾನೆ. ರೂಮಿನ ಎಲ್ಲೆಡೆ ಜನ ಕುಳಿತರಲು, ಮಧ್ಯದಲ್ಲೊಂದೆಡೆ ಕುರ್ಚಿ ಎಳೆದುಕೊಂಡು ಕೂರುತ್ತಾನೆ. ನೀವು ಬ್ಯುಸಿ ಇದ್ದರೂ ಅವನ ’ಗುಡ್ ಮಾರ್ನಿಂಗ್’ ನೀವು ಕೇಳಲೇಬೇಕು. ತಿರುಗಾಲಿ ಕುರ್ಚಿಯಲ್ಲಿ ಕುಳಿತು ಆಗಾಗ ಎಲ್ಲರ ಮುಖಗಳನ್ನೂ ಒಮ್ಮೆ ನೋಡುವುದು, ಸ್ವಲ್ಪ ಹೊತ್ತು ಸುಮ್ಮನೆ ಕೂಡುವುದು, ಮತ್ತೊಮ್ಮೆ ಎಲ್ಲರ ಮುಖ ನೋಡುವುದು ಹೀಗೆ ....

೭. ಮತ್ತೊಬ್ಬನ ಕಥೆ ಕೇಳಿ. ಮೀಟಿಂಗ್’ಗೆ ಬರುವ ಮುನ್ನ ಪೆಪ್ಸಿ’ಯ ಪ್ಲಾಸ್ಟಿಕ್ ಬಾಟ್ಲಿ ಹಿಡಿದು ಬರುತ್ತಾನೆ. ಕುರ್ಚಿಯಲ್ಲಿ ಕುಳಿತು, ಮುಚ್ಚುಳ ತೆರೆದು, ಒಂದು ಸಿಪ್ ಹೀರಿ, ಮುಚ್ಚುಳ ಮುಚ್ಚಿ, ಬಾಟ್ಲಿ ಪಕ್ಕಕ್ಕೆ ಇರಿಸಿ, ಕೈ ಒರೆಸಿಕೊಂಡು, ಬಾಯಿ ಒರೆಸಿಕೊಂಡು, ಬಾಯಿಗೆ ಕೈ ಅಡ್ಡ ಹಿಡಿದು ಮೆಲ್ಲಗೆ ತೇಗಿ, ಮತ್ತೆ ಬಾಟ್ಲಿ ತೆಗೆದುಕೊಂಡು, ಮುಚ್ಚುಳ ತೆರೆದು, ಒಂದು ಸಿಪ್ ಹೀರಿ, ಮುಚ್ಚುಳ ಮುಚ್ಚಿ, ಬಾಟ್ಲಿ ಪಕ್ಕಕ್ಕೆ ಇರಿಸಿ, ಕೈ ಒರೆಸಿಕೊಂಡು, ಬಾಯಿ ಒರೆಸಿಕೊಂಡು, ಬಾಯಿಗೆ ಕೈ ಅಡ್ಡ ಹಿಡಿದು ಮೆಲ್ಲಗೆ ತೇಗಿ,ಮತ್ತೆ ಬಾಟ್ಲಿ ತೆಗೆದುಕೊಂಡು, ...... ನನ್ನನ್ನು ಹಿಡ್ಕೊಂಡ್ ಹೊಡೆಯೋಣ ಅನ್ನಿಸುತ್ತಾ ಇದೆಯಾ ? ಅಲ್ರೀ, ಎರಡು ಸಾರಿ ಓದಿದ್ದಕ್ಕೇ ನಿಮಗೆ ಹೀಗೆ ಅನ್ನಿಸಿರಬೇಕಾದರೆ, ಪ್ರತಿ ದಿನ, ಇಡೀ ಒಂದು ಲೀಟರ್ ಕುಡಿಯುವವರೆಗೂ ನನ್ನ ಗಮನವನ್ನು ಕಿತ್ತು ಸೆಳೆವಾಗ ನನಗೆ ಹೇಗೆ ಅನ್ನಿಸಿರಬೇಡ?

೮. ಈಗ ಹೇಳೋ ವಿಷಯ ನಿಮಗೆ ಬ್ಯಾಸರ ತರಿಸಿದರೆ ನನ್ನ ಪರಿಸ್ಥಿತಿಯನ್ನೂ ಒಮ್ಮೆ ಊಹಿಸಿ ಆಮೇಲೆ ಅಸಹ್ಯ ಪಟ್ಟುಕೊಳ್ಳಿ, ಆಯ್ತಾ? ನನ್ನೆದುರಿಗೆ ಕುಳಿತ ಈ ಮಹಾಶಯ, ತನ್ನ ಪೆನ್ಸಿಲ್’ನ ಹಿಂಭಾಗವನ್ನು ಕಿವಿಯಲ್ಲಿ ತೂರಿಸಿ ಓಡಾಡಿಸುತ್ತ ಆನಂದಪಡುತ್ತಿದ್ದ. ನನಗೆ ಏನೋ ನೋಟ್ ಮಾಡಿಕೊಳ್ಳುವುದಿತ್ತು. ಪೆನ್ನಿನಲ್ಲಿ ಬರೆದುಕೊಳ್ಳಹತ್ತಿದೆ. ಯಾಕೋ ಏನೋ ಬರೆಯಲೇ ಇಲ್ಲ. ಒಮ್ಮೆ ಒದರಿ ನಂತರ ಬರೆಯಲು ಪ್ರಯತ್ನ ಮಾಡಿದೆ. ನನ್ನ ಪೆನ್ ಬರೆಯಲು ಮುಷ್ಕರ ಹೂಡಿತ್ತು. ನನ್ನ ಅವಸ್ತೆ ನೋಡಿ, ಎದುರಿಗೆ ಕುಳಿತಿದ್ದ ಆ ಮಹಾಶಯ ತನ್ನ ಪೆನ್ಸಿಲ್ ಅನ್ನು ನನಗೆ ಕೊಡೋದೇ? ತೆಗೆದುಕೊಳ್ಳಲೋ ಬೇಡವೋ, ನೀವೇ ಹೇಳಿ.

ಈವರೆಗೂ ನನಗೆ ಸರಿ ಬೀಳದ ವಿಷಯಗಳ ೧% ಮಾತ್ರ ಕೇಳಿದ್ದಕ್ಕೆ ಬಹಳ ಸಂತೋಷ. ನಿಮ್ಮ ಮೀಟಿಂಗ್ ಅನುಭವಗಳನ್ನು ಹಂಚಿಕೊಳ್ಳಿ. ನೀವೂ ನನ್ನಂತೇನಾ ಎಂದು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ... ಯಾಕೆ ಅಂದಿರಾ? ... ನನ್ನ ಬಗ್ಗೆ ಒಂದು ದೂರು ಇದೆ ... "ಜಗತ್ತಿನಲ್ಲಿ ಇರುವವರೆಲ್ಲ ಒಂದು ಟೈಪು ಆದರೆ ನೀವೇ ಒಂದು ಟೈಪು" ಅಂತ ......


Saturday, December 12, 2009

ಎಲ್ಲಿ ಹೋದರು ನನ್ನವರು ?

ನಮ್ಮದು ದೊಡ್ಡ ಕುಟುಂಬ. ಒಟ್ಟು ಸಂಸಾರ. ಹುಟ್ಟಿನಿಂದಲೂ ಒಟ್ಟಿಗೆ ಇದ್ದೇವೆ. ಆಟ, ಊಟ, ಏಳೋದೂ, ಬೀಳೋದೂ ಎಲ್ಲ ನಮ್ಮ ನಮ್ಮಲ್ಲೇ. ಬಹಳಷ್ಟು ಸಾರಿ ನಮ್ಮನ್ನು ಕಂಡು, ಅ ಸುಖ ಇಲ್ಲದವರು, ಕರುಬಿದ್ದೇ ಹೆಚ್ಚು.

ಕಾಲಕಾಲಕೆ ಹಿಗ್ಗುತ್ತಾ ಕುಗ್ಗುತ್ತಾ ನಮ್ಮ ಜೀವನವೂ ಸಾಗಿತ್ತು. ಪೋಷಕರ ಪಾಲನೆ ಪೋಷಣೆ ಚೆನ್ನಾಗಿಯೇ ಇದ್ದುದರಿಂದ ದಷ್ಟ ಪುಷ್ಟವಾಗೇ ಇದ್ದೆವು.

ಒಂದೇ ಸಮನೆ ಯಾರಿಗೂ ಸುಖ ಎಂಬುದು ಇರುವುದಿಲ್ಲ. ನಮ್ಮೊಳಗೂ ಕೆಲವರು ಸೇರಿ ನಮ್ಮನ್ನು ಪೀಡಿಸಿದ್ದು ಉಂಟು. ಆದರೆ ನಮ್ಮ ಮನೆ ಹಿರಿಯರು ಕಟ್ಟುನಿಟ್ಟಾಗಿ ಇದ್ದುದರಿಂದ ಹೊರಗಿನವರ ಆಟವೇನೂ ಸಾಗುತ್ತಿರಲಿಲ್ಲ ಬಿಡಿ.

ಯಾವುದೇ ಒಂದು ಸಂಸಾರ ಒಟ್ಟಾಗಿ ನಿಲ್ಲಬೇಕಾದಲ್ಲಿ ಯಜಮಾನನು ದಂಡನಾಯಕನಂತೆ ಜವಾಬ್ದಾರಿ ಹೊರಬೇಕು. ’ದಂಡ’ಕ್ಕೆ ನಾಯಕನಾಗಬಾರದು !

ಒಟ್ಟಿಗೆ ಹುಟ್ಟಿ ಬೆಳೆದ ಮಾತ್ರಕ್ಕೆ ಎಲ್ಲರ ಗುಣವೂ ಒಂದೇ ಆಗಿರುತ್ತೇನು? ಒಬ್ಬೊಬ್ಬರದು ಒಂದೊಂದು ಗುಣ. ನಮ್ಮಲ್ಲಿ ಆ ತಾರತಮ್ಯ ಬರಬಾರದು, ಕೊನೆವರೆಗೂ ಒಟ್ಟಾಗಿ ನಿಲ್ಲಬೇಕು ಎಂದು ನಾವು ಎಣಿಸಿದ್ದರೂ ಅವನ ಎಣಿಕೆಯೇ ಬೇರೆ ಅಲ್ಲವೇ?


ಗುಣ ವ್ಯತ್ಯಾಸವಾದಂತೆ ತಮ್ಮ ಬಣ್ಣ ತೋರಿದರು. ಏನು ಮಾಡಲು ಸಾಧ್ಯ ? ರೆಕ್ಕೆ ಬಲಿತ ಮೇಲೆ ಹಕ್ಕಿ ದೂರಾಗುವುದು ಪ್ರಕೃತಿ ಧರ್ಮ ತಾನೇ? ನಮ್ಮಲ್ಲಿ ದೂರಾದವರಿಗೆ ಬೇರೆಯೇ ಕಾರಣವಿತ್ತು. ದೂರಾದವರನ್ನು ಇಲ್ಲ ಎಂದು ತೋರಿಸಿಕೊಂಡು ಇನ್ನೊಬ್ಬರ ಮುಂದೆ ನಗೆಪಾಟಲಾಗುವುದು ಹೇಗೆ ಎಂದು ಮರೆಮಾಚಲು ಪ್ರಯತ್ನ ನೆಡೆಸುತ್ತಿದ್ದೆವು. ಹಾಗಾಗಿ ಉಳಿದ ನಾವುಗಳು ಸಾಧ್ಯವಾದಷ್ಟು ಒಟ್ಟಾಗಿ ನಿಂತೆವು. ಒಂದು ಮನೆಯ ಮರ್ಯಾದೆ ಪ್ರಶ್ನೆ ಇದು. ಈ ಮುನ್ನ, ಕಂಡವರೆಲ್ಲರ ಮುಂದೆ ನಾವೆಲ್ಲ ಒಂದು, ನಮ್ಮನ್ನು ಯಾರೂ ಬೇರೆ ಮಾಡಲು ಸಾಧ್ಯವಿಲ್ಲ ಎಂದೆಲ್ಲ ಕೊಚ್ಚಿಕೊಂಡಿದ್ದರ ಫಲವಿದು.


ಕಾಯಿಲೆ ಮನುಷ್ಯನಿಗಲ್ಲದೇ ಮರಕ್ಕೆ ಬರುತ್ತದೆಯೇ? ಅದೇನೋ ಗೊತ್ತಿಲ್ಲ, ಗಾದೆ ಮಾತು ಬಂದಾಗ ಮರಕ್ಕೂ ಖಾಯಿಲೆ ಬರುತ್ತದೆ ಎಂಬ ವಿಚಾರ ಅಂದಿನವರಿಗೆ ಗೊತ್ತಿರಲಿಲ್ಲವೋ ಏನೋ? ಇರಲಿ ಬಿಡಿ. ವಿಚಾರದಲ್ಲಿ ವಿಷಯಾಂತರ ಬೇಡ ! ನಾನೀಗ ಹೇಳಹೊರಟಿದ್ದು ನಮ್ಮ ಕುಟುಂಬದಲ್ಲಿನ ಖಾಯಿಲೆ ಬಗ್ಗೆ.


ಅದೇನಾಯ್ತೋ ಏನೋ ಗೊತ್ತಿಲ್ಲ .. ಮೂವತ್ತು ವರ್ಷಕ್ಕೇ ನಮ್ಮ ಮನೆಯಲ್ಲಿ ಲತ್ತೆ ಬಡಿದು ಜನ ಕಡಿಮೆ ಆಗಲು ತೊಡಗಿದರು .. ಹುಟ್ಟಿದ ಮೇಲೆ ಸಾವು ಅನಿವಾರ್ಯ, ನಿಜ. ಆದರೆ ಇಷ್ಟು ಚಿಕ್ಕ ವಯಸ್ಸಿಗೇ? ನನ್ನ ಬುದ್ದಿಗೆ ನನಗೇ ನಗು ಬಂತು. ಅಲ್ಲಾ, ಸಾವಿಗೂ ವಯಸ್ಸು ಅಂಬೋದು ಇದೆಯೇ? ಹೋಗ್ಲಿ ಬಿಡಿ, ಬುದ್ದಿ ಇದ್ದೋರು ಅದರ ಬಗ್ಗೆ ಯೋಚನೆ ಮಾಡಲಿ, ನನಗೇನು? ಇರಲಿ ಸಾವು ನೋವಿಗೆ ಸ್ಪಂದಿಸಲೇ ಬೇಕಲ್ಲವೇ? ಒಬ್ಬೊಬ್ಬರೇ ತರಗೆಲೆಗಳಂತೆ ಉರುಳಿದರು.


ದಟ್ಟವಾಗಿದ್ದ ನಮ್ಮ ಸಂಸಾರಕ್ಕೆ ಯಾವ ಕಾಕ ದೃಷ್ಟಿ ಬಿತ್ತೋ ಏನೋ, ಈಗ ಬಹಳ ಶಿಥಿಲವಾಗಿದೆ. ಗಿಜಿ ಗಿಜಿ ಎಂದಿದ್ದ ಮನೆಯಿಂದು ಭಣಗುಟ್ಟುತ್ತಿದೆ. ಓಡಾಡಲೂ ಸ್ಥಳವಿಲ್ಲದ ನೆಲದಲ್ಲಿಂದು ಆಟೋ ಓಡಿಸುವಷ್ಟು ಜಾಗ ಇದೆ ಲೇವಡಿ ಮಾಡಿದರು ಕಂಡವರು.


ಉಳಿದುಕೊಂಡ ನಾವು ಕೆಲವರು ದೊಡ್ಡ ಮನೆಯಲ್ಲಿ ಎಲ್ಲೆಲ್ಲೂ ಹಂಚಿಹೋಗಿರುವುದರಿಂದ ಇದ್ದರೂ ತಿಳಿಯುತ್ತಿಲ್ಲ. ಎಷ್ಟೊ ಸಾರಿ ಒಂದೇ ಸಾಂಸಾರದವರಾದರೂ ಸಂಪರ್ಕವಿಲ್ಲದಿದ್ದರೆ ಅದು ಹಾಗೇ ಬಿಟ್ಟು ಹೋಗುತ್ತದೆ.


ಇವೆಲ್ಲ ನೆಡೆದು ಹಲವಾರು ದಿನಗಳೇ ಆದರೂ, ಕನ್ನಡಿಯಲ್ಲಿ ನನ್ನನ್ನೇ ನೋಡಿಕೊಳ್ಳುತ್ತಿರುವ ನಾನು, ಸದ್ಯಕ್ಕೆ ನೆತ್ತಿಯ ಮೇಲೆ ನಿಂತಿರುವ ಏಕ ಮಾತ್ರ "ಕೂದಲು" ನಾನು, ಯೋಚಿಸುತ್ತಿರುವುದು ಇಷ್ಟೇ .. ಬಕ್ಕ ತಲೆಯ ನನ್ನೆಜಮಾನನೇ, ಎಂದುದುರುವೆನೋ ನಿನ್ನ ನುಣುಪಾದ ತಲೆಯಿಂದ ನಾನು ?

Wednesday, December 2, 2009

ವೃತ್ತಿ ಜೀವನದಲ್ಲಿ ಒಂದು ದಿನ ...

ಬೆಳಿಗ್ಗೆ ಅಲಾರಂ ಹೊಡೆದುಕೊಳ್ಳಲಾರಂಭಿಸಿತು. ಅದರ ತಲೆ ಮೇಲೆ ಕುಟ್ಟಿ ಸ್ವಲ್ಪ ಹೊತ್ತು ಹಾಗೇ ಮಿಸುಕಾಡಿ, ಏಳಲು ಮನಸ್ಸಿಲ್ಲದಿದ್ದರೂ ಕೊನೆಗೂ ಎದ್ದ ಪ್ರತಾಪ ಸಿಂಹ. ಕೆಲಸ ಮುಗಿಸಿ ಮಲಗಿದಾಗ ಘಂಟೆ ಎರಡಾಗಿತ್ತು. ಅವನ ಕೆಲಸವೇ ಹಾಗೆ. ಹಗಲಿಗಿಂತ ರಾತ್ರಿ ನೆಡೆವ ಹಲವಾರು ಸುಪ್ತ ಕಾರ್ಯಾಚರಣೆಗಳಿಂದಾಗಿ ಯಾವ ವೇಳೆಯಲ್ಲೂ ಸಂದೇಶಗಳು ಬರಬಹುದು. blackberry ಹೊತ್ತು ತರುವ ಸಂದೇಶ ಸಂಕ್ಷಿಪ್ತವಾದರೂ ಸರಿ ರಾತ್ರಿಯಲ್ಲೂ ಅದನ್ನು ಅರ್ಥೈಸಿಕೊಂಡು ಮುಂದಿನ ಹೆಜ್ಜೆಯ ಬಗ್ಗೆ ತಕ್ಷಣವೇ ಕಾರ್ಯತತ್ಪರನಾಗಬೇಕಾದ ಸಂದರ್ಭ ಸರ್ವೇಸಾಮಾನ್ಯ.

ಸುಪ್ತ ಮನಸ್ಸು ಎಂದಿಗೋ blackberry ಜೊತೆ ಮಿಲನವಾಗಿ ಹೋಗಿದೆ.

ಸ್ನಾನಾದಿ ನಿತ್ಯಕರ್ಮಗಳನ್ನು ಮುಗಿಸಿ ಸಿದ್ದನಾಗಿ, ಹೊರಡುವ ಮುನ್ನ ವೃತ್ತಿ ಜೀವನಕ್ಕೆ ಸಂಚಕಾರ ತರುವಂಥಾದ್ದೇನೂ ಮರೆತಿಲ್ಲವೆಂದು ಖಾತ್ರಿಪಡಿಸಿಕೊಂಡು ಮನೆಯಿಂದ ಹೊರಬಿದ್ದ. ಕಾರನ್ನು ಸ್ಟಾರ್ಟ್ ಮಾಡಿ ಹೊರಟು, ಇನ್ನೂ ಎರಡು ನಿಮಿಷವೂ ಆಗಿರಲಿಲ್ಲ, blackberry ಸೂಚನೆ ಕೊಟ್ಟಿತು.

ಹಾಗೇ ಗಾಡಿಯನ್ನು ಪಕ್ಕಕ್ಕೆ ತೆಗೆದುಕೊಂಡು, ಸಂದೇಶ ನೋಡಿದ. ಕಂಟ್ರೋಲ್ ರೂಮ್’ನಿಂದ ಬಂದ ಸಂದೇಶ. ಹಿತವಾಗಿರಲಿಲ್ಲ. ತಾನು ಇಲ್ಲಿಂದ, ಘಂಟೆಗೆ ಅರವತ್ತು ಮೈಲಿಯ ವೇಗದಲ್ಲಿ ಹೊರಟರೂ ತಲುಪಲು ಅರ್ಧ ಘಂಟೆ ಬೇಕು. ತಾನು ತಲುಪುವ ತನಕ ಈಗ ಉಂಟಾಗಿರುವ ಪರಿಸ್ಥಿತಿಯನ್ನು ಹದ್ದುಬಸ್ತಿನಲ್ಲಿಡಲು ಯಾರಾದರೂ backup ಬೇಕು ಎಂದುಕೊಂಡ.

ಮನಸ್ಸಿನಲ್ಲಿ ಮೂಡಿ ಬಂದವನು ಆಪದ್ಭಾಂಧವ ಮೈಕ್ !

ಅವನ ನಂಬರ್ ಮನದಲ್ಲಿ ಅಚ್ಚೊತ್ತಿದಂತೆ ಇರುವುದರಿಂದ, ಗಾಡಿಯನ್ನು ಓಡಿಸುತ್ತಲೇ, ಕರೆ ಮಾಡಿದ. ಒಂದು ... ಎರಡು ... ಮೂರು ರಿಂಗಾಯಿತು. ಮೈಕ್’ನ ಸುಳಿವೇ ಇಲ್ಲ. ಮತ್ತೆರಡು ರಿಂಗಾದಂತೆ ಲೈನ್ ಕಟ್ ಮಾಡಿ, ಪ್ರತಾಪ ನಿಟ್ಟುಸಿರು ಬಿಟ್ಟ. ಯಾಕೋ ಎಡವಟ್ಟಾಯಿತು. ಸಮಯ ಏಳೂವರೆ. ಜಾನ್’ಗೆ ಕರೆ ಮಾಡಲು ಯೋಚಿಸಿದವನು ಸುಮ್ಮನಾದ. ಅವನು ಇಂದು ರಜೆ ಹಾಕಿದ್ದ.

ಸಂದೇಶ ಯಾರಿಂದ ಬಂದಿದ್ದು ಎಂದು ಮತ್ತೊಮ್ಮೆ ನೋಡಿದ. ’ಹೂಲಿಯೋ’ ಕಳಿಸಿದ್ದ ಸಂದೇಶವದು. ಅವನಿಗೆ ಕರೆ ಮಾಡುವುದೂ ಒಂದೇ ಸುಮ್ಮನಿರುವುದೂ ಒಂದೇ. ಅವನದು ಕೆಲಸಕ್ಕಿಂತ ಚರ್ಚೆ ಜಾಸ್ತಿ.ಆಗಲೇ ಅರ್ಧ ದಾರಿ ಬಂದಾಗಿತ್ತು. ಗಾಡಿಯಂತೂ ಮುಂದೆ ಸಾಗುತ್ತಿತ್ತು. ನನಗೆ ಅವಸರವಿರಬಹುದು ಆದರೆ ರಸ್ತೆಯಲ್ಲಿನ ಇತರೆ ಕಾರು ಚಾಲಕರಿಗೆ ಅರ್ಜಂಟ್ ಇರಬೇಕಿಲ್ಲವಲ್ಲಾ ? ಮನದಲ್ಲೇ, ನಿಧಾನವಾಗಿ ಚಲಿಸುತ್ತಿದ್ದ ಕಾರುಗಳನ್ನು ಬೈದುಕೊಳ್ಳುತ್ತಲ್ಲೇ, ಮುಂದೆ ಹೋಗುತ್ತಿದ್ದ. ಇದ್ದದ್ದು ಎರಡೇ ಲೇನ್. ಎಡಗಡೆ ಲೇನಿನಲ್ಲಿ ಸಾಲಾಗಿ ಮೆರವಣಿಗೆಯಂತೆ ಕಾರುಗಳು ಸಾಗುತ್ತಿದ್ದರೆ, ಅವನೆದುರಿನ ಕಾರು ಸಾವಧಾನವಾಗಿ ಸಾಗುತ್ತಿತ್ತು. ಸಮಯ ಸಿಕ್ಕ ಕೂಡಲೆ ಲೇನ್ ಬದಲಾಯಿಸಿ, ನಿಧಾನವಾಗಿ ಸಾಗುತ್ತಿದ್ದ ಕಾರಿನ ಚಾಲಕನ ಕಡೆ ತೀವ್ರ ದೃಷ್ಟಿ ಬೀರಲು ಹೋದವನು, ಹಾಗೇ ಸುಮ್ಮನಾದ.

ಸುಮಾರು ಎಪ್ಪತ್ತು ವರ್ಷದ ಮುದುಕ ! ’ಎಷ್ಟೊ ಬಾರಿ ಅಂದುಕೊಳ್ಳುತ್ತೇನೆ, ಈ ನಿಧಾನವಾಗಿ ಚಲಿಸುವ ಕಾರಿನ ಚಾಲಕರ ಮೇಲೆ ಸಿಟ್ಟಾಗಬಾರದು ಎಂದು. ಮರೆತೇಹೋಗುತ್ತೆ. ಈಗಲೂ ಆಗಿದ್ದು ಹಾಗೆ’ ಎಂದು ಅವನು ಯೋಚಿಸುವಷ್ಟರಲ್ಲಿ, ಫೋನ್ ರಿಂಗಾಯಿತು. ಆಲೋಚನೆಗಳಿಗೆ ಕಡಿವಾಣ ಬಿತ್ತು.

ಯಾರು ಕರೆ ಮಾಡಿದ್ದು ಎಂದು ನೋಡಿದ. ಮೈಕ್ ! ತಕ್ಷಣ ಕರೆಯನ್ನು ಸ್ವೀಕರಿಸಿ ’ಹಲೋ ಮೈಕ್’ ಎಂದ. ಧೂಮಪಾನಕ್ಕೆ ಹೋಗುವ ಮುನ್ನ ತನ್ನ ಮೊಬೈಲನ್ನು ಮರೆತು ಹೋಗಿದ್ದರಿಂದ ಇವನು ಮಾಡಿದ ಕರೆ ಸ್ವೀಕರಿಸಲಾಗಲಿಲ್ಲವಂತೆ. ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಅವನಿಗೆ ವಿವರಿಸಿದ ಪ್ರತಾಪ.

ಸದ್ಯಕ್ಕೆ ನೆಮ್ಮದಿ. ಮತ್ತೊಮ್ಮೆ ಕರೆ ಬಂತು. ಯಾರೆಂದು ನೋಡಿದ. ’ಹೂಲಿಯೋ’ !! ಇಷ್ಟವಿಲ್ಲದಿದ್ದರೂ ಕರೆ ಸ್ವೀಕರಿಸಿ ’ಹಲೋ’ ಎಂದ. ಎರಡು ನಿಮಿಷಗಳ ಕಾಲ ಹೇಳಿದ್ದನ್ನೇ ಹೇಳಿದ ಮೇಲೆ ಒಲ್ಲದ ಮನಸ್ಸಿನಿಂದ ಫೋನ್ ಇಟ್ಟ ಹೂಲಿಯೋ. ಕೆದಕಲು ಹೆಚ್ಚು ವಿಷಯ ಇರಲಿಲ್ಲ ಎಂಬುದಕ್ಕೆ ಅವನಿಗೆ ಬೇಸರ. ಮೊದಲ ವರದಿ ಆಯ್ತು. ಇನ್ನೆಷ್ಟು ಬಾರಿ ಇವನ ಕರೆ ಸ್ವೀಕರಿಸಬೇಕೋ ಇಂದು ಗೊತ್ತಿಲ್ಲ !

ಯಾಕೋ ಎಲ್ಲರ ಕಾರೂ ನಿಧಾನವಾಗಲು ತೊಡಗಿತು. ಸ್ವಲ್ಪ ದೂರಕ್ಕೆ ಕಣ್ಣು ಹಾಯಿಸಿ ನೋಡಿ ’ಥತ್’ ಎಂದುಕೊಂಡ. ತಾನಿದ್ದ ಲೇನ್’ನಲ್ಲಿ ಏನೋ ಅಪಘಾತವಾಗಿತ್ತು. ಎಲ್ಲರೂ ಇನ್ನೊಂದು ಲೇನ್’ಗೆ ನುಸುಳುತ್ತಿದ್ದರು. ಎರಡು-ಮೂರು ಪೋಲೀಸ್ ಕಾರ್’ಗಳೂ ಇದ್ದುದರಿಂದ ಬಹಳ ಎಚ್ಚರಿಕೆಯಿಂದ ನುಸುಳುತ್ತ, ಏನಾಯ್ತು ಎಂದು ನೋಡುವ ಸಂಭ್ರಮ ಬೇರೆ. ಇವನೂ ಸಮಯ ಬಂದಾಗ ಹಾಗೇ ನುಸುಲಿದ. ಏನು ಅದೃಷ್ಟ !! ಅವನ ಮುಂದೆ ಮತ್ತದೇ ಮದುಕನೋರ್ವ ನೆಡೆಸುತ್ತಿದ್ದ ನಿಧಾನಸ್ತ ಕಾರು !!

ಅಂತೂ ಇಂತೂ ಸನ್ನಿವೇಶದ ಸ್ಥಳಕ್ಕೆ ತಲುಪುವಷ್ಟರಲ್ಲಿ ಗಂಟೆ ಎಂಟೂ ಕಾಲಾಗಿತ್ತು. ಮೈಕ್ ಹಾಗೂ ನಮ್ಮ ಮೇಲಧಿಕಾರಿ ಇಬ್ಬರೂ ಅಲ್ಲೇ ಇದ್ದರು. ಜೀವವಿಲ್ಲದೆ ಗೋಡಿಗೊರಗಿ ಕುಳ್ಳರಿಸಿದ ’ಕ್ಲಾರಾ’ಳನ್ನು ನೋಡುತ್ತಿದ್ದರು !! ರೂಮಿನಲ್ಲಿ ಸ್ವಲ್ಪ ಧೂಳು ಇದ್ದುದರಿಂದ ಕ್ಲಾರಾಳನ್ನು ಎಳೆದಾಡಿದ ಗುರುತು ಎದ್ದು ಕಾಣುತಿತ್ತು !!!

ಎಲ್ಲರ ಮುಖಗಳೂ ಗಂಭೀರವಾಗಿದ್ದವು. ತನಗೆ ಎಷ್ಟು ಘಂಟೆಗೆ ಕರೆ ಬಂದಿದ್ದು, ತಾನೇನು ಮಾಡಿದೆ ಎಂಬ ವರದಿ ಸೂಕ್ಷ್ಮವಾಗಿ ತಿಳಿಸಿದ ಪ್ರತಾಪ.

ಮುಂದಿನ ಅರ್ಧ ಘಂಟೆ ತಪಾಸಣೆಯಲ್ಲಿ ಬ್ಯುಸಿ. ಹಾಗಾಗಿರಬಹುದು, ಹೀಗಾಗಿರಬಹುದು ಎಂಬ ಸಮಾಲೋಚನೆಗಳು. ಗೋಡೆಗೆ ನೇತು ಹಾಕಲಾಗಿದ್ದ ಬಿಳೀ ಬೋರ್ಡ್ ತುಂಬಾ ಸನ್ನಿವೇಶಗಳ ಊಹಾಪೋಹಗಳೇ ತುಂಬಿತ್ತು. ತಪಾಸಣೆಗಿಂತ ನಮ್ಮ ಮೇಲಧಿಕಾರಿಗೆ ವಿವರಣೆ ಕೊಡುವುದೇ ದೊಡ್ಡ ಕೆಲಸವಾಗಿತ್ತು. ಇದರ ಮಧ್ಯೆ ಹೂಲಿಯೋ’ನಿಂದ ಕರೆ ಬೇರೆ. ಮತ್ಯಾವುದೋ ಕಾಲ್ ಬಂತು ಎಂದು ಹೇಳಿ ನಮ್ಮ ಬಾಸ್ ಆಕಡೆ ಹೋದ ಮೇಲೆ, ಪ್ರತಾಪ ಹಾಗೂ ಮೈಕ್ ಚಕನೆ ಚಕನೆ ಕೆಲಸ ಮುಗಿಸಿ ವರದಿ ಸಮೇತ ಹೊರಟರು.

Server Support Technicians ಆದ ಪ್ರತಾಪ ಹಾಗೂ ಮೈಕ್ ಇವರುಗಳ ವರದಿ ಹೀಗಿತ್ತು "ಸರ್ವರ್ ಕಂಟ್ರೋಲ್ ರೂಮಿನಿಂದ ಹೂಲಿಯೋ’ಗೆ ಯೂನಿಕ್ಸ್ ಸರ್ವರ್ ’ಕ್ಲಾರ’ ಇಂದ 'Messaging Application Shutdown' ಆಗಲಿದೆ ಎಂಬ ಪೇಜ್ Application Monitoring System ನಿಂದ ಬಂತು. ಅದನ್ನು ಯಥಾವತ್ತಾಗಿ ಪ್ರತಾಪನಿಗೆ ಕಳಿಸಿದ್ದ. ಮೈಕ್’ಗೆ ಹೆಚ್ಚಾಗಿ ಯೂನಿಕ್ಸ್ ಜ್ಞ್ನಾನ ಇಲ್ಲದಿದ್ದುದರಿಂದ ಪ್ರತಾಪ ಬರುವವರೆಗೂ ಕಾಯಬೇಕಿತ್ತು. ಯಾವುದೋ ಒಂದು corrupted email message, ಸರ್ವರ್ ಮೂಲಕ ಹಾದು ಹೋಗುವಾಗ, ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು, Messaging Application ತಂತಾನೇ shutdown ಆಗಿತ್ತು. ಮೆಸೇಜ್ ಅನ್ನು ಸರಿ ಪಡಿಸಿ Application Reset ಮಾಡಿದರೆ ಎಲ್ಲ ಸರಿಯಾಗುತ್ತದೆ. ETA 30 mins "

ಪ್ರತಾಪನ ಮೇಲಧಿಕಾರಿ ಅಂದರೆ ಪ್ರಾಜಕ್ಟ್ ಮೇನೇಜರ್ ಮುಖದಲ್ಲಿ ಸ್ವಲ್ಪ ಮಂದಹಾಸ ಮೂಡಿ ಬಂತು.

ಪ್ರಾತಾಪ್ ಆಫೀಸಿಗೆ ಸೇರುವ ತನಕ, ತನ್ನ ಮೇನೇಜರ್’ಗೆ ತಾನು ಚೆಕ್ ಏನೋ ಮಾಡುತ್ತಿದ್ದೇನೆಂದು ತೋರಿಸಿಕೊಳ್ಳಲು ಸರ್ವರ್’ಅನ್ನು ಬೇಕಿಲ್ಲದಿದ್ದರೂ ಆಕಡೆ ಈ ಕಡೆ ಓಡಾಡಿಸಿ ವೈರಿಂಗ್ ನೋಡುತ್ತಿದ್ದ ಮೈಕ್. ಇನ್ನೊಮ್ಮೆ ಓಡುತ್ತಿದ ಸರ್ವರ್’ಅನ್ನು ಮುಟ್ಟಬೇಡ ಎಂದು ಪ್ರತಾಪ್ ಮೈಕ್’ಗೆ ಸೂಕ್ಷ್ಮವಾಗಿ ಹೇಳಿದ್ದು ಬೇರೆ ವಿಚಾರ.