Sunday, August 8, 2010

ಅನಸೂಯಾಬಾಯಿ ಮನೆಗೆ ಬಿಗ್ ಸ್ಕ್ರೀನ್ ಬಂತು !

ಅನಸೂಯಾಬಾಯಿ ಮನೆಗೆ ಬಿಗ್ ಸ್ಕ್ರೀನ್ ಬಂತು !

ಶುದ್ದ ಸೋಮವಾರ, ಅಮಾವಾಸ್ಯೆಯ ಸಂಜೆ. ಬಸ್ಸಿಳಿದು, ಬಸವಳಿದು ಬರುತ್ತ, ಬಿಸಿ ಬಿಸಿ ಕಾಫೀ ಹೀರುವ ಫ್ರೋಗ್ರಂ ಹಾಕಿಕೊಂಡು ನಮ್ಮ ಬೀದಿಗೆ ತಿರುಗಿ ಬರುತ್ತಿದ್ದಂತೆಯೇ ನನಗೆ, ಅರ್ಥಾತ್, ರಾಮಣ್ಣಿಯ ಕಣ್ಣಿಗೆ ಬಿದ್ದ ದೃಶ್ಯ .. ರಮಣಮೂರ್ತಿಗಳ ಮನೆ ಮುಂದೆ ಹಲವು ಜನ ಸೇರಿದ್ದರು !

ಬೆಳಿಗ್ಗೆ ಚೆನ್ನಾಗಿದ್ದರು ... ಪಾಪ ... ಒಂದೇ ಏಟಿಗೆ ಒಂದು ತಟ್ಟೆ ಉಪ್ಪಿಟ್ಟು ತಿನ್ನುತ್ತಿದ್ದರು ! ದಿನವೂ ಸಂಜೆ ಬಿಟ್ಟಿ ಕಾಫಿಗೆ ನಮ್ಮ ಮನೆಗೇ ಬರುತ್ತಿದ್ದರು ... ಇನ್ನು ಮುಂದೆ ಯಾರು ಬರ್ತಾರೆ ಅಂತ ಜೋರಾಗಿ ಹೇಳಿದರೆ, ಹತ್ತು ಜನ ಕ್ಯೂ ನಿಲ್ತಾರೆ !! ಪಾಪ, ಒಬ್ಬರ ತಂಟೆಗೆ ಹೋಗದೇ ಇರುತ್ತಿರಲಿಲ್ಲ, ಒಬ್ಬರಿಗೆ ಕೈ ಎತ್ತಿ ಏನೂ ಕೊಟ್ಟವರಲ್ಲ ... ದಿವ್ಯಾತ್ಮ! ಪಾಪ, ಬಹಳ ದಿನಗಳಿಂದ ಅವರು ಹೋಗುತ್ತಾರೆ ಎಂದುಕೊಂಡರೂ, ಈಗ ಇದ್ದಕ್ಕಿದ್ದಂತೆ ಹೋಗಿದ್ದು ತರವಲ್ಲ. ಒಂದು ಮಾತು ನನಗೆ ಹೇಳಿ ಹೋಗಬಹುದಿತ್ತು ! ತುಂಬಲಾರದ ನಷ್ಟ ... ಅವರ ಕುರ್ಚಿಗೆ ... ಅವರು ಹೋದ ಮೇಲೆ ಆ ಕುರ್ಚಿ ಹೋಗೋದು ತಿಪ್ಪೆಗೆ ..

ಬಸ್ಸಿಳಿದು ಬಂದಾಗ ಇದ್ದ ಕೆಟ್ಟ ಮುಖವನ್ನು ಇನ್ನೂ ಸ್ವಲ್ಪ ಕಿವುಚಿದೆ ... ನಾನು ಸಮಾಜಕ್ಕೆ ಹೆದರೋ ಪ್ರಾಣಿ ಕಣ್ರೀ!

ಮನೆಯ ಬಳಿ ಸಾಗುತ್ತಿದ್ದಂತೆಯೇ ... ಅಯ್ಯೋ? ಇದೇನಿದು. ಕುರ್ಚಿ ಭರ್ತಿ ಕೂತಿದ್ದಾರೆ ರಮಣಮೂರ್ತಿಗಳು. ಮತ್ತೆ ಹೋಗಿದ್ದು? ಇಲ್ಲ, ಇಲ್ಲ, ಖಂಡಿತ ಅನಸೂಯಾಬಾಯಿಯವರಲ್ಲ! ಯಾಕೇ ಅಂದರೆ ಅವರ ಸ್ವರ ಬೀದಿ ಕೊನೆಗೇ ಕೇಳಿಸಿತು!!

ವಿಷಯ ಏನಪ್ಪಾ ಅಂದರೆ ... ರಮಣಮೂರ್ತಿಗಳ ಮನೆಗೆ ಬಿಗ್ ಸ್ಕ್ರೀನ್ ಟಿ.ವಿ ಬಂದಿತ್ತು. ನಾಳೆ ಶುಕ್ಲ ಪಕ್ಷದ ಪಾಡ್ಯದ ದಿನ ಬಂದು ಇನ್ಸ್ಟಾಲ್ ಮಾಡು ಅಂದರೆ, ತಾನು ರಜೆ ಹಾಕಿದ್ದೀನಿ ಎಂದು ಇಂದೇ ಇನ್ಸ್ಟಾಲ್ ಮಾಡಿ ಹೋಗಿದ್ದಾನೆ ಎಂದು ಅಲವತ್ತುಕೊಳ್ಳುತ್ತಿದ್ದರು ... ದಿನ ಶುದ್ದಿ, ವಾರ ಶುದ್ದಿ ಏನೂ ಗೊತ್ತಾಗೊಲ್ಲ ಜನಕ್ಕೆ ಎಂದು ಬೈದು ಕೊಳ್ಳುತ್ತಿದ್ದರು. ಇಷ್ಟು ಜನ ತಮ್ಮ ಟಿ.ವಿ ನೋಡಲು ಬಂದಿದ್ದಾರೆ ಎಂಬೋ ಹೆಮ್ಮೆ ಮನದಲ್ಲೇ ಸುತ್ತಾಡುತ್ತಿತ್ತು ಎಂಬುದು ಬೇರೆ ವಿಷಯ.

ಥೆಳ್ಳಗಿರೋ ಸ್ಕ್ರೀನ್ ನೋಡ್ರೀ... ಒಳ್ಳೇ ಕರೀನಾ ಕಪೂರ್ ಇದ್ದ ಹಾಗೆ ಇದೇ ಅಂತ ಯಾರೋ ಉಸುರಿದರು ! ದೃಷ್ಟಿ ನೀವಾಳಿಸಿ ತೆಂಗಿನಕಾಯಿ ಒಡೆದು ಬಿಡಿ ಅಂತ ಲೈಟಾಗಿ ಉಪದೇಶ ಕೊಟ್ಟರು ಇನ್ಯಾರೋ .. ದೃಷ್ಟಿ ತೆಗೀಬೇಕಿದ್ದುದು ಸ್ಕ್ರೀನ್’ಗೋ ಕರೀನಾ’ಗೋ ಗೊತ್ತಾಗಲಿಲ್ಲ !! ಹೇಳಿದವರ ಪತ್ನಿ ಅವರ ಪಕ್ಕದಲ್ಲೇ ಇದ್ದುದರಿಂದ, ಅಷ್ಟು ಧೈರ್ಯ ಮಾಡಿರಲಾರರು ಎಂದುಕೊಂಡು ನಾನು "ಪಾಪ, ತೆಂಗಿನಕಾಯಿ ಒಡೀಬೇಕಿರೋದು ಟಿ.ವಿ ಸ್ಕ್ರೀನ್ ಮೇಲೇ?" ಎಂದು ತಮ್ಮ ಅದ್ಬುತ ಜ್ಞ್ನಾನ ಪ್ರದರ್ಶನ ಮಾಡಿಯೇಬಿಟ್ಟೇ !

ನನ್ನ ಸೂಪರ್ ಡೂಪರ್ ಎಂಟ್ರಿ ತಿಳಿದು, ವಿಶಾಲೂ ಜನರ ಮಧ್ಯದಿಂದ ಹೊರಬಂದು, ನನ್ನನ್ನು ಕರೆದುಕೊಂಡು (ಎಳೆದುಕೊಂಡು) ಮನೆಗೆ ಹೊರಟಳು. ನಾನಾಡಿದ ಮಾತಿಗೆ ಸಿಟ್ಟೋ ಅಥವಾ ನಮ್ಮ ಮನೆಗೆ ದೊಡ್ಡ ಟಿ.ವಿ ತರಲಿಲ್ಲ ಎಂದು ಕೋಪವೋ ನನಗೆ ಗೊತ್ತಿಲ್ಲ.

ಇರಲಿ, ಈಗ ವಿಷಯ ರಮಣಮೂರ್ತಿಗಳದು. ಟಿ.ವಿ ಕೊಂಡಿದ್ದು ಏನು ದೊಡ್ಡ ವಿಷಯ ಅಂದಿರಾ? ಇಲ್ಲಿ ಬಿಗ್ ಸ್ಕ್ರೀನ್ ಬಂದದ್ದಲ್ಲ ವಿಷಯ... ರಮಣಮೂರ್ತಿಗಳ ಮನೆಗೆ ಟಿ.ವಿ ಬಂದಿದ್ದು.

ಒಂಬತ್ತನೇ ಏಷ್ಯನ್ ಗೇಮ್ಸ್ ಸಮಯದಲ್ಲಿ ’ಅಪ್ಪು’ವನ್ನು ನೋಡಲು ತಂದಿದ್ದ ’ಕಪ್ಪು-ಬಿಳುಪು’ ಟಿ.ವಿ’ಯ ನಂತರ, ಐಶ್ವರ್ಯ ಮಿಸ್.ವರ್ಲ್ಡ್ ಆದಾಗಲೇ ಕಲರ್ ಟಿ.ವಿ ತಂದಿದ್ದು !

ಅರ್ಥವಾಗುತ್ತೋ ಇಲ್ವೋ ಗೊತ್ತಿಲ್ಲ ... ಮೊನ್ನೆ ವಿಶ್ವ ಕಪ್ ಸಾಕರ್ ಪಂದ್ಯಗಳು ಆರಂಭಗೊಂಡಂತೆ ಅನೇಕರು ದೊಡ್ಡ ಟಿ.ವಿ ಖರೀದಿಸಿದರು ಅಂತ ಅನಸೂಯಾಬಾಯಿ ಕೂಡ ಒಂದು ದೊಡ್ಡ ಎಲೆಕ್ಟ್ರಾನಿಕ್ ಅಂಗಡಿಗೆ ದಾಳಿ ಇಟ್ಟು, ಬಿಗ್ ಸ್ಕೀನ್ ಟಿ.ವಿ. ಖರೀದಿ ಮಾಡಿಯೇಬಿಟ್ಟರು.

ತಮ್ಮ ಸೇವಿಂಗ್ಸ್ ಹಣ ’ಶೇವಿಂಗ್’ ಆಗಿದ್ದ ಕಂಡು ರಮಣಮೂರ್ತಿಗಳು ಮೂರು ದಿನ ಊಟ ಬಿಡಬೇಕು ಅಂದುಕೊಂಡರು, ಆದರೆ ಬಿಡಲಿಲ್ಲ. ಮೊದಲೇ ಸಕ್ಕರೆ ಖಾಯಿಲೆ .... ಒಂದು ಹೊತ್ತು ಊಟ ಬಿಟ್ಟರೇನೇ ಮೈ-ಕೈ ಎಲ್ಲ ಕುಣಿಸುತ್ತ ಮೈಕೇಲ್ ಜ್ಯಾಕ್ಸನ್ ತರಹ ಆಡ್ತಾರೆ. ಒಮ್ಮೆ ಹೀಗೇ, ಈ ರೀತಿಯ ವೇಷದಲ್ಲಿ ನೋಡಿದವರಾರೋ ಉಪಚಾರ ಮಾಡೋದು ಬಿಟ್ಟು ’ವಾವ್! ಥೇಟ್ ಮೈಕೇಲ್ ಜ್ಯಾಕ್ಸನ್ ತರಹ ಕಾಣ್ತೀರ್ರೀ ...’ ಅಂದಿದ್ರು.

ಇದೊಂದು ಬಿಟ್ರೆ, ಇವರಿಬ್ಬರಿಗೂ ಒಂದೇ ಸಾಮ್ಯತೆ ಅಂದರೆ ಮೊದಲೆಲ್ಲ ಕಪ್ಪಗಿದ್ದ ರಮಣಮೂರ್ತಿಗಳು ವಯಸ್ಸಾದ ಮೇಲೆ ರಕ್ತ ಕಡಿಮೆಯಾಗಿ ಬಿಳಿಚಿಕೊಂಡಿದ್ದರು. ಈ ಬಿಳಿಪು ಕಾಲೇಜಿನ ದಿನಗಳಲ್ಲಿ ಇದ್ದಿದ್ದರೆ, ಎಷ್ಟು ಜನರು ತಮ್ಮ ಹಿಂದೆ ಬೀಳುತ್ತಿದ್ದರೋ ಏನೋ ಎಂದು ಸಾವಿರ ಸಾರಿ ಅಂದುಕೊಂಡಿದ್ದಾರೆ.

ಕಾಲೇಜೂ ಮುಗೀತು, ಸರಕಾರಿ ಕೆಲಸವೂ ಸಿಕ್ತು. ಒಂದು ’ಲೇಡಿ’ ಬಿಡಿ ’ಲೇಡಿ ಸೊಳ್ಳೇ’ನೂ ಇವರತ್ತ ನೋಡಲಿಲ್ಲ ಅಂತ ನೀವು ಅಂದುಕೊಂಡಿದ್ದರೆ, ಅದು ತಪ್ಪು. ಪ್ಯಾಂಟ್ ಧರಿಸುವ ಕಾಲದಲ್ಲೂ, ಸಂಪ್ರದಾಯದ ಹೆಸರಿನಲ್ಲಿ, ಗರಿಗರಿಯಾಗಿ ಕಚ್ಚೆ ಪಂಚೆ ಉಟ್ಟು, ಕೆಲಸಕ್ಕೆ ಹೋಗುತ್ತಿದ್ದ ಇವರನ್ನು, ಮೂಲೆ ಮನೆ ’ಜರಿ ಲಂಗದ ಜಾಣೆ’ ಅನಸೂಯ ಮಾತ್ರ ಮೆಚ್ಚಿದ್ದಳು. ಇವರನ್ನಲ್ಲ, ಇವರು ಪಂಚೆಯ ಮೇಲಿನ ಜರಿಯನ್ನ. ಇವರನ್ನು ಮದುವೆಯಾದರೆ ಜರಿ’ಗೆ ’ವರಿ’ ಇಲ್ಲ ಅಂತ.

ಕಿಟಕಿ ಬಳಿ ನಿಂತು, ಮೈಮೇಲೆ ಅರಿವಿಲ್ಲದೆ, ಸಕ್ಕರೆ ಹಾಕದ ಕಾಫಿಯನ್ನೇ ಕುಡಿಯುತ್ತಿದ್ದರೂ, ರಮಣಮೂರ್ತಿಗಳ ಪಂಚೆಯ ಜರಿಯನ್ನು, ಮುಖ ಅರಳಿಸಿಕೊಂಡು ನೋಡುತ್ತಿದ್ದುದನ್ನು ಕಂಡು, ಅನಸೂಯಳ ತಾಯಿ ಸುಕನ್ಯಾಬಾಯಿ, ಅಪಾರ್ಥ ಮಾಡಿಕೊಂಡು, ಅದೇ ರಾತ್ರಿ, ಊಟವಾದ ಮೇಲೆ ವೀಳ್ಯ ಜಗಿಯುತ್ತ ತಮ್ಮ ಯಜಮಾನರಾದ ಗರುಡಮೂರ್ತಿಗಳಿಗೆ ’ನಿಮ್ಮ ಮಗಳಿಗೆ ರಮಣನ ಮೇಲೆ ಮನಸ್ಸಾಗಿದೆ’ ಎಂಬ ವಿಷಯವನ್ನು ಅರುಹಿದರು.

ಹಳೇ ಕಾಲದಲ್ಲೂ ಈ ರೀತಿ ಮಾತುಗಳು ಇತ್ತೇ ಅಂತೀರಾ? ಸುಕನ್ಯಾಬಾಯಿ ತಕ್ಕ ಮಟ್ಟಿಗೆ ದೊಡ್ಡ ಮನೆತನದವರು. ಗರುಡಮೂರ್ತಿಗಳೂ ಸ್ವಲ್ಪ ದೊಡ್ಡ ಪೋಸ್ಟ್ ಎನ್ನಬಹುದಾದ ಕೆಲಸದಲ್ಲೇ ಇದ್ದುದರಿಂದ ಇಬ್ಬರದೂ ಒಂದು ತೂಕ. ಇಬ್ಬರೂ ದೈಹಿಕವಾಗಿಯೂ ದೊಡ್ಡ ತೂಕದಲ್ಲೇ ಇದ್ದಾರೆ ಬಿಡಿ. ಇವರದು ಒಂದು ಲೆವಲ್ ಆದರೆ ಮಗಳದು ಒಂದೇ ಲೆವಲ್. ಏಳನೇ ತರಗತಿಯನ್ನು ಐದು ವರ್ಷವಾದರೂ ಮುಗಿಸದೇ ಇದ್ದದ್ದು ನೋಡಿ ಮೇಷ್ಟ್ರು ’ಪರವಾಗಿಲ್ಲ ಬಿಡಿ ಪಾಪ’ ಅಂತ ಹೇಳಿದರು. ಆ ಸಂದರ್ಭದಲ್ಲಿ ನೆಡೆದಿದ್ದೇ ಈ ಘಟನೆ.

ಎದೆ ತಟ್ಟಿ ಹೇಳಿಕೊಳ್ಳುವ ವಿಷಯವಾದರೆ ’ನನ್ನ ಮಗಳು’ ಎನ್ನುವುದು, ಎದೆ ಬಡ್ಕೊಳ್ಳೋ ವಿಷಯವಾದರೆ ’ನಿಮ್ಮ ಮಗಳು’ ಎಂದು ಸಂಭೋಧಿಸುವ ಪತ್ನಿಯ ಪರಿ ಗರುಡಮೂರ್ತಿಗಳಿಗೆ ಹೊಸದೇನಲ್ಲ !

ಅಲ್ಲದೇ, ಸೀರಿಯಸ್ ವಿಷಯವನ್ನು ಸುಕನ್ಯಾಬಾಯಿಯವರು ಎಲೆ-ಅಡಿಕೆ ಹಾಕಿಕೊಂಡಾಗಲೇ ಹೇಳುವುದು. ಗರುಡಮೂರ್ತಿಗಳಿಗೂ ಈ ವಿಷಯ ಗೊತ್ತಿರುವುದರಿಂದ ಹೆಚ್ಚು ವಿರೋಧವಿಲ್ಲದೆ ಪತ್ನಿ ಹೇಳಿದ್ದಕ್ಕೆಲ್ಲ ’ಸರಿ’ ಎಂದುಬಿಡುತ್ತಾರೆ. ಇವರ ಹೆಸರು ಗರುಡಮೂರ್ತಿ ಆದರೂ ಇನ್ನೊಬ್ಬರ ಮನೆಯ ವಿಷಯಕ್ಕೆ ’ಮೂಗು’ ತೂರಿಸುತ್ತಿರಲಿಲ್ಲ. ಅದನ್ನು ಪತ್ನಿಗೇ ಬಿಟ್ಟಿದ್ದರು.

ಹಾಗಾಗಿ ಸುಕನ್ಯಾಬಾಯಿ ಹಾಗೂ ರಮಣನ ಮನೆಯವರಿಗೂ ಮಾತುಕಥೆಗಳು ನೆಡೆಯಿತು. ಮಗಳ ಮದುವೆ ಮಾಡಿ ಮುಗಿಸಿದರೆ, ಇದ್ದ ಒಂದು ಜವಾಬ್ದಾರೀನೂ ಮುಗಿಯುತ್ತೆ. ಸರಕಾರೀ ಕೆಲಸದ ಹುಡುಗ ಬೇರೆ. ಹುಡುಗ ಕಪ್ಪು. ಅದಕ್ಕೇನು. ಹಸೆಮಣೆ ಏರೋ ಮುನ್ನ ಒಂದು ಸಾರಿ ಸೋಪ್ ಹಾಕಿ ಮುಖ ತೊಳೆದರೆ ಸಾಕು, ಎಂದುಕೊಂಡು ’ರಮಣನು ಪಂಚೆಯುಟ್ಟು ತಮ್ಮ ಮನೆ ಮುಂದೆ ದಿನವೂ ಸಾಗುತ್ತಿದ್ದುದರಿಂದಲೇ ಈ ರೀತಿ ಎಡವಟ್ಟಾಯಿತು’ ಎಂದು ಸಾಧಿಸಿದರು ಸುಕನ್ಯಾಬಾಯಿ.

ಉಟ್ಟ ಪಂಚೆ ಬಿಸುಟು, ಪಂಚೆಯ ಪಂಚಾಯಿತಿಯೇ ಬೇಡ, ಇನ್ನು ಮುಂದೆ ಪ್ಯಾಂಟ್ ಧರಿಸುತ್ತೇನೆ ಎಂದು ಹೇಳೋಣವೆಂದರೆ, ಸಂಪ್ರದಾಯವೆಂಬ ಭೂತ. ಪಂಚೆ ತೊರೆದರೆ ಪಂಚಭೂತಗಳಲ್ಲಿ ಲೀನವಾದರೂ ದೋಷ ಹೋಗೋಲ್ಲ ಎಂದು ಯಾರೋ ಪುಸ್ ಎಂದು ಉಸುರಿದ್ದರು.

ತಪ್ಪಿಸಿಕೊಳ್ಳಲು ಬೇರೆ ದಾರಿ ಇಲ್ಲ ! ಜೊತೆಗೆ ಈ ಸಂಬಂಧ ತಪ್ಪಿದರೆ ಬೇರೆ ಸಂಬಂಧ ರಮಣನಿಗೆ ಕೂಡಿ ಬರುತ್ತೋ ಇಲ್ಲವೋ ಎಂದು ಹೆದರಿ, ಮದುವೆಗೆ ಅಸ್ತು ಎಂದುಬಿಟ್ಟರು ಅವರಪ್ಪ-ಅಮ್ಮ ... ಧಾಮ್-ಧೂಮ್ ಎಂದು ಮದುವೆ ನೆಡೆದೇ ಹೋಯಿತು.

ಮದುವೆಯಾದ ಮೇಲೆ ’ಬಾಯಿ’ ಹೆಚ್ಚಾದ್ದರಿಂದ ’ಅನಸೂಯ’ ಎಂಬ ಹುಡುಗಿ ’ಅನಸೂಯಾಬಾಯಿ’ ಆದರೆ, ಈ ಬಾಯಿ ಹೇಳಿದ್ದನ್ನೆಲ್ಲ ಶಿಲೆಯಂತೆ ಕುಳಿತು ಕೇಳುತ್ತಿದ್ದರಿಂದ ’ರಮಣ’ ಅವರು ’ರಮಣಮೂರ್ತಿ’ ಎನಿಸಿಕೊಂಡರು.

ಇದಿಷ್ಟು ಫ್ಲಾಶ್-ಬ್ಯಾಕ್.

ಈಗ ಟಿ.ವಿ ವಿಷಯಕ್ಕೆ ಬರೋಣ. ಆಯ್ತು ಟಿ.ವಿ ಮನೆಗೆ ಬಂತು. ಊಟ ಬಿಡಲಿಕ್ಕೆ ಆಗದೆ ಇದ್ದರೆ ಏನು, ನೋಟ ಬಿಡಬಹುದಲ್ಲ ಎಂದುಕೊಂಡು, ಮನೆಯಲ್ಲಿ ಟಿ.ವಿ ಹಾಕಿದಾಗಲೆಲ್ಲ ಹೊರಗೆ ಬಂದು ತಮ್ಮ ’ಧರಣಿ ಕುರ್ಚಿ’ಯಲ್ಲಿ ಕೂಡುತ್ತಿದ್ದರು. ಉಪವಾಸ ಸತ್ಯಾಗ್ರಹ ಎಂದು ವಿಧಾನಸೌಧದ ಪಕ್ಕದಲ್ಲಿ ಸರದಿ ಕುಳಿತು, ಮಧ್ಯಾನ್ನದ ವೇಲೆ ಸರದಿ ಪ್ರಕಾರ ಊಟ ಮಾಡಿ ಬರುತ್ತಾರಲ್ಲ, ಹಾಗಲ್ಲ ಇದು! ಧರಣಿ ಅಂದರೆ ಧರಣಿ ಅಷ್ಟೇ! ಟಿವಿ ಆರಿಸೋವರೆಗೂ ಕುರ್ಚಿ ಬಿಟ್ಟು ಕದಲುತ್ತಿರಲಿಲ್ಲ. ಮನೆಯ ಹಿಂದಿನ ಬಚ್ಚಲಿಗೆ, ಓಣಿ ಕಡೆಯಿಂದಲೂ ಹೋಗಬಹುದು!

ಅನಸೂಯಾಬಾಯಿ’ಯವರಂತೂ ಬಿಟ್ಟ ಬಾಯಿ ಬಿಟ್ಟುಕೊಂಡೇ ಕೂತು ಧಾರಾವಾಹಿಗಳನ್ನು ನೋಡುತ್ತಿದ್ದರು. ಕ್ಯಾಮೆರಾ ಕ್ಲೋಸ್-ಅಪ್’ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಂತೆ, ನಾಯಕಿಯ ಕಣ್ಣಲ್ಲಿ ಹನಿ ಮೂಡಿ ನುಣುಪಾದ ಕೆನ್ನೆಯಂ ಜಾರಿ ಉದುರುವಾಗ, ಇವರು ನೆಲ ಒರೆಸುತ್ತಿದ್ದರು !!

ರಮಣಮೂರ್ತಿಗಳು ಟಿ.ವಿ ನೋಡದಿದ್ದರೆ ಏನಂತೆ ... ನಾಲ್ಕು ಬೀದಿಗೆ ಕೇಳೊ ಹಾಗೆ ಜೋರಾಗಿ ಹಾಕಿರುವುದರಿಂದ ಕಿವಿಗಂತೂ ಡೈಲಾಗುಗಳು ಕಿವಿಗೆ ಬಿದ್ದೇ ಬೀಳುತ್ತೆ. ಅಲ್ಲದೇ, ರಾತ್ರಿ ವೇಳೆ ಬರುವ ಸೀರಿಯಲ್ ಸಮಯದಲ್ಲಿ ಹೊರಗೆ ಛಳಿಯಲ್ಲಿ ಕೂಡಲು ಸಾಧ್ಯವೇ?

ಹಂಗೂ, ಹಿಂಗೂ ಎರಡು ಮೂರು ದಿನ ಟಿ.ವಿ ದಿಕ್ಕಿನಲ್ಲಿ ತಲೆಯಿಟ್ಟೂ ಮಲಗದ ರಮಣಮೂರ್ತಿಗಳು, ಒಮ್ಮೆ ಹೀಗೆ ಮರೆತು ಹಾದಿ ತಪ್ಪಿ, ಹಿಂದಿನ ಬಾಗಿಲಿನಿಂದ ಹಾದು, ಮನೆ ಒಳಗಿನಿಂದ, ಮುಂಬಾಗಿಲ ಬಳಿಯ, ತಮ್ಮ ’ಧರಣಿ ಕುರ್ಚಿ’ಯ ಬಳಿ ಸಾಗುತ್ತಿರಬೇಕಾದರೇ ........

ಮೊಮ್ಮಗ ಚಾನಲ್ ಬದಲಿಸಿದ್ದನೋ ಏನೋ? ಕಣ್ಣಿಗೆ ಬಿದ್ದೇ ಬಿಟ್ಟಿತು ಕಣ್ರೀ ದೃಶ್ಯ ! ಯಾರೋ ಏನೋ .... ಹೆಸರು ಗೊತ್ತಿಲ್ಲ ... ಕುಲ ಗೊತ್ತಿಲ್ಲ ... ದೇಶ ಮೊದಲೇ ಗೊತ್ತಿಲ್ಲ ... ಒಟ್ಟಿನಲ್ಲಿ ರಪ ರಪ ಅಂತ ಟೆನ್ನಿಸ್ ರ್‍ಯಾಕೆಟ್ ಹಿಡಿದು ಪಾಪ ಹಳದೀ ಚೆಂಡನ್ನು ಹಿಗ್ಗಮುಗ್ಗ ಬಡಿದಿದ್ದೇ ಬಡಿದಿದ್ದು .... ಕೆಲವು ವರ್ಷಗಳ ಮುಂಚೆ, ಇನ್ನೂ ತಮ್ಮ ಅಕೌಂಟ್’ಗೆ ಜಮಾ ಆಗದ ತಮ್ಮ ಪಿ.ಎಫ್ ಹಣದ ಬಗ್ಗೆ ವಿಚಾರಿಸಲು ಹೋದ ಇವರಿಗೆ ಇದೇ ಅನುಭವಾಗಿತ್ತು. ಈ ಕಡೆಯಿಂದ ಆಕಡೆ, ಆ ಕಡೆಯಿಂದ ಈಕಡೆ ಎಂದು ಜನ ಅಡ್ಡಾಡಿಸಿದ್ದೇ ಅಡ್ಡಾಡಿಸಿದ್ದು. ಬೇಸರದಿಂದ ಚಾನಲ್ ಬದಲಿಸೋ ಮುನ್ನ ’ಆದರೂ ಏನು ಚೆನ್ನಾಗಿ ಕಾಣ್ತಾರೆ ಈ ಹುಡುಗೀರು’ ಅಂದೇ ಬಿಟ್ಟರು ...

ಧಾರಾವಾಹಿ ಮೂಡಿ ಬಂತು.

ಯಥಾಪ್ರಕಾರ, ಅತ್ತೆ-ಸೊಸೆ ಸ್ಕ್ರೀನಿನ ಮೇಲೆ. ಇಪ್ಪತ್ತು ಸಾವಿರ ಬೆಲೆ ಬಾಳುವ ಸೀರೆ ಉಟ್ಟ ಬಡತನದ ಮನೆಯ ಸೊಸೆ ಕಣ್ಣೀರು ಒರೆಸಿಕೊಳ್ಳುತ್ತಿದ್ದಳು. ಡೈನಿಂಗ್ ಟೇಬಲ್’ನ ಕುರ್ಚಿಯ ಮೇಲೆ ಕುಳಿತ ನೂರೈವತ್ತು ಕೇಜಿ ತೂಕದ ಅತ್ತೆ ಕಾಯುತ್ತಿದ್ದರು. ಅಡುಗೆ ಮನೆಯಿಂದ ಹೊರಬಂದ ಸೊಸೆ ಕೇಳಿದಳು "ಹತ್ತೇ!, ಹನ್ನ ಆಕ್ಲಾ?" ಅಂತ. ಮರು ಕ್ಷಣದಲ್ಲೇ ಢಮ ಢಮ ಎಂಬ ಮ್ಯೂಸಿಕ್. ರಮಣಮೂರ್ತಿಗಳಿಗೆ ಅರ್ಥವೇ ಆಗಲಿಲ್ಲ. ಅವಳು ಏನಂದಳು? ಈ ಮ್ಯೂಸಿಕ್ ಯಾಕೆ? ತಲೆ ಕೆರೆದುಕೊಳ್ಳೋಣ ಎಂದರೆ ಇನ್ನುಳಿದಿರೋದು ಮೂರೇ ಕೂದಲು. ಸುಮ್ಮನಾದರು. ಅನಸೂಯಾಬಾಯಿಯವರಂತೂ ಸದಾ ಬಿಟ್ಟಿರೋ ಬಾಯಿಯನ್ನು ಇನ್ನೂ ಹಿಗ್ಗಲಿಸಿಕೊಂಡು ಧಾರಾವಾಹಿ ನೋಡುತ್ತಿದ್ದರು.

ಕರ್ನಾಟಕದಲ್ಲೇ ಕೊಲೆಯಾಗುತ್ತಿರುವ ಕನ್ನಡದ ಪರಿಸ್ಥಿತಿಯನ್ನು ಕಂಡು ಮಮ್ಮಲ ಮರುಗಿದರೂ ಮನ, ಆ ಅತ್ತೆ ಪಾತ್ರಧಾರಿ ಉಟ್ಟ ಸೀರೆಯ ಮೇಲಿನ ಜರಿ’ಯನ್ನು ಕಂಡು ’ಈ ಜರಿಯಿಂದಲೇ ನಾನು ವರನಾಗಿದ್ದು ವರಿ ಹೆಚ್ಚಾಗಿದ್ದು’ ಎನಿಸದೇ ಇರಲಿಲ್ಲ !

ನಂತರ ಮೂಡಿ ಬಂತು ಜಾಹೀರಾತುಗಳ ಸರಮಾಲೆ. ಇಷ್ಟು ದಿನ ಚಿಕ್ಕದಾದ ಟಿ-ವಿ’ಯಲ್ಲಿ ನೋಡುತ್ತಿದ್ದು ಈಗ ಇವರನ್ನೆಲ್ಲ ದೊಡ್ಡದ್ದಾಗಿ ನೋಡಿ ’ಎಷ್ಟು ಚೆನ್ನಾಗಿದ್ದರೇ ಇವರೆಲ್ಲಾ?’ ಅಂದರು. ಅನಸೂಯಾಬಾಯಿ ತಕ್ಷಣವೇ ’ಬರೀ ಮುಖಕ್ಕೆ ಬಣ್ಣ ಹೊಡೆದುಕೊಂಡಿದ್ದಾರೆ. ಆ ತರಹ ಬಣ್ಣ ಹೊಡೆದುಕೊಂಡರೆ ನಾ ಹಾಗೇ ಕಾಣ್ತೀನಿ’ ಅಂದರು. ಮೂರ್ತಿಗಳು "ಚೆನ್ನಾಗಿ ಜೋಕ್ ಮಾಡ್ತೀಯ ಕಣೆ" ಅಂದರು. "ಏನಂದ್ರ್ರೀ" ಅನ್ನುತ್ತಿದ್ದ ಹಾಗೇ ಫೋನು ಟ್ರಿಣ್’ಗುಟ್ಟಿತು.

’ಯಾರು ಅಂತ ನೋಡಬಾರದೇ?’ ಇನ್ನೊಂದು ಮಾತಾಡದೆ ಕರೆ ಸ್ವೀಕರಿಸಿ ಪತ್ನಿಗೆ ಹೇಳಿದರು ’ಯಾರೋ ರಂಗಮ್ಮ ಅಂತೆ. ನಿನಗೇ ಫೋನು’ ಅಂತ ಕೊಟ್ಟರು.

ಅವರು ಫೋನಿನತ್ತ ಹೋದ ಕೂಡಲೇ, ಚಾನೆಲ್ ಬದಲಿಸಿ ಟೆನ್ನಿಸ್ ನೋಡುತ್ತಿದ್ದರು. ಇಪ್ಪತ್ತು ನಿಮಿಷ ಕಳೆದು, ಅವರು ಬರುವ ಸದ್ದಿಗೆ ಎಚ್ಚೆತ್ತು, ಚಾನೆಲ್ ಬದಲಿಸಿದರು. ’ಯಾವುದೋ ರಾಂಗ್ ನಂಬರ್ರೂ... ಸರಿಯಾಗಿ ವಿಚಾರಿಸಿ ಫೋನು ಕೊಡಬಾರದೇ?’ ಎಂದು ಮೂದಲಿಸುತ್ತ ಟಿ.ವಿ ಮುಂದೆ ಕೂತರು. ಅಲ್ರೀ! ರಾಂ ನಂಬರ್ ಅಂತ ತಿಳಿದಿದ್ದು ಇಪ್ಪತ್ತು ನಿಮಿಷಗಳಾದ ಮೇಲೇ?

ಮುಂದಿನ ಒಂದು ವಾರ, ನಾನು ಸಂಜೆ ಮನೆಗೆ ಬಂದೊಡನೆ, ನನ್ನೊಂದಿಗೆ ಕಾಫೀ ಹೀರುತ್ತ ತಮ್ಮ ಟಿ.ವಿ.ಯನ್ನು ಹೊಗಳಿದ್ದೂ ಹೊಗಳಿದ್ದೇ ! ನನ್ನಲ್ಲಿ ಕುತೂಹಲ, ಆಸೆ ಹೆಚ್ಚುತಿದ್ದಂತೇ, ಬೆಲೆ ನೋಡಿ ಬಾಯಿ ಮುಚ್ಚಿಕೊಳ್ಳುತ್ತಿದೆ.

ರಾಮಾಯಣ ಅಥವಾ ಮಹಾಭಾರತದ ಪುಸ್ತಕ ಕೈಯಲ್ಲಿ ಹಿಡಿದೂ, ಬೀದಿಯಲ್ಲಿ ಹೋಗಿ ಬರೋ ಜನರನ್ನೆಲ್ಲ ಮಾತನಾಡಿಸಿಕೊಂಡು ಕಾಲ ಕಳೆಯುತ್ತಿದ್ದ ರಮಣಮೂರ್ತಿಗಳು, ಈ ನಡುವೆ ಟಿ.ವಿ’ಗೆ ಅಂಟಿದ್ದು, ಸಾಮಾನ್ಯ ಜನಜೀವನದ ಮುಖ್ಯವಾದದ್ದೇನೋ ಕಳೆದುಕೊಂಡಿದ್ದೀವೇನೋ ಎನಿಸುತ್ತಿತ್ತು ಬೀದಿ ಜನರಿಗೆ.

ಧಾರಾವಾಹಿಗಳ ಪಾತ್ರಗಳ ಬಗ್ಗೆ ರಮಣಮೂರ್ತಿಗಳು ಮನೆಯಲ್ಲಿ ಪತ್ನಿಯೊಡನೆ discuss ಮಾಡುವಾಗ, ಇಷ್ಟೂ ವರ್ಷಗಳು ಒನ್-ವೇ ಟ್ರಾಫಿಕ್’ನಂತೆ ತಮ್ಮದೇ ಮಾತಿದ್ದ ಅನಸೂಯಾಬಾಯಿಗೂ ಏನೋ ಇರುಸು-ಮುರುಸಾಗುತ್ತಿತ್ತು.

ಅನಸೂಯಾಬಾಯಿಯವರು ಟಿ.ವಿ ಮಾರುತ್ತಾರಂತೆ. ಕೊಳ್ಳುವವರು ಯಾರಾದರೂ ಇದ್ದರೆ ತಿಳಿಸಿ !

No comments:

Post a Comment