Friday, October 16, 2009

ಬದುಕಿನಲ್ಲೊಂದು ಪುಟ

ಗುರುವಾರ ಸಂಜೆ ರಾಯರ ಮಠದಲ್ಲಿ ಭಕ್ತಾದಿಗಳು ನೆರೆದಿದ್ದ ಸಮಯ. ಸುರದ್ರೂಪಿ ಕೃಷ್ಣನು ತನ್ಮಯದಿಂದ ಹಾಡುತ್ತಿದ್ದ "ಪೊಂದಿ ಬದುಕಿರೋ ರಾಘವೇಂದ್ರರಾಯರ ಕುಂದದೆಮ್ಮನು ಕರುಣದಿಂದ ಪೊರೆವರ". ಮಹಾಮಂಗಳಾರತಿ ನಂತರ ವೆಂಕಟರಾಯರು ಇನ್ಯಾರನ್ನೋ ಕೇಳಿದರು ’ಆ ಹುಡುಗ ಯಾರು ಗೊತ್ತೇ?’ ? "ಅವನು ನಮ್ಮ ಸುಬ್ಬಣ್ಣನ ಮಗ. ಸೊಗಸಾಗಿ ಹಾಡ್ತಾನೆ. ದೇವರ ಪೂಜೇನೂ ಕಲಿತಿದ್ದಾನೆ. ".... "ಹೌದೇನು? ಏನು ಮಾಡ್ಕೊಂಡಿದ್ದಾನೆ?" "ಈಗ ತಾನೇ ಡಿಪ್ಲೊಮಾ ಮುಗಿಸಿದ್ದಾನೆ. ಕೆಲಸ ಹುಡುಕಲಿಕ್ಕೆ ಶುರು ಮಾಡಿದ್ದಾನೆ. ಅದೋ ಅವನೇ ಬಂದ. ಕೃಷ್ಣಾ, ನೋಡು ಇವರು ವೆಂಕಟರಾಯರು ಅಂತ. ನಿಮ್ಮಪ್ಪನಿಗೆ ಬಹಳ ಬೇಕಾದೋರು".

ವೆಂಕಟರಾಯರಿಗೆ ನಮಸ್ಕರಿಸಿದ ಕೃಷ್ಣ. "ಸೊಗಸಾಗಿ ಹಾಡ್ತೀಯಪ್ಪ. ದೇವರು ಒಳ್ಳೇದು ಮಾಡಲಿ. ಕೆಲಸ ಹುಡುಕಲು ಶುರು ಮಾಡಿದ್ದೀಯಂತೆ.... ಹೌದೇನು?" ’ಹೌದು’ ಎಂದ ಕೃಷ್ಣ. ಭಾನುವಾರ ಬೆಳಿಗ್ಗೆ ನಮ್ಮ ಮನೆಗೆ ಬಂದು ದೇವರ ಪೂಜೆ ಮಾಡಿಕೊಡು. ಮಾತಾಡೋಣ. ನಾಲ್ಕನೇ ಬೀದಿ ಕೊನೆಗೆ ದೊಡ್ಡ ಗೇಟಿನ ಮನೆ ಇದೆಯಲ್ಲಾ, ಅದೇ ನಮ್ಮನೆ’ ಅಂದು ಹೊರಟು ಹೋದರು.

ಭಾನುವಾರ, ವೆಂಕಟರಾಯರ ಮನೆಯಲ್ಲಿ ದೇವರಪೂಜೆ ಮುಗಿಸಿದ ಮೇಲೆ ರಾಯರ ಕೋರಿಕೆಯ ಮೇರೆಗೆ ’ದೇವೀ ನಮ್ಮ ದ್ಯಾವರು ಬಂದರು ಬನ್ನಿರೇ ನೋಡ ಬನ್ನಿರೇ’ ಎಂದ ದಶಾವತಾರ ಮಹಿಮೆಯ ಹಾಡನ್ನು ಹಾಡಿ, ಊಟ ಮಾಡಿ ’ಅನ್ನ ದಾತಾ ಸುಖೀಭವ’ ಎಂದೆದ್ದ ಕೃಷ್ಣ.

ವೆಂಕಟರಾಯರು ಕೃಷ್ಣನನ್ನು ರಾಮರಾಯರಿಗೆ ಪರಿಚಯ ಮಾಡಿಸುತ್ತ "ರಾಮೂ, ಇವನು ಕೃಷ್ಣ ಅಂತ. ನಮ್ಮ ಸುಬ್ಬಣ್ಣಾಚಾರ್ಯರ ಮಗ. ಡಿಪ್ಲೊಮ ಮುಗಿಸಿದ್ದಾನೆ. ಸ್ವಲ್ಪ ನೋಡು" ಅಂದರು. ದೇವರ ಪೂಜೆ, ಹಾಡು, ಗುರುಹಿರಿಯರಲ್ಲಿದ್ದ ಗೌರವ ಎಲ್ಲವನ್ನೂ ಬಂದಾಗಿನಿಂದ ಗಮನಿಸುತ್ತಿದ್ದ ರಾಮರಾಯರು ನುಡಿದರು "ನಾಳೆ ಸೋಮವಾರದಿಂದ HAL’ಗೆ ಕೆಲಸಕ್ಕೆ ಬಂದು ಬಿಡು. ಬೆಳಿಗ್ಗೆ ಏಳು ಘಂಟೆಗೆ ಸರ್ಕಲ್ ಹತ್ತಿರ ಫ್ಯಾಕ್ಟರಿ ಬಸ್ ಬರುತ್ತೆ. ನಾನು ಬಸ್ ಸ್ಟಾಪ್’ನಲ್ಲಿ ಇರ್ತೀನಿ. ಅಲ್ಲಿಗೆ ಬಾ. ಮಿಕ್ಕ ವಿಷಯ ನಾನು ನೋಡ್ಕೋತೀನಿ"

ಇತ್ತ ಮನೆಯಲ್ಲಿ, ಶಾಮರಾಯರು "ಸುಬ್ಬಣ್ಣ, ನಿನ್ನ ಮಗನನ್ನು ನಾಳೆ ನನ್ನ ಬಂದು ನೋಡಲು ಹೇಳು. I.T.I ’ನಲ್ಲಿ ನನ್ನ ಕೆಳಗೇ ಒಂದು ಕೆಲಸ ಕೊಡಿಸ್ತೀನಿ. ನಿನಗೂ ಸಹಾಯ ಆಗುತ್ತೆ". ’ಮಹದೋಪಕಾರ ಆಯ್ತು ಶಾಮು. ಕೃಷ್ಣನಿಗೆ ಹೇಳ್ತೀನಿ.’ ಅದಕ್ಕೆ ಶಾಮರಾಯರು ನುಡಿದರು ’ಹಿರಿಯರು ಮಾಡೋ ಪುಣ್ಯ ಕಿರಿಯರನ್ನು ಕಾಯುತ್ತೆ. ನನ್ನದೇನಿದೆ. ಆ ಭಗವಂತ ಮಾಡಿಸ್ತಾ ಇದ್ದಾನೆ ಅಷ್ಟೇ !’

ಕೃಷ್ಣನು ಎರಡೂ ಕೆಲಸಗಳನ್ನು ತೂಗಿ ನೋಡಿ, HAL’ಗೆ ಕೆಲಸಕ್ಕೆ ಸೇರಿದ್ದ. ತಾನು ಕೊಡಿಸಿದ ಕೆಲಸಕ್ಕೆ ಸೇರಲಿಲ್ಲ ಎಂಬ ಮುನಿಸು ಕೆಲವು ದಿನಗಳ ಕಾಲ ಶಾಮರಾಯರಿಗೆ ಇತ್ತು.

ಅಂದು ಕೆಲಸಕ್ಕೆ ಸೇರಿದ ನನ್ನ ಪೂಜ್ಯ ತಂದೆಯವರು, ಮೂವತ್ತೈದು ವರ್ಷ ಸೇವೆ ಸಲ್ಲಿಸಿ ದೊಡ್ಡ ಹುದ್ದೆಯಿಂದ ರಿಟೈರ್ ಆಗಿ ಹೊರಬಂದು ಇಂದಿಗೆ ಇಪ್ಪತ್ತು ವರ್ಷವಾಗಿರಬಹುದು.

ಅಂದಿನ ಕಾಲ ಚೆನ್ನಾಗಿತ್ತು, ಇಂದು ಕುಲಗೆಟ್ಟು ಹೋಗಿದೆ ಎಂಬ ಮಾತು ನಾನು ಆಡಲು ಹೊರಟಿಲ್ಲ.....

ಬದುಕಿದ್ದಾಗ ತಮ್ಮ ನೆನಪನ್ನು ನಮ್ಮೊಂದಿಗೆ ಹಂಚಿಕೊಂಡದ್ದು ನನಗೆ ನೆನಪಾಗಿ ಹಾಗೇ ಬರೆದೆ .... ಎಲ್ಲ ದಿಶೆಯಲ್ಲೂ ಅಖಂಡ ಬೆಳವಣಿಗೆಯಾಗಿರುವ ಇಂದಿನ ಕಾಲದಲ್ಲಿ ಇಂತಹ ಒಂದು ಸನ್ನಿವೇಶ ಪುನರಾವರ್ತನೆ ಆಗುವ ಸಂಭವನೀಯತೆ ಎಷ್ಟು? ನಿಮಗೆ ಗೊತ್ತೆ?

No comments:

Post a Comment