Sunday, March 27, 2011

ಬುದ್ದ ಆಗೋದು ಅಷ್ಟು ಸಲೀಸಲ್ಲ !

ನಮ್ಮ ಮನೆಯಿಂದ ಜಯನಗರ ತಲುಪುವ ಮಾರ್ಗದಲ್ಲಿ ಹಲವು ಅಪಘಾತಗಳು, ಅದರಿಂದಾದ ಕೈ-ಕಾಲು ಮುರಿತ ಮತ್ತು ಜಗಳ, ಬಸ್ಸಿನಲ್ಲಿ ಸೀಟಿಗಾಗಿ ಜಗಳ ಮತ್ತು ಹೊಡೆದಾಟ, ಹರಿಶ್ಚಂದ್ರ ಘಾಟ್ ಅಥವಾ ವಿಲ್ಸನ್ ಗಾರ್ಡನ್ ಕಡೆ ಹೊರಟ ಹೆಣಗಳು, ಕೆ.ಸಿ.ಜನರಲ್, ವಿಕ್ಟೋರಿಯಾ, ಇತ್ಯಾದಿ ಆಸ್ಪತ್ರೆಗಳು ಹೀಗೆ ಎಲ್ಲದರ ದರ್ಶನ ಅನುಭವಗಳು ಆಗಿದ್ದರೂ ....


ನಾನು ಬುದ್ದ ಆಗಲಿಲ್ಲ ಕಣ್ರೀ !!


ಒಮ್ಮೆ ಹೀಗೆ ನನ್ನಾಕೆ ಊರಿನಲ್ಲಿ ಇಲ್ಲದ ಸಮಯದಲ್ಲಿ ಮೂರನೆ ದಿನವೂ ಅದೇ ಹಳೇ ಉಪ್ಪಿಟ್ಟನು ತಿಂದ ಮೇಲಂತೂ ವೈರಾಗ್ಯ was just round the corner ಕಣ್ರೀ !!


ಎಲ್ಲೆಲ್ಲೂ ಕಾಯಿಲೆಗಳು ... ಸಾವು, ನೋವು ... ಹಳೇ ಉಪ್ಪಿಟ್ಟು ತಿನ್ನಲೇ ಬೇಕಾದ ಕಷ್ಟಗಳು ...


ಇದೇನು ಜೀವನ ಅಂತೀನಿ... ಮನದಲ್ಲಿ ಎದ್ವಾತದ್ವ ಬ್ಯಾಸರ ಮೂಡಿತು. ಇದಕ್ಕೆಲ್ಲ ಒಂದೇ ಪರಿಹಾರವೆಂದರೆ ಸತ್ಯದರ್ಶನಕ್ಕಾಗಿ ಹೊರಡುವುದು.


ಈ ವಿಷಯ ಎಲ್ಲರಿಗೂ ಗೊತ್ತೇ ಇದೆ ...

ಹೆಂಡತಿ-ಮಗ ಮಲಗಿದ್ದಾಗ, ಶುದ್ದೋದನ

ಜೀವನದ ಸತ್ಯ ತಿಳಿಯಲು ಎದ್ದೋದನ


ನಾನು ಹಾಗೇ ಎದ್ದು ಹೊರಟೆ ... ಹೇಳದೇ ಹಾಗೇ ಹೋದೆ ... ಹೇಳೋಣ ಅಂದರೆ ಯಾರಿದ್ದರು ಮನೆಯಲ್ಲಿ? ಅದಕ್ಕೆ ಹೇಳದೇ ಹೋದೆ.


ಸತ್ಯದರ್ಶನದ ಮೊದಲ ಹೆಜ್ಜೆ ತಪಸ್ಸು !!


ಅದಕ್ಕಾಗಿ, ಮೊದಲು ಒಂದು ಜಾಗ ನೋಡಬೇಕು. ಮಳೆ, ಗಾಳಿ, ಚಳಿ ಎಲ್ಲದರಿಂದ ರಕ್ಷಣೆ ಇರಬೇಕಲ್ಲ ! ಇದಕ್ಕೆ ಪ್ರಶಸ್ತವಾದ ಜಾಗವೆಂದರೆ ಮಲೆ ಮಹದೇಶ್ವರ ಬೆಟ್ಟದ ಕಾಡು !! ನಾನು ಅಲ್ಲಿಗೆ ಯಾವತ್ತೂ ಹೋಗಿಲ್ಲ. ಅಷ್ಟು ದಿನ ವೀರಪ್ಪನ್ ಅಲ್ಲಿ ಅಡಗಿದ್ದ ಎಂದರೆ ಆ ಜಾಗದಲ್ಲಿ ರಕ್ಷಣೆ ಇದೆ ಅಂತ ಅರ್ಥ ಅಲ್ಲವೇ?


ಅಲ್ಲಿಗೆ ಹೋದೆ ... BSF’ನವರು ಒಳಗೆ ಬಿಡಳೇ ಇಲ್ಲ. ಏನು ಬೇಕಿತ್ತು, ನಿಮಗೆ ಇಲ್ಲೇನು ಕೆಲಸ, ವೀರಪ್ಪನ್ ಕಡೆಯವರೇನಾದ್ರೂ ಇನ್ನೂ ಉಳಿದುಕೊಂಡಿದ್ದಾರಾ .... ಪ್ರಶ್ನೆಗಳ ಸುರಿಮಳೆ !


ನಾನು ತಪಸ್ಸು ಮಾಡಲು ಹೋಗುತ್ತಿದ್ದೇನೆ ಅಂದರೆ ನಂಬುತ್ತಲೇ ಇಲ್ಲ. ಅಲ್ರೀ, ಜೀನ್ಸ್ ಪ್ಯಾಂಟು, ಓವರ್ ಕೋಟು ಎಲ್ಲ ಹಾಕಿಕೊಂಡು ತಪಸ್ಸು ಮಾಡಬಾರದು ಅಂತೇನಾದರೂ ಹೇಳಿದ್ದಾರಾ? ಅಥವಾ ತಪಸ್ಸು ಮಾಡಲು ಡ್ರಸ್ ಕೋಡ್ ಏನಾದರೂ ಇದೆಯಾ?


ಅವರಂತೂ ಬಿಡಲಿಲ್ಲ. ಕೊನೆಗೆ ಹಂಗೂ ಹಿಂಗೂ ಮಾಡಿ ಅವರು ಅಲ್ಲಿ ಇಲ್ಲಿ ನೋಡುವಾಗ ಒಳಗೆ ನುಸುಳಿಯೇಬಿಟ್ಟೆ !!


ಏಲ್ಲಿ ನೋಡಿದರೂ ಮರಗಳು. ಹಸಿರೋ ಹಸಿರು.... ನೆಲವೇ ಕಾಣದಷ್ಟು ಎಲೆಗಳು .... ನಿಂತ ಮರ, ಒರಗಿದ ಮರ, ನೆಟ್ಟಗಿನ ಮರ, ಸೊಟ್ಟಗಿನ ಮರ, ಉದ್ದನೆಯ ಮರ, ಬಿಳಲು ಬಿಟ್ಟ ಮರ, ಎಲೆಭರಿತ ಮರ, ಎಲೆರಹಿತ ಬೋಳು ಮರ, ಹೊರ ಕವಚ ಕಳೆದುಕೊಂಡ ನುಣುಪಾದ ಮರ, ಹಸಿರು ಪಾಚಿಯುಕ್ತ ದಪ್ಪ ಚರ್ಮದ ಮರ, ತನ್ನಷ್ಟಕ್ಕೆ ತಾನಿರುವ ಮರ, ಬಳ್ಳಿಗೆ ಆಶ್ರಯ ಕೊಟ್ಟ ಮರ ಹೀಗೇ .... ಒಂದೇ ಎರಡೇ ?


ಜಾಗ ಹುಡುಕಲು ಶುರು ಮಾಡಿದೆ. ಎನು ಕಾಡೋ ಎನೋ? ಕೂತ್ಕೊಲ್ಲೋಕ್ಕೆ ಜಾಗ ಇಲ್ಲ. ಕೆಸರು, ಕಸ, ಕಡ್ಡಿ, ಹಳ್ಳ ದಿನ್ನೆ ಹೀಗೆ ... ಕೊನೆಗೂ ಒಂದು ದೊಡ್ಡ ಮರದ ಕೆಳಗೆ ಜಾಗ ಸಿಕ್ತು. ಒಳ್ಳೆ ಕಟ್ಟೆ. ಆ ಜಾಗ ಬಳಿದುಕೊಂಡು ಕುಳಿತೆ.


’ಓಂ’ ಎಂದು ಮೂಗು ಹಿಡಿದು ಕೂತೆ. ಸ್ವಲ್ಪ ಹೊತ್ತಿಗೆ ಮೊಣಕೈ ನೋಯಲು ಶುರುವಾಯ್ತು. ಹೋಗಲಿ ಎಂದು ಎರಡೂ ಅಂಗೈಯನ್ನು ಬೆಸೆದುಕೊಂಡು ಕೂತು, ’ಓಂ’ ಎಂದು ದನಿ ಎತ್ತಿ ಹೇಳಹತ್ತಿದೆ. ಐದು ನಿಮಿಷವಾದ ಮೇಲೆ ಗಂಟಲು ಉರಿಯಲು ಶುರುವಾಯ್ತು. ಮನದಲ್ಲೇ ಹೇಳಿಕೊಂಡರೆ ಹೇಗೆ ಎಂದುಕೊಂಡು, ಹಾಗೇ ಮಾಡಿದೆ. ಮತ್ತೈದು ನಿಮಿಷಕ್ಕೆ ತೂಕಡಿಕೆ ಶುರುವಾಯ್ತು. ತಪಸ್ವಿಗಳು ಈ ರೀತಿ ಬಾರದಿರಲೆಂದು ತಮ್ಮ ಜುಟ್ಟನ್ನು ಥೆಳ್ಳಗಿನ ದಾರದಿಂದ ಮೊರದ ಕೊಂಬೆಗೆ ಕಟ್ಟಿಕೊಳ್ಳುತ್ತಿದ್ದರಂತೆ. ತೂಕಡಿಕೆಯಿಂದ ತಲೆ ವಾಲಿದಾಗ, ಜುಟ್ಟು ಎಳೆದು ಎಚ್ಚರಿಕೆಯಾಗಲಿ ಎಂದು.


ನಾನೂ ಹಾಗೇ ಮಾಡೋಣ ಎಂದುಕೊಂಡೆ. ದಾರ ಇರಲಿಲ್ಲ. ಮರದ ತೊಗಟೆಯನ್ನು ತೆಳುವಾಗಿ ಕಿತ್ತಿ ಉದ್ದನೆಯ ಹೋರಿಯಂತೆ ಮಾಡಿಕೊಂಡು, ಒಂದು ಕೊನೆಯನ್ನು ಕೊಂಬೆಗೆ ಬಿಗಿದು ಮತ್ತೊಂದು ಬದಿಯನ್ನು ನನ್ನ ಜುಟ್ಟಿಗೆ ಕಟ್ಟಿಕೊಳ್ಳೋಣ ಎಂದು ನನ್ನ ತಲೇ ಮೇಲೆ ಕೈ ಇಟ್ಟಾಗಲೇ ನೆನಪಾಗಿದ್ದು ... ನನಗೆ ನೆತ್ತಿ ಮೇಲೆ ಕೂದಲಿಲ್ಲ ಅಂತ ... ಥತ್! ಸುಮ್ಮನೆ ಟೈಮ್ ವೇಸ್ಟ್ ಆಯ್ತು !!


ಬೇರೆ ವಿಧಿಯಿಲ್ಲ ಎಂದು ಒಮ್ಮೆ ಮನದಲ್ಲಿ, ಮತ್ತೊಮ್ಮೆ ಜೋರಾಗಿ ಹೇಳಿಕೊಳ್ಳುತ್ತ ಕುಳಿತೆ. ಸ್ವಲ್ಪ ಹೊತ್ತಿಗೆ ಇರುವೆ ಕಡಿಯಲು ಶುರುವಾಯ್ತು. ಛೆ ! ಇರುವೆ ಕಿಲ್ಲರ್ ಸ್ಪ್ರೇ ತರಬೇಕಿತ್ತು ! ಮರತೇ ಹೋಯ್ತು !!


ಕತ್ತಲಾಗಲು ಶುರುವಾಯ್ತು. ಲೈಟ್ ಹಾಕೋಣವೆಂದರೇ ... ಬಿಡಿ ... ನಾಡಲ್ಲೆ ಕರಂಟಿಲ್ಲ, ಇನ್ನು ಕಾಡಲ್ಲಿ ಎಲ್ಲಿಂದ ಬರುತ್ತೆ?


ನನ್ನ ಬ್ಯಾಗ್ ತಡಕಾಡಿದೆ. ಟಾರ್ಚ್ ಬದಲು ಬೆಡ್ ಲೈಟ್ ಸಿಕ್ತು. ಥತ್! ಆದರೂ, ಏನೋ ಒಂದು ಆಸೆ, ಅಲ್ಲಿ ಇಲ್ಲಿ ಹುಡುಕಿದೆ. ಮರದ ಮೇಲೆ ಮೂರು ಪಿನ್ ಔಟ್-ಲೆಟ್ ಕಾಣಿಸಿತು !!!! ಚುಚ್ಚಿದೆ. ಲೈಟ್ ಬಂತು !! ಜಾಸ್ತಿ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ.


ಆಗ, ಏನೋ ವಾಸನೆ ...


ಕಾಡಿನ ಪುಷ್ಪದ ವಾಸನೆ .... ಅದನ್ನು ಅರಸಿ ಹೋದರೆ, ಒಬ್ಬ ಭುವನ ಸುಂದರಿ, ವಯ್ಯಾರದಿಂದ, ಹೂವಿನ ರಾಶಿಯ ಮಧ್ಯೆ ಕಂಗೊಳಿಸುತ್ತ ನಿಂತಿದ್ದಳು ... ಅಂತೆಲ್ಲಾ ಕಲ್ಪಿಸಿಕೊಂಡರೆ ನಾನು ಜವಾಬ್ದಾರನಲ್ಲ !!!


ನಾನು ಹೇಳಿದ್ದು, ಏನೋ ವಾಸನೆ ಎಂದರೆ ಕೆಟ್ಟ ವಾಸನೆ ಅಂತ ಅರ್ಥ !! ಹೇಗಿದ್ರೂ ಬೇರೆ ಕೆಲ್ಸ ಇಲ್ಲ ಅಂತ ವಾಸನೆ ಅರಸಿ ಹೋದೆ. ಅಲ್ಲಿ ಕಂಡ ದೃಶ್ಯ ಕಂಡು ಮಾತು ಹೊರಡದೆ ಮೂಕನಾದೆ !!!


ಬಡ ತೆರಿಗೆದಾರನ ಖರ್ಚಿನಲ್ಲಿ ಒಂದು ಬೋರ್ಡ್ ಲಗತ್ತಿಸಿದ್ದರು ’ಶ್ರೀ. ವೀರಪ್ಪನ್ ಅವರು ಇಲ್ಲಿ ಬಹಿರ್ದೆಶೆ ಮಾಡುತ್ತಿದ್ದರು’ ಎಂದು. ಆಹಾ ... ಇಂದಿಗೂ ವಾಸನೆ ಬರುತ್ತಿದೆ ಎಂದರೆ, ಏನಯ್ಯಾ ತಿನ್ನುತ್ತಿದ್ದೆ ನೀನು? ಎಂಥಾ ಪವಿತ್ರ ಸ್ಥಳಕ್ಕೆ ಬಂದಿದ್ದೀನಿ ಎಂದುಕೊಂಡು ಕೈಕಾಲು ನಡುಗಲು ಶುರುವಾಗಿತ್ತು ....


ಎದ್ದೂ ಬಿದ್ದೂ ಅಲ್ಲಿಂದ ಓಡುತ್ತ ಹೊರಟೆ. ಯಾರಿಗೆ ಗೊತ್ತು, ಯಾವ ಬಹಿರ್ದೆಶೆಯಲ್ಲಿ ಯಾರ ಅಂತರಾತ್ಮ ಅಡಗಿರುತ್ತೋ?


ಹಾಗೂ ಹೀಗೂ ನನ್ನ ಕಟ್ಟೆಗೆ ಹಿಂದುರುಗಿದೆ ... ಓಡಿ ಬರುವಾಗ ಕಟ್ಟೆಯ ಬಳಿಯೇ ಒಂದು ಚೂಪಾದ ಕಲ್ಲೊಂದು ಕಾಲಿಗೆ ಚುಚ್ಚಿತು ... ಸ್ವಲ್ಪ ಹೊತ್ತು ಕುಳಿತು ದಣಿವಾರಿಸಿಕೊಂಡೆ .... ನಂತರ, ಕಟ್ಟೆಯ ಸುತ್ತಲೂ ಅಲ್ಲಲ್ಲೇ ಎದ್ದಿದ್ದ ಚೂಪಾದ ಕಲ್ಲುಗಳನ್ನು ಹೊರತೆಗೆದು, ನೆಲ ಸಮತಟ್ಟು ಮಾಡಿಕೊಳ್ಳೋಣ ಎಂದುಕೊಂಡು, ಅಲ್ಲೇ ಇದ್ದ ದಪ್ಪ ಕಟ್ಟಿಗೆಯಿಂದ ಕೆಲಸ ಶುರು ಮಾಡಿದೆ ಮುಳ್ಳನ್ನು ತೆಗೆಯಬೇಕಾದರೆ ಅದರ ಸುತ್ತಲೂ ಕೊರೆಯಬೇಕಂತೆ. ಹಾಗೆ ಮಾಡುವಾಗ ಏನೋ ಸಿಕ್ಕಂತಾಯಿತು !


ವೀರಪ್ಪನ್ ಕಡೆಯವರು ಹೂತಿಟ್ಟ ಕೊಳ್ಳೆ ಹೊಡೆದ ನಿಧಿ ಇರಬಹುದೇ?


ಹಾಗಿದ್ರೆ ಸತ್ಯ ದರ್ಶನ ಇನ್ನು ಸ್ವಲ್ಪ ಹೊತ್ತಿನಲ್ಲೇ ಆಗುತ್ತದೆ ಅಂತಾಯ್ತು !!!


ಇನ್ನೂ ಹುಮ್ಮಸ್ಸಿನಿಂದ ಅಗೆಯಲು ಶುರು ಮಾಡಿದೆ. ಹಿಡಿದೆಳೆಯಲು ಆಗುವಷ್ಟು ಅಗೆದು ಎರಡೂ ಕೈಗಳಿಂದ ಮೇಲಕ್ಕೆತ್ತಿದೆ.


ಸತ್ಯ ದರ್ಶನವಾಗಿತ್ತು ಕಣ್ರೀ !!! .... ದರ್ಶನ ಕೊಟ್ಟಿದ್ದು, ಒಂದು ಪೂರ್ಣ ಸೈಜಿನ ಅಸ್ತಿಪಂಜರ !!!!


ಎದ್ನೋ ಬಿದ್ನೋ ಅಂತ ಎದ್ದು ಬಿದ್ದು ಕಾಡಿನಿಂದ ಹೊರಗೆ ಓಡಿದೆ. ನಿಧಿಯೂ ಬೇಡ, ಸತ್ಯದರ್ಶನವೂ ಬೇಡ, ಏನೂ ಬೇಡ. ಸದ್ಯ ಜೀವ ಉಳಿದರೆ ಸಾಕು. ನನ್ನಂತೆಯೇ ತಪಸ್ಸಿಗೆ ಬಂದಿದ್ದವನ ಅಸ್ತಿಪಂಜರ ಇರಬೇಕು.


ಓಡುತ್ತಿದ್ದಂತೆ ಎಲ್ಲ ಮರಗಳೂ ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಂತೆ ಅನ್ನಿಸಿತು. ನನ್ನ ಬ್ಯಾಗು, ಬೆಡ್ ಲೈಟು ಇತ್ಯಾದಿ ಇತ್ಯಾದಿ ಎಲ್ಲ ಅಲ್ಲೇ ಬಿಟ್ಟು ಬಂದಿದ್ದೆ. ವಾಪಸ್ಸು ಹೋಗಲೇ ?


ಹೋಗ್ಲಿ ಬಿಡಿ, ಬೇಡ. ಬೇಕಿದ್ರೆ ಆ ಅಸ್ತಿಪಂಜವರೇ ಬಳಸಿಕೊಳ್ಳಲಿ ಎಂದುಕೊಂಡು ಇನ್ನೂ ಜೋರಾಗಿ ಓಡಲು ಶುರು ಮಾಡಿದೆ ಸ್ವಲ್ಪ ದೂರದಲ್ಲಿ ಆ ಪಡೆಯವರ ಗೂಡುಗಳು ಕಾಣಿಸಲು ತೊಡಗಿತು. ಅಬ್ಬ, ಸದ್ಯ ಕಾಡಿನಿಂದ ಹೊರಗೆ ಬರುತ್ತಿದ್ದೀನಿ ಹಾಗಿದ್ರೆ. ಇನ್ನೊಂದು ಐವತ್ತು ಅಡಿ ದೂರವಿದೆ ಅನ್ನೋವಾಗ ...


ನನ್ನ ಓವರ್ ಕೋಟನ್ನು ಯಾರೋ ಹಿಡಿದು ಎಳೆದರು !!


ಅಸ್ತಿಪಂಜರವೋ, ಹೆಣ್ಣು ದೆವ್ವವೋ, ಗಂಡು ಭೂತವೋ ಯಾರೋ ... ಅಯ್ಯೋ, ಬಿಟ್ಟುಬಿಡ್ರೋ ... ಐ ಪ್ರಾಮಿಸ್ ... ಸತ್ತ ಮೇಲೆ ನಿಮ್ಮ ಪಾರ್ಟಿ ಸೇರ್ಕೋತೀನಿ ... ಅಯ್ಯೋ ....


"ಬಿಡ್ರಪ್ಪಾ, ಬಿಡ್ರಮ್ಮಾ" ಎಂದು ಅಲವತ್ತುಕೊಳ್ಳತೊಡಗಿದೆ ....


’ರ್ರೀ, ಥೂ ... ಒಳ್ಳೇ ಭಿಕ್ಷದವರ ಹಾಗೆ ಕೂಗುತ್ತೀರಲ್ರೀ. ಎಲ್ಲಿಗೆ ಹೋಗಬೇಕೂ ಅಂತ ಕೇಳೋಕ್ಕೆ ನಾನು ಎಬ್ಬಿಸಿದ್ದು’ ಅಂತ ಯಾರೋ ಕೂಗಿದ್ರು ಕಣ್ಣು ಬಿಟ್ಟು ನೋಡಿದ್ರೆ...


ಬಸ್ ಕಂಡಕ್ಟರ್ !!!


ಅಲ್ಲಿದ್ದವರೆಲ್ಲ ನನ್ನ ಕಡೆ ಅನುಕಂಪದಿಂದ ನೋಡುತ್ತಿದ್ದರು. ಕೆಲವರು ನಾನು ಯಾರಿಂದಲೋ ಓವರ್ ಕೋಟ್ ಹಾರಿಸಿಕೊಂಡು ಬಂದಿರುವ ಭಿಕ್ಷುಕ ಎಂದೇ ಅಂದುಕೊಂಡಿದ್ದ ಹಾಗಿತ್ತು.


ದಿನವೂ ಜಯನಗರಕ್ಕೆ ಹೊರಟಂತೆ ಇಂದೂ ಹೊರಟಿದ್ದೆ. ಮೊದಲ ಸ್ಟಾಪು ನಮ್ಮದೇ ಆದ್ದರಿಂದ ಯಾವಾಗಲೋ ಬಂದು ನಿಂತಿದ್ದ ಬಸ್ ಹತ್ತಿ ಕುಳಿತಿದ್ದೆ. ನಿದ್ದೆ ಬಂತು ಅಂತ ಕಾಣುತ್ತೆ. ವಿಚಿತ್ರ ಕನಸೂ ಬಿದ್ದಿತ್ತು.


ಏನೂ ಮಾತಾಡದೆ ಬಸ್ಸಿನಿಂದ ಕೆಳಗೆ ಇಳಿದೆ. ಇನ್ನೊಂದು ಬಸ್ಸಿನಲ್ಲಿ ಹೋದರಾಯಿತು ಅಂತ.....

No comments:

Post a Comment