ನೀ
ಗುಡ್ಡದಲಿರುವೆಯೋ
ಗುಡ್ಡೆಯಲ್ಲಿರುವೆಯೋ
ಅಡ್ಡಾಕಾರದಲಿರುವೆಯೋ
ನಾನರಿಯೆ
ನೀ
ಮೂರ್ತಿ ಸ್ವರೂಪಿಯೋ
ಜ್ಯೋತಿ ಸ್ವರೂಪಿಯೋ
ನಾದ ಸ್ವರೂಪಿಯೋ
ನಾ ತಿಳಿಯೆ
ನಿನ್ನಾಣತಿಯ ಸಂದೇಶದ
ಮುತ್ತಿನ ನುಡಿಗಳು
ಯಾವ ಪುಸ್ತಕದಲ್ಲಿ ನುಸುಳಿವೆಯೋ
ನಾನರಿಯೆ
ಮನದಿ ಮೂಡಿದ ನಿನ್ನ ಮೂರುತಿಗೆ
ಹೆಸರೇನಿಡಲಿ ಎಂದರಿಯದವನಿಗೆ
ಮನದಿ ಮೂಡಿದ ನಿನ್ನ ಮೂರುತಿಗೆ
ಹೇಗೆ ವಂದಿಸಲೀ ಎಂದರಿಯದವನಿಗೆ
ದಾರಿ ತೋರಿದವನು ನೀನು
ಹೇ ತ್ರಿಜಾತಿ ಸ್ವರೂಪ
ನಿನ್ನ ಆದೇಶದಂತೆ
ಮೊದಲಿಗೆ ಹೃದಯ ಮುಟ್ಟಿ
ನಂತರ ಮಂಡಿಯೂರಿ ಕುಳಿತು
ಕೊನೆಗೆ ಸಾಷ್ಟಾಂಗ ಬಿದ್ದೆನಯ್ಯ
ಹೇ ತಂದೆಯೇ
ನನ್ನೀ ಪ್ರಾರ್ಥನೆಯ ನೀ ಆಲಿಸೋ
ಅನ್ಯಾಯ ಅಕ್ರಮವ ನೀನಳಿಸೋ
ಜನರ ಮಾರಣ ಹೋಮ ನೀ ನಿಲ್ಲಿಸೋ
ದ್ವೇಷ ಜ್ವಾಲೆಯ ನೀ ನಂದಿಸೋ
ರೋಗ ರುಜಿನಗಳನು ನೀ ತಗ್ಗಿಸೋ
ಬರಲಿರುವ ನೂತನ ವರ್ಷವು
ಹತ್ತರಲ್ಲಿ ಹನ್ನೊಂದಾಗದಂತೆ
ನನ್ನೀ ನಂಬುಗೆಯ ನೀ ಉಳಿಸೋ
ನನ್ನೀ ನಂಬುಗೆಯ ನೀ ಉಳಿಸು
No comments:
Post a Comment