Sunday, March 27, 2011

ಹಸಿರಿನ ಉಸಿರು ಇಂಗಿದಾಗ !

{ನಮ್ಮ ಹಂಸಾನಂದಿಯವರ ’ಬದಲಾಗುವ ಬಣ್ಣಗಳು’ ಲೇಖನ ಓದುತ್ತಿದ್ದಂತೆಯೇ ನನ್ನ ಮನದಲ್ಲಿ ಮೂಡಿಬಂದ ಕಲ್ಪನೆ ಹೀಗಿದೆ}


ಸಾವನ್ನು ನೋಡಲು ಏನು ಅಂದವೋ?


ನಾನೊಬ್ಬ ಸ್ಯಾಡಿಸ್ಟ್ ಅಂದುಕೊಂಡಿರಾ? ಏನು ಮಾಡೋದು ಹೇಳಿ. ಈ ಬರಹದ ವಿಶೇಷವೇ ಅದು. ಪ್ರತಿ ವರ್ಷ ಉಂಟಾಗುವ ಈ ಸಾವನ್ನು ನೋಡಲು ನೂರಾರು ಮೈಲಿಗಳ ದೂರ ಸಾಗಿ ಬರುವವರಲ್ಲಿ ನಾನೂ ಒಬ್ಬ !!


ಸಾವಿಗೀಡಾಗುತ್ತಿರುವವರ ಮುಂದೆ ನಿಂತು ತೆಗೆದುಕೊಂಡ ಚಿತ್ರಗಳೆಷ್ಟೋ? ವದನಪುಸ್ತಕ ಅಥವಾ ಆರ್ಕುಟ್’ನಲ್ಲಿ ಹಾಕಿ ಎಷ್ಟೋ ಮನಸ್ಸುಗಳನ್ನು ಆಹ್ಲಾದಗೊಳಿಸಿದ ಹೆಮ್ಮೆ, ಆನಂದ ನನಗೆ !


ಖಂಡಿತ ನನಗೆ ತಲೆ ಕೆಟ್ಟಿದೆ ಅಂದುಕೊಂಡಿರಿ, ನಿಜ.


ನಮ್ಮಂತೆಯೇ ಗಿಡ-ಮರಗಳಿಗೂ ಜೀವವಿದೆ ಎಂದು ನಿಮಗೂ ಅರಿವು ಇರುವುದರಿಂದ, ಮೇಲೆ ಹೇಳಿದ ವಿಷಯಗಳೆಲ್ಲ ನಿತ್ಯ-ಸತ್ಯ.


Spring’ನಲ್ಲಿ ಚಿಗುರೊಡೆವ ಮರ-ಗಿಡಗಳು, ಬೇಸಿಗೆ ವೇಳೆಗೆ ಮೈತುಂಬಿ ನಿಲ್ಲುತ್ತವೆ. ಯಾಕೆಂದು ಗೊತ್ತೆ? ಬಿಸಿಲಿನಲ್ಲಿ ಬವಳಿ ತನ್ನಡಿ ಬಂದು ನಿಲ್ಲುವ ಜೀವಿಗಳಿಗೆ ನೆರಳು ನೀಡುವ ಉದ್ದೇಶದಿಂದ !!


ಪರೋಪಕಾರಾರ್ಥಮಿದಂ ಶರೀರಂ ...


ಬೇಸಿಗೆ ಮುಗಿದು, Fall season ಸುಳಿಯುತ್ತಿದ್ದಂತೆ, ಗಿಡ-ಮರಗಳಲ್ಲಿ ಬೆಳವಣಿಗೆ ಕುಂಠಿತವಾಗಿ, ನಿದ್ರಾವಸ್ತೆಗೆ ತಲುಪುತ್ತವೆ. ಆಗ, ಸುಂದರ ಹಸಿರು ಎಲೆಗಳು ತಮ್ಮ ಯೌವ್ವನ ಕಳೆದುಕೊಳ್ಳಲು ಆರಂಭಿಸುತ್ತವೆ. ಮೊದಲು ಬಣ್ಣ ಕಳೆದುಕೊಳ್ಳುತ್ತದೆ. ಹಸಿರು ಕಳೆದು ಹಳದಿ, ಕೇಸರಿ, ಕೆಂಪು (ಮರದ ಜಾತಿಯ ಮೇಲೆ ಅವಲಂಬಿತ) ಎಂದೆಲ್ಲ ಬಣ್ಣಕ್ಕೆ ತಿರುಗುತ್ತವೆ. ಈ ಸೌಂದರ್ಯ ರಾಶಿ ನೋಡಲೆಂದೇ ಬೆಟ್ಟ-ಗುಡ್ಡಗಳ ಕಡೆ ಹೋಗುವುದು ಪ್ರತಿ ವರ್ಷದ ಪರಿಪಾಠ. ಇದನ್ನೇ ನನ್ನು ಹೇಳಿದ್ದು ’ಸಾವ ನೋಡಲು ಏನು ಅಂದವೋ’ ಎಂದು. ದೂರದಿಂದ ವಿಧವಿಧ ಬಣ್ಣಗಳನ್ನು ನೋಡುತ್ತಿದ್ದರೆ ನನಗೆ ಯಾವಾಗಲೂ fruit bread ನೆನಪಿಗೆ ಬರುತ್ತದೆ.


ಇರಲಿ, ಈ ವೈಭವ ನಂತರದ ಅವಸ್ಥೆಯಲ್ಲಿ ಎಲೆಗಳು, ಕಂದಾಗಿ ತಿರುಗಿ, ದೇಹ ಬಾಗಿ, ಸುಕ್ಕುಗಟ್ಟಿ, ಸಂಪೂರ್ಣ ಸತ್ವ ಹೀನವಾಗಿ ಬೀಸುವ ಗಾಳಿಗೆ ಉದುರಿ ಮಣ್ಣಿಗೆ ಸೇರುತ್ತದೆ.


ಬೀಸೋ ಗಾಳಿಗೆ ಉದರದಿರುವವರು ಯಾರು?


ತನ್ನವರನ್ನೆಲ್ಲ ಕಳೆದುಕೊಂಡ ಮರಗಿಡಗಳು ಶೂನ್ಯವಾಗಿ ಬೋಳು ಬೋಳಾಗಿ ದಿಗಂಬರವಾಗಿ ನಿಲ್ಲುತ್ತದೆ. ಈ ಸ್ಥಿತಿಯಲ್ಲಿನ ಮರಗಿಡಗಳನ್ನು ನೋಡಲಾರದೆ ಬಾನು ಸುರಿಸುವ ಕಣ್ಣೀರೇ, ಹೆಪ್ಪುಗಟ್ಟಿ ಮಂಜಾಗಿ ಸುರಿಯುತ್ತದೆ. ನಿನ್ನವರು ಹಿಂದಿರುಗುವವರೆಗೂ ನಾನು ನಿನ್ನೊಂದಿಗೆ ಇದ್ದೇನೆ ಎಂದು ಬೋಳು ಗಿಡಮರಗಳನ್ನು ಅಲಂಕರಿಸುತ್ತದೆ ಈ ಮಂಜು. (ಇದು ನನ್ನ ಕಲ್ಪನೆ ಮಾತ್ರ).


ಬೀಸುವ ಗಾಳಿಯನ್ನು, ಸುಡುವ ಬಿಸಿಲನ್ನು, ಸುರಿವ ಮಳೆಯನ್ನು ಹೇಗೆ ತಡೆದುಕೊಳ್ಳುತ್ತದೆಯೋ ಅದೇ ಸಮಾಧಾನ ಚಿತ್ತದಲ್ಲಿ ಥಣ್ಣನೆಯ ಮಂಜನ್ನೂ ಸಹಿಸಿಕೊಳ್ಳುತ್ತದೆ ಈ ಸಹನಾಶೀಲ ಮರಗಿಡಗಳು.


ಎಲೆಗಳು ಮರೆಯಾಗಿದ್ದಕ್ಕೆ ಮಂಜು ಸುರಿಯಿತು ಎಂಬುದು ಒಂದು ಬಗೆಯಾದರೆ, ಇನ್ನೊಂದು ಬಗೆಯನ್ನು ಹೀಗೆ ಹೇಳಬಹುದು. ಮಂಜು ಸುರಿವ ಕಾಲಕ್ಕೇ ಎಲೆಗಳು ಉದುರಿದ್ದು ಏಕೆ?


ರಾಶಿ ಎಲೆ ಹೊತ್ತ ಈ ದೇಹದ ಮೇಲೆ ಶ್ವೇತ ವರ್ಣದ ಮಂಜುಗಡ್ಡೆ ಸೇರಿದಾಗ, ಮರದ ಸೊಂಟವೇ ಲೊಟಕ್ಕೆಂದು ಮುರಿದುಬಿದ್ದರೆ, ಮರಗಿಡಗಳೂ ನಾಶ, ಅದನ್ನು ನಂಬಿಕೊಂಡ ಮನುಕುಲವೂ ನಾಶ, ಅಲ್ಲವೇ?


ಮನುಕುಲವನ್ನು ಸಂರಕ್ಷಿಸಲು ತನ್ನವರನ್ನೇ ಕಳೆದುಕೊಳ್ಳಲು ಇಚ್ಚಿಸಿರುವುದು ಮರಗಿಡಗಳು ಮಾಡಿರುವ ತ್ಯಾಗ ಎನ್ನಲೇ?


ಬೆಳಗಿನ ಸೂರ್ಯ ರಶ್ಮಿಗೆ ಕರಗುವ ಮಂಜಿನಂತೆ, ಛಳಿ ಕಳೆದಾಗ ಮೂಡುವ ಬಿಸಿಲೆಗೆ ಮಂಜು ಕರಗಲು, ಮರಗಿಡಗಳು ನಿದ್ರಾವಸ್ಥೆಯಿಂದ ಎದ್ದು, ಹಸಿರು ಮೂಡಿಸಿಕೊಂಡು ಯೌವ್ವನಾವಸ್ಥೆಗೆ ಹೋಗುವದನ್ನು ನೋಡುವುದೇ ಅಂದ.


ಎಲೆಗಳು ಬರುವುದು ಅಂದ ... ಇದ್ದಾಗ ಆನಂದ ... ಹೋಗುವಾಗ ಚೆಂದ ...


ನಮ್ಮದು ?


No comments:

Post a Comment